ಸಿಎಂ ಬದಲಾವಣೆ? ʼರಾಹುಲ್ ಗಾಂಧಿ ಜೊತೆ ಪ್ರತ್ಯೇಕ ಮಾತುಕತೆ ನಡೆಸಿದ್ದು ನಿಜʼ
ಬೆಂಗಳೂರು, ಆಗಸ್ಟ್ 28: ರಾಜ್ಯ ಕೈ ಪಾಳಯದಲ್ಲಿ ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಹಾಗೂ ಹೆಚ್ಚುವರಿ ಡಿಸಿಎಂ ಸ್ಥಾನದ ಸೃಷ್ಟಿಯ ಬಗ್ಗೆ ಕಾಂಗ್ರೆಸ್ನಲ್ಲಿ ನಡೆಯುತ್ತಿದ್ದ ಕಚ್ಚಾಟ ಸದ್ಯ ತಣ್ಣಗಾಗಿಲ್ಲ. ಕಾಂಗ್ರೆಸ್ ಹೈಕಮಾಂಡ್ ನಾಯಕರ ಎಚ್ಚರಿಕೆ ಹಾಗೂ ನೋಟಿಸ್ ನೀಡಿದ್ರು ಸಹ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಿರುತ್ತದೆ.
ಸದ್ಯ ರಾಜ್ಯ ರಾಜಕೀಯದಲ್ಲಿ ಮುಡಾ ಹಗರಣ ಸಾಕಷ್ಟು ಸದ್ದು ಮಾಡುತ್ತಿದ್ದು, ಮುಡಾ ಪ್ರಕರಣದ ಕುರಿತು ಬಿಜೆಪಿ ಹಾಗೂ ಜೆಡಿಎಸ್ ಬೆಂಗಳೂರಿನಿಂದ ಮೈಸೂರಿನವರೆಗೂ ಪಾದಯಾತ್ರೆಯನ್ನ ನಡೆಸಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ. ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನ ಡಾ. ಪರಮೇಶ್ವರ್ ಅವರು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲ ಮೂಡಿಸಿದೆ.

ರಾಹುಲ್ ಗಾಂಧಿ ಭೇಟಿ ಕುರಿತು ಸದಾಶಿವನಗರದಲ್ಲಿ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಅವರು ಮಾತನಾಡಿ, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದು ನಿಜ ಎಂದು ಹೇಳಿದರು. ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸಲು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದರು.
ಈ ವೇಳೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಕೂಡಾ ದೆಹಲಿಗೆ ತೆರಳಿದ್ದರು. ರಾಹುಲ್ ಗಾಂಧಿ ಜೊತೆಗೆ ಸಿಎಂ, ಡಿಸಿಎಂ ಭೇಟಿಯ ಬಳಿಕ ಪ್ರತ್ಯೇಕವಾಗಿ ಸುಮಾರು ಹತ್ತು ನಿಮಿಷಗಳ ಕಾಲ ಪರಮೇಶ್ವರ್ ಮಾತುಕತೆ ನಡೆಸಿದ್ದಾರೆ. ರಾಜ್ಯದಲ್ಲಿ ಸಿಎಂ ರಾಜೀನಾಮೆಗೆ ವಿರೋಧ ಪಕ್ಷಗಳ ಒತ್ತಡದ ನಡುವೆ ಈ ಮಾತುಕತೆ ಕುತೂಹಲ ಕೆರಳಿಸಿದೆ.
ರಾಜ್ಯದಲ್ಲಿ ಪರಮೇಶ್ವರ್ ನಾಯಕತ್ವ ವಹಿಸುವ ಸಂದರ್ಭ ಬರುತ್ತಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಆ ಪ್ರಶ್ನೆಯೇ ಬರಲ್ಲ, ನಾನು ಅದಕ್ಕೆ ಉತ್ತರ ಕೊಡುವುದಿಲ್ಲ. ರಾಹುಲ್ ಗಾಂಧಿ ನನ್ನ ಜೊತೆ ಪ್ರತ್ಯೇಕ ಮಾತನಾಡಿದ್ದು ನಿಜ. ಆದರೆ ಏನು ಮಾತನಾಡಿದ್ದೇನೆ ಎಂದು ನೀವೇ ಊಹೆ ಮಾಡಿದರೆ ಹೇಗೆ? ಎಂದು ಪರಮೇಶ್ವರ್ ಅವರು ಪ್ರಶ್ನಿಸಿದರು.
ಪರಮೇಶ್ವರ್ ಮುಂದಿನ ಸಿಎಂ ಎಂಬ ಚರ್ಚೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಆ ಪ್ರಶ್ನೆ ಬರುವುದೇ ಇಲ್ಲ. ಸುಮ್ಮನೆ ಹೇಳಬಹುದು, ಅದಕ್ಕೆ ನಾನು ಯಾವ ಉತ್ತರ ಕೊಡಲ್ಲ. ರಾಹುಲ್ ಗಾಂಧಿ ನನ್ನ ಜೊತೆ ಮಾತನಾಡಿದ್ರು. ಅವರು ಏನು ಮಾತನಾಡಿದ್ರು ನಿಮಗೇನು ಗೊತ್ತು? ನಾನು ಕಾಂಗ್ರೆಸ್ ನ ಡಿಸಿಪ್ಲೀನ್ ಸೋಲ್ಡಜರ್ ಇದ್ದಂತೆ. ಪಕ್ಷದ ವಿಚಾರದಲ್ಲಿಅವರು ಮಾತನಾಡಿದ್ದಾರೆ, ಅದನ್ನ ಬಿಟ್ಟು ಬೇರೆ ಬಗ್ಗೆ ಅವರು ಮಾತನಾಡಿಲ್ಲ ಎಂದು ತಿಳಿಸಿದರು.
ನಾನು ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತ. ಪಕ್ಷ ಕೊಟ್ಟ ಸೂಚನೆ, ಕೆಲಸ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಪಕ್ಷದ ಕೆಲವು ವಿಚಾರಗಳ ಬಗ್ಗೆ ಅವರು ನನ್ನ ಜೊತೆ ಮಾತನಾಡಿದ್ದಾರೆ. ಅದರ ಹೊರತಾಗಿ ಏನೂ ಚರ್ಚೆ ಮಾಡಿಲ್ಲ ಎಂದರು.
ಇನ್ನು ರಾಜ್ಯಪಾಲರ ನಡೆಯ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡಿದ್ದೇವೆ. ರಾಜ್ಯಾದ್ಯಂತ ಪಕ್ಷದ ವತಿಯಿಂದ ಪ್ರತಿಭಟನೆ ನಡೆಯಲಿದೆ. ಜೊತೆಗೆ ರಾಜ್ಯಪಾಲರನ್ಮು ಶಾಸಕರು, ಸಂಸದರು ಭೇಟಿ ಮಾಡಿ ಮನವಿ ಮಾಡುತ್ತೇವೆ. ನ್ಯಾಯಾಲಯದ ಮುಂದಿನ ತೀರ್ಮಾನ ನೋಡಿಕೊಂಡು ರಾಷ್ಟ್ರಪತಿ ಅವರನ್ನು ಭೇಟಿ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ. ನಮ್ಮ ಹೋರಾಟಕ್ಕೆ ಮಣಿಯುತ್ತಾರಾ ಇಲ್ಲವೇ ಗೊತ್ತಿಲ್ಲ. ಆದರೆ ನಾವು ನಮ್ಮ ಹೋರಾಟ ಮಾಡುತ್ತೇವೆ. ರಾಷ್ಟ್ರೀಯ ಮಟ್ಟದಲ್ಲಿ ಯಾವ ರೀತಿಯಲ್ಲಿ ಹೋರಾಟ ಮಾಡಬೇಕು ಎಂಬ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.
ಸಿಎಂ ಕೆಳಗಿಳಿಸಿದ್ರೆ ಬಾಂಗ್ಲಾ ಆಗಲಿದೆ ಎಂದು ರೋಣಾ ಶಾಸಕ ಪಾಟೀಲ್ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ಪಾಟೀಲರು ಏನು ಹೇಳಿದ್ದಾರೆ ಗೊತ್ತಿಲ್ಲ, ಐವಾನ್ ಅವರಿಗೂ ನಾನು ಮಾತನಾಡಿದ್ದೆ. ಆ ರೀತಿ ಮಾತನಾಡಬಾರದು ಎಂದು ಹೇಳಿದ್ದೇನೆ. ಈಗ ಪಾಟೀಲರ ಹೇಳಿಕೆ ನೋಡ್ತೇನೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.












Click it and Unblock the Notifications