Karnataka Budget 2023 : ಉತ್ತರ ಕರ್ನಾಟಕಕ್ಕೆ ವಿಶೇಷ ಕೊಡುಗೆ ಕೊಡಲಾಗುವುದು, ನಿರೀಕ್ಷಿಸಿ ಎಂದ ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ, ಜನವರಿ 16: ಬಜೆಟ್ ಬಗ್ಗೆ ಇಲಾಖೆಗಳ ಚರ್ಚೆ ಪ್ರಾರಂಭವಾಗುತ್ತಿದೆ. ಪ್ರತಿ ಇಲಾಖೆಯ ನಂತರ ಸಂಘ ಸಂಸ್ಥೆಗಳೊಂದಿಗೆ ಚರ್ಚೆ ಮಾಡಲಾಗುವುದು. ಉತ್ತರ ಕರ್ನಾಟಕಕ್ಕೆ ಏನು ಕೊಡುಗೆ ನೀಡಲಾಗುವುದುದೆಂದು ನಿರೀಕ್ಷಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಭಾನುವಾರ ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಡಿನ ಜನತೆಗೆ ಸಿದ್ದಪ್ಪಜ್ಜನ ಆಶೀರ್ವಾದ,ಸಿದ್ದಪ್ಪಜ್ಜ ಹುಬ್ಬಳ್ಳಿಯ ಆರಾಧ್ಯ ದೇವರು, ಪವಾಡ ಪುರುಷರು. ಬಾಲ್ಯದಿಂದಲೂ ಸಿದ್ದಪ್ಪಜ್ಜನ ಮಠಕ್ಕೆ ಬರುತ್ತಿದ್ದು, ಆಶೀರ್ವಾದ ಪಡೆಯುತ್ತಿದ್ದೆವು. ಸಂಕ್ರಮಣದ ಮೊದಲ ದಿನ ಸಿದ್ದಪ್ಪಜ್ಜ ದರ್ಶನ ಪಡೆದು ಆಶೀರ್ವಾದ ಪಡೆದಿದ್ದೇನೆ. ನಾಡಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿಕೊಂಡಿದ್ದೇನೆ. ಸಿದ್ದಪ್ಪಜ್ಜ ನಾಡಿನ ಜನತೆಗೆ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಬಜೆಟ್ ನಲ್ಲಿ ಗೃಹ ನಿರ್ವಹಣೆಗೆ ಮಹಿಳೆಯರಿಗೆ ಆರ್ಥಿಕ ನೆರವು
ಕೋವಿಡ್ ಹಾಗೂ ಪ್ರವಾಹದ ಕಾರಣದಿಂದ ದುಡಿಯುವ ವರ್ಗಕ್ಕೆ ಸಹಾಯ ಹಾಗೂ ಹೆಣ್ಣುಮಕ್ಕಳಿಗೆ ಸಹಾಯ ಮಾಡುವ ಯೋಜನೆಗಳನ್ನು ಸರ್ಕಾರ ರೂಪಿಸುತ್ತಿದ್ದು, ಒಂದು ಕುಟುಂಬದ ಮಹಿಳೆ ಸ್ವತಂತ್ರವಾಗಿ ಕನಿಷ್ಠ ಮನೆ ನಿರ್ವಹಣೆಗೆ ಅಗತ್ಯವಿರುವ ಆರ್ಥಿಕ ನೆರವು ನೀಡಲಾಗುವ ಯೋಜನೆಯ ನ್ನು ಆಯವ್ಯಯದಲ್ಲಿ ಘೊಷಿಸಲಾಗುವುದು ತಿಳಿಸಿದರು.

ಪ್ರತೀ ಕುಟುಂಬಕ್ಕೆ ಮನೆ ನಡೆಸಲು ವಿಶೇಷ ಕಾರ್ಯಕ್ರಮವನ್ನು ಹೆಣ್ಣು ಮಕ್ಕಳಿಗೆ ನೀಡಲಾಗುವುದು. ಸ್ತ್ರೀ ಸಾಮರ್ಥ್ಯದ ಜೊತೆಗೆ ಸ್ತ್ರೀ ಶಕ್ತಿ ಯೋಜನೆಯಡಿ ಮನೆ ನಡೆಸಲು, ಕೋವಿಡ್ ಉಪಚಾರ, ಆರೋಗ್ಯ, ಮುಂತಾದವುಕ್ಕೆ ಸಹಾಯವಾಗುವ ವಿಶೇಷ ಯೋಜನೆ ಇದಾಗಿದೆ. ಪ್ರತಿ ಕುಟುಂಬದ ಅಗತ್ಯವನ್ನು ನೋಡಿಕೊಂಡು 1000, 1500, 2000, ಎಷ್ಟು ವೆಚ್ಚವಾಗುತ್ತದೆ ಎನ್ನುವುದನ್ನು ಪರಿಗಣಿಸಿ ಮನೆಯ ಜವಾಬ್ದಾರಿ ನೋಡಿಕೊಳ್ಳುವ ಮಹಿಳೆಗೆ ನೀಡಲಾಗುವುದು. ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಮೊದಲು ಚಾಲನೆಗೊಳಿಸಿ ಅದನ್ನು ಅನುಷ್ಠಾನ ಗೊಳಿಸಿ, ಪ್ರತಿ ಮನೆಗೆ ಸ್ತ್ರೀಯರ ಹೆಸರಿನಲ್ಲಿ ಸಹಾಯ ನೀಡಲಾಗುವುದು ಎಂದರು.
ಯುವಕರಿಗೆ, ಮಹಿಳೆಯರಿಗೆ ಶಕ್ತಿ ತುಂಬುವ ಕಾರ್ಯಕ್ರಮ
ಜನಕಲ್ಯಾಣ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡುವ ಯೋಜನೆಗಳ ಚಿಂತನೆ ಮಾಡುತ್ತಿದ್ದೇವೆ. ದುಡಿಯುವ ವರ್ಗಕ್ಕೆ ಹೆಚ್ವಿನ ಅನುಕೂಲ ಮಾಡುವ ಚಿಂತನೆ ಮಾಡಲಾಗುತ್ತಿದೆ. ರೈತರು, ಕಾರ್ಮಿಕರು, ಮಹಿಳೆಯರು ಪರಿಶಿಷ್ಟ ಜಾತಿ, ಪಂಗಡ ಮತ್ತು ಒಬಿಸಿ ಜನಾಂಗದವರ ಶ್ರೇಯೋಭಿವೃದ್ಧಿಗೆ ಕಾರ್ಯಕ್ರಮ ಗಳನ್ನು ರೂಪಿಸಲಾಗುತ್ತಿದೆ. ಯುವಕರಿಗೆ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ, 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ ಕ್ಕೆ ಒಂದು ಲಕ್ಷ ನೀಡಿ, ಬ್ಯಾಂಕ್ ಜೋಡಿಸಿ ಅವರನ್ನು ಸ್ವಾವಲಂಬಿ ಮಾಡಲು ಎಂಡ್ ಟು ಎಂಡ್ ಅಪ್ರೋಚ್ ವುಳ್ಳ ಕಾರ್ಯಕ್ರಮ ಇದಾಗಿದೆ. ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಇದೇ ತಿಂಗಳು ಪ್ರಾರಂಭ ಮಾಡಲಾಗುತ್ತಿದೆ. ಪ್ರತಿ ಗ್ರಾಮದಲ್ಲಿ 2 ಸ್ತ್ರೀ ಶಕ್ತಿ ಸಂಘಕ್ಕೆ 5 ಲಕ್ಷ ರೂ.ವರೆಗೆ ಸಹಾಯಧನ ನೀಡಲಾಗುವುದು. ಜನವರಿ ಅಂತ್ಯ ಹಾಗೂ ಫೆಬ್ರವರಿ ಪ್ರಾರಂಭದಲ್ಲಿ ಚಾಲನೆ ನೀಡಲಾಗುವುದು. ಯುವಕರಿಗೆ, ಮಹಿಳೆಯರಿಗೆ ಶಕ್ತಿ ತುಂಬುವ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಬಜೆಟ್ ಗೆ ಪೂರ್ವಭಾವಿ ಸಿದ್ಧತೆ
ಸಚಿವ ಸಂಪುಟದಲ್ಲಿ ವಿಧಾನಸಭೆಯ ಜಂಟಿ ಅಧಿವೇಶನ ಕ್ಕೆ ದಿನಾಂಕ ಗೊತ್ತು ಮಾಡಲಾಗುವುದು. ಬಜೆಟ್ ಅಧಿವೇಶನವನ್ನು ಫೆ. 17 ನೇ ತಾರೀಖು ಮಾಡುವ ಸಾಧ್ಯತೆ ಇದೆ. ಅದಕ್ಕೆ ಪೂರ್ವಭಾವಿಯಾಗಿ ಎಲ್ಲಾ ಸಿದ್ಧತೆಗಳನ್ನು ಪ್ರಾರಂಭ ಮಾಡಿದ್ದೇವೆ. ಈಗಾಗಲೇ ಡಿಸೆಂಬರ್ ವರೆಗೆ ನಮ್ಮ ರಾಜ್ಯದ ಆದಾಯವು ಮೂರುಪಟ್ಟು ಹೆಚ್ಚಾ ಗಿದೆ. ಇದನ್ನು ಇನ್ನಷ್ಟು ಹೆಚ್ಚು ಮಾಡಲು ಗುರಿಗಳನ್ನು ಹೆಚ್ಚು ಮಾಡಲು ಸೂಚನೆ ನೀಡಲಾಗಿದೆ. ಜನಪರ ಆಯವ್ಯಯ ನೀಡಲು ತೀರ್ಮಾನ ಮಾಡಲಾಗಿದೆ.
ಚುನಾವಣೆ ಇರುವುದರಿಂದ ವಿಶೇಷ ಬಜೆಟ್ ಇರಲಿದೆ. ಅಸ್ಸಾಂ ಹಾಗೂ , ಗುಜರಾತ್ ಸರ್ಕಾರ ಕೆಲವು ಘೋಷಣೆಗಳನ್ನು ಮಾಡಿವೆ. ಆದರೆ ಘೋಷಣೆ ಬೇರೆ ಅನುಷ್ಠಾನ ಬೇರೆ ಎಂದರು.












Click it and Unblock the Notifications