4 ಪ್ರಧಾನಿಗಳ ಮಾಧ್ಯಮ ಸಲಹೆಗಾರ, ಕನ್ನಡಿಗ ರಾಮಮೋಹನ ರಾವ್ ಇನ್ನಿಲ್ಲ
1985ರಿಂದ ಭಾರತೀಯ ವಾರ್ತಾ ಸೇವೆಯ ಮುಖ್ಯಸ್ಥರಾಗಿದ್ದರು ರಾಮಮೋಹನ ರಾವ್. ಈ ಅವಧಿಯಲ್ಲಿ ರಾಜೀವ್ ಗಾಂಧಿ, ವಿ.ಪಿ ಸಿಂಗ್, ಚಂದ್ರಶೇಖರ್ ಹಾಗೂ ನರಸಿಂಹ ರಾವ್ ರಿಗೆ ಮಾಧ್ಯಮ ಸಲಹೆಗಾರರಾಗಿದ್ದರು.
ನವದೆಹಲಿ, ಮೇ 14: ಭಾರತದ ನಾಲ್ವರು ಪ್ರಧಾನ ಮಂತ್ರಿಗಳಿಗೆ ಮಾಧ್ಯಮ ಸಲಹೆಗಾರರಾಗಿದ್ದ ಮಂಗಳೂರು ಮೂಲದ ಹಿರಿಯ ಅಧಿಕಾರಿ ರಾಮಮೋಹನ ರಾವ್ ಅನಾರೋಗ್ಯದಿಂದ ಶನಿವಾರ ಅಸುನೀಗಿದ್ದಾರೆ. ಕಳೆದ ಒಂದು ವರ್ಷದಿಂದ ಅವರು ಹಾಸಿಗೆ ಹಿಡಿದಿದ್ದರು.
ಮೂಲತಃ ಕಾರ್ಕಳದ ಇನ್ನಾದವರಾದ ರಾಮಮನೋಹರ್ ರಾವ್ 1934ರಲ್ಲಿ ಮಂಗಳೂರಿನಲ್ಲಿ ಹುಟ್ಟಿದರು. ಕಾರ್ಕಳದಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸ ಪೂರ್ಣಗೊಳಿಸಿ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದ್ದರು.

ಬಳಿಕ ಮುಂಬೈಗೆ ತೆರಳಿ ಕಾನೂನು ಪದವಿ ಪಡೆದಿದ್ದರು. ನಂತರ ರಾಮಮೋಹನ್ ರಾವ್ ಬದುಕು ಕಂಡುಕೊಂಡಿದ್ದು ದೆಹಲಿಯಲ್ಲಿ. ಮುಂಬೈನಿಂದ ರಾಷ್ಟ್ರ ರಾಜಧಾನಿಗೆ ತೆರಳಿದ ಅವರು ರಕ್ಷಣಾ ಇಲಾಖೆಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ ಕೆಲಸಕ್ಕೆ ಸೇರಿಕೊಂಡರು. 1965 ಹಾಗೂ 1975ರ ಯುದ್ಧದ ವರದಿಗಾರಿಯಲ್ಲಿ ಅವರು ಸಂಪೂರ್ಣ ತೊಡಗಿಸಿಕೊಂಡಿದ್ದರು.
ಅಲ್ಲಿಂದ ರಾಮಮೋಹನ ರಾವ್ ಹಿಂದುರುಗಿ ನೋಡಲೇ ಇಲ್ಲ. ಬ್ರಿಗೇಡಿಯರ್ ಹುದ್ದೆವರೆಗೆ ಏರಿದ ರಾವ್ ಬಳಿಕ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಸೇರಿಕೊಂಡರು. ಅಲ್ಲಿಂದ ಭಾರತೀಯ ವಾರ್ತಾ ಸೇವೆಗೆ ನಿಯುಕ್ತರಾಗಿದ್ದರು.
1985ರಿಂದ ಭಾರತೀಯ ವಾರ್ತಾ ಸೇವೆಯ ಮುಖ್ಯಸ್ಥರಾಗಿ ಜವಾಬ್ದಾರಿ ನಿರ್ವಹಿಸಿದ ಹೆಗ್ಗಳಿಕೆ ರಾಮಮೋಹನ ರಾವ್ರದ್ದು. ಇದೇ ಅವಧಿಯಲ್ಲಿ ಅವರು ಅಂದಿನ ಪ್ರಧಾನ ಮಂತ್ರಿಗಳಾದ ರಾಜೀವ್ ಗಾಂಧಿ, ವಿ.ಪಿ ಸಿಂಗ್, ಚಂದ್ರಶೇಖರ್ ಹಾಗೂ ನರಸಿಂಹ ರಾವ್ ರಿಗೆ ಮಾಧ್ಯಮ ಸಲಹೆಗಾರರಾಗಿದ್ದರು.
ಅವರು ಬರೆದ 'ಅದಮ್ಯ' ಎನ್ನುವ ಕೃತಿ 10 ವರ್ಷಗಳ ಕೆಳಗೆ ಮಂಗಳೂರಿನಲ್ಲೇ ಬಿಡುಗಡೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಕಾನ್ಫ್ಲಿಕ್ಟ್ ಕಮ್ಯೂನಿಕೇಶನ್ ಎಂಬ ಕೃತಿಯನ್ನೂ ಅವರು ಪ್ರಕಟಿಸಿದ್ದಾರೆ.
ದೆಹಲಿ ಕರ್ನಾಟಕ ಸಂಘದಲ್ಲಿ ರಾಮಮೋಹನ ರಾವ್ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಇಲ್ಲಿನ ಕರ್ನಾಟಕ ಸಂಘದಲ್ಲಿ ಹಲವು ಜವಾಬ್ದಾರಿಗಳನ್ನೂ ಅವರು ನಿರ್ವಹಿಸಿದ್ದರು.












Click it and Unblock the Notifications