ಚಿತ್ರಗಳು : ಮಾಯದಂತ ಮಳೆಗೆ ತುಂಬಿತು ಮದಗದ ಕೆರೆ
ಚಿಕ್ಕಮಗಳೂರು, ಜುಲೈ 24 : 'ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ' ಎಂಬುದು ಪ್ರಸಿದ್ಧ ಜನಪದ ಗೀತೆ. ಮಲೆನಾಡಿನಲ್ಲಿ ಮಾಯದಂತ ಮಳೆ ಬಂದಿದ್ದು, ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿರುವ ಮದಗದ ಕೆರೆ ಕೋಡಿ ಬಿದ್ದಿದೆ.
ಎತ್ತರವಾದ ಬೆಟ್ಟಗುಡ್ಡಗಳು, ಕಣ್ಣಾಡಿಸಿದಲ್ಲೆಲ್ಲಾ ಕಾಣುವ ಹಸಿರು ರಾಶಿ, ತಣ್ಣಗೆ ಬೀಸುವ ಗಾಳಿ ಮದಗದ ಕೆರೆ ಪ್ರಕೃತಿ ಸೌಂದರ್ಯವನ್ನು ಹೊದ್ದು ನಿಂತಿದೆ. ಅನೇಕ ವರ್ಷಗಳಿಂದ ಬರದ ಛಾಯೆಗೆ ತುತ್ತಾಗಿದ್ದ ಕೆರೆ ಈ ಬಾರಿ ಮೈದುಂಬಿದೆ.
ಐದು ವರ್ಷಗಳ ನಂತರ ಭರ್ತಿಯಾದ ಮೆಟ್ಟೂರು ಅಣೆಕಟ್ಟು!
ಮಲೆನಾಡಿನ ಐತಿಹಾಸಿಕ ಹಾಗೂ ಜಾನಪದ ಹಿನ್ನಲೆಯನ್ನು ಹೊಂದಿದೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮದಗದ ಕೆರೆ. ಮಲೆನಾಡಿನಲ್ಲಿ ಕೆರೆ ಇದ್ದರೂ ಜಿಲ್ಲೆಯ ಬಯಲು ಸೀಮೆಯಾದ ಕಡೂರು ತಾಲೂಕಿಗೆ ನೀರುಣಿಸುತ್ತದೆ ಕೆರೆ.
ಮದಗದ ಕೆರೆ ತುಂಬಿದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕೆರೆ ತುಂಬಿ ಕೊಡಿ ಬಿದ್ದ ಕಾರಣ ಜಲಪಾತ ಸೃಷ್ಟಿಯಾದಂತಾಗಿದೆ. ಕೆರೆಯ ಸೊಬಗನ್ನು ವೀಕ್ಷಿಸಲು ಪ್ರವಾಸಿಗರು ಸಹ ಆಗಮಿಸುತ್ತಿದ್ದಾರೆ...
ಬರದ ಛಾಯೆಯಿಂದ ಹೊರಬಂದ ಕೆರೆ
ಮದಗದ ಕೆರೆ ಕೋಡಿ ಬಿದ್ದಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಕೆರೆ ಜಾನಪದರ ಪರಿಕಲ್ಪನೆಯಲ್ಲಿಯೂ ಹೆಸರುವಾಸಿಯಾಗಿದೆ. ಅನೇಕ ವರ್ಷಗಳಿಂದ ಕೆರೆ ಬರದ ಛಾಯೆಗೆ ತುತ್ತಾಗಿತ್ತು. ಈ ಭಾರಿ ಮಲೆನಾಡಿನಲ್ಲಿ ಸುರಿಯುತ್ತಿರುವ ವರ್ಷಧಾರೆಗೆ ಕೆರೆ ಸಂಪೂರ್ಣ ತುಂಬಿದ್ದು, ಕೋಡಿ ಬಿದ್ದಿದೆ. ಕೆರೆ ತುಂಬಿರುವುದರಿಂದ ರೈತರಲ್ಲಿ ಮಂದಾಹಸ ಮೂಡಿದೆ.
ಗಿರಿ ಶ್ರೇಣಿಗಳ ನೀರು ಆಧಾರ
ಮದಗದ ಕೆರೆ ಸುತ್ತಲೂ ಎತ್ತರವಾದ ಬೆಟ್ಟಗುಡ್ಡಗಳಿವೆ. ಈ ಕೆರೆ ಕಳೆದ ನಾಲ್ಕೈದು ವರ್ಷಗಳಿಂದ ಭರ್ತಿಯಾಗದ ಕಾರಣ ಕೆರೆ ಅಚ್ಚುಕಟ್ಟು ಪ್ರದೇಶದ ರೈತರು ಕಂಗಾಲಾಗಿದ್ದರು. ಈ ಕೆರೆಗೆ ಯಾವುದೇ ನದಿಯ ಸಂಪರ್ಕ ಇಲ್ಲ. ಕೆರೆ ಸುತ್ತಲಿನ ಗಿರಿಶ್ರೇಣಿಯಲ್ಲಿ ಸುರಿಯುವ ಮಳೆಯೇ ಕೆರೆಗೆ ಆಧಾರ. ಈ ಬಾರಿ ಸುರಿದ ಮಳೆಗೆ ಕೆರೆ ತುಂಬಿದೆ.
2036 ಹೆಕ್ಟೇರ್ ಪ್ರದೇಶಕ್ಕೆ ನೀರು
ಮದಗದ ಕೆರೆ ತುಂಬಿ ಹರಿದರೆ ಕಡೂರು ತಾಲೂಕಿನ ಸುಮಾರು 2036 ಹೇಕ್ಟೇರ್ ಪ್ರದೇಶಕ್ಕೆ ನೀರು ಲಭ್ಯವಾಗಲಿದೆ. ಸುಮಾರು 25ಕ್ಕೂ ಹೆಚ್ಚು ಕೆರೆಗಳಿಗೆ ಈ ಕೆರೆ ಸಂಪರ್ಕ ಕೊಂಡಿಯಾಗಿದೆ. ಕೆರೆ ತುಂಬಿ ಕೊಡಿ ಬಿದ್ದ ಕಾರಣ ಜಲಪಾತ ಸೃಷ್ಟಿಯಾದಂತಾಗಿದೆ. ಮೈದುಂಬಿದ ಕೆರೆಯ ಸೊಬಗನ್ನು ವೀಕ್ಷಿಸಲು ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಕೆರೆಯನ್ನು ಅಭಿವೃದ್ಧಿ ಮಾಡಿ
ಮದಗದ ಕೆರೆಯನ್ನು ಅಭಿವೃದ್ಧಿಗೊಳಿಸಿ ಎಂಬ ಕೂಗು ಹಿಂದಿನಿಂದಲೂ ಕೇಳಿಬರುತ್ತಿದೆ. ಅಭಿವೃದ್ಧಿಯಾದರೆ ಬೇಸಿಗೆಯಲ್ಲೂ ಪೋಲಾಗುವ ನೀರನ್ನು ತಡೆಯಬಹುದು ಎಂಬ ವಾದವೂ ಇದೆ. ಸಂಬಂಧಪಟ್ಟವರು ಇತ್ತ ಗಮನ ಹರಿಸಿದರೆ ಬೇಸಿಗೆಯಲ್ಲಿಯೂ ಅದೆಷ್ಟೋ ಜನರ ನೀರಿನ ದಾಹ ನೀಗುತ್ತದೆ.