ಹಾಸನ ಲೋಕಸಭಾ ಕ್ಷೇತ್ರ, ಯಾರು ಏನು ಎತ್ತ?
ಅರಕಲಗೂಡು, ಮಾ. 11 : ಶಕ್ತಿ ರಾಜಕಾರಣಕ್ಕೆ ಹೆಸರಾಗಿದ್ದು ಹಾಸನ ಜಿಲ್ಲೆ. ಜಿಲ್ಲೆಯಲ್ಲಿ ಹೇಮಾವತಿ, ಯಗಚಿ, ಕಾವೇರಿ ಹೊಳೆ ಸಾಕಷ್ಟು ನೀರು ಹರಿದಿದೆ. ಅದೇ ರೀತಿ ಜಿಲ್ಲೆಯಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತು ಮಾಡಬಹುದಾದ ರಾಜಕಾರಣಿಗಳನ್ನ ಕೊಟ್ಟಿದೆ. ಸಾಂಸ್ಕೃತಿಕವಾಗಿ ಮತ್ತು ಸಾಹಿತ್ಯಿಕ ಕ್ಷೇತ್ರದಲ್ಲಿಯೂ ಹಾಸನ ಸಾಕಷ್ಟು ಹೆಸರು ಮಾಡಿದೆ. ಆದಾಗ್ಯೂ ಹಾಸನ ಎಂದಾಕ್ಷಣ ನೆನಪಾಗುವುದು ರಾಜಕಾರಣಕ್ಕೆ!
ಹೊಳೆನರಸೀಪುರದ ಎಚ್ ಡಿ ದೇವೇಗೌಡ ರಾಜ್ಯದ ಸಂಸದರಾಗಿ, ಶಾಸಕರಾಗಿ, ಮುಖ್ಯಮಂತ್ರಿಯಾಗಿ, ದೇಶದ ಅತ್ಯುನ್ನತ ಹುದ್ದೆ ಪ್ರದಾನಿ ಪಟ್ಟಕ್ಕೇರಿದ ಮೇಲೆ ಇಲ್ಲಿ ಅವರು ಸಾಗಿದ್ದೇ ಹಾದಿ, ಆನೆ ನಡೆದದ್ದೇ ಹಾದಿಯೆಂಬಂತೆ. ಗೌಡರ ರಾಜಕಾರಣವನ್ನು ಪ್ರಶ್ನಿಸಿ ನಿಂತವರು ಕಡಿಮೆಯೇ ಜಿಲ್ಲೆಯಲ್ಲಿ. ದಿವಂಗತ ಪುಟ್ಟಸ್ವಾಮಿಗೌಡ ಒಬ್ಬರನ್ನು ಬಿಟ್ಟರೆ ದೇವೇಗೌಡರಿಗೆ ಸೋಲುಣಿಸಿದ ಮತ್ತೊಬ್ಬ ಧೀರ ಜಿಲ್ಲೆಯಲ್ಲಿ ಬರಲಿಲ್ಲವೆನ್ನಬಹುದು. ಪುಟ್ಟಸ್ವಾಮಿಗೌಡರ ನಿಧನಾನಂತರ ಜಿಲ್ಲೆಯಲ್ಲಿ ದೇವೇಗೌಡ ಮತ್ತು ಅವರ ಪುತ್ರ ರೇವಣ್ಣ ದರ್ಬಾರಿಗೆ ಎದುರಾಡಿದವರಿಲ್ಲ ಎನ್ನಬಹುದು.
ಪಕ್ಷದೊಳಗೆ ಗುಸು ಗುಸು ಇತ್ತಾದರೂ ಎದುರಿಸಲಾರದೇ ಪಕ್ಷ ಬಿಟ್ಟು ಹೋದರೇ ವಿನಃ ಯಾರೂ ಚಕಾರವೆತ್ತಲಿಲ್ಲವೆನ್ನಿ. ಅಷ್ಟೇ ಏಕೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರದಿಂದ ಜಿಲ್ಲೆಗೆ ಉಸ್ತುವಾರಿ ಮಂತ್ರಿಗಳಾದವರೂ ಸಹ ಗೌಡರನ್ನು ಹೊಗಳಿ ಅಟ್ಟಕ್ಕೇರಿಸಿದರೆ ವಿನಃ ಎದುರು ಹಾಕಿಕೊಳ್ಳುವ ಧೈರ್ಯ ತೋರಲಿಲ್ಲ. ದೇವೇಗೌಡ ಮತ್ತು ರೇವಣ್ಣ ಇಚ್ಛಾಶಕ್ತಿಯುಳ್ಳ ರಾಜಕಾರಣಿಗಳು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದು ಜಿಲ್ಲೆಯ ಜನತೆಗೆ ಎಷ್ಟರ ಮಟ್ಟಿಗೆ ಅನುಕೂಲವಾಗಿದೆ? ಇದು ಎಲ್ಲರಿಗೂ ತಿಳಿದ ಸಂಗತಿ. ಹಾಗೆಯೇ ಜಿಲ್ಲೆಯ ಶಕ್ತಿಯ ತವರು ಹೊಳೆನರಸೀಪುರ ಎಂಬುದರಲ್ಲಿಯೂ ಎರಡು ಮಾತಿಲ್ಲ!
ಯಾರು ಯಾವ ಪಕ್ಷದಿಂದ? : ಇದೀಗ ಅಂತಹ ಶಕ್ತಿ ಕೇಂದ್ರಕ್ಕೆ ಪೆಟ್ಟು ಕೊಡುವ ದಿಸೆಯಲ್ಲಿ ರೆಬೆಲ್ ಖ್ಯಾತಿಯ ಅರಕಲಗೂಡು ಶಾಸಕ ಎ ಮಂಜುವನ್ನು ದೆಹಲಿ ಹೈಕಮಾಂಡ್ ಲೋಕಸಭಾ ಚುನಾವಣಾ ಕಣಕ್ಕೆ ಇಳಿಸಿದೆ. ಅದೇ ರೀತಿ ಬಿಜೆಪಿಯ ಸಂಭಾವ್ಯರ ಪಟ್ಟಿಯಲ್ಲಿರುವ ಅರಕಲಗೂಡು ತಾಲೂಕಿನ ಮರಡಿ ಗ್ರಾಮದವರಾದ ನಿವೃತ್ತ ಇಂಜಿನಿಯರ್ ಮರಡಿ ಸೋಮಶೇಖರ್ ಕಣಕ್ಕಿಳಿಯುವ ನಿರೀಕ್ಷೆಯಿದೆ. ಬೆಂಗಳೂರು ಗ್ರಾಮಾಂತರದ ಮೇಲೆ ಎಚ್ ಡಿ ದೇವೇಗೌಡ ಕಣ್ಣಿಟ್ಟಿದ್ದರೂ ಹಾಸನದಿಂದಲೇ ಸ್ಪರ್ಧಿಸಲು ನಿರ್ಧರಿಸಿದ್ದರಿಂದ, ಅರಕಲಗೂಡು ಶಾಸಕ ಎ ಟಿ ರಾಮಸ್ವಾಮಿಯವರು ಈ ಬಾರಿ ಅವಕಾಶ ಕಳೆದುಕೊಂಡಿದ್ದಾರೆ. ಹಾಗೆಯೇ ಬಹುಜನ ಸಮಾಜ ಪಕ್ಷದಿಂದ ಜಿಲ್ಲಾಧ್ಯಕ್ಷರಾಗಿರುವ ಅರಕಲಗೂಡಿನ ಬಿ ಸಿ ರಾಜೇಶ್ ಅಭ್ಯರ್ಥಿಯಾಗುವುದು ನಿಕ್ಕಿಯಾಗುತ್ತಿದೆ. [ಜೆಡಿಎಸ್ ಮೊದಲ ಪಟ್ಟಿ]
ಈ ಲೋಕಸಭೆ ಕ್ಷೇತ್ರದಲ್ಲಿ 8 ವಿಧಾನಸಭೆ ಕ್ಷೇತ್ರಗಳಿದ್ದು, ಒಂದು ಭಾಗ ಚಿಕ್ಕಮಗಳೂರಿನ ಕಡೂರನ್ನು ಒಳಗೊಂಡಿದೆ. ಶ್ರವಣಬೆಳಗೊಳ, ಅರಸಿಕೆರೆ, ಬೇಲೂರು, ಹಾಸನ, ಹೊಳೆನರಸೀಪುರ, ಅರಕಲಗೂಡು, ಸಕಲೇಶಪುರ ಇವು ಇತರ ವಿಧಾನಸಭೆ ಕ್ಷೇತ್ರಗಳು. ಕಳೆದ ಬಾರಿಯ (2009) ಚುನಾವಣೆಯಲ್ಲಿ 80 ವರ್ಷದ ಎಚ್ ಡಿ ದೇವೇಗೌಡರು (496,429) ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಕೆ.ಎಚ್. ಹನುಮೇಗೌಡರನ್ನು (205,316) 2.9 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು. [ಅಂಕಿಅಂಶ : ಇಂಡಿಯಾವೋಟ್ಸ್]