ನರ್ಸಿಂಗ್ ವಿದ್ಯಾರ್ಥಿಗಳಿಗೆ ಮಾರಕವಾದ ರಾಜ್ಯ ಸರ್ಕಾರದ ನಿರ್ಧಾರ
ಎನ್ ಸಿಯಡಿ ಮಾತ್ರ ನೊಂದಾಯಿಸಿಕೊಂಡರೆ ಸಾಕು ಎಂದು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ. ರಾಜ್ಯದ ಎಲ್ಲಾ ನರ್ಸಿಂಗ್ ಕಾಲೇಜುಗಳಿಗೆ ಸೂಚಿಸಿದ್ದ ಸರ್ಕಾರ. ಇದರಿಂದಾಗಿ ಐಎನ್ ಸಿ ಪಟ್ಟಿಯಿಂದ ರಾಜ್ಯದ ಕಾಲೇಜುಗಳು ಹೊರಕ್ಕೆ.
ಬೆಂಗಳೂರು, ಜುಲೈ 19: ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನರ್ಸಿಂಗ್ ಕಾಲೇಜುಗಳು ಕರ್ನಾಟಕ ನರ್ಸಿಂಗ್ ಕೌನ್ಸಿಲ್ (ಕೆಎನ್ ಸಿ) ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ (ಆರ್ ಜಿಯುಎಚ್ ಎಸ್) ಅಡಿಯಲ್ಲಿ ಮಾತ್ರ ನೊಂದಾವಣೆ ಮಾಡಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಈಗ ರಾಜ್ಯದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಮಾರಕವಾಗಿ ಪರಿಣಮಿಸಿದೆ.
ರಾಜ್ಯ ಸರ್ಕಾರದ ಈ ಆದೇಶದಿಂದಾಗಿ, ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ನರ್ಸಿಂಗ್ ಕಾಲೇಜುಗಳನ್ನು ಇಂಡಿಯನ್ ನರ್ಸಿಂಗ್ ಕೌನ್ಸಿಲ್ (ಐಎನ್ ಸಿ) ತನ್ನ ಪಟ್ಟಿಯಿಂದ ಹೊರಗಿಟ್ಟಿದೆ.

ಇದರ ಪರಿಣಾಮವಾಗಿ, ಕರ್ನಾಟಕದ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ನರ್ಸಿಂಗ್ ಪದವಿ ಪಡೆಯುವ ವಿದ್ಯಾರ್ಥಿಗಳಿಗೆ ಹೊರ ರಾಜ್ಯಗಳಲ್ಲಿ ಅಥವಾ ವಿದೇಶಗಳಲ್ಲಿ ಉದ್ಯೋಗ ಗಳಿಸುವ ಅವಕಾಶ ಇಲ್ಲದಂತಾಗಿದೆ. ಹೀಗೆ, ಹೊರಗಡೆ ಉದ್ಯೋಗ ಮಾಡಬೇಕಾದರೆ, ಐಎನ್ ಸಿಯಿಂದ ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಓದಿರಬೇಕೆಂಬ ನಿಯಮವಿರುವುದರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗಿದೆ.
ಈ ತೊಂದರೆಯನ್ನು ಬಗೆಹರಿಸಿಕೊಳ್ಳಲು, ನರ್ಸಿಂಗ್ ಶಿಕ್ಷಣ ಪಡೆಯಬಯಸುವ ರಾಜ್ಯದ ವಿದ್ಯಾರ್ಥಿಗಳೀಗ ಹೊರ ರಾಜ್ಯದ ಶಿಕ್ಷಣ ಸಂಸ್ಥೆಗಳ ಬಾಗಿಲು ಬಡಿಯುವ ಅನಿವಾರ್ಯ ಎದುರಾಗಿದೆ.
ಅಷ್ಟೇ ಅಲ್ಲ, ಸರ್ಕಾರದ ನಿರ್ಧಾರದಿಂದ ಆತಂಕಗೊಂಡಿರುವ ಹಾಲಿ ನರ್ಸಿಂಗ್ ವಿದ್ಯಾರ್ಥಿಗಳೂ ತಮ್ಮ ಅಧ್ಯಯನದ ಮಧ್ಯದಲ್ಲಿಯೇ ಕಾಲೇಜು ಆಡಳಿತ ಮಂಡಳಿಗಳನ್ನು ಸಂಪರ್ಕಿಸಿ ತಾವು ಆ ಕಾಲೇಜುಗಳಲ್ಲಿ ವ್ಯಾಸಂಗ ನಿಲ್ಲಿಸಲು ಅನುಮತಿ ನೀಡಲು ಅರ್ಜಿ ಸಲ್ಲಿಸುತ್ತಿದ್ದಾರೆ. ಅಲ್ಲದೆ, ಬೇರೆ ರಾಜ್ಯದ ಕಾಲೇಜುಗಳಿಗೆ ಹೋಗಲು ಅನುಮತಿ ನೀಡಬೇಕೆಂದು ಕೋರುತ್ತಿದ್ದಾರೆ ಎಂದು ಕೆಲವು ಕಾಲೇಜುಗಳ ಆಡಳಿತ ಮಂಡಳಿಗಳು ಹೇಳಿವೆ.












Click it and Unblock the Notifications