ಚುನಾವಣೆಗೆ ಮುನ್ನ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಮಾಜಿ ಸಚಿವ!
ಬೆಂಗಳೂರು, ಮಾರ್ಚ್ 03: ಲೋಕಸಭೆ ಚುನಾವಣೆ ಸಮಯದಲ್ಲಿಯೇ ಕಾಂಗ್ರೆಸ್ಗೆ ಹಿನ್ನಡೆಯಾಗಿದೆ. ಮಾಜಿ ಶಾಸಕ, ಮಾಜಿ ಸಚಿವ ಪಕ್ಷ ಬಿಟ್ಟು ಬಿಜೆಪಿ ಸೇರಿದ್ದಾರೆ. ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಅವರ ಸಂಪುಟದಲ್ಲಿ ಅಬಕಾರಿ ಸಚಿವರಾಗಿದ್ದ ನಾಯಕ 50 ವರ್ಷಗಳಿಂದ ಕಾಂಗ್ರೆಸ್ನಲ್ಲಿದ್ದರು.
ಕರ್ನಾಟಕ ಬಿಜೆಪಿ ಕಛೇರಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ಹಾನಗಲ್ ಕ್ಷೇತ್ರದ ಮಾಜಿ ಶಾಸಕ ಮನೋಹರ್ ತಹಸೀಲ್ದಾರ್ ಬಿಜೆಪಿ ಸೇರಿದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್. ಅಶೋಕ ಹಾಗೂ ಇತರ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮನೋಹರ್ ತಹಸೀಲ್ದಾರ್ ತಮ್ಮ ಬೆಂಬಲಿಗರ ಜೊತೆ ಕಾಂಗ್ರೆಸ್ ತೊರೆದು ಬಿಜೆಪಿಯ ತತ್ವ ಸಿದ್ದಾಂತ ಹಾಗೂ ನರೇಂದ್ರ ಮೋದಿ ಅವರ ನಾಯಕತ್ವವನ್ನು ಮೆಚ್ಚಿ ಬಿಜೆಪಿ ಸೇರ್ಪಡೆಗೊಂಡರು. ಟಿಕೆಟ್ ಸೇರಿದಂತೆ ಯಾವುದೇ ಷರತ್ತು ಹಾಕದೇ ಅವರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಜೆಡಿಎಸ್ ಸೇರಿದ್ದ ಮನೋಹರ್ ತಹಸೀಲ್ದಾರ್: 2023ರ ವಿಧಾನಸಭೆ ಚುನಾವಣೆಯಲ್ಲಿ ಹಾನಗಲ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮನೋಹರ್ ತಹಸೀಲ್ದಾರ್ಗೆ ಟಿಕೆಟ್ ಕೈ ತಪ್ಪಿತ್ತು. ಶ್ರೀನಿವಾಸ ಮಾನೆ ಟಿಕೆಟ್ ಪಡೆದಿದ್ದರು. ಆಗ ಮನೋಹರ್ ತಹಸೀಲ್ದಾರ್ ಕಾಂಗ್ರೆಸ ತೊರೆದು ಜೆಡಿಎಸ್ ಸೇರಿದ್ದರು.
ಚುನಾವಣೆಯಲ್ಲಿ ಮನೋಹರ್ ತಹಸೀಲ್ದಾರ್ 8,834 ಮತಗಳನ್ನು ಪಡೆದು ಸೋಲು ಕಂಡಿದ್ದರು. ಬಳಿಕ ಪಕ್ಷದ ಚಟುವಟಿಕೆಗಳಿಂದ ದೂರವಾಗಿದ್ದರು. ಅವರು ಮತ್ತೆ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಕಾರ್ಯಕರ್ತರ, ಅಭಿಮಾನಿಗಳ ಸಭೆ ನಡೆಸಿದ್ದ ಅವರು ಬಿಜೆಪಿ ಸೇರುವ ತೀರ್ಮಾನ ಮಾಡಿದ್ದರು.
ಜೆಡಿಎಸ್ ಸೇರಿ ಕಳೆದ ಚುನಾವಣೆಯಲ್ಲಿ ಪರಾಭವಗೊಂಡ ಬಳಿಕ ಮನೋಹರ್ ತಹಸೀಲ್ದಾರ್ ಮತ್ತೆ ಕಾಂಗ್ರೆಸ್ ಸೇರಲಿದ್ದಾರೆ ಎಂಬ ವದಂತಿಗಳಿಗೆ ಬಿಜೆಪಿ ಸೇರುವ ಮೂಲಕ ಅವರು ತೆರೆ ಎಳೆದಿದ್ದಾರೆ.
"ನನಗೆ ಶಾಸಕ ಅಥವ ಸಂಸದನಾಗುವ ಆಸಕ್ತಿ ಇಲ್ಲ" ಎಂದು ಕೆಲವು ದಿನಗಳ ಹಿಂದೆ ಅವರು ಹೇಳಿದ್ದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವೊಲಿಕೆ ಮಾಡಿ ಮನೋಹರ್ ತಹಸೀಲ್ದಾರ್ ಅವರನ್ನು ಬಿಜೆಪಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
2023ರಲ್ಲಿ ಕಾಂಗ್ರೆಸ್ ಬಿಡುವ ಸಂದರ್ಭದಲ್ಲಿ ಮನೋಹರ್ ತಹಸೀಲ್ದಾರ್ ಕಾಂಗ್ರೆಸ್ ನನ್ನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. 50 ವರ್ಷ ಪಕ್ಷಕ್ಕಾಗಿ ದುಡಿದ ನನಗೆ ಟಿಕೆಟ್ ನೀಡಲಿಲ್ಲ ಎಂದು ಆರೋಪಿಸಿದ್ದರು.
ಹಾನಗಲ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರಿಗೆ ಟಿಕೆಟ್ ನೀಡದೇ ಕಾಂಗ್ರೆಸ್ ಶ್ರೀನಿವಾಸ ಮಾನೆಗೆ ಟಿಕೆಟ್ ನೀಡಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಅವರು, "50 ವರ್ಷಗಳಿಂದ ನಾನು ಕಾಂಗ್ರೆಸ್ಗಾಗಿ ದುಡಿದಿದ್ದೇನೆ. ಕಾಂಗ್ರೆಸ್ ಪಕ್ಷ ನನಗೆ ತಾಯಿಯಂತಿತ್ತು. ಆದರೆ ಪಕ್ಷವನ್ನು ತಾಯಿಯಂತೆ ನೋಡಿಕೊಂಡ ನನಗೆ ಕಾಂಗ್ರೆಸ್ ದ್ರೋಹ ಮಾಡಿದೆ. ಇದುವರೆಗೂ ಮಾಡಿದ ಕಾರ್ಯಕ್ಕೆ ಮನ್ನಣೆ ಸಿಗಲಿಲ್ಲ, ಮನ್ನಣೆ ಸಿಗದ ಜಾಗದಲ್ಲಿ ನಾನು ಇರುವುದಿಲ್ಲ" ಎಂದು ಹೇಳಿದ್ದರು.
"ಶಾಸಕನಾಗಿ, ಸಚಿವರಾಗಿ, ಉಪಸಭಾಪತಿಯಾಗಿ ಸೇವೆ ಸಲ್ಲಿಸಿದ್ದೆ. 2018ರಲ್ಲಿ ನಾನು ಶಾಸಕನಾಗಿದ್ದಾರೂ ಶ್ರೀನಿವಾಸ ಮಾನೆಗೆ ಟಿಕೆಟ್ ನೀಡಲಾಗಿತ್ತು. ಆದರೂ ಸಹ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದೆ. ಆದರೆ ಈ ಬಾರಿ ಟಿಕೆಟ್ ನೀಡುವಂತೆ ದೆಹಲಿಗೆ ಹೋಗಿ ವರಿಷ್ಠರಲ್ಲಿ ಮನವಿ ಮಾಡಿದ್ದೆ" ಎಂದು ಕಾಂಗ್ರೆಸ್ ತೊರೆಯುವ ಸಂದರ್ಭದಲ್ಲಿ ಮನೋಹರ್ ತಹಸೀಲ್ದಾರ್ ಹೇಳಿದ್ದರು.
2023ರ ಚುನಾವಣೆಯಲ್ಲಿ ಹಾನಗಲ್ ಕ್ಷೇತ್ರದಲ್ಲಿ ಮನೋಹರ್ ತಹಸೀಲ್ದಾರ್ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು, 8,834 ಮತಗಳನ್ನು ಪಡೆದು 3ನೇ ಸ್ಥಾನಗಳಿಸಿದ್ದರು. ಬಿಜೆಪಿಯ ಶಿವರಾಜ್ 72,645 ಮತಗಳನ್ನು ಪಡೆದು 2ನೇ ಸ್ಥಾನಗಳಿಸಿದ್ದರು. 94,590 ಮತಗಳನ್ನು ಪಡೆದ ಕಾಂಗ್ರೆಸ್ನ ಶ್ರೀನಿವಾಸ ಮಾನೆ ಗೆಲುವು ಸಾಧಿಸಿದ್ದರು.











Click it and Unblock the Notifications