ಹರಿಹರ: ಮರಕ್ಕೆ ಇನ್ನೋವಾ ಕಾರು ಡಿಕ್ಕಿ, 3 ಸಾವು
ದಾವಣಗೆರೆ, ಮಾರ್ಚ್ 12: ಹರಿಹರ ಸಮೀಪವಿರುವ ತರಳಬಾಳು ಶಾಲೆಯ ಬಳಿ ಶನಿವಾರ ಅಪಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿದ ಇನ್ನೋವಾ ಕಾರೊಂದು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ಬಳ್ಳಾರಿ ಜಿಲ್ಲೆ ಹೂವಿನಹಡಗಲಿಯ ವಿನೋದ್ (22), ವೀರೇಶ್ (24) ಹಾಗೂ ಮಲ್ಲಿಕಾರ್ಜುನ (21) ಎಂದು ಗುರುತಿಸಲಾಗಿದೆ. ಪ್ರಶಾಂತ್ ಮತ್ತು ಜೈಪ್ರಕಾಶ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ವಿನೋದ್ ಕಾರು ಚಾಲನೆ ಮಾಡುತ್ತಿದ್ದ. ಮುಂಜಾನೆ 3.30ರ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿ ಚಲಿಸಿದ ವಾಹನ ನಂತರ ಮರಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ

ಇನ್ನೋವಾ ಕಾರಿನಲ್ಲಿದ್ದ ಇವರೆಲ್ಲರೂ ದಾವಣಗೆರೆ ಕಡೆಗೆ ತೆರಳುತ್ತಿದ್ದರು. ಈ ದುರ್ಘಟನೆಯಲ್ಲಿ ಇಬ್ಬರಿಗೆ ಗಾಯವಾಗಿದ್ದು, ಹರಿಹರದ ಆಸ್ಪತ್ರೆಯಲ್ಲಿ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ.ಅಪಘಾತಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ, ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ವಾರವಷ್ಟೇ ಇನ್ನೋವಾ ಕಾರನ್ನು ಖರೀದಿಸಿದ್ದ ವಿನೋದ್ ಅವರು ಸ್ನೇಹಿತನ ಮದುವೆಗೆಂದು ಹೊಸ ಗಾಡಿಯಲ್ಲಿ ಮಿಕ್ಕ ಸ್ನೇಹಿತರನ್ನು ಕರೆದುಕೊಂಡು ಬಂದಿದ್ದರು. ಮದುವೆ ಮುಗಿಸಿಕೊಂಡು ಹಿಂತಿರುಗುವಾಗ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.












Click it and Unblock the Notifications