ಸದನದಲ್ಲಿ ಜೈನ ಮುನಿ ಹತ್ಯೆ ಪ್ರಕರಣ ಸದ್ದು; ರಾಜಕೀಯ ಜಟಾಪಟಿ; ಕೈ-ಕಮಲ ನಾಯಕರು ಹೇಳಿದ್ದೇನು?
ಬೆಂಗಳೂರು, ಜುಲೈ 10: ಚಿಕ್ಕೋಡಿ ಬಳಿಯ ನಂದಿ ಆಶ್ರಮದ ಜೈನಮುನಿಯ ಹತ್ಯೆ ಪ್ರಕರಣ ವಿಧಾನ ಮಂಡಲ ಉಭಯ ಸದನಗಳಲ್ಲೂ ಪ್ರತಿಧ್ವನಿಸಿತು. ವಿಧಾನಸಭೆಯಲ್ಲಿ ಪಕ್ಷಭೇದ ಮರೆತು ಸದನದ ಸದಸ್ಯರುಗಳು ಈ ಹತ್ಯೆಯನ್ನು ಖಂಡಿಸಿದರು.
ಇನ್ನೂ ಆರಂಭದಲ್ಲಿ ಬಿಜೆಪಿ ಸದಸ್ಯರುಗಳು ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ.ವಿಧಾನಸಭೆಯಲ್ಲಿಂದು ಸದನ ಆರಂಭವಾಗುತ್ತಿದಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿಲುವಳಿ ಸೂಚನೆಯಡಿ ಜೈನ ಮುನಿಯ ಹತ್ಯೆ ಪ್ರಕರಣ ಚರ್ಚೆಗೆ ಅವಕಾಶ ನೀಡುವಂತೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರಲ್ಲಿ ಮನವಿ ಮಾಡಿದರು.ಆಗ ಸಭಾಧ್ಯಕ್ಷರು ನಿಲುವಳಿ ಸೂಚನೆಯಡಿ ಬೇಡ, ಶೂನ್ಯ ವೇಳೆಯಲ್ಲಿ ವಿಷಯದ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದ್ದರು.

ಬಿಜೆಪಿಯ ಅಭಯ ಪಾಟೀಲ್ ಅವರು ಮಾತನಾಡಿ, ಜೈನಮುನಿಯ ಕೊಲೆ ಖೇದಕರ ಘಟನೆಯಾಗಿದ್ದು, ಯಾರೂ ಇದನ್ನು ಸಮರ್ಥಿಸಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಪೊಲೀಸರ ಮೇಲೆ ಒತ್ತಡ ಇರುವುದು ಗೊತ್ತಾಗಿದೆ. ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸಲು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು. ಜೈನ ಮುನಿಗಳ ಕೊಲೆಯಲ್ಲಿ ಮೊದಲ ಆರೋಪಿಯಾದ ನಾರಾಯಣ ಮಾಳಿಯನ್ನು ಮಾತ್ರ ಬಂಧಿಸಿ, ಎರಡನೇ ಆರೋಪಿಯನ್ನು ಮುಚ್ಚಿಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ನ ಲಕ್ಷ್ಮಣ ಸವದಿ ಅವರು ಜೈನ ಮುನಿಗಳ ಹತ್ಯೆಯು ನಾಗರಿಕ ಸಮಾಜ ತಲೆತಗ್ಗಿಸುವಂತಹದ್ದಾಗಿದೆ. ಯಾರೂ ನಿರೀಕ್ಷಿಸದಂತಹ ಭೀಕರ ಕೊಲೆ ನಡೆದಿದೆ. ಇದನ್ನು ಯಾರೂ ಸಮರ್ಥಿಸಲು ಸಾಧ್ಯವಿಲ್ಲ ಎಂದು ಹೇಳಿ, ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಬೇಕು ಎಂದು ಹೇಳಿದರು.
ಬಿಜೆಪಿಯ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಮಾತನಾಡಿ, ಜೈನ ಮುನಿಗಳ ಹತ್ಯೆಯಾಗಿ ಮೂರು ದಿನ ಕಳೆದರೂ ಮುಖ್ಯಮಂತ್ರಿಗಳು ಸಂತಾಪ ಸೂಚಿಸಿಲ್ಲ. ಬೇರೆ ಕೋಮಿನವರು ಆಗಿದ್ದರೆ ಸುಮ್ಮನಿರುತ್ತಿದ್ದರೆ. ಹಿಂದೂಗಳಿಗೆ ರಕ್ಷಣೆ ಇಲ್ಲವೇ ಎಂದು ಪ್ರಶ್ನಿಸಿದರು.

ಜೈನ ಮುನಿಗಳು ಕಠಿಣ ವ್ರತ ಆಚರಿಸಿ ಅಹಿಂಸಾ ಸಂದೇಶ ಸಾರುವವರು. ಅಂತಹವರು ಯಾವುದೇ ಕಾರಣಕ್ಕೂ ಹಣಕಾಸು ವ್ಯವಹಾರ ಮಾಡಲು ಸಾಧ್ಯವಿಲ್ಲ. ಜಾತಿ ಆಧಾರದ ಮೇಲೆ ಭಯಾನಕ ಹತ್ಯೆಯನ್ನು ನೋಡಬಾರದು. ಆರೋಪಿಗಳನ್ನು ಪತ್ತೆಹಚ್ಚಿ ಶಿಕ್ಷೆ ನೀಡಲು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ನಮ್ಮ ಪೊಲೀಸ್ ವ್ಯವಸ್ಥೆಯಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ ಎಂದು ತಿಳಿಸಿದರು
ಜೈನ ಮುನಿಗಳ ಹತ್ಯೆ ಖಂಡಿಸಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ,ಈ ಹತ್ಯೆಯ ಹಿಂದೆ ದೊಡ್ಡ ಹಿನ್ನೆಲೆ ಇದೆ.ಕರೆಂಟ್ ಶಾಕ್ ಕೊಟ್ಟು ಕೊಲ್ಲಲು ಎಷ್ಟು ಸಮಯ ಕೊಟ್ಟಿರಬಹುದು. ಮುನಿಗಳು ಇರುವ ಸ್ಥಳಕ್ಕೆ ಹತ್ತಿರ ಇರುವವರು ಮಾಡಿದ್ದಾರೆ ಎಂದರು.
ಕಾನೂನು ಸುವ್ಯವಸ್ಥೆ ಬಿಗಿ ಮಾಡಬೇಕು. ಈ ಹತ್ಯೆ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ರಾಜಕೀಯ ಒತ್ತಡ ಇದೆ ಎಂಬ ಆರೋಪ ಇದೆ. ಈ ಹಿನ್ನಲೆಯಲ್ಲಿ ಸಿಬಿಐಗೆ ನೀಡಬೇಕು ಎಂದು ಆಗ್ರಹಿಸಿದರು. ಸಿಬಿಐ ನಿಷ್ಪಕ್ಷಪಾತವಾಗಿ ಈ ಕೊಲೆಯ ತನಿಖೆ ನಡೆಸುತ್ತದೆ. ಹೀಗಾದಾಗ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಲಿದೆ ಎಂದರು.
ಹಣಕಾಸಿನ ವ್ಯವಹಾರ ಇರಲಿಲ್ಲ. ನಿರ್ಮಾಣ ಆಗುತ್ತಿತ್ತು, ಆ ಸಂಬಂಧಿಸಿದಂತೆ ಟ್ರಸ್ಟ್ ಜೊತೆಗೆ ಆರೋಪಿಗೆ ಸಂಬಂಧ ಇತ್ತು. ಆದರೆ ಹಣಕಾಸು ವ್ಯವಹಾರಕ್ಕೂ ಮುನಿಗಳಿಗೆ ಸಂಬಂಧ ಇಲ್ಲ. ಮುನಿಗಳ ಹತ್ಯೆಯ ಮೂಲ ಕಾರಣ ತನಿಖೆ ಆಗದೆ ಅಂತಿಮ ನಿರ್ಧಾರಕ್ಕೆ ಬರುವುದು ಸರಿಯಲ್ಲ. ಒಂಬತ್ತು ತುಂಡು ಮಾಡಿ ಬೋರ್ ವೆಲ್ ಹಾಕಲು ಎಷ್ಟು ಸಮಯ ಬೇಕು. ಕೇವಲ ಇಬ್ಬರು ಮಾತ್ರ ಮಾಡಲು ಸಾಧ್ಯವೇ? ವಾಹನ ವ್ಯವಸ್ಥೆ ಯಾರು ಮಾಡಿದರು? ಇದರ ಹಿಂದೆ ಸಾಕಷ್ಟು ಜನ ಇದ್ದಾರೆ. ವ್ಯವಸ್ಥಿತ ಸಂಚು ಇದರ ಹಿಂದೆ ಇದೆ.
ಕೊನೆಯ ಹಿನ್ನಲೆನ್ನು ಮುಚ್ಚಿ ಹಾಕುವ ಪ್ರಯತ್ನ ಆಗುತ್ತಿದೆ. ಯಾರಿಗೂ ತೊಂದರೆ ಕೊಡುವ ಮುನಿಗಳ ಹತ್ಯೆ ಆಗಿದೆ. ಕಾನೂನು ಸುವ್ಯವಸ್ಥೆ ಬಗ್ಗೆ ಭಯ ಇಲ್ಲದಾಗ ಹೀಗಾಗುತ್ತದೆ ಎಂದು ಆರೋಪಿಸಿದರು.
ಇನ್ನು ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಈಗಾಗಲೇ ಗೃಹ ಸಚಿವರು ಘಟನಾ ಸ್ಥಳಕ್ಕೆ ಹೋಗಿದ್ದಾರೆ. ಆ ಕಾರಣಕ್ಕಾಗಿ ಸದನದಲ್ಲಿ ಉತ್ತರ ಕೊಡಲು ಹೋಗುವುದಿಲ್ಲ. ಹತ್ಯೆ ಘಟನೆ ವಿರೋಧಿಸಿ ಜೈನ ಮುನಿಗಳು ನಡೆಸುತ್ತಿದ್ದ ಅಮರಣಾಂತ ಉಪವಾಸ ಕೈಬಿಟ್ಟಿದ್ದಾರೆ. ಗೃಹ ಸಚಿವರ ಮನವಿಯ ಮೇರೆಗೆ ಉಪವಾಸ ಕೈಬಿಟ್ಟಿದ್ದಾರೆ. ಆದರೆ ಸದನದಲ್ಲಿ ರಾಜಕೀಯ ಬೆರೆಸಿ ಕೆಲವರು ಮಾತನಾಡಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಗೆ ರಾಜೀನಾಮೆ ಬೆರಸದೆ ಮಾತನಾಡಲು ಬರುವುದಿಲ್ಲ ಎಂದು ಹೇಳಿದರು.
ಜೈನ ಮುನಿಗಳ ಹತ್ಯೆ ಇದು ಕ್ರೂರ ಘಟನೆ. ಇದು ಎಲ್ಲೂ ನಡೆಯಬಾರದು. ಇದು ಖಂಡನೀಯ. ಮಂಗಳವಾರ ಗೃಹ ಸಚಿವರು ಉತ್ತರ ಕೊಡುತ್ತಾರೆ. ಅಗತ್ಯ ಬಿದ್ದರೆ ನಾನು ಉತ್ತರ ಕೊಡುತ್ತೇನೆ ಸಿದ್ದರಾಮಯ್ಯ ಅವರು ಎಂದು ತಿಳಿಸಿದರು.












Click it and Unblock the Notifications