ಬದುಕಿ ಬರಲಿಲ್ಲ ಬಂಡೆದೆಯ ಪಿಎಸ್ಸೈ ಮಲ್ಲಿಕಾರ್ಜುನ
ಗುಲ್ಬರ್ಗ, ಜ.15: ಪಾತಕಿಗಳ ವಿರುದ್ಧ ಸಮರದಲ್ಲಿ ಗೆದ್ದರೂ ಬದುಕಿ ಬರಲಿಲ್ಲ ನಮ್ಮವ ಪಿಎಸ್ಸೈ ಮಲ್ಲಿಕಾರ್ಜುನ ಬಂಡೆ. ಯುವ ಪೊಲೀಸ್ ಅಧಿಕಾರಿ ಒಂದು ವಾರ ಕಾಲ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದರೂ ಕೊನೆಗೂ ವಿಧಿಲಿಖಿತದಂತೆ ನಿನ್ನೆ ಮಧ್ಯ ರಾತ್ರಿ ಕೊನೆಯುಸಿರೆಳೆದಿದ್ದಾರೆ. ವೀರಮರಣ ಹೊಂದಿದ ದಿಟ್ಟ ಅಧಿಕಾರಿಗೆ ನಾಡಿನ ಜನರ ಪರವಾಗಿ ಒಂದು ಪೊಲೀಸ್ ಸೆಲ್ಯೂಟ್.

ಮುನ್ನಾ ಎಂಬ ಖತರ್ನಾಕ್ ಪಾತಕಿಯ ಜತೆ ಜನವರಿ 8ರಂದು ನಡೆದ ಗುಂಡಿನ ದಾಳಿಯ ವೇಳೆ ನಿರ್ದಯಿ ಪಾತಕಿ point-blank rangeನಲ್ಲಿ ಹಾರಿಸಿದ ಎರಡು ಗುಂಡು ಸೀದಾ ಬಂಡೆದೆಯ ಮಲ್ಲಿಕಾರ್ಜುನ ಅವರ ತಲೆಹೊಕ್ಕಿ, ಆತನ ಮೆದುಳನ್ನು ಛಿದ್ರಗೊಳಿಸಿತ್ತು. ತಕ್ಷಣ ಅವರನ್ನು ಸಮೀಪದ ಬಸವೇಶ್ವರ ಆಸ್ಪತ್ರೆ, ಆನಂತರ ಹೈದರಾಬಾದಿನ ಬಸವೇಶ್ವರ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಲಾಗುತ್ತಿತ್ತು.
ವೈದ್ಯರ ಸಲಹೆಯನ್ನಾಧರಿಸಿ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನರಿಗೆ ವಿದೇಶದಲ್ಲಿಯೂ ಚಿಕಿತ್ಸೆ ಕೊಡಿಸಲು ಸರಕಾರ ಸಿದ್ಧವಾಗಿತ್ತು. ಆದರೆ 'ಬಂಡೆ ದೇಹಸ್ಥಿತಿ ತುಂಬಾ ಸೂಕ್ಷ್ಮವಾಗಿದೆ. ಅವರನ್ನು ಏರ್ ಲಿಫ್ಟ್ ಮಾಡುವುದು ಅಪಾಯಕಾರಿ' ಎಂದು ಅವರನ್ನು ನೋಡಿಕೊಳ್ಳುತ್ತಿದ್ದ ವೈದ್ಯರು ಸ್ಪಷ್ಟಪಡಿಸಿದ್ದರು. ಜತೆಗೆ ವಿಧಿಲಿಖಿತವೂ ಬೇರೆಯಾಗಿತ್ತು. ನಿನ್ನೆ ಮಧ್ಯ ರಾತ್ರಿ ಮಲ್ಲಿಕಾರ್ಜುನ ಅವರು ಕಾಲನ ಕರೆಗೆ ಓಗೊಟ್ಟು ಎಲ್ಲರನ್ನು ದುಃಖದ ಮಡುವಿನಲ್ಲಿ ಬಿಟ್ಟು ಹೊರಟುಹೋಗಿದ್ದಾರೆ. ಅಂದಹಾಗೆ ಮಲ್ಲಿಕಾರ್ಜುನ ಬಂಡೆಗೆ ಇನ್ನೂ 39 ವರ್ಷ ವಯಸ್ಸು.
ಪೊಲೀಸ್ ಇಲಾಖೆಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಮಲ್ಲಿಕಾರ್ಜುನ ಬಂಡೆಗೆ ತಾನು ಸ್ನಾತಕೋತ್ತರ ಪದವಿ ಓದುತ್ತಿದ್ದರು ಒಬ್ಬ ಪೇದೆಯಾಗಿ 1999ರಲ್ಲಿ ಇಲಾಖೆಗೆ ಭರ್ತಿಯಾಗಲು ಅವಮಾನವೆಂದು ಪರಿಗಣಿಸಲಿಲ್ಲ. ಮುಂದೆ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ, 2004ರಲ್ಲಿ ಇಲಾಖೆ ಪರೀಕ್ಷೆಯಲ್ಲಿ ಯಶಸ್ವಿಯಾಗಿ ತೇರ್ಗಡೆಯಾಗಿ ಸಬ್ ಇನ್ಸ್ ಪೆಕ್ಟರ್ ಆಗಿ ಇಲಾಖೆಯ ಉಸ್ತುವಾರಿ ವಹಿಸಿಕೊಂಡರು.
ಈ ಮಧ್ಯೆ, ಮಲ್ಲಮ್ಮ ಎಂಬುವವರ ಜತೆ 2004ರಲ್ಲಿ ವಿವಾಹವಾದರು. ದಂಪತಿಗೆ ಶಿವಾನಿ ಮತ್ತು ಸಾಯಿ ದರ್ಶನ್ ಎಂಬಿಬ್ಬರು ಮುದ್ದಾದ ಮಕ್ಕಳು ಇದ್ದಾರೆ.
ಇಂದು ಸಂಜೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ: ಮೃತ ಮಲ್ಲಿಕಾರ್ಜುನ ಬಂಡೆ ಅವರ ಅಂತ್ಯಕ್ರಿಯೆಯು ಗುಲ್ಬರ್ಗ ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ಗ್ರಾಮದಲ್ಲಿ ಇಂದು ಸಂಜೆ ನಡೆಯಲಿದೆ.












Click it and Unblock the Notifications