ಬೆಂಗಳೂರಿನಲ್ಲಿ 600 ಗುತ್ತಿಗೆ ನೌಕರರ ವಜಾ; ಸಹಾಯಕ್ಕೆ ಬಂದ ಮಾಜಿ ಸಿಎಂ
ಬೆಂಗಳೂರು, ಏ. 27: ಕೊರೊನಾ ಲಾಕ್ಡೌನ್ ನಿಂದ ಜಗತ್ತೇ ಸಂಕಷ್ಟ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ನೌಕರರನ್ನು ಕೆಲಸದಿಂದ ತೆಗೆಯಬಾರದು ಎನ್ನುವ ಕೇಂದ್ರ ಸರ್ಕಾರದ ಅದೇಶ ಉಲ್ಲಂಘಿಸಿ ವಜಾ ಮಾಡಲಾಗಿದೆ. ಆದರೆ ಕೇಂದ್ರ ಸರ್ಕಾರದ ಕಾನೂನನ್ನು ರಾಜ್ಯ ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೆ ತಂದಿಲ್ಲ. ಹೀಗಾಗಿ ಬೆಂಗಳೂರಿನ ಜೆಪಿ ನಗರದಲ್ಲಿರುವ ರುಪೀಕ್ ಫಿನ್ ಟೆಕ್ ಪ್ರೈ. ಲಿಮಿಟೆಡ್ ಕಂಪೆನಿಯು ತನ್ನ 600 ಜನ ಗುತ್ತಿಗೆ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೆಲಸದಿಂದ ವಜಾ ಮಾಡಿದೆ.
ಕೆಲಸ ಕಳೆದುಕೊಂಡ ನೌಕರರು ಸ್ಥಳೀಯ ಶಾಸಕರು ಹಾಗೂ ಉಪ ಕಾರ್ಮಿಕ ಆಯುಕ್ತರಿಗೆ ಪತ್ರ ಬರೆದು ಗಮನಕ್ಕೆ ತಂದರೂ ಕಂಪೆನಿ ತನ್ನ ನಿರ್ಧಾರವನ್ನು ಬದಲಾಯಿಸಲಿಲ್ಲ. ಬದಲಾಗಿ ಎರಡು ತಿಂಗಳ ವೇತನ ನೀಡುವುದಾಗಿ ಹೇಳಿತ್ತು. ಇದರಿಂದ ಆತಂಕಗೊಂಡ ನೌಕರರು ಇಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಸಂಪರ್ಕಿಸಿ ತಮ್ಮ ಅಳಲನ್ನು ತೋಡಿಕೊಂಡರು.

ಕಂಪೆನಿ ಎರಡು ತಿಂಗಳ ವೇತನವನ್ನು ನೀಡಿ ನಮ್ಮನ್ನು ಕೆಲಸದಿಂದ ವಜಾ ಮಾಡಿದರೆ ಮತ್ತೆ ಹೊಸ ಕೆಲಸ ಹುಡುಕುವುದಾದರೂ ಹೇಗೆ? ಈ ಸಂದರ್ಭದಲ್ಲಿ ನಮಗೆ ಯಾರು ಕೆಲಸ ನೀಡುತ್ತಾರೆ ಎಂದು ತಮ್ಮ ಸಂಕಷ್ಟವನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಕುಮಾರಸ್ವಾಮಿಯವರ ಗಮನಕ್ಕೆ ತಂದರು. ಕುಮಾರಸ್ವಾಮಿಯವರು ನಿಮ್ಮ ಸಮಸ್ಯೆಯನ್ನು ಸಾಧ್ಯವಾದಷ್ಟು ಬೇಗ ಬಗೆಹರಿಸಿ ಕೊಡುತ್ತೇನೆ, ಧೈರ್ಯ ಕೆಡಬೇಡಿ, ನಿಮ್ಮೊಂದಿಗೆ ನಾನಿದ್ದೇನೆ ನಿಮ್ಮ ಕೆಲಸಗಳನ್ನು ಪುನಃಕೊಡಿಸಲು ಯತ್ನಿಸುವುದಾಗಿ ಖಾಸಗಿ ಕಂಪೆನಿಯ ನೌಕರರಿಗೆ ಭರವಸೆ ನೀಡಿದರು.












Click it and Unblock the Notifications