ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯ ನಿರ್ವಹಣೆ; ಸರ್ಕಾರದ ಹೊಸ ಆದೇಶ
ಬೆಂಗಳೂರು, ನವೆಂಬರ್ 09; ಕರ್ನಾಟಕ ಸರ್ಕಾರ ರಾಜ್ಯದ 31 ನಗರಾಭಿವೃದ್ಧಿ ಪ್ರಾಧಿಕಾರಗಳ ಕಾರ್ಯನಿರ್ವಹಣೆ ಕುರಿತು ಹೊಸ ಆದೇಶವೊಂದನ್ನು ಹೊರಡಿಸಿದೆ. ಹೊಸ ಪದನಾಮಕರಣ ಮಾಡಲಾಗಿದ್ದು, ಅಲ್ಲದೇ ಐಎಎಸ್ ಹಿರಿಯ ಶ್ರೇಣಿಯ ಅಧಿಕಾರಿ ನಿಯೋಜನೆ ಮಾಡಲು ಆದೇಶದಲ್ಲಿ ಸೂಚನೆ ನೀಡಲಾಗಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಲತಾ ಕೆ. ಸರ್ಕಾರದ ಅಧೀನ ಕಾರ್ಯದರ್ಶಿ, (ಅಭಿವೃದ್ಧಿ ಪ್ರಾಧಿಕಾರ & ನಯೋಸೇ) ನಗರಾಭಿವೃದ್ಧಿ ಇಲಾಖೆ ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಕಛೇರಿಯನ್ನು 'ನಗರಾಭಿವೃದ್ಧಿ ಪ್ರಾಧಿಕಾರಗಳು ಮತ್ತು ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯ' ಎಂದು ಪದನಾಮೀಕರಿಸುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ.

ಆದೇಶದ ವಿವರಗಳು; ಆದೇಶದಲ್ಲಿ ಪ್ರಸ್ತುತ ರಾಜ್ಯದಲ್ಲಿ 31 ನಗರಾಭಿವೃದ್ಧಿ ಪ್ರಾಧಿಕಾರಗಳು ಕಾರ್ಯನಿರ್ವಹಿಸುತ್ತಿದ್ದು, ಸದರಿ ಪ್ರಾಧಿಕಾರಗಳಲ್ಲಿನ ಆಯವ್ಯಯವು ರೂ. 50 ಕೋಟಿಗಳಿಂದ ರೂ. 500 ಕೋಟಿಗಳವರೆಗೆ ಇರುತ್ತದೆ. ಹಲವಾರು ಪ್ರಾಧಿಕಾರಗಳಲ್ಲಿ ವಸತಿ ಯೋಜನೆ/ ಅಭಿವೃದ್ಧಿ ಕಾಮಗಾರಿಗಳನ್ನು ಹಾಗೂ ಸಾರ್ವಜನಿಕ ಯೋಜನೆಯನ್ನು ಕೈಗೊಂಡು ಕಾರ್ಯಗತಗೊಳಿಸಲಾಗುತ್ತಿದೆ ಎಂದು ಹೇಳಿದೆ.
ಸದರಿ ಪ್ರಾಧಿಕಾರಗಳಿಗೆ ಕೆ.ಎ.ಎಸ್. ಹಾಗೂ ಕೆ.ಎಂ.ಎ.ಎಸ್. ಅಧಿಕಾರಿಗಳನ್ನು ಸರ್ಕಾರವು ನೇರವಾಗಿ ನೇಮಕ ಮಾಡುತ್ತಿದ್ದು, ಸದರಿ ಅಧಿಕಾರಿಗಳು ನೇರವಾಗಿ ಪ್ರಾಧಿಕಾರದಲ್ಲಿಯೇ ವರದಿ ಮಾಡಿಕೊಳ್ಳುತ್ತಿರುವುದರಿಂದ ಸದರಿ ಪ್ರಾಧಿಕಾರಗಳ ಮೇಲುಸ್ತುವಾರಿ/ ಹತೋಟಿ ಕೈಗೊಳ್ಳಲು ಕಷ್ಟಸಾಧ್ಯವಾಗುತ್ತಿದೆ ಎಂದು ವಿವರಿಸಲಾಗಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಹಾಯಕ ನಿರ್ದೇಶಕರ ಕಛೇರಿಗಳು ಕಾರ್ಯ ನಿರ್ವಹಿಸುತ್ತಿರುತ್ತವೆ. ಹಾಗೂ ನಗರ ಯೋಜನಾ ಪ್ರಾಧಿಕಾರಗಳು ಸಹ ಕಾರ್ಯನಿರ್ವಹಿಸುತ್ತಿದ್ದು, ಸದರಿ ಯೋಜನಾ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಮಹಾಯೋಜನೆಯನ್ನು ತಯಾರಿಸುವ ಕೆಲಸ ಪ್ರಗತಿಯಲ್ಲಿರುವುದರಿಂದ ಹಲವಾರು ಇಲಾಖೆಗಳ ಜೊತೆಗೆ ಸಮನ್ವಯ ಸಾಧಿಸಬೇಕಾಗಿರುತ್ತದೆ. ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ನಗರ ಯೋಜನಾ ಪ್ರಾಧಿಕಾರಗಳಲ್ಲಿ ಸಾರ್ವಜನಿಕ ಕೆಲಸಗಳಿಗೆ ಅನುಕೂಲವಾಗುವಂತ ಡಿಜಿಟಲಿಕರಣಗೊಳಿಸಲಾಗುತ್ತಿರುತ್ತದೆ. ಸದರಿ ಕಾರ್ಯಗಳ ಮೇಲುಸ್ತುವಾರಿಯನ್ನು ನಿರ್ವಹಿಸುವುದು ಕಷ್ಟಸಾಧ್ಯವಾಗುತ್ತಿರುತ್ತದೆ ಎಂದು ಹೇಳಿದೆ.
ನಗರಾಭಿವೃದ್ಧಿ ಇಲಾಖೆ ಅಧೀನದಲ್ಲಿ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ಬಿ.ಡಿ.ಎ, ಬಿ.ಎಂ.ಆರ್.ಡಿ.ಎ, ಕರ್ನಾಟಕ ರಾಜ್ಯ ನಗರ ಯೋಜನಾ ಮಂಡಳಿಯು ಕ್ಷೇತ್ರ ಇಲಾಖೆಗಳಾಗಿ ಕಾರ್ಯನಿರ್ವಹಿಸುತ್ತಿರುತ್ತವೆ. ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರಗಳು ಸುಸೂತ್ರವಾಗಿ ಕಾರ್ಯನಿರ್ವಹಿಸುವಂತೆ ಮೇಲುಸ್ತುವಾರಿ ವಹಿಸಲು ಅನುವಾಗುವಂತೆ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಕಛೇರಿಯನ್ನು ನಗರಾಭಿವೃದ್ಧಿ ಪ್ರಾಧಿಕಾರಗಳು ಮತ್ತು ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯವೆಂದು ಪದನಾಮೀಕರಿಸುವ ಪ್ರಸ್ತಾವನೆ ಸಲ್ಲಿಕೆಯಾಗಿರುತ್ತದೆ.
ಸದರಿ ಇಲಾಖೆಯಲ್ಲಿ ಮಂಜೂರಾದ 35 ಸಹಾಯಕ ನಿರ್ದೇಶಕರ ಹುದ್ದೆಗಳ ಪೈಕಿ ಒಂದು ಹುದ್ದೆಯನ್ನು ಉನ್ನತೀಕರಿಸಿ ಸದರಿ ಹುದ್ದೆಗೆ IAS Senior Scale ವೃಂದದ ಅಧಿಕಾರಿಯನ್ನು ಆಯುಕ್ತರನ್ನಾಗಿ ನೇಮಿಸಿ, ಸದರಿ ಹುದ್ದೆಯ ಪದನಾಮವನ್ನು ಆಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರಗಳು ಮತ್ತು ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯವೆಂದು ಪದನಾಮೀಕರಿಸುವುದರೊಂದಿಗೆ ನಗರಾಭಿವೃದ್ಧಿ ಪ್ರಾಧಿಕಾರಗಳು, ನಗರ ಯೋಜನಾ ಪ್ರಾಧಿಕಾರಗಳು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯು ಸರ್ಕಾರಕ್ಕೆ ಸಲ್ಲಿಸುವ ಎಲ್ಲಾ ಪ್ರಸ್ತಾವನೆಗಳನ್ನು (ಬಿಡಿಎ, ಬಿಬಿಎಂಪಿ, ಬಿ.ಎಂ.ಆರ್.ಡಿ.ಎ, ಬಿ.ಎಂ.ಐ.ಸಿ.ಎ.ಪಿ.ಎ. ಹೊರತುಪಡಿಸಿ) ಆಯುಕ್ತರ ಮೂಲಕ ಸಲ್ಲಿಸುವಂತೆ ಸೂಚಿಸಲು ತೀರ್ಮಾನಿಸಿ ಈ ಆದೇಶ ಹೊರಡಿಸಲಾಗಿದೆ.
ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರಗಳು, ನಗರ ಯೋಜನಾ ಪ್ರಾಧಿಕಾರಗಳು (ಬಿಡಿಎ, ಬಿಬಿಎಂಪಿ, ಬಿ.ಎಂ.ಆರ್.ಡಿ.ಎ., ಬಿ.ಎಂ.ಐ.ಸಿ.ಎ.ಪಿ.ಎ. ಹೊರತುಪಡಿಸಿ) ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಉತ್ತಮ ಆಡಳಿತ ನಿರ್ವಹಣೆ ಹಾಗೂ ಆರ್ಥಿಕ ನಿಯಂತ್ರಣವನ್ನು ಸಾಧಿಸುವ ದೃಷ್ಟಿಯಿಂದ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಕಛೇರಿಯನ್ನು 'ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯ' ಎಂದು ಪದನಾಮೀಕರಿಸಿ ಆದೇಶಿಸಿದೆ.
ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಇಲಾಖೆಯಲ್ಲಿ ಮಂಜೂರಾದ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರ ಹುದ್ದೆಗಳ ಪೈಕಿ ಒಂದು ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರ ಹುದ್ದೆಯನ್ನು ರದ್ದುಪಡಿಸಿ, ಹೊಸದಾಗಿ ಸೃಜಿಸಿರುವ ಆಯುಕ್ತಾಲಯಕ್ಕೆ ಒಂದು ಆಯುಕ್ತರ ಹುದ್ದೆಯನ್ನು ಸೃಜಿಸಿ, ಸದರಿ ಹುದ್ದೆಗೆ IAS Senior Scale ವೃಂದದ ಅಧಿಕಾರಿಯನ್ನು ಭರ್ತಿ ಮಾಡಲು ಆದೇಶ ನೀಡಲಾಗಿದೆ.
ಷರತ್ತುಗಳು
* ನಗರಾಭಿವೃದ್ಧಿ ಪ್ರಾಧಿಕಾರಗಳು, ನಗರ ಯೋಜನಾ ಪ್ರಾಧಿಕಾರಗಳು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಗೆ ಸಂಬಂಧಿಸಿದಂತೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961 ಮತ್ತು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987 ರಡಿಯಲ್ಲಿ ಸರ್ಕಾರವು ಕಾಲಕಾಲಕ್ಕೆ ಹೊರಡಿಸುವ ಸುತ್ತೋಲೆ/ ಆದೇಶ/ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಆಯುಕ್ತಾಲಯವು ಕ್ರಮವಹಿಸುವುದು.
* ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರಿಗೆ ಹಾಲಿ ಇರುವ ಎಲ್ಲಾ ಅಧಿಕಾರವು ಯಥಾವತ್ತಾಗಿ ಮುಂದುವರೆಯುತ್ತದೆ.
* ನಗರಾಭಿವೃದ್ಧಿ ಪ್ರಾಧಿಕಾರಗಳು, ನಗರ ಯೋಜನಾ ಪ್ರಾಧಿಕಾರಗಳು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯು ಸರ್ಕಾರಕ್ಕೆ ಸಲ್ಲಿಸುವ ಎಲ್ಲಾ ಪ್ರಸ್ತಾವನೆಗಳನ್ನು (ಬಿಡಿಎ, ಬಿಬಿಎಂಪಿ, ಬಿಎಂಆರ್.ಡಿ.ಎ., ಬಿ.ಎಂ.ಐ.ಸಿ.ಎ.ಪಿ.ಎ. ಹೊರತುಪಡಿಸಿ) ಆಯುಕ್ತರ ಮೂಲಕ ಸಲ್ಲಿಸುವುದು.
ಈ ಆದೇಶವನ್ನು ಆರ್ಥಿಕ ಇಲಾಖೆಯ ಹಿಂಬರಹ ದಿನಾಂಕ 18/10/2023 ಮತ್ತು ಸಿ.ಆ.ಸು.ಇಲಾಖೆಯ ಹಿಂಬರಹ ದಿನಾಂಕ 21/10/2023ರಲ್ಲಿ ನೀಡಿರುವ ಸಹಮತಿಯಂತೆ ಹೊರಡಿಸಲಾಗಿದೆ ಎಂದು ಹೇಳಿದೆ.












Click it and Unblock the Notifications