ಹಾಸನದ ಜೆಡಿಎಸ್ ಟಿಕೆಟ್; ಭವಾನಿ ರೇವಣ್ಣ V/S ಸ್ವರೂಪ್
2023ರ ವಿಧಾನಸಭೆ ಚುನಾವಣೆಗೆ ಹಾನಸ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾರು?. ಮಾಜಿ ಸಚಿವ ಎಚ್. ಡಿ. ರೇವಣ್ಣ ಪತ್ನಿ ಭವಾನಿ ರೇವಣ್ಣ ಮತ್ತು ಮಾಜಿ ಶಾಸಕರ ಪುತ್ರ ಎಚ್. ಪಿ. ಸ್ವರೂಪ್ ನಡುವೆ ಜಟಾಪಟಿ ಆರಂಭವಾಗಿದೆ.
ಬೆಂಗಳೂರು, ಜನವರಿ 25; ಹಾಸನ ಜಿಲ್ಲೆ ಜೆಡಿಎಸ್ ಪಕ್ಷದ ಭದ್ರಕೋಟೆ. ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾರು? ಎಂಬುದು ಕುತೂಹಲ. ಕ್ಷೇತ್ರ ಬಿಜೆಪಿ ವಶದಲ್ಲಿದ್ದು, ಪ್ರೀತಮ್ ಗೌಡ ಶಾಸಕರು.
ಮಾಜಿ ಸಚಿವ ಎಚ್. ಡಿ. ರೇವಣ್ಣ ಪತ್ನಿ ಭವಾನಿ ರೇವಣ್ಣ ಮಂಗಳವಾರ ಮಾತನಾಡಿ, "ಜೆಡಿಎಸ್ನಿಂದ ನನ್ನನ್ನು ಅಭ್ಯರ್ಥಿ ಮಾಡಬೇಕು ಎಂದು ಎಲ್ಲರೂ ಮಾತನಾಡಿಕೊಂಡು ನಿರ್ಣಯ ತೆಗೆದುಕೊಂಡಿದ್ದಾರೆ. ಸ್ವಲ್ಪ ದಿನದಲ್ಲಿಯೇ ನನ್ನ ಹೆಸರು ಘೋಷಣೆಯಾಗಲಿದೆ" ಎಂದು ಹೇಳಿದ್ದಾರೆ.
ಭವಾನಿ ರೇವಣ್ಣಗೆ ಟಿಕೆಟ್ ನೀಡಲು ಜೆಡಿಎಸ್ ಪಕ್ಷದಲ್ಲಿಯೇ ವಿರೋಧವಿದೆಯೇ? ಎಂಬುದು ಖಚಿತವಾಗಿಲ್ಲ. ಆದರೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅಭ್ಯರ್ಥಿ ಯಾರು? ಎಂದು ಪಕ್ಷ ತೀರ್ಮಾನ ಮಾಡಲಿದೆ ಎಂದು ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಕುಟುಂಬ ರಾಜಕೀಯ; ಭವಾನಿ ರೇವಣ್ಣ ಎಚ್. ಡಿ. ರೇವಣ್ಣ ಮೂಲಕ ದೇವೇಗೌಡ ಮನವೊಲಿಕೆ ಮಾಡಿ ಟಿಕೆಟ್ ಪಡೆಯುವಷ್ಟು ಪ್ರಭಾವ ಹೊಂದಿದ್ದಾರೆ ಎಂಬುದು ಗುಟ್ಟಾಗಿ ಏನೂ ಉಳಿದಿಲ್ಲ. ಆದರೆ ಕುಟುಂಬ ರಾಜಕಾರಣದ ಅಪವಾದ ಎದುರಿಬೇಕು ಎಂಬುದು ಪಕ್ಷದ ಚಿಂತೆ.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಭವಾನಿ ರೇವಣ್ಣ ಹಾಸನದಲ್ಲಿ ಅಭ್ಯರ್ಥಿ ಆಗಬಹುದು. ಆದರೆ ಪ್ರಜ್ವಲ್ ರೇವಣ್ಣ ಹಾಸನದ ಸಂಸದರು, ಹೊಳೆನರಸೀಪುರದಲ್ಲಿ ಎಚ್. ಡಿ. ರೇವಣ್ಣಗೆ ಟಿಕೆಟ್ ನೀಡಬೇಕು. ಸೂರಜ್ ರೇವಣ್ಣ ವಿಧಾನ ಪರಿಷತ್ ಸದಸ್ಯರು. ಇದರಿಂದಾಗಿ ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಿ ಕುಟುಂಬದವರಿಗೆ ಟಿಕೆಟ್ ನೀಡಿದ್ದಾರೆ ಎಂಬ ಆರೋಪ ಎದುರಾಗುವ ಸಾಧ್ಯತೆ ಇದೆ.
ಬೇರೆ ಯಾರು ಅಭ್ಯರ್ಥಿ?; ಭವಾನಿ ರೇವಣ್ಣ ಬದಲಾಗಿ ಹಾಸನ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಯಾಗಬಹುದು ಎಂಬುದು ಪ್ರಶ್ನೆ. ಹೆಚ್. ಪಿ. ಸ್ವರೂಪ್ ಅಭ್ಯರ್ಥಿಯಾಗಬಹುದು ಎಂಬುದು ಲೆಕ್ಕಾಚಾರವಾಗಿದೆ. ಸ್ವತಃ ಎಚ್. ಡಿ. ಕುಮಾರಸ್ವಾಮಿ ಮಾಜಿ ಶಾಸಕರಾದ ದಿ. ಹೆಚ್. ಎಸ್. ಪ್ರಕಾಶ್ ಪುತ್ರ ಸ್ವರೂಪ್ಗೆ ಟಿಕೆಟ್ ನೀಡುವ ಚಿಂತನೆಯಲ್ಲಿದ್ದಾರೆ.
ನಾಲ್ಕು ಬಾರಿ ಶಾಸಕರಾಗಿ, ಪಕ್ಷ ಸಂಘಟನೆಗೆ ದುಡಿದಿದ್ದ ದಿ. ಹೆಚ್. ಎಸ್. ಪ್ರಕಾಶ್ ಪುತ್ರ ಹೆಚ್. ಪಿ. ಸ್ವರೂಪ್ಗೆ ಟಿಕೆಟ್ ನೀಡಿ ಕಾರ್ಯಕರ್ತರ ವಿಶ್ವಾಸವನ್ನು ಸಹಗಳಿಸುವುದು ಕುಮಾರಸ್ವಾಮಿ ತಂತ್ರವಾಗಿದೆ. ಆದರೆ ಭವಾನಿ ರೇವಣ್ಣಗೆ ಟಿಕೆಟ್ ನಿರಾಕರಿಸಲು ಸಾಧ್ಯವಿದೆಯೇ? ಎಂಬ ಪ್ರಶ್ನೆ ಮತ್ತೊಂದು ಕಡೆ ಇದೆ.
ಟಿಕೆಟ್ ವಿಚಾರದಲ್ಲಿ ಮಂಗಳವಾರ ಭವಾನಿ ರೇವಣ್ಣ ಹೇಳಿಕೆ ನೀಡಿದ ಬಳಿಕ ಹೆಚ್. ಪಿ. ಸ್ವರೂಪ್ ಮಾತನಾಡಿದ್ದಾರೆ, "ಕ್ಷೇತ್ರದಲ್ಲಿ ಚುನಾವಣೆ ಸಂಬಂಧ ಸಂಚಾರ ನಡೆಸುತ್ತಿದ್ದೇನೆ. ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ. ವರಿಷ್ಠರು ನನಗೆ ಟಿಕೆಟ್ ನೀಡಲಿದ್ದಾರೆ ಎಂಬ ಭರವಸೆ ಇದೆ" ಎಂದು ಹೇಳಿದ್ದಾರೆ.
"ಹಿತೈಷಿಗಳು ನನಗೆ ಕರೆ ಮಾಡಿ ಕೇಳುತ್ತಿದ್ದಾರೆ. ಟಿಕೆಟ್ ಅಂತಿಮವಾಗಿಲ್ಲ ಎಂದು ನಾನು ಹೇಳುತ್ತಿದ್ದಾನೆ. ಕಾರ್ಯಕರ್ತರೂ ಗೊಂದಲಕ್ಕೆ ಒಳಗಾಗಬಾರದು ಎಂದು" ಹೆಚ್. ಪಿ. ಸ್ವರೂಪ್ ಕರೆ ನೀಡಿದ್ದಾರೆ.
"ಎಚ್. ಡಿ. ದೇವೇಗೌಡ ಮತ್ತು ರೇವಣ್ಣ ಅವರ ಆಶೀರ್ವಾದ ನಮ್ಮ ಕುಟುಂಬದ ಮೇಲಿದೆ. ನಮ್ಮ ತಂದೆ 6 ಬಾರಿ ಟಿಕೆಟ್ ಪಡೆದು ನಾಲ್ಕು ಬಾರಿ ಗೆದ್ದಿದ್ದರು. ಅವರ ಮರಣದ ನಂತರ ರೇವಣ್ಣ ಬೆಂಬಲವಾಗಿ ನಿಂತಿದ್ದು, ಸಕ್ರಿಯ ರಾಜಕೀಯದಲ್ಲಿ ಮುಂದುವರೆಯುವಂತೆ ಹಲವು ಬಾರಿ ಸಲಹೆ ನೀಡಿದ್ದಾರೆ" ಎಂದು ಸ್ವರೂಪ್ ತಿಳಿಸಿದ್ದಾರೆ.
ಹಾಸನ ಕ್ಷೇತ್ರದಲ್ಲಿ ಮೂರು ಪಕ್ಷಗಳ ನಡುವೆ ಪ್ರಬಲ ಪೈಪೋಟಿ ನಿರೀಕ್ಷೆ ಮಾಡಲಾಗಿದೆ. 2018ರ ಚುನಾವಣೆಯಲ್ಲಿ ಬಿಜೆಪಿಯ ಪ್ರೀತಮ್ ಗೌಡ 63,348 ಮತಗಳನ್ನು ಪಡೆದು ಜಯಗಳಿಸಿದ್ದರು.
ಜೆಡಿಎಸ್ನ ಹೆಚ್. ಪಿ. ಪ್ರಕಾಶ್ 50,342 ಮತಗಳನ್ನು ಪಡೆದು ಎರಡನೇ ಸ್ಥಾನಗಳಿಸಿದ್ದರು. ಕಾಂಗ್ರೆಸ್ನ ಎಂ. ಕೆ. ಮಹೇಶ್ 38,101 ಮತಗಳನ್ನು ಪಡೆದಿದ್ದರು.












Click it and Unblock the Notifications