ಪ್ರವಾಸೋದ್ಯಮ ಪುನಶ್ಚೇತನ; ಸರ್ಕಾರ ಮಾಡಿದ ಘೋಷಣೆಗಳು
ಬೆಂಗಳೂರು, ಜೂನ್ 25; ಕೋವಿಡ್ ಸಂಕಷ್ಟದಿಂದಾಗಿ ಸವಾಲಿನ ಪರಿಸ್ಥಿತಿಯನ್ನು ಪ್ರವಾಸೋದ್ಯಮ, ಆತಿಥ್ಯ ವಲಯ ಎದುರಿಸುತ್ತಿದೆ. ಈ ಕ್ಷೇತ್ರಗಳ ಪುನಶ್ಚೇತನಕ್ಕಾಗಿ ಕರ್ನಾಟಕ ಸರ್ಕಾರ ಹಲವಾರು ಕ್ರಮಗಳನ್ನು ಘೋಷಣೆ ಮಾಡಿದೆ.
ಈ ಪುನಶ್ಚೇತನ ಕ್ರಮಗಳಿಂದ ಪ್ರವಾಸಿ ವಲಯವು ಚಟುವಟಿಕೆ, ವ್ಯಾಪಾರವನ್ನು ಮರು ಆರಂಭಿಸಲು ಮತ್ತು ಭಾಗಿದಾರರಲ್ಲಿ ಆತ್ಮವಿಶ್ವಾಸ, ಚೈತನ್ಯವನ್ನು ಮೂಡಿಸಲು ಸಹಕಾರಿಯಾಗಿದೆ. ಪ್ರವಾಸಿ ಮಾರ್ಗದರ್ಶಿಗಳ ಜೀವ ನಿರ್ವಹಣೆ ಮಾಡಲು ಸಹಾಯಕವಾಗಿದೆ.
ಕರ್ನಾಟಕ ಟೂರಿಸಂ ಸೊಸೈಟಿ ಪುನಶ್ಚೇತನ ಪ್ಯಾಕೇಜ್ಗಾಗಿ ಸರ್ಕಾರಕ್ಕೆ ಮನವಿ ಮಾಡಿದ್ದರು. ಸರ್ಕಾರ ಆಸ್ತಿ ತೆರಿಗೆಯಲ್ಲಿ ಶೇ 50ರಷ್ಟು ಶುಲ್ಕ ವಿನಾಯಿತಿ ನೀಡಿದೆ. 3 ತಿಂಗಳ ವಿದ್ಯುಚ್ಛಕ್ತಿ ಡಿಮ್ಯಾಂಡ್ ಶುಲ್ಕವನ್ನು ಮನ್ನಾ ಮಾಡಿದೆ. ಅಬಕಾರಿ ಪರವಾನಗಿ ನವೀಕರಣ ಶೇ 50ರಷ್ಟು ಶುಲ್ಕ ಪಾವತಿ ಮಾಡಲು 6 ತಿಂಗಳ ಹೆಚ್ಚುವರಿ ಅವಕಾಶ ನೀಡಲಾಗಿದೆ.
ವಿವಿಧ ಪ್ರವಾಸೋದ್ಯಮ ಉದ್ಯಮಿದಾರರಿಗೆ ನೀಡಿರುವ ಪುನಶ್ಚೇತನ ಸಹಾಯವು ಸಂಕಷ್ಟ ಕಾಲದಿಂದ ಹೊರಬಂದು ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಉತ್ತಮ ಸೇವೆ ಸಲ್ಲಿಸಲು ಸಹಕಾರಿಯಾಗಿದೆ. ಸರ್ಕಾರದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಪ್ರವಾಸೋದ್ಯಮ ಸಚಿವ ಸಿ. ಪಿ. ಯೋಗಿಶ್ವರ ಹೇಳಿದ್ದಾರೆ.

ಹಲವಾರು ರಿಯಾಯಿತಿಗಳು
ಪ್ರಮುಖವಾಗಿ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್ ಗಳಿಗೆ ಆಸ್ತಿ ತೆರಿಗೆ, ವಿದ್ಯುತ್ ಶುಲ್ಕ ಹಾಗೂ ಅಬಕಾರಿ ಶುಲ್ಕದಲ್ಲಿ ಹಲವಾರು ರಿಯಾಯಿತಿ ಘೋಷಣೆ ಮಾಡಲಾಗಿದೆ. ನೋಂದಾಯಿತ ಪ್ರವಾಸಿ ಮಾರ್ಗದರ್ಶಿಗಳಿಗೆ ತಲಾ 5,000 ರೂ ಸಹಾಯಧನ ಸೇರಿದಂತೆ ಹಲವಾರು ನೆರವಿನ ಕ್ರಮಗಳನ್ನು ಸರ್ಕಾರ ಘೋಷಿಸಿದೆ.

ಆಸ್ತಿ ತೆರಿಗೆ ಪಾವತಿ ಮಾಡುವುದು
2021-22ನೇ ಹಣಕಾಸು ವರ್ಷದಲ್ಲಿ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್ಗಳು ಶೇ 50ರಷ್ಟು ಆಸ್ತಿ ತೆರಿಗೆಯನ್ನು ಮಾತ್ರ ಪಾವತಿ ಮಾಡಬೇಕು. ಉಳಿದ ಶೇ 50ರಷ್ಟು ರಿಯಾಯಿತಿ ನೀಡಲಾಗಿದೆ.
ಏಪ್ರಿಲ್, ಮೇ ಮತ್ತು ಜೂನ್ 2021 ತಿಂಗಳಿನಲ್ಲಿ ವಿದ್ಯುಚ್ಛಕ್ತಿ ಡಿಮ್ಯಾಂಡ್/ ಫಿಕ್ಸಿಡ್ ಶುಲ್ಕವನ್ನು ಪಾವತಿ ಮಾಡುವುದರಿಂದ ವಿನಾಯಿತಿ ಕೊಡಲಾಗಿದೆ.

ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ
ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿರುವ ಪ್ರತಿ ಪ್ರವಾಸಿ ಮಾರ್ಗದರ್ಶಿಗೆ (ಗೈಡ್) 5000 ರೂ.ಗಳ ಹಣಕಾಸು ನೆರವನ್ನು ಘೋಷಣೆ ಮಾಡಲಾಗಿದೆ. ಈ ಹಣವನ್ನು ಗೈಡ್ಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.

ಅಬಕಾರಿ ಶುಲ್ಕ ವಿನಾಯಿತಿ
ಅಬಕಾರಿ ಸನ್ನದು ಶುಲ್ಕ, ಹೆಚ್ಚುವರಿ ಸನ್ನದು ಶುಲ್ಕಗಳಲ್ಲಿ ಶೇ 50ರಷ್ಟು ಮೊತ್ತವನ್ನು ಪಾವತಿಸುವುದು ಮತ್ತು ಉಳಿದ ಶೇ 50ರಷ್ಟು ಶುಲ್ಕ ಮೊತ್ತವನ್ನು 31/12/2021ರೊಳಗೆ ಪಾವತಿ ಮಾಡಬಹುದು.












Click it and Unblock the Notifications