40% ಕಮಿಷನ್ ಆರೋಪ ಹೊತ್ತಿರುವ ಸರ್ಕಾರವನ್ನು ನಟ ಸುದೀಪ್ ಬೆಂಬಲಿಸುವುದು ಸೂಕ್ತವೇ? : ಪ್ರಿಯಾಂಕ್ ಖರ್ಗೆ
ಬೆಂಗಳೂರು, ಏಪ್ರಿಲ್7: ರಾಜ್ಯ ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಬಿಜೆಪಿ. ಸ್ಟಾರ್ ನಟರನ್ನ ಚುನಾವಣಾ ಪ್ರಚಾರಕ್ಕೆ ಕರೆತರುವ ಪ್ರಯತ್ನಗಳು ನಡೆಯುತ್ತಿವೆ. ಈಗಾಗಾಲೇ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಅಭಿಮಾನಿ ಬಳಗವನ್ನ ಹೊಂದಿರುವ ಕಿಚ್ಚ ಸುದೀಪ್ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ ಘೋಷಣೆ ಮಾಡಿದ್ದು, ಸಾಕಷ್ಟು ಟೀಕೆಗಳಿಗೆ ಕಾರಣವಾಗಿದೆ.
ಈ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆಮಾತನಾಡಿ, ನಟ ಸುದೀಪ್ ಅವರ ನಡೆಗೆ ನಮ್ಮ ತಕರಾರಿಲ್ಲ, ಆದರೆ 40% ಕಮಿಷನ್ ಆರೋಪ ಹೊತ್ತಿರುವ ಸರ್ಕಾರವನ್ನು ಬೆಂಬಲಿಸುವುದು ಸೂಕ್ತವೇ? ಎಂದು ಪ್ರಶ್ನಿಸಿದರು.

ಕಿಚ್ಚ ಸುದೀಪ್ ರಾಜ್ಯಕ್ಕೆ ಅದ್ಭುತ ಕೊಡುಗೆ ಕೊಟ್ಟಿದ್ದಾರೆ. ಯಾರಿಗೆ ಬೆಂಬಲ ಕೊಡಲು ಅವರು ಸರ್ವ ಸ್ವತಂತ್ರರು. ಕನ್ನಡ ಅಸ್ಮಿತೆಯ ಬಗ್ಗೆ ಸದಾ ಮುಂಚೂಣಿಯಲ್ಲಿ ನಿಂತು ಮಾತನಾಡುತ್ತಾರೆ. ಈಗಲೂ ಜನರ ಪರವಾಗಿ ನಿಲ್ಲಬೇಕು. ಇನ್ನೂ ಈ ಹಿಂದೆ ಎಸ್ ಟಿ ಮೀಸಲಾತಿ ಹೆಚ್ಚಳಕ್ಕೆ ಸಮಾಜದ ಸ್ವಾಮೀಜಿಗಳು ಧರಣಿ ಕೂತಾಗ ಬೆಂಬಲ ನೀಡಿದ್ದರೆ ಬೊಮ್ಮಾಯಿ ಮಾಮ ಅವರು ಮೀಸಲಾತಿ ಹೆಚ್ಚಳ ಮಾಡುತ್ತಿದ್ದರು ಎಂದ ಪ್ರಿಯಾಂಕ್, ಸುದೀಪ್ ಬಗ್ಗೆ ಗೌರವ ಇದೆ. ಆದರೆ ಕನ್ನಡದ ಅಸ್ಮಿತೆ ವಿಚಾರ ಬಂದಾಗ ಯಾವುದೇ ಪಕ್ಷ ನೋಡಬೇಡಿ ಎಂದು ಸಲಹೆ ನೀಡಿದರು.
ಚುನಾವಣೆಯನ್ನು ಬಿಜೆಪಿ ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕು ಎಂದು ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಹೇಳಿದ್ದಾರೆ. ಅಭಿವೃದ್ಧಿ ಬಗ್ಗೆ ಮಾತನಾಡದೆ ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ಹೇಳಿದ್ದಾರೆ.

ಬಿಜೆಪಿಯವರು ಹತಾಶರಾಗಿ ಈ ಹೇಳಿಕೆ ನೀಡುತ್ತಿದ್ದು, ಪ್ರಮುಖ ವಿಚಾರ ಮುಚ್ಚಿ ಹಾಕಲು ಈ ಯತ್ನ ಮಾಡುತ್ತಿದ್ದಾರೆ. ಬಿಜೆಪಿ ಕರ್ನಾಟಕವನ್ನು ಒಡೆಯುತ್ತದೆ. ಅವರಿಗೆ ಕರ್ನಾಟಕದ ಅಸ್ಮಿತೆ ಬಗ್ಗೆ ಕಾಳಜಿ ಇಲ್ಲ. ಅವರು ರಾಜ್ಯದ ಇತಿಹಾಸ ಹಾಗೂ ಕರ್ನಾಟಕದ ಏಕೀಕರಣಕ್ಕೆ ಅವರ ಕೊಡುಗೆಯೇ ಇಲ್ಲ. ಹೀಗಿರುವಾಗ ಅವರಿಗೆ ಕನ್ನಡದ ವಿಚಾರವಾಗಿ ಪ್ರೀತಿ ಹುಟ್ಟಲು ಹೇಗೆ ಸಾಧ್ಯ.
ಪದೇ ಪದೆ ಕನ್ನಡಿಗರಿಗೆ ಅಪಮಾನ ಮಾಡುತ್ತಿದ್ದಾರೆ. ರಾಯಚೂರು ಶಾಸಕ ಶಿವರಾಜ್ ಪಾಟೀಲ್ ಅವರು ರಾಯಚೂರಿನ ಉಸ್ತುವಾರಿ ಆಗಿದ್ದ ಪ್ರಭು ಚವ್ಹಾಣ್ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಈ ಸರ್ಕಾರದಲ್ಲಿ ಹಣ ಸಿಗುತ್ತಿಲ್ಲ. ಹೀಗಾಗಿ ಆಂಧ್ರ ಪ್ರದೇಶಕ್ಕೆ ರಾಯಚೂರು ಸೇರಿಸಿ ಎಂದು ಹೇಳುತ್ತಾರೆ. ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸದೇ ನಗುತ್ತಾರೆ. ಅವರಿಗೆ ಒಂದು ನೊಟೀಸ್ ಕೂಡ ಕೊಟ್ಟಿಲ್ಲ. ಇನ್ನು ಸಚಿವ ಆನಂದ್ ಸಿಂಗ್ ಅವರು ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡಬೇಕು ಎಂದು ಹೇಳುತ್ತಾರೆ. ಆಗಲೂ ಬಿಜೆಪಿ ಒಂದು ಮಾತನ್ನೂ ಆಡಲಿಲ್ಲ. ಈ ಮಾತು ಆಡಿರುವುದು ಶಾಸಕರು ಹಾಗೂ ಸಚಿವರು. ಈ ಬಗ್ಗೆ ಬಿಜೆಪಿ ಸರ್ಕಾರ ಸ್ಪಷ್ಟ ನಿಲುವು ತಾಳಬೇಕಿತ್ತು.

ಈಗ ಮಹಾರಾಷ್ಟ್ರ ಮತ್ತೆ ತಗಾದೆ ತೆಗೆದಿದ್ದಾರೆ. ಮೋದಿ ಹಾಗೂ ಅಮಿತ್ ಶಾ ಅವರು ರಾಜ್ಯಕ್ಕೆ ಬಂದಾಗ ಅನೇಕ ವಿಚಾರ ಮಾತನಾಡುತ್ತಾರೆ. ನನ್ನ. ಸಮಾಧಿ ತೊಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳುತ್ತಾರೆ. ಪ್ರಧಾನಿ ವಿರುದ್ಧ ಸಂಚು ಮಾಡುತ್ತಿರುವುದು ಯಾರು? ಗೃಹ ಸಚಿವರು ಅಷ್ಟು ಅಸಮರ್ಥರೇ? ಪ್ರಧಾನಿಗಳು ವೈಯಕ್ತಿಕ ವಿಚಾರ ಮಾತನಾಡುತ್ತಾರೆ. ಆದರೆ ಕರ್ನಾಟಕದ ಬಗ್ಗೆ ಮಾತನಾಡುವುದಿಲ್ಲ. ಅವರು ರಾಜ್ಯಕ್ಕೆ ಬಂದಾಗ ಮಹಾರಾಷ್ಟ್ರ ತಗಾದೆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ರಾಜ್ಯ ಹಾಗೂ ಕೇಂದ್ರ ಬಿಜೆಪಿ ನಾಯಕರು ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ.












Click it and Unblock the Notifications