ಗುಂಡ್ಲುಪೇಟೆ: ಬಿಜೆಪಿಯಲ್ಲಿ ರಣೋತ್ಸಾಹ, ಕಾಂಗ್ರೆಸ್ ನಾಯಕರು ನಾಪತ್ತೆ!

ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆಯ ಕಣ ರಂಗೇರುತ್ತಿದೆ. ಈಗಾಗಲೇ ಬಿಜೆಪಿಯ ರಾಜ್ಯಾಧ್ಯಕ್ಷ ಸೇರಿದಂತೆ ಸಂಸದರು, ಮಾಜಿ ಸಚಿವರುಗಳು ಕಾಲಿಗೆ ಚಕ್ರಕಟ್ಟಿಕೊಂಡಂತೆ ಗ್ರಾಮ-ಗ್ರಾಮಗಳಿಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ.

ಗುಂಡ್ಲುಪೇಟೆ, ಮಾರ್ಚ್ 24: ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆಯ ಕಣ ರಂಗೇರುತ್ತಿದೆ. ಈಗಾಗಲೇ ಬಿಜೆಪಿಯ ರಾಜ್ಯಾಧ್ಯಕ್ಷ ಸೇರಿದಂತೆ ಸಂಸದರು, ಮಾಜಿ ಸಚಿವರುಗಳು ಕಾಲಿಗೆ ಚಕ್ರಕಟ್ಟಿಕೊಂಡಂತೆ ಗ್ರಾಮ-ಗ್ರಾಮ, ಮನೆ-ಮನೆಗಳಿಗೆ ತೆರಳಿ ಅಭ್ಯರ್ಥಿ ನಿರಂಜನ್‍ಕುಮಾರ್ ಪರ ಮತಯಾಚನೆ ಮಾಡುತ್ತಿದ್ದಾರೆ.

ಬಿ.ಎಸ್.ಯಡಿಯೂರಪ್ಪ, ಸಂಸದ ಶ್ರೀರಾಮುಲು, ಮಾಜಿ ಸಚಿವ ರೇಣುಕಾಚಾರ್ಯ, ಸಂಸದ ಪ್ರತಾಪ್‍ಸಿಂಹ, ಶೋಭಾಕರಂದ್ಲಾಜೆ, ಮಾಜಿ ಸಚಿವ ಅರವಿಂದಲಿಂಬಾವಳಿ ಹೀಗೆ ಒಬ್ಬರ ಮೇಲೊಬ್ಬರಂತೆ ಮುಖಂಡರು ಗುಂಡ್ಲುಪೇಟೆಗೆ ಆಗಮಿಸಿ ಹಳ್ಳಿ, ಹಳ್ಳಿಗೆ ತೆರಳಿ ಮತದಾರರ ಮನವೊಲಿಸುವ ಯತ್ನ ಮಾಡುತ್ತಿದ್ದಾರೆ.

ಆದರೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಆಡಳಿತರೂಢ ಕಾಂಗ್ರೆಸ್ ಮಾತ್ರ ನಾಪತ್ತೆಯಾಗಿದೆ. ಬಿಜೆಪಿ ರಣೋತ್ಸಾಹದಲ್ಲಿ ಮತಬೇಟೆಗೆ ಇಳಿದಿದ್ದರೆ ಕಾಂಗ್ರೆಸ್ ಮನೆಯಲ್ಲಿ ಉತ್ಸಾಹವೇ ಕಾಣುತ್ತಿಲ್ಲ.[ನಂಜನಗೂಡಿನಲ್ಲಿ ಲಿಂಗಾಯತ, ದಲಿತ ಮತಗಳ ಹಿಡಿತ ಯಾರಿಗೆ?]

ಮಹದೇವ ಪ್ರಸಾದ್ ಅಕ್ರಮ

ಮಹದೇವ ಪ್ರಸಾದ್ ಅಕ್ರಮ

ದಿವಂಗತ ಮಹದೇವ ಪ್ರಸಾದ್ ವಿರುದ್ಧವೇ ಹರಿಹಾಯುತ್ತಾ, ಅವರ ಕಾಲದಲ್ಲಿ ನಡೆದ ಅಕ್ರಮಗಳನ್ನು ಜನರ ಮುಂದಿಡುವ ಕೆಲಸದಲ್ಲಿ ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್ ತೊಡಗಿಸಿಕೊಂಡಿದ್ದಾರೆ.

ಕುಟುಂಬ ರಾಜಕಾರಣಕ್ಕೆ ಆಸ್ಪದ ನೀಡಬೇಡಿ

ಕುಟುಂಬ ರಾಜಕಾರಣಕ್ಕೆ ಆಸ್ಪದ ನೀಡಬೇಡಿ

ಮತ್ತೊಂದೆಡೆ ಬಿ.ಎಸ್.ಯಡಿಯೂರಪ್ಪ ಅವರು ಕುಟುಂಬ ರಾಜಕಾರಣಕ್ಕೆ ಆಸ್ಪದ ನೀಡಬೇಡಿ ಎಂದು ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಮೈಸೂರಲ್ಲಿ ವಾಸ್ತವ್ಯ ಹೂಡಿರುವ ಬಿ.ಎಸ್.ಯಡಿಯೂರಪ್ಪ ಅವರು ಗುಂಡ್ಲುಪೇಟೆ ವಿಧಾನಸಭಾ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲೇ ಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಅದಕ್ಕೆ ಬೇಕಾದ ಚುನಾವಣಾ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ.

ಗೀತಾ ಮಹದೇವ ಪ್ರಸಾದ್ ಮತಯಾಚನೆ

ಗೀತಾ ಮಹದೇವ ಪ್ರಸಾದ್ ಮತಯಾಚನೆ

ಇನ್ನೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವ ಪ್ರಸಾದ್ ಸ್ಥಳೀಯ ಮುಖಂಡರೊಂದಿಗೆ ಮನೆ ಮನೆಗೆ ತೆರಳಿ ಮತಯಾಚಿಸುತ್ತಿದ್ದಾರೆ. ಕಾಂಗ್ರೆಸ್ ಪರವಾಗಿ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಕಾಣಿಸಿಕೊಂಡಿದ್ದು ಬಿಟ್ಟರೆ, ಸದ್ಯಕ್ಕೆ ರಾಜ್ಯಮಟ್ಟದ ನಾಯಕರಾರು ಮತಯಾಚನೆಗೆ ಬಂದಂತೆ ಕಾಣುತ್ತಿಲ್ಲ. ಸಂಸದ ಆರ್.ಧ್ರುವನಾರಾಯಣ್ ನಂಜನಗೂಡಿಗೆ ಸೀಮಿತರಾದಂತೆ ಕಂಡು ಬರುತ್ತಿದ್ದು, ಅವರು ಗುಂಡ್ಲುಪೇಟೆಯತ್ತ ಚಿತ್ತ ಹರಿಸಿದಂತೆ ಕಂಡು ಬರುತ್ತಿಲ್ಲ.

ಅನುಕಂಪದ ನೆರಳಿನಲ್ಲಿ ಕಾಂಗ್ರೆಸ್

ಅನುಕಂಪದ ನೆರಳಿನಲ್ಲಿ ಕಾಂಗ್ರೆಸ್

ಹೆಚ್.ಎಸ್.ಮಹದೇವಪ್ರಸಾದ್ ಅವರಿದ್ದಾಗ ಉಳಿಸಿಕೊಂಡಿದ್ದ ಪ್ರಭಾವ ಮತ್ತು ಅನುಕಂಪ ಗೀತಾಮಹದೇವಪ್ರಸಾದ್ ಅವರಿಗೆ ಗೆಲುವು ತಂದುಕೊಡಬಹುದು ಎಂಬುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರವಾಗಿದ್ದು, ಹೀಗಾಗಿ ಗುಂಡ್ಲುಪೇಟೆಗಿಂತ ಹೆಚ್ಚಿನ ಒತ್ತನ್ನು ನಂಜನಗೂಡಿಗೆ ನೀಡುತ್ತಿದ್ದಾರೆ.

ನಾನು ಗೀತಾ ನಿಮ್ಮ ಮನೆ ಮಗಳು

ನಾನು ಗೀತಾ ನಿಮ್ಮ ಮನೆ ಮಗಳು

ಯಾವುದೇ ನಾಯಕರು ಬಾರದಿದ್ದರೂ ಗೀತಾಮಹದೇವ ಪ್ರಸಾದ್ ಅವರು ತನ್ನ ಸೊಸೆ, ಸಂಬಂಧಿಕರು, ಮಹಿಳಾ ನಾಯಕಿಯರನ್ನು ಜೊತೆಗೆ ಕರೆದುಕೊಂಡು ಮನೆಮನೆಗೆ ತೆರಳುತ್ತಿರುವುದಲ್ಲದೆ, ರೋಡ್‍ಶೋ ನಡೆಸಿ ಮತಯಾಚನೆ ಮಾಡುತ್ತಿದ್ದಾರೆ. ನಾನು ಗೀತಾ ನಿಮ್ಮ ಮನೆ ಮಗಳು. ದಯವಿಟ್ಟು ಕಾಂಗ್ರೆಸ್‍ನ ಕೈ ಗುರುತಿಗೆ ಮತ ನೀಡಿ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡುತ್ತಿದ್ದಾರೆ.

80 ಗ್ರಾಮಗಳಲ್ಲಿ ಪ್ರಚಾರ

80 ಗ್ರಾಮಗಳಲ್ಲಿ ಪ್ರಚಾರ

ಈಗಾಗಲೇ ಸುಮಾರು 80 ಗ್ರಾಮಗಳಲ್ಲಿ ಗೀತಾ ಪ್ರಚಾರ ನಡೆಸಿ ಮನೆಮನೆಗಳಿಗೆ ತೆರಳಿ ಮತ ಕೇಳಿದ್ದಾರೆ. ಎಲ್ಲೆಡೆಯೂ ಜನ ಬೆಂಬಲಿಸುತ್ತಿದ್ದಾರೆ ಹೀಗಾಗಿ ಗೆಲುವು ನನ್ನದೇ ಎನ್ನುವುದು ಅವರ ಆಲೋಚನೆಯಾಗಿದೆ.

ಅಧಿವೇಶನ ನಡೆಯುತ್ತಿರುವುದರಿಂದ ಕಾಂಗ್ರೆಸ್‍ನ ಸಚಿವರ ದಂಡು ಈ ಕ್ಷೇತ್ರದತ್ತ ಇನ್ನೂ ಬಂದಿಲ್ಲ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾದಿಯಾಗಿ ಕ್ಷೇತ್ರಕ್ಕೆ ಲಗ್ಗೆಯಿಡುವ ಸಾಧ್ಯತೆ ಹೆಚ್ಚಾಗಿದೆ.

ಬಿಜೆಪಿಯಿಂದ ಮತ್ತಷ್ಟು ನಾಯಕರು

ಬಿಜೆಪಿಯಿಂದ ಮತ್ತಷ್ಟು ನಾಯಕರು

ಇತ್ತ ಬಿಜೆಪಿ ಇನ್ನುಳಿದ ನಾಯಕರನ್ನು ಚುನಾವಣಾ ಪ್ರಚಾರಕ್ಕೆ ಕರೆತರುವ ಸಾಧ್ಯತೆಯಿದೆ. ಅಷ್ಟೇ ಅಲ್ಲ ಈಗಷ್ಟೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರನ್ನು ಕರೆತಂದು ರೋಡ್‍ಶೋ ನಡೆಸುವ ಸಿದ್ಧತೆಯಲ್ಲಿದೆ. ಚುನಾವಣಾ ದಿನಗಳು ಹತ್ತಿರ ಬರುತ್ತಿದ್ದಂತೆಯೇ ಚುನಾವಣಾ ಕಣ ಇನ್ನಷ್ಟು ರಂಗೇರುವುದು ಖಚಿತವಾಗಿದೆ.

ಏಪ್ರಿಲ್ 9 ರಂದು ಗುಂಡ್ಲುಪೇಟೆಯಲ್ಲಿ ಮತದಾನ ನಡೆಯಲಿದ್ದು, 13ರಂದು ಮತ ಎಣಿಕೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+