ಅ.1ರಿಂದ ಥಿಯೇಟರ್ ಹೌಸ್ಫುಲ್ಗೆ ಅನುಮತಿ ನೀಡಿದ ಸಿಎಂ ಬೊಮ್ಮಾಯಿ
ಬೆಂಗಳೂರು, ಸೆಪ್ಟೆಂಬರ್ 24: "ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದ್ದು, ಇದರಿಂದಾಗಿ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂನಲ್ಲಿ ಸಡಿಲಿಕೆ ಮಾಡಲಾಗಿದೆ," ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.
"ಅದೇ ರೀತಿ ಅಕ್ಟೋಬರ್ 1ರಿಂದ ಸಿನಿಮಾ ಮಂದಿರಗಳಲ್ಲಿ ಹೌಸ್ಫುಲ್ಗೆ ಅನುಮತಿ ನೀಡಲಾಗುತ್ತಿದೆ," ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
"ಕೋವಿಡ್ ಸಲಹಾ ಸಮಿತಿ ಅಧಿಕಾರಿಗಳೊಂದಿಗೆ ಜೊತೆಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂ ಅವಧಿಯನ್ನು ರಾತ್ರಿ 10ರಿಂದ ಬೆಳಗ್ಗಿನ ಜಾವ 5ರವರೆಗೆ ನಿಗದಿಗೊಳಿಸಲಾಗಿದೆ."

"ಅಕ್ಟೋಬರ್ 3ರಿಂದ ಪಬ್ ಹಾಗೂ ಕ್ಲಬ್ಗಳಿಗೆ ಅನುಮತಿ ನೀಡಲಾಗುತ್ತದೆ. ರಾಜ್ಯದಲ್ಲಿ ಪ್ರಸ್ತುತ ಕೋವಿಡ್ ಪಾಸಿಟಿವಿಟಿ ಸರಾಸರಿ ದರ ಶೇ.0.66 ಇದೆ. ಅಕ್ಟೋಬರ್ 1ರಿಂದ ಕೋವಿಡ್ ಪಾಸಿಟಿವ್ ದರ ಶೇ.1ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಶೇ.100ರಷ್ಟು ಸೀಟು ಭರ್ತಿಗೆ ಅವಕಾಶ ನೀಡಲಾಗುವುದು."
"ಪಾಸಿಟಿವಿಟಿ ದರ ಶೇ.1ಕ್ಕಿಂತ ಜಾಸ್ತಿ ಆದರೆ ಶೇ.50ರಷ್ಟು ಸೀಟು ಭರ್ತಿ ಹಾಗೂ ಶೇ.2ಕ್ಕಿಂತ ಜಾಸ್ತಿಯಾದರೆ ಚಿತ್ರಮಂದಿರ ಬಂದ್ ಮಾಡಲಾಗುವುದು. ಇದೇ ಮಾನದಂಡ ಪಬ್ಗಳಿಗೂ ಅನ್ವಯವಾಗಲಿದೆ," ಎಂದು ಸಿಎಂ ಮಾಹಿತಿ ನೀಡಿದರು.
ಕನಿಷ್ಠ 1 ಡೋಸ್ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಪ್ರವೇಶ ಅವಕಾಶ ನೀಡಲಾಗುವುದು. ಗರ್ಭಿಣಿಯರು ಮತ್ತು ಮಕ್ಕಳಿಗೆ ಅವಕಾಶ ನೀಡದಿರಲು ಸಭೆಯಲ್ಲಿ ನಿರ್ಧರಿಸಲಾಯಿತು.

6ರಿಂದ 12ನೇ ತರಗತಿಯವರೆಗೆ ಶೇ.100ರಷ್ಟು ಹಾಜರಾತಿ
6ರಿಂದ 12ನೇ ತರಗತಿಯವರೆಗೆ ಶೇ.100ರಷ್ಟು ಹಾಜರಾತಿಗೆ ಅವಕಾಶ ನೀಡಲು ನಿರ್ಧರಿಸಿದ್ದು, ವಾರದಲ್ಲಿ 5 ದಿನ ಅಂದರೆ ಸೋಮವಾರದಿಂದ ಶುಕ್ರವಾರವದರೆಗೆ ಶಾಲಾ- ಕಾಲೇಜುಗಳನ್ನು ನಡೆಸಲು ನಿರ್ಧರಿಸಲಾಗಿದೆ. ಸದ್ಯಕ್ಕೆ 1ರಿಂದ 5ನೇ ತರಗತಿಗಳವರೆಗಿನ ಶಾಲೆಗಳನ್ನು ಆರಂಭಿಸುತ್ತಿಲ್ಲ ಎಂದು ತೀರ್ಮಾನಿಸಲಾಯಿತು.
"ಯಾದಗಿರಿ, ರಾಯಚೂರು, ಕಲಬುರಗಿ ಹಾಗೂ ಮೈಸೂರು ಜಿಲ್ಲೆಯಲ್ಲಿ ಲಸಿಕೆ ಅಭಿಯಾನ ತೀವ್ರಗೊಳಿಸಿ ಜನರಲ್ಲಿ ಅರಿವು ಮೂಡಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚಿಸಲಾಯಿತು. ಅಲ್ಲದೆ ಗಡಿ ಭಾಗದ ಜಿಲ್ಲೆಗಳಲ್ಲಿ ಹೆಚ್ಚು ನಿಗಾವಹಿಸಲು ಸೂಚಿಸಿರುವುದಾಗಿ," ಸಿಎಂ ಬೊಮ್ಮಾಯಿ ಹೇಳಿದರು.
Recommended Video
ದಸರಾ ಆಚರಣೆ ಬಗ್ಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸುವುದಾಗಿ ಮತ್ತು ಈಜುಕೊಳಕ್ಕೆ ಈಗ ಇರುವ ಮಾರ್ಗಸೂಚಿಗಳು ಯಥಾಸ್ಥಿತಿ ಅನ್ವಯವಾಗಲಿದೆ ಎಂದು ಸಿಎಂ ಇದೇ ವೇಳೆ ಹೇಳಿದರು.












Click it and Unblock the Notifications