Government Employees: ರಾಜ್ಯ ಸರ್ಕಾರಕ್ಕೆ ಸರ್ಕಾರಿ ನೌಕರರಿಂದ ವಿಶೇಷ ಮನವಿ
ಬೆಂಳೂರು, ಅಕ್ಟೋಬರ್ 18: ದೀಪಾವಳಿ-ಬಲಿಪಾಡ್ಯಮಿ ಹಬ್ಬದ ಪ್ರಯುಕ್ತ ಬೆಂಗಳೂರು ನಗರ ಜಿಲ್ಲೆಯ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ-2025ರಲ್ಲಿ ಪಾಲ್ಗೊಂಡಿರುವ ನೌಕರರಿಗೆ ಸಮೀಕ್ಷಾ ಕಾರ್ಯದಿಂದ ವಿನಾಯಿತಿ ನೀಡುವ ಕುರಿತು ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ವಿಶೇಷ ಮನವಿ ಮಾಡಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ-2025ರ ಗಣತಿ ಕಾರ್ಯ ಬೆಂಗಳೂರು ನಗರ ಜಿಲ್ಲೆಯಲ್ಲಿ ದಿನಾಂಕ: 04-10-2025 ರಿಂದ ಆರಂಭವಾಗಿದ್ದು, ಈ ಕಾರ್ಯಕ್ಕೆ ನೌಕರರ ಸಂಘಟನೆಗಳು ಹಾಗೂ ನೌಕರರು ಸಂಪೂರ್ಣ ಬೆಂಬಲ ಹಾಗೂ ಸಹಕಾರವನ್ನು ನೀಡಿರುತ್ತಾರೆ.

ಹಲವಾರು ಸಮಸ್ಯೆಗಳ ನಡುವೆ ಬೆಂಗಳೂರಿನಲ್ಲಿ ಸುಮಾರು 16 ಸಾವಿರ ನೌಕರರು ಮನೆ ಮನೆಗೆ ತೆರಳಿ ವಿಶ್ರಾಂತಿ ಇಲ್ಲದೆ ಕಳೆದ 14 ದಿನಗಳಿಂದ ಸಮೀಕ್ಷೆ ಕಾರ್ಯ ನಿರ್ವಹಿಸಿದ್ದಾರೆ. ಉಲ್ಲೇಖಿತ ಪತ್ರದಲ್ಲಿ ಗಣತಿದಾರರು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳನ್ನು ಈಗಾಗಲೇ ತಮ್ಮ ಗಮನಕ್ಕೆ ತರಲಾಗಿರುತ್ತದೆ. ಪ್ರಸ್ತುತ, ನಮ್ಮ ನಾಡಿನ ಸಾಂಪ್ರದಾಯಿಕ ದೀಪಾವಳಿ ಹಾಗೂ ಬಲಿಪಾಡ್ಯಮಿ ಹಬ್ಬದ ಆಚರಣೆಗಾಗಿ ಬೆಂಗಳೂರಿನ ಬಹುತೇಕ ನಿವಾಸಿಗಳು ತಮ್ಮ ಸ್ವಂತ ಊರುಗಳಿಗೆ ತೆರಳುವುದರಿಂದ ಅಂತಹ ಕುಟುಂಬಗಳ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳುವುದು ಕಷ್ಟ ಸಾಧ್ಯವಾಗುತ್ತದೆ.
ಅಲ್ಲದೇ ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ ನೌಕರರು ಸಹ ದೀಪಾವಳಿ ಹಬ್ಬದ ಆಚರಣೆಯಲ್ಲಿ ಕುಟುಂಬದೊಂದಿಗೆ ಪಾಲ್ಗೊಳ್ಳಬೇಕಾಗಿರುವುದರಿಂದ ಈ ಸಂದರ್ಭದಲ್ಲಿ ಸಮೀಕ್ಷಾ ಕಾರ್ಯದಿಂದ ದಿನಾಂಕ: 19-10-2025 ರಿಂದ 23-10-2025ರವರೆಗೆ ಗಣತಿ ಕಾರ್ಯದಿಂದ ವಿನಾಯಿತಿ ನೀಡುವಂತೆ ಬೆಂಗಳೂರು ನಗರದ ನೌಕರರು/ಮಹಿಳಾ ನೌಕರರು ಮನವಿ ಮಾಡಿದ್ದು, ಈ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ-ನೌಕರರ ಕ್ಷೇಮಾಭಿವೃದ್ಧಿ ಸಂಘದವರು ಸಭೆಯನ್ನು ನಡೆಸಿ, ನೌಕರರ ಕೋರಿಕೆಯನ್ನು ಸಂಬಂಧಿಸಿದವರ ಗಮನಕ್ಕೆ ತಂದು ಹಬ್ಬದ ದಿನಗಳಂದು ಸಮೀಕ್ಷಾ ಕಾರ್ಯದಿಂದ ವಿನಾಯಿತಿ ನೀಡುವಂತೆ ಕೋರಲು ತೀರ್ಮಾನಿಸಲಾಯಿತು.
ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ, ಬೆಂಗಳೂರು ನಗರ ಜಿಲ್ಲೆಯ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ-2025ರಲ್ಲಿ ಪಾಲ್ಗೊಂಡಿರುವ ನಮ್ಮ ನೌಕರರಿಗೆ ದಿನಾಂಕ: 19-10-2025 ರಿಂದ 23-10-2025ರವರೆಗೆ ದೀಪಾವಳಿ ಹಬ್ಬದ ಆಚರಣೆಗಾಗಿ ಸಮೀಕ್ಷಾ ಕಾರ್ಯದಿಂದ ವಿನಾಯಿತಿ ನೀಡುವಂತೆ ಸಮೀಕ್ಷೆಯಲ್ಲಿ ಪಾಲ್ಗೊಂಡ ಸಮಸ್ತ ನೌಕರರ ಪರವಾಗಿ ತಮ್ಮಲ್ಲಿ ಕೋರಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.












Click it and Unblock the Notifications