ಗೌರಿ ಲಂಕೇಶ್ ಹತ್ಯೆ : ಮಾರುತಿ ಓಮಿನಿ ವಶಕ್ಕೆ ಪಡೆದ ಎಸ್ಐಟಿ
ಬೆಂಗಳೂರು, ಆಗಸ್ಟ್ 26 : ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಕೃತ್ಯಕ್ಕೆ ಬಳಸಿದ್ದ ವ್ಯಾನ್ ಅನ್ನು ವಶಕ್ಕೆ ಪಡೆದುಕೊಂಡಿದೆ. ಗೌರಿ ಲಂಕೇಶ್ ಹತ್ಯೆ ಮಾಡಿದ ಬಳಿಕ ಪರಾರಿಯಾಗಲು ಹಂತಕರು ಬಳಸಿದ್ದ ಬೈಕ್ ಇನ್ನೂ ಸಿಕ್ಕಿಲ್ಲ.
ಗೌರಿ ಲಂಕೇಶ್ ಹತ್ಯೆ ಬಳಿಕ ಹಂತಕರು ನೈಸ್ ರಸ್ತೆ ಬಳಿಯಿಂದ ಮಾರುತಿ ಓಮಿನಿ ವ್ಯಾನ್ನಲ್ಲಿ ಕುಣಿಗಲ್ ಕಡೆಗೆ ಪರಾರಿಯಾಗಿದ್ದರು. ಬೆಳಗಾವಿಯಲ್ಲಿ ಮಾರುತಿ ಓಮಿನಿ ವ್ಯಾನ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
2017ರ ಸೆಪ್ಟೆಂಬರ್ 5ರಂದು ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದ ಪರುಶರಾಮ್ ವಾಗ್ಮೋರೆ ಮತ್ತು ಗಣೇಶ್ ಮಿಸ್ಕಿನ್ ಬೈಕ್ನಲ್ಲಿ ನೈಸ್ ರಸ್ತೆ ಅಂಡರ್ ಪಾಸ್ ತನಕ ಹೋಗಿದ್ದರು. ಅಲ್ಲಿ ಕಾರಿನಲ್ಲಿ ಅಮಿತ್ ಮತ್ತು ಭರತ್ ಎಂಬ ಆರೋಪಿಗಳು ಕಾಯುತ್ತಿದ್ದರು.

ಅಲ್ಲಿಯೇ ಬಟ್ಟೆಗಳನ್ನು ಬದಲಾಯಿಸಿಕೊಂಡು ಎಲ್ಲರೂ ಕುಣಿಗಲ್ ಕಡೆ ತೆರಳಿದ್ದರು. ಹೀಗೆ ಆರೋಪಿಗಳು ಪರಾರಿಯಾದ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು ಬಳಸಿದ ಬೈಕ್ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಅಂದಾಜಿಸಲಾಗಿದ್ದು, ಹುಡುಕಾಟ ಮುಂದುವರೆದಿದೆ.
ಸಂಭ್ರಮಾಚರಣೆ : ಗೌರಿ ಲಂಕೇಶ್ ಹತ್ಯೆ ಮಾಡಿದ ಬಳಿಕ ಪರುಶರಾಮ್ ವಾಗ್ಮೋರೆ, ಗಣೇಶ್ ಮಿಸ್ಕಿನ್ ಮತ್ತು ಅಮೋಲ್ ಕಾಳೆ ಮುಂತಾದ ಹಂತಕರ ತಂಡ ಎರಡು ದಿನಗಳ ಬಳಿಕ ಬೆಳಗಾವಿಯಲ್ಲಿ ಸಂಭ್ರಮಾಚರಣೆ ನಡೆಸಿತ್ತು.












Click it and Unblock the Notifications