Santro Ravi : ಸ್ಯಾಂಟ್ರೊ ರವಿ ಪ್ರಕರಣ ಸಿಐಡಿಗೆ ಹಸ್ತಾಂತರ
ಬೆಂಗಳೂರು, ಜನವರಿ 16; ಸ್ಯಾಂಟ್ರೊ ರವಿ ಪ್ರಕರಣವನ್ನು ಕರ್ನಾಟಕ ಸರ್ಕಾರದ ಸೂಚನೆಯಂತೆ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಇಷ್ಟು ದಿನ ಮೈಸೂರಿನ ವಿಜಯನಗರ ಠಾಣೆ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದರು.
ಕರ್ನಾಟಕದ ಡಿಜಿ & ಐಜಿಪಿ ಈ ಕುರಿತು ಸೋಮವಾರ ಆದೇಶ ಹೊರಡಿಸಿದ್ದಾರೆ. ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡುವಂತೆ ಮೈಸೂರು ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಮೈಸೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸೋಮವಾರ ಸ್ಯಾಂಟ್ರೊ ರವಿ ಹಾಜರುಪಡಿಸಲಾಗಿತ್ತು. ಕೋರ್ಟ್ ಜನವರಿ 25ರ ತನಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಸೋಮವಾರ ಮೈಸೂರಿನ ಕೋರ್ಟ್ನಲ್ಲಿ ಸರ್ಕಾರಿ ವಕೀಲರು ಸ್ಯಾಂಟ್ರೊ ರವಿ ಪ್ರಕರಣವನ್ನು ಸಿಐಡಿಗೆ ವಹಿಸಲು ಮನವಿ ಮಾಡಿದ್ದರು. ಆಗ ಕೋರ್ಟ್ ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ. ಸಿಐಡಿಗೆ ವಹಿಸುವುದು ಸರ್ಕಾರದ ಕೆಲಸ, ಸೂಕ್ತ ದಾಖಲಾತಿಗಳ ಜೊತೆ ಅರ್ಜಿ ಸಲ್ಲಿಕೆ ಮಾಡಿ ಎಂದು ಪೊಲೀಸರಿಗೆ ಸೂಚನೆ ನೀಡಿತ್ತು.
ಈ ಆದೇಶ ಬಂದ ಕೆಲವೇ ಕ್ಷಣಗಳಲ್ಲಿ ಕರ್ನಾಟಕ ಸರ್ಕಾರದ ಸೂಚನೆಯಂತೆ ಸ್ಯಾಂಟ್ರೊ ರವಿ ಪ್ರಕರಣವನ್ನು ಸಿಐಡಿಗೆ ನೀಡಿ ಆದೇಶಿಸಲಾಗಿದೆ. ಮೈಸೂರಿನ ವಿಜಯನಗರ ಠಾಣೆ ಪೊಲೀಸರು ಪ್ರಕರಣದ ಕಡತಗಳನ್ನು ಸಿಐಡಿಗೆ ಹಸ್ತಾಂತರ ಮಾಡಲಿದ್ದಾರೆ.
ಸ್ಯಾಂಟ್ರೊ ರವಿ ವಿರುದ್ಧ ಪರಿಶಿಷ್ಟ ಮಹಿಳೆ ಮೇಲಿನ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಗೂಂಡಾಗಿರಿ ಆರೋಪದ ಮೇಲೆ ಮೈಸೂರಿನ ವಿಜಯನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ತಮ್ಮ ವಿರುದ್ಧ ದೂರು ದಾಖಲಾದ ಬಳಿಕ ಸ್ಯಾಂಟ್ರೊ ರವಿ ತಲೆಮರೆಸಿಕೊಂಡಿದ್ದ. ಶುಕ್ರವಾರ ಸ್ಯಾಂಟ್ರೊ ರವಿ, ಪ್ರೇಮ್ಜಿ ಮತ್ತು ಶ್ರುತೇಶ್ ಎಂಬ ಆರೋಪಿಗಳನ್ನು ಕರ್ನಾಟಕದ ಪೊಲೀಸರು ಗುಜರಾತ್ನಲ್ಲಿ ಬಂಧಿಸಿದ್ದರು. ಶನಿವಾರ ಮುಂಜಾನೆ ಎಲ್ಲರನ್ನೂ ಮೈಸೂರಿಗೆ ಕರೆತರಲಾಗಿತ್ತು.
ಕರ್ನಾಟಕ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಹೆಸರು ಸ್ಯಾಂಟ್ರೊ ರವಿ. ಪೊಲೀಸ್ ಇಲಾಖೆಯ ವರ್ಗಾವಣೆ ದಂಧೆಯಲ್ಲಿ ರವಿ ತೊಡಗಿಕೊಂಡಿದ್ದ. ಹಲವರು ಅಧಿಕಾರಿಗಳ ಸಂಪರ್ಕವಿತ್ತು.












Click it and Unblock the Notifications