Karnataka Rains: ರಾಜ್ಯದ ಈ 4 ಜಿಲ್ಲೆಗಳಿಗೆ ಬಿರುಗಾಳಿ ಮಳೆ, ಆರೆಂಜ್ ಅಲರ್ಟ್ ಘೋಷಣೆ
Karnataka Heavy Rain Alert: ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆ ಚುರುಕಾಗಿದೆ. ಮುಂದಿನ 03 ದಿನ ಉತ್ತರ ಒಳನಾಡಿಗೆ ಅದರಲ್ಲೂ ಕಲ್ಯಾಣ ಕರ್ನಾಟಕದ ಭಾಗದ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಅತ್ಯಧಿಕ ಮಳೆ ಆಗಲಿದೆ. ಭಾರೀ ಎಚ್ಚರಿಕೆ ನೀಡಿರುವ ಹವಾಮಾನ ಇಲಾಖೆ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಘೋಷಿಸಿದೆ. ಯಾವ ಯಾವ ಭಾಗಗಳಿಗೆ ಏನೆಲ್ಲ ಮುನ್ಸೂಚನೆ ಇದೆ.
ರಾಜ್ಯದಲ್ಲಿ ಕಳೆದ 24 ಗಂಟೆಗಳಿಂದ ಮಳೆಯ ತೀವ್ರತೆ ಹೆಚ್ಚಾಗತೊಡಗಿದೆ. ಉತ್ತರ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳ ಹಲವೆಡೆ ಸಾಧಾರಣದಿಂದ ಭಾರೀ ಹಾಗೂ ಅತ್ಯಧಿಕ ಮಳೆ ಸಂಭವವಿದೆ. ಇದರಲ್ಲಿ ಬಾಗಲಕೋಟೆ, ಕಲಬುರಗಿ, ಕೊಪ್ಪಳ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಕನಿಷ್ಠ 115 ಮಿಲಿ ಮೀಟರ್ನಿಂದ 200 ಮಿಲಿ ಮೀಟರ್ವರೆಗೆ ಗುಡುಗು ಮಿಂಚು ಸಹಿತ ಭಾರೀ ಮಳೆ ಆಗಲಿದೆ. ಸೆಪ್ಟಂಬರ್ 14ರಂದು ಈ ನಾಲ್ಕು ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ.

ಇಂದಿನಿಂದ ಮೂರು ದಿನ ಭಾರೀ ಮಳೆ ಪ್ರಯುಕ್ತ ಯಾದಗಿರಿ, ಬಳ್ಳಾರಿ, ವಿಜಯನಗರಕ್ಕೆ ಯೆಲ್ಲೋ ಅಲರ್ಟ್, ಚಿತ್ರದುರ್ಗ, ವಿಜಯಪುರ, ಕಲಬುರಗಿ, ಮತ್ತು ಕೊಪ್ಪಳಕ್ಕೆ ಎರಡು ದಿನ 'ಯೆಲ್ಲೋ ಅಲರ್ಟ್' ಹಾಗೂ ಮಂಡ್ಯ, ಮೈಸೂರು ಒಳಗೊಂಡು ಈ ಈ ಮೇಲಿನ ಜಿಲ್ಲೆಗಳಲ್ಲಿ ಇಂದು ಸೆಪ್ಟಂಬರ್ 12 ರಂದು ಭಾರೀ ಮಳೆ ಆಗಲಿದ್ದು, 'ಯೆಲ್ಲೋ ಅಲರ್ಟ್' ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ ತಿಳಿಸಿದೆ.
ಕರಾವಳಿ ಹಾಗೂ ಮಲೆನಾಡಿನ ಭಾಗಕ್ಕೆ ಯಾವುದೇ ಭಾರೀ ಮಳೆ ಮುನ್ಸೂಚನೆ ಇಲ್ಲ. ಆಗಾಗ ಕೆಲವೆಡೆ ಹಗುರ ಮಳೆ ಬಂದರೆ ಬರಬಹುದು. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಮಬ್ಬು ವಾತಾವರಣ ಸಹಿತ ಕೆಲವೆಡೆ ಸೋನೆ ಮಳೆ ಆಗಬಹುದು ಎನ್ನಲಾಗಿದೆ. ಉಳಿದಂತೆ ಬೇರೆ ಜಿಲ್ಲೆಗಳಿಗೆ ಸದ್ಯಕ್ಕೆ ಯಾವುದೇ ಹೆಚ್ಚಿನ ಮಳೆ ಲಕ್ಷಣಗಳು ಇಲ್ಲ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.
ಭಾರೀ ಮಳೆ ನಿರೀಕ್ಷೆ: ತಾಪಮಾನ ಕುಸಿತ
ಕಲಬುರಗಿಯಲ್ಲಿ ಭಾರೀ ಮಳೆ ನಿರೀಕ್ಷೆ ಹಿನ್ನೆಲೆಯಲ್ಲಿ ಗರಿಷ್ಠ ತಾಪಮಾನ 27.6 ಡಿಗ್ರಿ ಸೆಲ್ಸಿಯಸ್ಗೆ ಕುಸಿದಿದೆ. ಅದೇ ರೀತಿ ಬೀದರ್ 26.2 ಡಿಗ್ರಿ ಸೆಲ್ಸಿಯಸ್, ವಿಜಯಪುರ 27.2 ಡಿಗ್ರಿ ಸೆಲ್ಸಿಯಸ್, ರಾಯಚೂರು 28 ಡಿಗ್ರಿ ಸೆಲ್ಸಿಯಸ್, ಧಾರವಾಡ 27.6 ಡಿಗ್ರಿ ಸೆಲ್ಸಿಯಸ್, ಗದಗ 28.9, ಕೊಪ್ಪಳ (ಗಂಗಾವತಿ ಕೆವಿಕೆ) 30.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಹೆಚ್ಚು ತಾಪಮಾನ ಕಾರವಾರ 30.8 ಡಿಗ್ರಿ ಸೆಲ್ಸಿಯಸ್, ಹೊನ್ನಾವರ 30 ಡಿಗ್ರಿ ಸೆಲ್ಸಿಯಸ್, ಮಂಗಳೂರು ಏರ್ಪೋರ್ಟ್ 30 ಡಿಗ್ರಿ ಸೆಲ್ಸಿಯಸ್, ದಕ್ಷಿಣ ಕನ್ನಡ 30 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.












Click it and Unblock the Notifications