Government Employee: ಸರ್ಕಾರಿ ನೌಕರರಿಗೆ ನವೆಂಬರ್ 1ರಿಂದ ಈ ನಿಯಮ ಕಡ್ಡಾಯ
ಬೆಂಗಳೂರು, ಅಕ್ಟೋಬರ್ 30: ಕರ್ನಾಟಕ ಸರ್ಕಾರ ಎಲ್ಲಾ ಸರ್ಕಾರಿ ನೌಕರರು ಗುರುತಿನ ಚೀಟಿಯನ್ನು ಕೊರಳಿಗೆ ಹಾಕಿಕೊಳ್ಳಬೇಕು ಎಂದು ಆದೇಶಿಸಿದೆ. ಈಗಾಗಲೇ 'ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ' ಅಭಿಯಾನದಡಿ ಎಲ್ಲಾ ಸರ್ಕಾರಿ ನೌಕರರಿಗೆ ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿ ಕೊರಳುದಾರವನ್ನು (ಟ್ಯಾಗ್) ನೀಡಲಾಗುತ್ತಿದೆ. ಇದನ್ನು ಕಡ್ಡಾಯವಾಗಿ ಧರಿಸಬೇಕು ಎಂದು ತಿಳಿಸಲಾಗಿದೆ.
ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಬುಧವಾರ ಆದೇಶವನ್ನು ಹೊರಡಿಸಿದೆ. ನವೆಂಬರ್ 1ರಿಂದಲೇ ಜಾರಿಗೆ ಬರುವಂತೆ ಕಡ್ಡಾಯವಾಗಿ ಸರ್ಕಾರಿ ನೌಕರರು ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿ ಧರಿಸಬೇಕು. ಇದನ್ನು ಎಲ್ಲರೂ ಕಡ್ಡಾಯವಾಗಿ ಪಾವತಿಸಬೇಕು ಎಂದು ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ.

ಸುತ್ತೋಲೆಯ ವಿವರಗಳು: ಅಕ್ಟೋಬರ್ 28ರಂದು ಸಂದೀಪ್ ಬಿ. ಕೆ. ಸರ್ಕಾರದ ಅಧೀನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ರಾಜಕೀಯ) ಸುತ್ತೋಲೆಯೊಂದನ್ನು ಹೊರಡಿಸಿದ್ದರು. ಈ ಸುತ್ತೋಲೆ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಅಭಿಯಾನದಡಿ ಎಲ್ಲಾ ಸರ್ಕಾರಿ ನೌಕರರು, ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿಯ ಕೊರಳುದಾರವನ್ನು (ಟ್ಯಾಗ್) ಹಾಕಿಕೊಳ್ಳುವುದರ ಕುರಿತು ಎಂಬ ವಿಷಯ ಒಳಗೊಂಡಿತ್ತು.
ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಳಿಸಿ 50 ವರ್ಷಗಳು ಪೂರೈಸಿರುವ ಸುಸಂದರ್ಭದಲ್ಲಿ 'ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ' ಅಭಿಯಾನದಡಿ ಎಲ್ಲಾ ರಾಜ್ಯ ಸರ್ಕಾರಿ ನೌಕರರು ಕೆಂಪು ಹಳದಿ ಬಣ್ಣಗಳನ್ನು ಒಳಗೊಂಡಿರುವ ಕೊರಳುದಾರ (ಟ್ಯಾಗ್) ಹೊಂದಿದ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಬೇಕೆಂದು ದಿನಾಂಕ 16.08.2024 ರ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.
ಆದರೆ, ಹಲವು ಇಲಾಖೆಗಳು, ನಿಗಮ ಮಂಡಳಿ ನಿರ್ದೇಶನಾಲಯ ಹಾಗೂ ಆಯುಕ್ತಾಲಯ ಇತ್ಯಾದಿ ಸರ್ಕಾರಿ ಮತ್ತು ಸರ್ಕಾರಿ ಸ್ವಾಮ್ಯದ ಕಛೇರಿಗಳಲ್ಲಿ ಮೇಲ್ಕಂಡ ಸುತ್ತೋಲೆಯಲ್ಲಿನ ಸೂಚನೆಯನ್ನು ಪಾಲಿಸುತ್ತಿಲ್ಲವೆಂದು ಕಂಡುಬಂದಿರುತ್ತದೆ, ಆದ್ದರಿಂದ, ನವೆಂಬರ್ 1, 2024ರಂದು ಆಚರಿಸುವ ಕನ್ನಡ ರಾಜ್ಯೋತ್ಸವ ದಿನದೊಳಗಾಗಿ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ನಿಗಮ, ಮಂಡಳಿ, ನಿರ್ದೇಶನಾಲಯ, ಆಯುಕ್ತಾಲಯ ಇತ್ಯಾದಿ ಸರ್ಕಾರಿ ಮತ್ತು ಸರ್ಕಾರಿ ಸ್ವಾಮ್ಯದ ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಅಧಿಕಾರಿ/ ಸಿಬ್ಬಂದಿಗಳು ತಮ್ಮ ಇಲಾಖೆ/ ಸಂಸ್ಥೆಯ ಗುರುತಿನ ಚೀಟಿಯನ್ನು ಧರಿಸಲು ಅನುವಾಗುವಂತೆ ಹಳದಿ ಮತ್ತು ಕೆಂಪು ಬಣ್ಣದ ಕೊರಳುದಾರವನ್ನು ಒದಗಿಸಲು ತಮ್ಮ ಇಲಾಖೆ/ ಸಂಖ್ಯೆಯ ಸಕ್ಷಮ ಪ್ರಾಧಿಕಾರಗಳು ಕೂಡಲೇ ನಿಯಮಗಳನುಸಾರ ಕ್ರಮವಹಿಸುವಂತೆ ಹಾಗೂ ಎಲ್ಲಾ ರಾಜ್ಯ ಸರ್ಕಾರಿ ನೌಕರರು ಕಡ್ಡಾಯವಾಗಿ ಸದರಿ ಕೊರಳುದಾರವನ್ನು ಧರಿಸುವಂತೆ ಮತ್ತೊಮ್ಮೆ ತಿಳಿಸಿದೆ ಎಂದು ಹೇಳಿದ್ದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪತ್ರ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದರು. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ವತಿಯಿಂದ ದಿನಾಂಕ 13/08/2024ರಲ್ಲಿ ಹೊರಡಿಸಲಾಗಿರುವ ಸುತ್ತೋಲೆಯ ಅಂಶಗಳನ್ನು ಸ್ಮರಿಸಬಯಸುತ್ತೇನೆ ಎಂದು ಹೇಳಿದ್ದಾರೆ.
ನಮ್ಮ ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣಗೊಳಸಿ 50 ವರ್ಷ ಪೂರೈಕೆಗೊಂಡ ಸಂದರ್ಭದಲ್ಲಿ ಹೆಸರಾಯಿತು ಕರ್ನಾಟಕ ಉಸಿರಾಗು ಕನ್ನಡ ಅಭಿಯಾನದಡಿ ಎಲ್ಲ ರಾಜ್ಯ ಸರ್ಕಾರಿ ನೌಕರರು ನಿರ್ದಿಷ್ಟ ವಿನ್ಯಾಸದ ಕೊರಳುದಾರಗಳನ್ನು ಕಡ್ಡಾಯವಾಗಿ ಧರಿಸಬೇಕೆಂಬ ಆದೇಶವನ್ನು ಈ ಸುತ್ತೋಲೆಯ ಮೂಲಕ ಹೊರಡಿಸಲಾಗಿದೆ. ಆದರೆ ಸುತ್ತೋಲೆಯ ಆಶಯ ಕೇವಲ ಪತ್ರದಲ್ಲಿ ಕಂಡು ಬರುತ್ತಿದ್ದು, ಬಹುಪಾಲು ಸರ್ಕಾರಿ ನೌಕರರು ಈ ಆದೇಶವನ್ನು ಪಾಲಿಸುತ್ತಿಲ್ಲವೆಂಬ ಅಂಶವು ಹಲವು ಮೂಲಗಳಿಂದ ನನಗೆ ತಿಳಿದು ಬಂದಿರುತ್ತದೆ ಎಂದು ಹೇಳಿದ್ದಾರೆ.
ಸರ್ಕಾರದ ಆದೇಶವು ಕೇವಲ ಪತ್ರಗಳಿಗೆ ಸೀಮಿತವಾಗಬಾರದು, ಅದರ ಹಿಂದಿನ ಆಶಯವನ್ನು ಅಧೀನ ಇಲಾಖೆಗಳು, ಕಚೇರಿಗಳು ಅನುಷ್ಠಾನಗೊಳಸುತ್ತಿವೆಯೇ ಎಂಬ ಬಗ್ಗೆ ಸದೃಢವಾದ ಅಮಲನ ವ್ಯವಸ್ಥೆ ಜಾರಿಯಲ್ಲಿ ಇರುವುದು ಮುಖ್ಯವಾಗುತ್ತದೆ.
ನವೆಂಬರ್ 1, 2024ರಂದು ನಡೆಯಲ್ಲಿರುವ ಮಹತ್ವದ ಕನ್ನಡ ರಾಜ್ಯೋತ್ಸವದ ಮುನ್ನ ರಾಜ್ಯ ಸರ್ಕಾರದ ಎಲ್ಲ ಕಚೇರಿಗಳಲ್ಲಿ, ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳು, ಸರ್ಕಾರ ನಿಗದಿಪಡಿಸಿರುವ ವಿನ್ಯಾಸದ ಕೊರಳುದಾರಗಳನ್ನು ಧರಿಸುವ ನಿಟ್ಟಿನಲ್ಲಿ ತಾವು ಕೂಡಲೇ ಎಲ್ಲ ಇಲಾಖಾ ಮುಖ್ಯಸ್ಥರುಗಳಿಗೆ ಕಠಿಣ ಸೂಚನೆಗಳನ್ನು ನೀಡಬೇಕು.
ಇದನ್ನು ಉಲ್ಲಂಘಿಸಿದ ನೌಕರರ ವಿರುದ್ಧ ನಡತೆ ನಿಯಮಗಳ ಅನುಸಾರ ಕ್ರಮಕ್ಕೆ ಮುಂದಾಗಬೇಕು. ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸಬೇಕಾಗಿ ತಮಗೆ ತಿಳಿಸಬಯಸುತ್ತೇನೆ ಎಂದು ಹೇಳಿದ್ದಾರೆ.












Click it and Unblock the Notifications