'ಬಿಜೆಪಿ' ಮತ್ತು 'ಭ್ರಷ್ಟಾಚಾರ' ಇದು ಜನ್ಮಜನ್ಮದ ನಂಟು: ಹಗರಣ,ಲೂಟಿ ಲೆಕ್ಕ ಕೊಟ್ಟ ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಅಕ್ಟೋಬರ್ 18: ಕರ್ನಾಟಕ ರಾಜಕಾರಣದಲ್ಲಿ ಭ್ರಷ್ಟಾಚಾರ, ಹಣ ಲೂಟಿ, ಹಗರಣ ಸದ್ದೆ ಹೆಚ್ಚಾಗುತ್ತಿದೆ. ತಮ್ಮ ವಿರುದ್ಧ ಲೂಟಿ, ಎಟಿಎಂ ಸರ್ಕಾರ ಎಂದು ಆರೋಪಿಸಿದ್ದ ರಾಜ್ಯ ಬಿಜೆಪಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಕಾಲದಲ್ಲಿ ಹಣ ಹೇಗೆಲ್ಲ ಸಂಗ್ರಹಿಸಿದ್ದರು, ಅದರ ಸಾಕ್ಷಿಗಳು, ಹಗರಣ, ಐಟಿ ದಾಳಿಗಳ ಲೆಕ್ಕ ಕೊಡುವ ಮೂಲಕ ತಿರುಗೇಟು ನೀಡಿದ್ದಾರೆ.
ಕರ್ನಾಟಕ ಬಿಜೆಪಿ ವಿರುದ್ಧ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಬಿಜೆಪಿ ಮತ್ತು ಭ್ರಷ್ಟಾಚಾರ ಇದು ಜನ್ಮ ಜನ್ಮದಾ ನಂಟು' ಎಂದು ತಿವಿದಿದ್ದಾರೆ. ಮುಂದಿನ 05 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸೋಲು ಸನ್ನಿಹಿತವಾಗಿದೆ. ಆದ್ದರಿಂದ, ಪಕ್ಷವು ಈಗಾಗಲೇ ತನ್ನ ಸೋಲನ್ನು ವಿವರಿಸಲು ಕುಂಟು ನೆಪಗಳನ್ನು ಹುಡುಕುತ್ತಿದೆ. ಕಾಂಗ್ರೆಸ್ ಪಕ್ಷದ ಹಣಬಲದಿಂದ ನಾವು ಸೋತಿದ್ದೇವೆ ಎಂದು ಚುನಾವಣೆಯ ಮರುದಿನ ಬಿಜೆಪಿಯಿಂದ ಹೇಳಿಕೆ ಬಂದರೆ ಆಶ್ಚರ್ಯವಿಲ್ಲ ಎಂದು ಬಿಜೆಪಿಯ ಸೋಲಿನ ಭವಿಷ್ಯ ನುಡಿದಿದ್ದಾರೆ.

ಮುಂಬರುವ ಐದು ರಾಜ್ಯಗಳ ಚುನಾವಣೆ ಹಾಗೂ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲುವುದು ಬಹುತೇಕ ಖಚಿತವಾಗಿರುವುದರಿಂದ ಬಿಜೆಪಿಗೆ ಮೊದಲಿನಂತೆ ಹಣ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಇದಲ್ಲದೆ, ಕರ್ನಾಟಕದಲ್ಲಿ ಅದರ ಅತಿದೊಡ್ಡ ಮೂಲವಾದ 40% ಕಮಿಷನ್ ಕೂಡ ಈಗ ನಿಂತುಹೋಗಿದೆ. ಹಾಗಾಗಿ ಶ್ರೀಮಂತ ಉದ್ಯಮಿಗಳು ಮತ್ತು ಗುತ್ತಿಗೆದಾರರನ್ನು ಬ್ಲಾಕ್ಮೇಲ್ ಮಾಡಿ ಹಣ ವಸೂಲಿ ಮಾಡಲು ಐಡಿ-ಇಡಿ ದಾಳಿ ನಡೆಸಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಚುನಾವಣಾ ಬಾಂಡ್ಗಳ ಮೂಲಕ ಹಣ ಸಂಗ್ರಹ: ಸಿಎಂ
ಯಾವ ಪಕ್ಷ ತನ್ನ ಚುನಾವಣಾ ರಾಜಕೀಯಕ್ಕಾಗಿ ಹಣ ಲೂಟಿ ಮಾಡುತ್ತಿದೆ ಎಂಬುದಕ್ಕೆ ಚುನಾವಣಾ ಬಾಂಡ್ಗಳ ಮೂಲಕ ಬಿಜೆಪಿ ಸಂಗ್ರಹಿಸಿರುವ ಹಣದ ವಿವರಗಳೇ ಸಾಕ್ಷಿ ಇವೆ. ಮಾರ್ಚ್ 2018 ಮತ್ತು ಜನವರಿ 2023 ರ ನಡುವೆ 12,008 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್ಗಳನ್ನು ಮಾರಾಟ ಮಾಡಲಾಗಿದೆ. ಅದರಲ್ಲಿ 5,272 ಕೋಟಿ ರೂಪಾಯಿ ಬಿಜೆಪಿಗೆ ಸೇರಿದೆ. ಉದ್ಯಮಿಗಳು ಈ ಹಣವನ್ನು ಸ್ವಯಂಪ್ರೇರಿತವಾಗಿ ನೀಡಿದ್ದಾರೆಯೇ? ಅಥವಾ ಅವರಿಗೆ ಬ್ಲ್ಯಾಕ್ ಮೇಲ್ ಮಾಡಲಾಗಿದೆಯೇ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಭಾರೀ ಲಂಚ ಪಡೆಯುತ್ತಿದ್ದ ವೇಳೆ ಸಿಕ್ಕಿಬಿದ್ದು ಜೈಲು ಸೇರಿದರು. ಆದರೆ ಜಾಮೀನಿನ ಮೇಲೆ ಬಿಡುಗಡೆಯಾದಾಗ ಬಿಜೆಪಿ ನಾಯಕರು ಅವರನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದರು. ಆದರೆ ಈಗ ಯಾವುದೋ ಖಾಸಗಿ ಗುತ್ತಿಗೆದಾರರ ಮನೆಯಲ್ಲಿ ಸಿಕ್ಕ ಹಣಕ್ಕಾಗಿ ನಮ್ಮ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಬಿಜೆಪಿಗೆ ನೈತಿಕತೆ ಇದೆಯೇ? ಎಂದು ವಾಗ್ದಾಳಿ ನಡೆಸಿದರು.
The BJP is not being able to mobilise funds like before as it is almost certain about their defeat in the upcoming five state elections as well as in the 2024 Lok Sabha elections. Moreover, its biggest source of 40% commission in Karnataka has also stopped now. Hence, ID-ED… pic.twitter.com/SjYrToBLNJ
— Siddaramaiah (@siddaramaiah) October 17, 2023
ಭ್ರಷ್ಟಾಚಾರ ಬಿಜೆಪಿಯರದ್ದೇ ಮೇಲುಗೈ
ಕರ್ನಾಟಕದಲ್ಲಿ ಭ್ರಷ್ಟಾಚಾರ ಹಗರಣಗಳ ಇತಿಹಾಸದಲ್ಲಿ ಬಿಜೆಪಿ ನಾಯಕರ ಮುಖಗಳೇ ಮೇಲುಗೈ ಸಾಧಿಸಿವೆ. ರಾಜ್ಯ ಬಿಜೆಪಿ ನಾಯಕರು - ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮಾಜಿ ಸಚಿವರಾದ ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ಕೃಷ್ಣಯ್ಯ ಶೆಟ್ಟಿ, ಮಾಜಿ ಶಾಸಕ ಸಂಪಂಗಿ ಮತ್ತು ಇತ್ತೀಚೆಗೆ ಶಾಸಕ ಮಾಡಾಳು ವಿರೂಪಾಕ್ಷಪ್ಪ - ಎಲ್ಲರೂ ಭ್ರಷ್ಟಾಚಾರದ ಆರೋಪದಲ್ಲಿ ಜೈಲು ಪಾಲಾಗಿದ್ದಾರೆ. ರಾಜ್ಯದ ಜನತೆ ಇದನ್ನು ಗಮನಿಸಿ ನಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಮಾಡುವವರನ್ನು ನೋಡಿ ನಗುತ್ತಿದ್ದಾರೆ ಎಂದು ಕುಟುಕಿದರು.

ಬಿಟ್ ಕಾಯಿನ್ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭಾಗಿಯಾಗಿದ್ದಾರೆ. ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ, ಮುನಿರತ್ನ, ಡಾ.ಸುಧಾಕರ್, ಬಿ.ಸಿ.ಪಾಟೀಲ್ ವಿರುದ್ಧ ಶೇ.40ರಷ್ಟು ಕಮಿಷನ್ ಆರೋಪವಿದೆ.
ಚುನಾವಣಾ ಟಿಕೆಟ್ ವಂಚನೆ ಬಿಜೆಪಿಗರ ಹೆಸರು
ಇನ್ನೂ ಡಾ.ಸಿ.ಎನ್. ಅಶ್ವಥನಾರಾಯಣ, ಬಿ ವೈ ವಿಜಯೇಂದ್ರ ಮತ್ತು ಆರಗ ಜ್ಞಾನೇಂದ್ರ ಅವರು ಪಿಎಸ್ಐ ನೇಮಕಾತಿ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾರೆ. ಚುನಾವಣಾ ಟಿಕೆಟ್ ವಂಚನೆ ಪ್ರಕರಣದಲ್ಲಿ ಬಿ ಎಲ್ ಸಂತೋಷ್, ಸುನೀಲ್ ಕುಮಾರ್ ಮತ್ತು ಸಿಟಿ ರವಿ ಅವರ ಹೆಸರು ಕೇಳಿ ಬಂದಿದೆ. ಇವರೆಲ್ಲ ನಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಅವರು ವಿವರಿಸಿದರು.
ಗುತ್ತಿಗೆದಾರರೊಬ್ಬರ ಆತ್ಮಹತ್ಯೆಗೆ ಕಾರಣ ಎನ್ನಲಾದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಭ್ರಷ್ಟಾಚಾರ ಆರೋಪದಲ್ಲಿ ಜೈಲು ಪಾಲಾಗಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಈಗ ಭ್ರಷ್ಟಾಚಾರದ ವಿಚಾರದಲ್ಲಿ ಮಂದಹಾಸ ಬೀರುತ್ತಿರುವುದು ತಮಾಷೆಯಾಗಿದೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.
ಕಾರ್ಪೋರೇಟ್ ಸಂಸ್ಥೆಗಳಿಂದ ಹಣ ಲೂಟಿ ಮಾಡಿ ದೇಶವನ್ನು ಕಾರ್ಪೋರೇಟ್ ಭ್ರಷ್ಟಾಚಾರದ ದೊರೆ ಅದಾನಿಗೆ ಒಪ್ಪಿಸಿದ ಈ ಬಿಜೆಪಿ ನಾಯಕರು ಇಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ. ಉದ್ಯಮಿ ಗೌತಮ್ ಅದಾನಿಯವರ ಒಂದೊಂದು ಹಗರಣವೂ ಲಕ್ಷ ಕೋಟಿ ದಾಟುತ್ತಿದೆ! ಸಾವಿರಾರು ಕೋಟಿ ದುರ್ಬಳಕೆಗೆ ಲೆಕ್ಕವಿಲ್ಲ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಕೇಳುವ ಲೆಕ್ಕವಿಲ್ಲದಷ್ಟು ಪ್ರಶ್ನೆಗಳಲ್ಲಿ ಒಂದಕ್ಕೂ ಉತ್ತರ ಕೊಡಲು ಬಿಜೆಪಿ ನಾಯಕರಿಗೆ ಅದರಲ್ಲೂ ಮೋದಿಗೆ ಸಾಧ್ಯವಾಗಿಲ್ಲ ಎಂದು ಅವರು ಗುಡುಗಿದ್ದಾರೆ.












Click it and Unblock the Notifications