ಚುನಾವಣಾ ಪ್ರಚಾರಕ್ಕೆ ಅನುಮತಿ; ಸುವಿಧಾ ತಂತ್ರಾಂಶ ಬಳಕೆ ಹೇಗೆ?
ಬೆಂಗಳೂರು, ಏಪ್ರಿಲ್ 06; ಕೇಂದ್ರ ಚುನಾವಣಾ ಆಯೋಗ 2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ಘೋಷಣೆ ಮಾಡಿದೆ. ಏಪ್ರಿಲ್ 13ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಚುನಾವಣಾ ಪ್ರಚಾರ ಕಾರ್ಯಕ್ಕೆ ಅಗತ್ಯವಿರುವ ಅನುಮತಿಗಳನ್ನು ಪಡೆಯಲು ಸುವಿಧಾ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಚಾರಕ್ಕೆ ಅಗತ್ಯವಿರುವ ಅನುಮತಿಗಳನ್ನು ನೀಡಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ.

'ಸುವಿಧಾ' ಮೂಲಕ ರಾಜಕೀಯ ಪಕ್ಷ, ಪಕ್ಷದ ಅಭ್ಯರ್ಥಿ, ಏಜೆಂಟ್, ಕಾರ್ಯಕರ್ತ ಅಥವಾ ಇತರರು ತಮಗೆ ಬೇಕಿರುವ ಚುನಾವಣಾ ಪ್ರಚಾರ ಕಾರ್ಯಗಳಿಗೆ ಅನುಮತಿ ಪಡೆಯಲು ಆನ್ಲೈನ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಅರ್ಜಿಯನ್ನು ಸಂಬಂಧಪಟ್ಟ ಇಲಾಖೆಗಳು ಪರಿಶೀಲಿಸಿ, ಒಪ್ಪಿಗೆ ನೀಡಿದ ನಂತರ ಆಯಾ ಚುನಾವಣಾಧಿಕಾರಿಗಳು ಅನುಮತಿ ಪತ್ರ ನೀಡುತ್ತಾರೆ.
ಯಾವುದಕ್ಕೆ ಅನುಮತಿ ಪಡೆಯಬೇಕು?; ಸುವಿಧಾ ಪೋರ್ಟಲ್ ಮೂಲಕ ಚುನಾವಣಾ ಸಭೆ, ಸಮಾವೇಶ, ಜಾಥಾ, ಪ್ರಚಾರ ಸಾಮಗ್ರಿ ಅಳವಡಿಕೆ, ವೇದಿಕೆ, ಮೈಕ್, ವಾಹನ, ಸಮಾರಂಭ ಮುಂತಾದವುಗಳಿಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ ಅನುಮತಿ ಪತ್ರ ಪಡೆಯಬಹುದಾಗಿದೆ.

ಕಡಿಮೆ ಅವಧಿಯಲ್ಲಿ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಿ, ಅವಸರ, ಒತ್ತಡ ಮಾಡುವ ಬದಲು ಸುವಿಧಾ ಪೋರ್ಟಲ್ ಬಳಸಿ ಆನ್ಲೈನ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ, ನಿಯಮಾನುಸಾರ ಅನುಮತಿ ಪಡೆದುಕೊಳ್ಳಬಹುದು ಮತ್ತು ಅನುಮತಿ ಪತ್ರದ ಅನುಗುಣವಾಗಿ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಈ ಕಾರ್ಯಕ್ರಮಗಳ ಮೇಲೆಯೂ ಚುನಾವಣಾ ವೆಚ್ಚ ವೀಕ್ಷಕರು ಕಣ್ಗಾವಲು ವಹಿಸಿರುತ್ತಾರೆ.
ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಕಾರ್ಯ ಚಟುವಟೆಗಳನ್ನು ಮುಗಿಸುವ ಕಾರ್ಯ ಒತ್ತಡ ಸಿಬ್ಬಂದಿ ಮತ್ತು ರಾಜಕೀಯ ಪಕ್ಷಗಳಿಗೆ ಇರುವುದು ಸಾಮಾನ್ಯ. ಚುನಾವಣಾ ಪ್ರಚಾರ ಕಾರ್ಯಕ್ಕೆ ಅಗತ್ಯವಿರುವ ಅನುಮತಿಗಳನ್ನು ಸರಳವಾಗಿ ನೀಡಲು ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಸುವಿಧಾ ಪೋರ್ಟಲ್ ಮೂಲಕ ಆನ್ಲೈನ್ ಮೂಲಕ ಅನುಮತಿ ಪಡೆಯಲು ಅರ್ಜಿ ಸಲ್ಲಿಕೆ ಮಾಡುವ ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಈ ತಂತ್ರಾಶದ ಸಹಾಯದಿಂದ ಅನುಮತಿ ಪಡೆಬೇಕು ಎಂದು ಚುನಾವಣಾಧಿಕಾರಿಗಳು ಮನವಿ ಮಾಡಿದ್ದಾರೆ.
ಚುನಾವಣಾ ಪ್ರಚಾರಕ್ಕಾಗಿ ಅನುಮತಿ ಪಡೆಯಲು 48 ಗಂಟೆಗಳ ಮೊದಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕಿದೆ. ಸಂಬಂಧಿಸಿದ ಅಧಿಕಾರಿಗಳು ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿ, ಒಪ್ಪಿಗೆ ನೀಡಿದ ನಂತರ ಚುನಾವಣಾಧಿಕಾರಿಗಳು ಅನುಮತಿ ಪತ್ರವನ್ನು ನೀಡುತ್ತಾರೆ. ವಿವಿಧ ರೀತಿಯ ಚುನಾವಣಾ ಪ್ರಚಾರ ಕಾರ್ಯ ಮತ್ತು ಅವುಗಳಿಗೆ ಸಂಬಂದಿಸಿದಂತೆ ಮತಕ್ಷೇತ್ರ ವ್ಯಾಪ್ತಿಗೆ ಆಯಾ ಚುನಾವಣಾ ಅಧಿಕಾರಿಗಳು, ಜಿಲ್ಲಾ ವ್ಯಾಪ್ತಿಗೆ ಜಿಲ್ಲಾ ಚುನಾವಣಾ ಅಧಿಕಾರಿಗಳು ಮತ್ತು ರಾಜ್ಯಮಟ್ಟಕ್ಕೆ ರಾಜ್ಯ ಚುನಾವಣಾ ಆಯೋಗ ಅನುಮತಿ ಪತ್ರವನ್ನು ನೀಡುತ್ತದೆ. ಕೇವಲ ವೆಬ್ ಪೋರ್ಟ್ಲ್ ಮಾತ್ರವಲ್ಲ ಗೂಗಲ್ ಪ್ಲೇಸ್ಟೋರ್ನಲ್ಲಿ SUVIDHA ಅಪ್ಲಿಕೇಶನ್ ಅನ್ನು ಸಹ ಡೌನ್ಲೋಡ್ ಮಾಡಿಕೊಂಡು, ಅದರ ಮೂಲಕವೂ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಚುನಾವಣಾ ಮಾದರಿ ನೀತಿ ಸಂಹಿತೆಯ ಅನ್ವಯ ಚುನಾವಣಾ ಪ್ರಚಾರಕ್ಕೆ ಸಹ ಹಲವು ನಿರ್ಬಂಧಗಳಿವೆ. ಒಬ್ಬರ ಕೆಲಸ ಕಾರ್ಯಗಳ ಬಗ್ಗೆ ಮತ್ತೊಬ್ಬ ರಾಜಕಾರಣಿ ಟೀಕೆಗಳನ್ನು ಮಾಡಬಹುದು. ಆದರೆ ವೈಯಕ್ತಿಯ ಟೀಕೆ, ಕೋಮು ಸಂಘರ್ಷಕ್ಕೆ ಆಸ್ಪದ ನೀಡುವಂಥ ಹೇಳಿಕೆ ನೀಡಬಾರದು. ವೈಯಕ್ತಿಕ ಮಾತ್ರವಲ್ಲ ಜಾತಿ/ ಸಮುದಾಯ ನಿಂದನೆ ಮಾಡುವಂತಿಲ್ಲ. ಸಭೆ ಮತ್ತು ಸಮಾರಂಭವನ್ನು ನಡೆಸಲು ಪೊಲೀಸರು ಸೇರಿದಂತೆ ಚುನಾವಣಾಧಿಕಾರಿಗಳ ಅನುಮತಿ ಕಡ್ಡಾಯವಾಗಿದೆ. ಪ್ರಚಾರದ ವೇಳೆ ಅಕ್ಕಪಕ್ಕದ ಜನರ ಖಾಸಗಿ ಜೀವನಕ್ಕೆ ತೊಂದರೆ ಮಾಡುವಂತಿಲ್ಲ.












Click it and Unblock the Notifications