ಬಂಡೀಪುರ ಉದ್ಯಾನವನಕ್ಕೆ ರೈಲ್ವೆ ಕಂಬಿ ಅಳವಡಿಕೆ
ಗುಂಡ್ಲುಪೇಟೆ, ನವೆಂಬರ್, 18: ಕಾಡಿನಿಂದ ನಾಡಿ ಕಡೆ ಬಂದು ರೈತರ ನಿದ್ದೆಗೆಡಿಸುತ್ತಿದ್ದ ಕಾಡಾನೆಗಳ ಉಪಟಳಕ್ಕೆ ಬ್ರೇಕ್ ಹಾಕಲು ಅರಣ್ಯ ಇಲಾಖೆ ಕಾಡಂಚಿನಲ್ಲಿ ರೈಲ್ವೆ ಕಂಬಿ ಅಳವಡಿಕೆ ಕಾರ್ಯದಲ್ಲಿ ನಿರತವಾಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಓಂಕಾರ್ ವಲಯದಿಂದ ನುಗುವರೆಗಿನ ಕಾಡಂಚಿನಲ್ಲಿ ರೈಲ್ವೇ ಕಂಬಿ ಅಳವಡಿಕೆಯ ಎರಡನೇ ಹಂತದ ಕಾಮಗಾರಿ ನಡೆಯುತ್ತಿದೆ.
ಅರಣ್ಯ ಪ್ರದೇಶದಿಂದ ಆನೆಗಳು ಹೊರಬಂದು ರೈತರ ಜಮೀನುಗಳಿಗೆ ದಾಳಿ ಮಾಡುವ ಪ್ರದೇಶದಲ್ಲಿ ಕಂಬಿ ಅಳವಡಿಕೆ ಕಾಮಗಾರಿಯನ್ನು ನಡೆಸಲು ತೀರ್ಮಾನಿಸಲಾಗುತ್ತಿದೆ.

ಓಂಕಾರ್ ಅರಣ್ಯ ಪ್ರದೇಶದಿಂದ ನುಗು ಪ್ರದೇಶದವರೆಗೆ ಹೆಚ್ಚಿನ ಪ್ರಮಾಣದಲ್ಲಿ ಕಾಡಾನೆಗಳು ಹೊರ ಬರುತ್ತಿದ್ದು ಇಲ್ಲಿ ಸುಮಾರು 40 ಕಿಲೋಮೀಟರ್ ದೂರದಲ್ಲಿ ಕಂಬಿಗಳನ್ನು ಅಳವಡಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಮೊದಲನೇ ಹಂತದಲ್ಲಿ ಓಂಕಾರ್ ವಲಯದ ಬಳಿ 3 ಕಿ.ಮೀ ಹಾಗೂ ಅತಿ ಹೆಚ್ಚು ಕಾಡಾನೆಗಳು ಹೊರ ಬರುತ್ತಿದ್ದ ಪ್ರದೇಶಗಳಲ್ಲಿ ಮಾತ್ರ ಅಳವಡಿಸಲಾಗಿತ್ತು.
ಈಗ ಎರಡನೇ ಹಂತದಲ್ಲಿ 10 ಕಿಮೀ ದೂರದಲ್ಲಿ ರೈಲ್ವೆ ಕಂಬಿ ಅಳವಡಿಕೆ ಕಾಮಗಾರಿಯ ಗುತ್ತಿಗೆಯನ್ನು ನೀಡಲಾಗಿದ್ದು, ಕಂಬಿಗಳ ಅಳವಡಿಕೆಗೆ ಬೇಕಾದ ಜಲ್ಲಿಕಲ್ಲು, ಸಿಮೆಂಟ್, ಮರಳು ಹಾಗೂ ಉಳಿದ ಪರಿಕರಗಳನ್ನು ಸಂಗ್ರಹಿಸಲಾಗಿದೆ. ಕಂಬಿಗಳನ್ನು ನಿಗದಿತ ಅಳತೆಗೆ ಕತ್ತರಿಸುವ ಕಾರ್ಯ ಭರದಿಂದ ನಡೆಯುತ್ತಿದೆ.
ಬೇಸಿಗೆ ವೇಳೆಗೆ ಹೆಚ್ಚಿನ ಪ್ರಮಾಣದಲ್ಲಿ ಮೇವು ಮತ್ತು ನೀರು ಅರಸಿ ಕಾಡಿನಿಂದ ನಾಡಿಗೆ ಬರುವುದು ಬಹುತೇಕ ಖಚಿತವಾಗಿರುವುದರಿಂದ ರೈಲ್ವೆ ಅಳವಡಿಕೆ ಕಾಮಗಾರಿ ಜನರಿಗೆ ಖುಷಿ ತಂದಿಗೆ ಅಲ್ಲದೆ ಸಮಾಧಾನದ ಉಸಿರು ಬಿಡುವಂತಾಗಿದೆ.
ಮಲೇಶಿಯಾ ಕರಾಟೆ ಚಾಂಪಿಯನ್ ಶಿಪ್ ಗೆ ರಾಜ್ಯದ ಸ್ಪರ್ಧಿಗಳು ಆಯ್ಕೆ
ಇದೇ ಡಿಸೆಂಬರ್ 19 ರಿಂದ 22 ರವರೆಗೆ ಮಲೇಶಿಯಾದಲ್ಲಿ ನಡೆಯಲಿರುವ 42ನೇ ಮಲೇಶಿಯಾ ಘೋಶಿನ್- ರಿಯು ಕರಾಟೆ ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಲು ಕರ್ನಾಟಕದಿಂದ ಮಂಗಳೂರಿನ ಮನೀಶ್ ಆಚಾರ್ಯ, ಹಿಮಾಂಶು ಹೆಗ್ಡೆ, ಅಕ್ಷಯ್ ಶೆಟ್ಟಿ ಹಾಗೂ ರೋಶನ್ ಶರ್ಮಾ ಆಯ್ಕೆ ಆಗಿದ್ದಾರೆ.

ಆಗಸ್ಟ್ನಲ್ಲಿ ಕಿನ್ನಿಗೋಳಿಯಲ್ಲಿ ನಡೆದ 8ನೇ ರಾಷ್ಟ್ರಮಟ್ಟದ ಘೋಶಿನ್-ರಿಯು ಕರಾಟೆ ಚಾಂಪಿಯನ್ಶಿಪ್ನಲ್ಲಿ ಉತ್ತಮ ಪ್ರದರ್ಶನ ತೋರಿ ಮಲೆಶಿಯಾ ಘೋಶಿನ್-ರಿಯು ಕರಾಟೆ ಚಾಂಪಿಯನ್ ಶಿಪ್ ಗೆ ಇವರು ಆಯ್ಕೆಯಾಗಿದ್ದಾರೆ. ಮುಖ್ಯ ಶಿಕ್ಷಕರಾದ ಶಿಹಾನ್ ಈಶ್ವರ್ ಕಟೀಲ್ ಹಾಗೂ ಶಿಹಾನ್ ಸುರೇಂದ್ರ ಬಿ ಅವರಲ್ಲಿ ತರಬೇತಿ ಪಡೆದಿದ್ದಾರೆ.












Click it and Unblock the Notifications