Darshan Case: ಜೈಲುಗಳ ವ್ಯವಸ್ಥೆ ಸುಧಾರಣೆಗೆ 12 ವರ್ಷದ ಹಿಂದಿನ ವರದಿ ಜಾರಿ?: ಜಿ.ಪರಮೇಶ್ವರ
ಬೆಂಗಳೂರು, ಆಗಸ್ಟ್ 27: ಕೊಲೆ ಆರೋಪಿ ನಟ ದರ್ಶನ್ ಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗಿದೆ ಎಂಬ ಆರೋಪಿ ಎದುರಿಸುತ್ತಿರುವ ರಾಜ್ಯ ಗೃಹ ಇಲಾಖೆಯು ರಾಜ್ಯದಲ್ಲಿನ ಜೈಲುಗಳ ಸುಧಾರಣೆಗಾಗಿ ದಶಕದ ಹಿಂದಿನ ವರದಿ ಜಾರಿಗೆ ಚಿಂತನೆ ನಡೆಸಿದೆ. ಈ ಕುರಿತು ಗೃಹ ಸಚಿವ ಜಿ.ಪರಮೇಶ್ವರ ಅವರು ಮಹತ್ವದ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಗೃಹ ಸಚಿವರು, ಸೆಂಟ್ರಲ್ ಜೈಲು ಸೇರಿದಂತೆ ರಾಜ್ಯದ ಇತರ ಜೈಲುಗಳಲ್ಲಿನ ಅಕ್ರಮ ನಡೆಯದಂತೆ, ಅಲ್ಲಿನ ವ್ಯವಸ್ಥೆಯ ಸುಧಾರಣೆಗೆ ಎಚ್.ಕೆ. ಪಾಟೀಲ್ ವರದಿ ಜಾರಿ ಮಾಡುವ ಕುರಿತು ಅಪ್ಡೇಟ್ ನೀಡಿದ್ದಾರೆ. ನಮ್ಮ ಹೆಚ್. ಕೆ. ಪಾಟೀಲರು ಈ ಬಗ್ಗೆ ವರದಿ ಕೊಟ್ಟಿದ್ದಾರೆ. ಈ ಬಗ್ಗೆ ನನಗೆ ಈಗಷ್ಟೇ ಗಮನಕ್ಕೆ ಬಂದಿದೆ. ಸದ್ಯ ಆ ವರದಿ ತರಿಸಿಕೊಂಡು ಅದರಲ್ಲಿನ ಅಂಶಗಳನ್ನು ಪರಿಶೀಲಿಸುತ್ತೇವೆ.

ಸುಮಾರು 10-12 ವರ್ಷಗಳ ಹಿಂದೆ ರಾಷ್ಟ್ರ ಮಟ್ಟದಲ್ಲಿ ಪೊಲೀಸ್ ಸುಧಾರಣೆ, ಜೈಲು ಸುಧಾರಣೆ ಸಂಬಂಧ ಒಂದು ಸಮಿತಿ ವರದಿ ಸಲ್ಲಿಕೆ ಆಗಿತ್ತು. ಅದರಲ್ಲಿ ಒಟ್ಟಾರೆ ಈಗಿನ ವ್ಯವಸ್ಥೆಯನ್ನು ಸುಧಾರಣೆ ಮಾಡುವ ಅಗತ್ಯತೆ ಬಗ್ಗೆ ಹೇಳಲಾಗಿದೆ. ಅದರ ಆಧಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗುವುದು ಎಂದರು.
ವಿವಿಧ ಜೈಲುಗಳ ವ್ಯವಸ್ಥೆ ಪರಿಶೀಲಿಸಿ ಕ್ರಮ
ಜೈಲಿನಲ್ಲಿ ಬೇರೆ ವಿಐಪಿ ಖೈದಿಗಳಿಗೂ ಇದೇ ವ್ಯವಸ್ಥೆ ಇದೆ ಎಂಬ ಅನುಮಾನದ ಪ್ರಶ್ನೆಗೆ ಉತ್ತರಿಸಿದ ಸಚಿವರು, ದರ್ಶನ್ ವಿಚಾರ ಒಂದೇ ಅಲ್ಲ, ಬೇರೆ ಎಲ್ಲ ವ್ಯವಸ್ಥೆ ಪರಿಶೀಲಿಸುತ್ತೇವೆ. ಬೇರೆ ಬೇರೆ ಜೈಲುಗಳ ಲೋಪಗಳ ಬಗ್ಗೆಯೂ ವರದಿ ತರಿಸಿಕೊಳ್ಳುತ್ತೇವೆ.
ಅದರಂತೆ ಮುಂದಿನ ದಿನಗಳಲ್ಲಿ ರಾಜ್ಯದ ಶಿವಮೊಗ್ಗ, ಬಳ್ಳಾರಿ, ಮಂಗಳೂರು ಜೈಲುಗಳ ವ್ಯವಸ್ಥೆ ಗಳನ್ನು ಪರಿಶೀಲನೆ ಮಾಡಲಿದ್ದೇವೆ ಎಂದು ಅವರು ತಿಳಿಸಿದರು.

ಇನ್ನೂ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪರವಾಗಿ ಶಕ್ತಿ ಪ್ರದರ್ಶಿಸಲು ಶೋಷಿತ ಸಮುದಾಯಗಳ ಒಕ್ಕೂಟವು ರಾಜಭವನ ಚಲೋ ಹಮ್ಮಿಕೊಂಡಿದೆ. ಇದಕ್ಕೆ ಪಕ್ಷದಿಂದ ಬೆಂಬಲ ಇದ್ದರೂ ಸಹಿತ, ಮೆರವಣಿಗೆಯನ್ನು ನಿಯಮಾವಳಿಗಳ ಪ್ರಕಾರವೇ ನಡೆಸಬೇಕಾಗುತ್ತದೆ. ನಗರದೊಳಗೆ ಮೆರವಣಿಗೆಗೆ ಅವಕಾಶ ಕೊಡುವುದಿಲ್ಲ ಎಂದು ಹೇಳಿದರು.
ರಾಯಲ್ ಟ್ರೀಟ್ಮೆಂಟ್ ಆರೋಪ ಒಪ್ಪದ ಸಚಿವ
ಸಾಕ್ಷಿಗಳನ್ನು ಹೆದರಿಸಲು ದರ್ಶನ್ ರಾಯಲ್ ಟ್ರೀಟ್ಮೆಂಟ್ ಫೋಟೋ ವೈರಲ್ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಮಾಡಿರುವ ಆರೋಪವನ್ನು ಸಚಿವ ಜಿ. ಪರಮೇಶ್ವರ ನಿರಾಕರಿಸಿದರು. ನಾವು ಯಾಕೆ ಈ ಫೋಟೋ ವೈರಲ್ ಮಾಡುತ್ತೇವೆ. ಅದರ ಅಗತ್ಯ ನಮಗಿಲ್ಲ ಎಂದು ತಿರುಗೇಟು ಕೊಟ್ಟರು.
ಯಾರಿಗೆ ಶಿಕ್ಷೆ ಆಗಬೇಕು, ಯಾರಿಗೆ ನ್ಯಾಯ ಸಿಗಬೇಕೋ ಎಂಬುದರ ಮೇಲೆ ಕೆಲಸ ಮಾಡುತ್ತೇವೆ. ಸದ್ಯ ಈ ಘಟನೆಯಿಂದ ರಾಜಕೀಯ ಲಾಭ ತಗೆದುಕೊಳ್ಳುವ ಕೆಲಸ ಮಾಡುವುದಿಲ್ಲ ಎಂದು ಅವರು ತಿಳಿಸಿದರು. ಅಲ್ಲದೇ ಜೈಲನ್ನು ಮೂರು ವಿಭಾಗಗಳಾಗಿ ಮಾಡಲು ಅವಕಾಶ ಇಲ್ಲ. ಮುಂದಿನ ಮೂರು ದಿನಗಳಲ್ಲಿ ನಿಯಮಾವಳಿಗಳ ಪ್ರಕಾರ ಜೈಲು ಪ್ರಾಧಿಕಾರವು ನ್ಯಾಯಾಲಯದ ನಿರ್ದೇಶನದಂತೆ ನಟ ದರ್ಶನ್ ಅನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಲಿದೆ ಎಂದು ಅವರು ವಿವರಿಸಿದರು.












Click it and Unblock the Notifications