ಸಿದ್ದರಾಮಯ್ಯಗೆ ಭ್ರಷ್ಟಾಚಾರದ ಪ್ರಕರಣದಲ್ಲಿ ಸಿಲುಕಿರುವ ಭಯ : ಬಸವರಾಜ ಬೊಮ್ಮಾಯಿ ಹೇಳಿದ್ದೇನು?
ಬೆಂಗಳೂರು, ಜುಲೈ 14: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕಾಲದಲ್ಲಿ ಯಾವುದೇ ಭ್ರಷ್ಟಾಚಾರ ನಡದೇ ಇಲ್ಲ ಅಂತ ಹೇಳಿದ್ದಾರೆ. ಅವರ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆಯದಿದ್ದರೆ 2013 ರಿಂದ 2023 ರ ವರೆಗೂ ಎಲ್ಲ ಪ್ರಕರಣಗಳ ಬಗ್ಗೆ ತನಿಖೆ ನಡೆಸಲಿ. ಅವರಿಗೆ ಭ್ರಷ್ಟಾಚಾರದ ಪ್ರಕರಣದಲ್ಲಿ ಸಿಲುಕಿರುವ ಭಯ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಈ ಕುರಿತು ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಕಾಲದಲ್ಲಿ ಭ್ರಷ್ಟಾಚಾರ ನಡೆದಿರದಿದ್ದರೆ ನ್ಯಾಯಾಂಗ ಆಯೋಗ ಯಾಕೆ ರಚನೆ ಆಯಿತು. ಎಸಿಬಿ ಮಾಡಿದ್ದೇ ಭ್ರಷ್ಟಾಚಾರ ಮುಚ್ಚಿ ಹಾಕಲು. ಇದು ಇಡಿ ಜಗತ್ತಿಗೆ ಗೊತ್ತು ಎಂದು ಹೇಳಿದರು.

ಸಣ್ಣ ನೀರಾವರಿ, ದೊಡ್ಡ ನೀರಾವರಿ ಎಲ್ಲದರಲ್ಲೂ ಭ್ರಷ್ಟಾಚಾರ ನಡೆದಿದೆ. ಅವರಿಗೆ ಭಯ ಇಲ್ಲದಿದ್ದರೆ 2013 ರಿಂದ ಎಲ್ಲ ಪ್ರಕರಣಗಳನ್ನು ತನಿಖೆಗೆ ವಹಿಸಲಿ, ಅವರಿಗೆ ಭ್ರಷ್ಟಾಚಾರದ ಪ್ರಕರಣದಲ್ಲಿ ಸಿಲುಕಿಕೊಳ್ಳುವ ಭಯ ಇದೆ. ಯಡಿಯೂರಪ್ಪ ಅವರು ತಮ್ಮ ಕಾಲದ ಅವಧಿಯ ಅಕ್ರಮ ಗಣಿಗಾರಿಕೆಯ ಪ್ರಕರಣಗಳನ್ನು ತನಿಖೆಗೆ ನೀಡಿದ್ದರು. ಇವರ ಅವಧಿಯಲ್ಲಿ ಸೇಡಿನ ರಾಜಕಾರಣ ನಡೆಯುತ್ತಿದೆ ಅದರ ಪರಿಣಾಮ ಜನಸೇವಾ ಟ್ರಸ್ಟ್ ಗೆ ನೀಡಿರುವ ಜಮೀನು ತಡೆ ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಜನಸೇವಾ ಟ್ರಸ್ಟ್ ತನ್ನದೇ ಆದ ರೀತಿಯಲ್ಲಿ ಸೇವೆ ಮಾಡುತ್ತಿದೆ. ಈ ಬಗ್ಗೆ ನಮ್ಮ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ ಮುಂದಿನ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಜಿಎಸ್ ಟಿ ಸೋರಿಕೆ ತಡೆಯಲು ಬಸವರಾಜ ಬೊಮ್ಮಾಯಿ ಸಲಹೆ
ರಾಜ್ಯ ಸರ್ಕಾರ ಜಿಎಸ್ಟಿ ಸೋರಿಕೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು.ತೆರಿಗೆ ರಿಟರ್ನ್ಸ್ ಸಲ್ಲಿಸಲು ಮೂರು ವರ್ಷದ ಅವಧಿ ಕಲ್ಪಿಸುವುದು ದುರುಪಯೋಗಕ್ಕೆ ಕಾರಣವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸಭೆಯಲ್ಲಿ ವಿಧೇಯಕಗಳ ಮೇಲಿನ ಪರ್ಯಾಲೋಚನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರಕು ಮತ್ತು ಸೇವೆ ಇಡಿ ರಾಷ್ಟ್ರದಲ್ಲಿ ಏಕ ರೂಪ ತೆರಿಗೆ ಇರಬೇಕೆಂದು 2017 ರಲ್ಲಿ ಸಂವಿಧಾನ ತಿದ್ದುಪಡಿ ಮಾಡಲಾಯಿತು. ಕೆಲವು ರಾಜ್ಯಗಳು ಉತ್ಪಾದನಾ ರಾಜ್ಯಗಳಾಗಿವೆ. ಕೆಲವು ರಾಜ್ಯಗಳು ಬಳಕೆ ರಾಜ್ಯಗಳಾಗಿವೆ.
ಹಲವಾರು ರಾಜ್ಯಗಳ ಸಲಹೆ ಪಡೆದು ಜಿಎಸ್ ಟಿಯನ್ನು ಬದಲಾವಣೆ ಮಾಡುತ್ತ ಬಂದಿದ್ದೇವೆ. ಜಿಎಸ್ ಟಿ ರೆಜಿಸ್ಟ್ರೇಷನ್ ಮಾಡುವುದೇ ಬಹಳ ಕಷ್ಟವಾಗುತ್ತಿತ್ತು ಅದನ್ನು ಸರಳಿಕರಣ ಮಾಡಲು ತಿದ್ದುಪಡಿ ತಂದಿರುವುದು ಸ್ವಾಗತಾರ್ಹ ಎಂದರು.
ರಿಟರ್ನ್ಸ್ ಫೈಲ್ ಮಾಡುವಾಗ ಸರ್ವರ್ ಡೌನ್ ಆಗಿ ಸಮಸ್ಯೆಯಾಗುತ್ತಿತ್ತು. ಕರ್ನಾಟಕ ಉತ್ಪಾದನಾ ರಾಜ್ಯ ಇಲ್ಲಿ ತೆರಿಗೆ ಸಂಗ್ರಹ ಹೆಚ್ಚಳವಾದಷ್ಟು ರಾಜ್ಯಕ್ಕೆ ಹೆಚ್ಚು ಅನುಕೂಲವಾಗುತ್ತದೆ. ಯಾರಿಗೆ ಜಿಎಸ್ ಟಿ ಬಗ್ಗೆ ಮಾಹಿತಿ ಇದೆ ಅವರು ಜಿಎಸ್ ಟಿ ನೋಂದಣಿ ಮಾಡುತ್ತಾರೆ. ಬಹುತೇಕ ವ್ಯವಹಾರಗಳು ಹಣಕಾಸು ಚಲಾವಣೆಯ ಮೂಲಕ ಆಗುತ್ತವೆ. ಬಹಳಷ್ಟು ವ್ಯವಹಾರ ಅಧಿಕೃತವಾಗಿಯೇ ಆಗುವುದಿಲ್ಲ. ಸಣ್ಣ ವ್ಯಾಪಾರಸ್ಥರಿಗೆ ಜಿಎಸ್ ಟಿ ಯಿಂದ ಹೊರಗಿಡಲಾಗಿದೆ. ಆದರೆ, ಅವರನ್ನು ರೆಜಿಸ್ಟ್ರೆಶನ್ ನಿಂದ ಹೊರಗಿಡುವುದು ಸರಿಯಲ್ಲ ಹಾಗೂ ರಿಟರ್ನ್ಸ್ ಸಲ್ಲಿಸಲು ಮೂರು ವರ್ಷ ಜಿಎಸ್ ಟಿ ಒಮ್ಮೆಲೆ ಕಟ್ಟಲು ಅವಕಾಶ ಕಲ್ಪಿಸಿರುವುದು ಹೆಚ್ಚಿನ ಸಮಯ ನೀಡಿದಂತಾಗುತ್ತದೆ. ಅದನ್ನು ಕಡಿಮೆ ಮಾಡುವಂತೆ ಸಲಹೆ ನೀಡಿದರು.












Click it and Unblock the Notifications