ಮಾಜಿ ಸಚಿವ ರಮೇಶ್ ಜಾರಕಿಹೊಳಿ 'CD' ಕುರಿತು ಮಾಜಿ ಸಿಎಂ HDK ಮತ್ತೊಂದು ಸ್ಪೋಟಕ ಹೇಳಿಕೆ!
ಬೆಂಗಳೂರು, ಮಾ. 18: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ 'ಸಿಡಿ' ಪ್ರಕರಣದ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತೊಂದು ಸ್ಫೋಟಕ ವಿಚಾರ ಹಂಚಿಕೊಂಡಿದ್ದಾರೆ. ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಈ ಬಗ್ಗೆ ಮಾತನಾಡಿರುವ ಅವರು, 'ಸಿಡಿ' ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಮಾಹಿತಿ ಕೊಟ್ಟಿದ್ದೇ ನಾನು ಎಂದು ಹೇಳಿದ್ದಾರೆ.
'ಸಿಡಿ' ಪ್ರಕರಣದ ಬಗ್ಗೆ ಮೊದಲು ಮಾಹಿತಿ ಕೊಟ್ಟಿದ್ದೇ ನಾನು. ಈ ಪ್ರಕರಣ ಐದು ಕೋಟಿ ರೂಪಾಯಿಗಳಿಗೆ ಡೀಲ್ ಆಗಿದೆ. ನರೇಶ್ ಗೌಡ ಭಾಗಿಯಾಗಿದ್ದಾನೆ ಎಂದು ಹೆಸರು ಹೇಳಿದ್ದೇ ನಾನು ಎಂದಿದ್ದಾರೆ. ಮಹಾನ್ ನಾಯಕ ಯಾರು ಎಂಬ ಬಗ್ಗೆ ನನಗೆ ಮಾಹಿತಿ ಇದೆ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ನವರು ಬರೀ ಟ್ವೀಟ್ ವಾರ್ ನಡೆಸುತ್ತಿದ್ದಾರೆ. ಫೋಟೋಗಳನ್ನು ಹಾಕಿಕೊಂಡು ಆರೋಪ ಮಾಡುವುದು ಸರಿಯಲ್ಲ ಎಂದಿದ್ದಾರೆ.
ಪ್ರತಿದಿನ ನನ್ನೊಂದಿಗೂ ಕನಿಷ್ಟ ಒಂದೂವರೆ ಸಾವಿರ ಜನ ಫೋಟೋ ತೆಗೆಸಿಕೊಳ್ಳುತ್ತಾರೆ. ಅವರಲ್ಲಿ ಯಾರು ಏನೂ? ಎಂಬುದು ನಮಗೇನು ಗೊತ್ತಾಗುತ್ತದೆ? ಐಎಂಎ ಪ್ರಕರಣದಲ್ಲಿ ನಂಗೆ ಆ ವ್ಯಕ್ತಿ ಯಾರು ಅಂತಲೇ ಗೊತ್ತಿರಲಿಲ್ಲ. ಮಾಜಿ ಸಚಿವ ರೋಷನ್ ಬೇಗ್ ಒತ್ತಾಯದಿಂದ ಇಫ್ತಾರ್ ಕೂಟಕ್ಕೆ ಹೋಗಿ ಐದು ನಿಮಿಷ ಇದ್ದು, ಒಂದು ಬಾದಾಮಿ ತಿಂದು ಬಂದಿದ್ದೆ. ಅಷ್ಟಕ್ಕೆ ಬಿಜೆಪಿಯವರು ಬಿರಿಯಾನಿ ತಿಂದು ಬಂದಿದ್ದೆ ಎಂದು ಗುಲ್ಲೆಬ್ಬಿಸಿದ್ದರು ಎಂದು ನೆನಪಿಸಿಕೊಂಡರು.

ವಿಪರ್ಯಾಸ ಎಂದರೆ ಅದೇ ವ್ಯಕ್ತಿ ಬೆಸ್ಟ್ ಟ್ಯಾಕ್ಸ್ ಪೇಯರ್ ಅಂತಾ ಪ್ರಧಾನಿ ಮೋದಿ ಅವರಿಂದ ಸನ್ಮಾನಿಸಿಕೊಂಡಿರುವ ಫೋಟೋ ಹಾಕಿಕೊಂಡಿದ್ದ. ಅದರ ಬಗ್ಗೆ ಯಾರು ಪ್ರಸ್ತಾಪಿಸಲೇ ಇಲ್ಲ. ಈಗ 'ಸಿಡಿ' ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳು ಸರಿಯಾದ ದಿಕ್ಕಿನಲ್ಲಿ ನಿಷ್ಪಕ್ಷಪಾತದ ತನಿಖೆ ನಡೆಸಿ ವರದಿ ಕೊಡಬೇಕು. ಯಾರಿಗೂ ಹೆದರದೆ ಸತ್ಯ ಏನು ಎಂದು ಪ್ರಕಟಿಸಬೇಕು ಎಂದು ಎಚ್ಡಿಕೆ ಇದೇ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.












Click it and Unblock the Notifications