Gruha Lakshmi Scheme: ಫೆಬ್ರವರಿ, ಮಾರ್ಚ್ ತಿಂಗಳ ಹಣ ಕೊಟ್ಟಿಲ್ಲ: ಸದನದಲ್ಲಿ ಸತ್ಯ ಒಪ್ಪಿಕೊಂಡ ಲಕ್ಷ್ಮಿ ಹೆಬ್ಬಾಳ್ಕರ್
ಬೆಳಗಾವಿ: ಸಿದ್ದರಾಮಯ್ಯ ಸರ್ಕಾರ ಪಂಚ ಗ್ಯಾರಂಟಿಗಳಲ್ಲಿ ಮನೆ ಯಜಮಾನಿಗೆ ಪ್ರತಿ ತಿಂಗಳ 2000 ರೂ. ನೀಡುವ ಗೃಹ ಲಕ್ಷ್ಮೀ ಯೋಜನೆ ಒಂದಾಗಿದೆ. ಆದರೆ, ಕೆಲ ತಿಂಗಳುಗಳಿಂದ ಮಹಿಳೆಯರ ಖಾತೆಗೆ ಗೃಹ ಲಕ್ಷ್ಮೀ ಹಣ ಜಮೆ ಆಗಿಲ್ಲ. ಈ ಸಂಬಂಧ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಅವರು ಅಧಿವೇಶನದಲ್ಲಿ ಗಮನಸೆಳೆದಿದ್ದಾರೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳು ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಪ್ಪು ಲೆಕ್ಕಾ ಕೊಟ್ಟಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಇತ್ತ ಗೃಹ ಲಕ್ಷ್ಮೀ ಹಣವನ್ನು ಆಗಸ್ಟ್ ತಿಂಗಳವರೆಗೂ ನೀಡಿದ್ದೇವೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಆದರೆ ಆಗಸ್ಟ್ ವರೆಗೂ ಹಣ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಅವರು ಸದನದಲ್ಲಿ ಸರ್ಕಾರದ ಅಧಿಕೃತ ದಾಖಲೆ ಬಿಡುಗಡೆ ಮಾಡಿದ್ದು, ಫೆಬ್ರವರಿ, ಮಾರ್ಚ್ ತಿಂಗಳ ಹಣ ಬಿಡುಗಡೆ ಮಾಡಿಲ್ಲದಿರುವುದು ದಾಖಲೆ ಮೂಲಕ ಬಹಿರಂಗವಾಗಿದೆ. ಇತ್ತ ದಾಖಲೆ ಸಹಿತ ಬಿಡುಗಡೆಯಾದ ಬಳಿಕ ಮಹಿಳಾ ಮತ್ತು ಮಕ್ಕಳು ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸತ್ಯವನ್ನ ಒಪ್ಪಿಕೊಂಡಿದ್ದಾರೆ.

ಹೌದು, ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಹಣ ಹಾಕಿಲ್ಲ. ಈ ಬಗ್ಗೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ. ಆರ್ಥಿಕ ಇಲಾಖೆ ಜೊತೆಗೆ ಈ ಬಗ್ಗೆ ಚರ್ಚೆ ನಡೆಸಿ, ಶೀಘ್ರದಲ್ಲಿಯೇ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಹಣವನ್ನ ಬಿಡುಗಡೆ ಮಾಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳು ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಇನ್ನೂ ಲಕ್ಷ್ಮಿ ಹೆಬ್ಬಾಳ್ಕರ್ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ವಿಪಕ್ಷಗಳು ಸದನದ ಬಾವಿಗಿಳಿದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿವೆ.
ಹಾಗಾದ್ರೆ, ಐದು ಸಾವಿರ ಕೋಟಿ ರೂಪಾಯಿ ಎಲ್ಲೋಯ್ತು
ವಿಧಾನಸಭೆಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ ಅವರು, ಗೃಹಲಕ್ಷ್ಮಿ ಯೋಜನೆ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸದನಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ. ಆದ್ದರಿಂದ ಸಚಿವರು 1.20 ಕೋಟಿ ಫಲಾನುಭವಿ ಮಹಿಳೆಯರ ಬಳಿ ಕ್ಷಮೆ ಯಾಚಿಸಬೇಕೆಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೃಹಲಕ್ಷ್ಮಿ ಯೋಜನೆ ಕುರಿತು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಇದನ್ನು ಮುಖ್ಯಮಂತ್ರಿ ಕೂಡ ಒಪ್ಪಿಕೊಂಡಿದ್ದಾರೆ. ಈ ಯೋಜನೆ 1.20 ಕೋಟಿ ಜನರಿಗೆ ಸಂಬಂಧಿಸಿದೆ. ಜನವರಿ, ಫೆಬ್ರವರಿ ತಿಂಗಳ ಸಹಾಯಧನ ನೀಡದೆ ಮೇ, ಜೂನ್, ಜುಲೈ ತಿಂಗಳ ಸಹಾಯಧನ ನೀಡಲು ಹೇಗೆ ಸಾಧ್ಯ? ಈ ತಿಂಗಳ ಸಹಾಯಧನ ನೀಡದೆ ಮುಂದಕ್ಕೆ ಹೋಗಲಾಗಿದೆ ಎಂದರೆ ಜನರಿಗೆ ಮೋಸ ಮಾಡಿದ್ದಾರೆ ಅಥವಾ ಖಜಾನೆ ಖಾಲಿಯಾಗಿದೆ ಎಂದೇ ಅರ್ಥ ಎಂದರು.
ಈ ಎರಡು ತಿಂಗಳ ಸಹಾಯಧನವನ್ನು ಏಕೆ ಸ್ಥಗಿತ ಮಾಡಲಾಗಿದೆ ಎಂದು ಸರ್ಕಾರ ಸದನಕ್ಕೆ ಮಾಹಿತಿ ನೀಡಬೇಕು. ಈ ಹಣವನ್ನು ಕಾಂಗ್ರೆಸ್ ಪಕ್ಷ ಬಳಸಿಕೊಂಡಿದೆಯೇ ಅಥವಾ ಸ್ವಂತಕ್ಕೆ ಸಚಿವರು ಬಳಸಿಕೊಂಡರಾ ಎಂಬ ಬಗ್ಗೆ ತಿಳಿಯಬೇಕಿದೆ. ಕೋಟ್ಯಂತರ ಮಹಿಳೆಯರು ಇದೇ ಹಣ ನಂಬಿರುತ್ತಾರೆ. ಮನೆಗೆ ದಿನಸಿ, ಸಾಲ ಮರುಪಾವತಿಗೆ ಈ ಹಣ ಅವಲಂಬಿಸಿರುತ್ತಾರೆ. ಪ್ರತಿ ತಿಂಗಳು 2,480 ಕೋಟಿ ರೂ. ನೀಡಬೇಕು. ಅಂದರೆ ಎರಡು ತಿಂಗಳು 5,000 ಕೋಟಿ ರೂ. ನೀಡಬೇಕು. ಇಷ್ಟೊಂದು ಹಣ ಎಲ್ಲಿಗೆ ಹೋಗಿದೆ? ಎರಡು ತಿಂಗಳು ಬಿಟ್ಟು ನೇರವಾಗಿ ಮುಂದಕ್ಕೆ ಹೋಗಲು ಯಾವ ಕಾನೂನಿನಲ್ಲಿ ಅವಕಾಶವಿದೆ ಎಂದು ಪ್ರಶ್ನೆ ಮಾಡಿದರು.
ಈ ನಡುವೆ ಸಚಿವರು ಸದನಕ್ಕೆ ಬರುತ್ತಿಲ್ಲ. ಸದನಕ್ಕೆ ತಪ್ಪು ಮಾಹಿತಿ ನೀಡಿ ಅಗೌರವ ತೋರಲಾಗಿದೆ. ಶಾಸಕರು ಪ್ರಶ್ನೆ ಕೇಳಿದಾಗ ಸರಿಯಾದ ಉತ್ತರ ನಂತರ ನೀಡುತ್ತೇನೆ ಎಂದಿದ್ದರೆ ಸಾಕಿತ್ತು. ಆದರೆ ತಪ್ಪಾದ ಉತ್ತರ ನೀಡಬಾರದಿತ್ತು. ಈಗ ತಪ್ಪು ಮಾಹಿತಿ ನೀಡಿದ್ದಕ್ಕೆ ಸಚಿವರು ಮಹಿಳೆಯರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. ನಂತರ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಾತಿಗೆ ಪ್ರತಿಕ್ರಿಯಿಸಿದ ಅವರು, ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ ಎಂಬ ಮಾತು ಬೇಕಿರಲಿಲ್ಲ. ಈ ಸುಳ್ಳಿನಿಂದ ಎಲ್ಲರ ಮನಸ್ಸಿಗೂ ನೋವಾಗಿದೆ. ಆದ್ದರಿಂದ ನೇರವಾಗಿ ಕ್ಷಮೆ ಕೇಳಬೇಕು. ಈ ರೀತಿ ತಪ್ಪಾದ ಮಾಹಿತಿ ನೀಡಿದ್ದು ಯಾವ ಅಧಿಕಾರಿ ಎಂಬುದನ್ನು ತಿಳಿಸಬೇಕು. ಎರಡು ತಿಂಗಳ ಸಹಾಯಧನ ಯಾವಾಗ ನೀಡಲಾಗುವುದು ಎಂದು ಹೇಳಬೇಕು ಎಂದು ಒತ್ತಾಯಿಸಿದರು.












Click it and Unblock the Notifications