ಗ್ಯಾರಂಟಿ ಘೋಷಣೆಗಳು; ರೈಲ್ವೆ ಯೋಜನೆಗಳಿಗೆ ಹಣದ ಕೊರತೆ?
ಬೆಂಗಳೂರು, ಮೇ 30; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡು ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಡಳಿತ ಆರಂಭಿಸಿದ್ದಾರೆ. ಪಕ್ಷ ನೀಡಿದ್ದ 5 ಗ್ಯಾರಂಟಿಗಳ ಅನುಷ್ಠಾನದಿಂದ ಬೇರೆ ಯೋಜನೆಗಳಿಗೆ ಹಣದ ಕೊರತೆ ಉಂಟಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ.
ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವೆಚ್ಚ ಹಂಚಿಕೆ ಆಧಾರದ ಮೇಲೆ ಕೈಗೊಂಡ ರೈಲ್ವೆ ಯೋಜನೆಗಳ ಮೇಲೆ ಪರಿಣಾಮ ಬೀರಲಿದೆ. ಹೌದು ರಾಜ್ಯದಲ್ಲಿ ಹಲವಾರು ಯೋಜನೆಗಳನ್ನು 50:50 ಆಧಾರದ ಮೇಲೆ ಕೈಗೆತ್ತಿಕೊಳ್ಳಲಾಗಿದೆ.

ಕಾಂಗ್ರೆಸ್ ಪಕ್ಷ ನೀಡಿರುವ 5 ಗ್ಯಾರಂಟಿಗಳ ಅನುಷ್ಠಾನದಿಂದ ಸರ್ಕಾರದ ಮೇಲೆ ಹೆಚ್ಚಿನ ಹೊರೆ ಬೀಳಲಿದೆ. ಸರ್ಕಾರ ವೆಚ್ಚವನ್ನು ಸರಿದೂಗಿಸಲು ಕೆಲವು ಕಾಮಗಾರಿಗಳಿಗೆ ಕಡಿವಾಣ ಹಾಕುವುದು ಅನಿವಾರ್ಯವಾಗಲಿದೆ. ಆದ್ದರಿಂದ ರೈಲ್ವೆ ಯೋಜನೆಗಳ ಮೇಲೆ ಮಾಡುವ ವೆಚ್ಚವನ್ನು ಕಡಿತ ಮಾಡಬಹುದು ಎಂದು ಅಂದಾಜಿಸಲಾಗಿದೆ.
ಯಾವ-ಯಾವ ಯೋಜನೆಗಳು; ಕರ್ನಾಟಕದ ಸರ್ಕಾರ ವೆಚ್ಚ ಹಂಚಿಕೆಯಡಿ ಕೈಗೊಂಡ ಸುಮಾರು 20 ರೈಲು ಯೋಜನೆಗಳಿವೆ. ಕೆಲವು ಯೋಜನೆಗಳಿಗೆ ಕೇಂದ್ರದ ಒಪ್ಪಿಗೆಯೂ ಸಿಕ್ಕಿದೆ. ಆದರೆ ಈಗ ರಾಜ್ಯದ ಪಾಲಿನ ಅನುದಾನ ಹಂಚಿಕೆಯಾಗದಿದ್ದಲ್ಲಿ ಕಾಮಗಾರಿ ವಿಳಂಬವಾಗಲಿದೆ. ಪಕ್ಷದ ಮೊದಲು ತನ್ನ ಪ್ರಣಾಳಿಕೆ ಅಂಶಗಳ ಜಾರಿಗೆ ಹೆಚ್ಚಿನ ಒತ್ತು ನೀಡಲಿದೆ.
ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ನೂತನ ರೈಲು ಮಾರ್ಗ ಸಹ ಇದರಲ್ಲಿ ಸೇರಿದೆ. ಯೋಜನೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಈ ವರ್ಷದ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದಾರೆ. ಜೂನ್ನಲ್ಲಿ ಕಾಮಗಾರಿ ಆರಂಭವಾಗಬೇಕಿತ್ತು. ಯೋಜನೆಗೆ ಕೇಂದ್ರ ಮತ್ತು ರಾಜ್ಯಗಳು ಶೇ 50ರಷ್ಟು ವೆಚ್ಚ ಹಂಚಿಕೆ ಮಾಡಿಕೊಂಡಿವೆ.

ಶಿವಮೊಗ್ಗ-ಶಿಕಾರಿಪುರ ಮೊದಲ ಹಂತದ 46 ಕಿ. ಮೀ. ಮಾರ್ಗಕ್ಕೆ ಸುಮಾರು 455 ಕೋಟಿ ರೂ. ಆಗಲಿದೆ ಎಂದು ಅಂದಾಜಿಸಲಾಗಿದೆ. ಯೋಜನೆಯನ್ನು ಶಿವಮೊಗ್ಗ-ಶಿಕಾರಿಪುರ, ಶಿಕಾರಪುರ-ರಾಣೆಬೆನ್ನೂರು ಎಂದು ಎರಡು ಹಂತ ಮಾಡಲಾಗಿದೆ. 2ನೇ ಹಂತದ ಯೋಜನೆಗೆ ಸುಮಾರು 440 ಕೋಟಿ ರೂ. ಅಂದಾಜು ವೆಚ್ಚವಾಗಿದೆ. ಇದರಲ್ಲಿ ರಾಜ್ಯ ಸರ್ಕಾರ ಭೂಮಿ ನೀಡುವುದಲ್ಲದೇ ಶೇ 50ರಷ್ಟು ವೆಚ್ಚ ಹಂಚಿಕೆ ಮಾಡಬೇಕಿದೆ.
ಮತ್ತೊಂದು ಯೋಜನೆ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ ಹರಿಹರ ಸಂಪರ್ಕಿಸುವ ಹೊಸ ಮಾರ್ಗ. ಈ ಯೋಜನೆ ಇನ್ನೂ ಕಾಗದದ ಹಂತದಲ್ಲಿಯೇ ಇದೆ. ಸುಮಾರು 832.47 ಕೋಟಿ ಯೋಜನೆಯನ್ನು ಸಹ ಕೇಂದ್ರ ಮತ್ತು ರಾಜ್ಯಗಳ ವೆಚ್ಚ ಹಂಚಿಕೆಯಡಿ ಕೈಗೆತ್ತಿಕೊಳ್ಳುವ ಚರ್ಚೆ ನಡೆದಿತ್ತು.
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಬೇಕಾದ ಕಾರಣ ಅತ್ಯಗತ್ಯವಾದ, ಆದಾಯ ತರುವ ಮಾರ್ಗದ ಯೋಜನೆಗಳಿಗೆ ಮಾತ್ರ ಅನುದಾನ ನೀಡಲಿದೆ. ಉಳಿದ ಯೋಜನೆಗಳಿಗೆ ಅನುದಾನ ಬಿಡುಗಡೆ ವಿಳಂಬವಾಗಲಿದೆ. ಸಹಜವಾಗಿ ಕಾಮಗಾರಿ ನಿಧಾನವಾಗಿ ಸಾಗಲಿದೆ.
142 ಕಿ. ಮೀ. ಉದ್ದದ ಹೆಜ್ಜಾಲ-ಚಾಮರಾಜನಗರ ಮಾರ್ಗ ಬೆಂಗಳೂರು-ಚಾಮರಾಜನಗರ ಸಂಪರ್ಕಿಸುವ ಪರ್ಯಾಯ ಮಾರ್ಗವಾಗಿದೆ. ಮಳವಳ್ಳಿ, ಕೊಳ್ಳೇಗಾಲಕ್ಕೂ ಈ ಮಾರ್ಗ ಸಂಪರ್ಕ ಕಲ್ಪಿಸುತ್ತದೆ. 1997-98ರಲ್ಲಿ ಪ್ರಸ್ತಾಪವಾಗಿದ್ದ ಮಾರ್ಗಕ್ಕೆ ಈಗ ಒಪ್ಪಿಗೆ ಸಿಕ್ಕಿತ್ತು. ಇದಕ್ಕೆ ಸಹ ರಾಜ್ಯ ಸರ್ಕಾರ ಅನುದಾನ ನೀಡಬೇಕಿದೆ. ಈ ಯೋಜನೆಯಲ್ಲಿ ರಾಜ್ಯದ ಪಾಲು 1383 ಕೋಟಿಯಾಗಿದೆ.
ಕಾಂಗ್ರೆಸ್ ಮಾಡಿರುವ 5 ಗ್ಯಾರಂಟಿ ಘೋಷಣೆಯಿಂದ ಸರ್ಕಾರಕ್ಕೆ ಎಷ್ಟು ಹೊರೆ ಆಗಲಿದೆ? ಎಂಬುದರ ಲೆಕ್ಕ ಸರಿಯಾಗಿ ಇನ್ನೂ ಸಿಕ್ಕಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಶಕ್ತಿ ಭವನದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಸುಮಾರು ಒಂದೂವರೆ ಗಂಟೆಗಳ ಕಾಲ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು.
ಹಣಕಾಸು ಸಚಿವರೂ ಆಗಿರುವ ಅವರು ಯೋಜನೆಗಳ ಅನುಷ್ಠಾನಕ್ಕೆ ಆಗುವ ವೆಚ್ಚ, ಫಲಾನುಭವಿಗಳು ಮುಂತಾದ ಮಾಹಿತಿ ಪಡೆದುಕೊಂಡರು. ಜೂನ್ 1ರಂದು ಸಚಿವ ಸಂಪುಟ ಸಭೆ ಕರೆಯಲಾಗಿದೆ. ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಘೋಷಣೆ ಮಾಡುವ ನಿರೀಕ್ಷೆ ಇದೆ.












Click it and Unblock the Notifications