ಮೈಸೂರು, ತುಮಕೂರಿಗೆ ಡಬಲ್ ಡೆಕ್ಕರ್, ಎಸಿ ಬಸ್ ಸೇವೆ, ಇಲ್ಲಿದೆ ಮಾಹಿತಿ
ಮೈಸೂರು ಮತ್ತು ತುಮಕೂರಿನಲ್ಲಿ ನಗರದೊಳಗಿನ ಪ್ರಯಾಣಕ್ಕಾಗಿ ಡಬಲ್ ಡೆಕ್ಕರ್, ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್ಗಳನ್ನು ಪರಿಚಯಿಸಲು ಯೋಜಿಸುತ್ತಿದೆ.
ಬೆಂಗಳೂರು, ಜನವರಿ 31: ಮೈಸೂರು ಮತ್ತು ತುಮಕೂರಿನ ನಾಗರಿಕರು ಈ ವರ್ಷದ ಅಂತ್ಯದ ವೇಳೆಗೆ ಡಬಲ್ ಡೆಕ್ಕರ್ ಬಸ್ಗಳಲ್ಲಿ ಪ್ರಯಾಣಿಸುವ ಸಾಧ್ಯತೆ ಇದೆ.
ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಪ್ರಾಯೋಗಿಕ ಕಾರ್ಯಕ್ರಮದ ಅಡಿಯಲ್ಲಿ ಮೈಸೂರು ಮತ್ತು ತುಮಕೂರಿನಲ್ಲಿ ನಗರದೊಳಗಿನ ಪ್ರಯಾಣಕ್ಕಾಗಿ ಡಬಲ್ ಡೆಕ್ಕರ್, ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್ಗಳನ್ನು ಪರಿಚಯಿಸಲು ಯೋಜಿಸುತ್ತಿದೆ. ಈಗಾಗಲೇ ಮೈಸೂರಿನಲ್ಲಿ ಅಂಬಾರಿ ಎಂಬ ಡಬಲ್ ಡೆಕ್ಕರ್ ಬಸ್ ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಸೇವೆಯಲ್ಲಿದೆ.
ಕೆರೆಗೆ ಜಿಗಿದು ಹೆಣ್ಣು ಮಕ್ಕಳ ಜೀವ ರಕ್ಷಿಸಿದ KSRTC ಚಾಲಕ: ಪ್ರಶಂಸೆ
ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಿಗೆ ಸೇವೆ ಒದಗಿಸುವ ಉದ್ದೇಶದಿಂದ ಪ್ರತಿ ನಗರಕ್ಕೆ ಐದು ಬಸ್ಗಳನ್ನು ನೀಡಲಾಗುತ್ತದೆ. ಈ ವರ್ಷದ ಅಂತ್ಯದ ವೇಳೆಗೆ ಈ ಬಸ್ಗಳನ್ನು ಓಡಿಸುವುದು ನಮಗೆ ಖಾತ್ರಿ ಇದೆ ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ ಅನ್ಬುಕುಮಾರ್ ಹೇಳಿದ್ದಾರೆ ಎಂದು ಡಿಎಚ್ ವರದಿ ಮಾಡಿದೆ.
ಮೈಸೂರಿನಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಪ್ರವಾಸಿ ಮಾರ್ಗಗಳಲ್ಲಿ ಅಂಬಾರಿ ಡಬಲ್ ಡೆಕ್ಕರ್ ಬಸ್ ಸೇವೆಯನ್ನು ನಡೆಸುತ್ತದೆ. ಇದು ಓಪನ್- ಟಾಪ್ ಬಸ್ ಮತ್ತು ದಿನಕ್ಕೆ ಮೂರು ಟ್ರಿಪ್ಗಳನ್ನು ಮಾಡುತ್ತದೆ. ಪ್ರಯಾಣ ದರ ಒಬ್ಬರಿಗೆ 250 ರೂಪಾಯಿ. ಆದರೆ ಅರಮನೆಗಳ ನಗರವು ನಗರದೊಳಗಿನ ಪ್ರಯಾಣಕ್ಕಾಗಿ ಡಬಲ್ ಡೆಕ್ಕರ್ ಬಸ್ ಸೇವೆಯನ್ನು ಹೊಂದಿಲ್ಲ. ಅದನ್ನು ಬದಲಾಯಿಸಲು ಕೆಎಸ್ಆರ್ಟಿಸಿ ಯೋಜಿಸಿದೆ.
ತುಮಕೂರು ಬೆಂಗಳೂರಿನ ಪಕ್ಕದಲ್ಲಿರುವ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರವಾಗಿದ್ದು, ಅದರ ಹೆಚ್ಚಿನ ವಿದ್ಯಾರ್ಥಿಗಳ ಜನಸಂಖ್ಯೆಯಿಂದಾಗಿ ಡಬಲ್ ಡೆಕ್ಕರ್ ಬಸ್ಗಳ ಸೇವೆಯನ್ನು ಪಡೆಯಲಿದೆ. ಕರ್ನಾಟಕದಲ್ಲಿ ಇದುವರೆಗೆ ಡಬಲ್ ಡೆಕ್ಕರ್ ಬಸ್ಗಳನ್ನು ಹೊಂದಿರುವ ಏಕೈಕ ನಗರ ಬೆಂಗಳೂರು. 1990 ರ ದಶಕದ ಅಂತ್ಯದಲ್ಲಿ ವಾಹನಗಳನ್ನು ಹಂತಹಂತವಾಗಿ ತೆಗೆದುಹಾಕಲಾಯಿತು.
ಐದು ಬಸ್ಗಳನ್ನು ಖರೀದಿಸಲು ಬಿಡ್
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಈಗ ನಗರ ಭೂ ಸಾರಿಗೆ ಇಲಾಖೆ (DULT) ನಿಂದ ಹಣವನ್ನು ಮರಳಿ ತರುತ್ತಿದೆ. ಜನವರಿ 2, 2023 ರಂದು ಬಿಎಂಟಿಸಿ ಐದು ಬಸ್ಗಳನ್ನು ಖರೀದಿಸಲು ಬಿಡ್ಗಳನ್ನು ಆಹ್ವಾನಿಸಿತು. ಅದು ಜುಲೈ ವೇಳೆಗೆ ನಗರದ ರಸ್ತೆಗಳನ್ನು ತಲುಪುವ ನಿರೀಕ್ಷೆಯಿದೆ. ಬಿಎಂಟಿಸಿ ಐದು ಮೀಟರ್ ಎತ್ತರದ 70 ಆಸನ ಸಾಮರ್ಥ್ಯ ಹೊಂದಿರುವ ಮತ್ತು ಒಂದೇ ಚಾರ್ಜ್ನಲ್ಲಿ 150 ಕಿಮೀ ಓಡುವ ಬಸ್ಗಳನ್ನು ಖರೀದಿಸಲು ನೋಡುತ್ತಿದೆ.
ಬೆಂಗಳೂರಿಗೆ ಬಂದ ನಂತರ ಟೆಂಡರ್
ಮೈಸೂರು ಮತ್ತು ತುಮಕೂರಿಗೆ ಒದಗಿಸುವ ಬಸ್ಗಳಿಗೆ ಕೆಎಸ್ಆರ್ಟಿಸಿಯು ಅದೇ ವಿಶೇಷಣಗಳನ್ನು ಅನುಸರಿಸುವ ಸಾಧ್ಯತೆಯಿದೆ. ಮೊದಲು ಡಬಲ್ ಡೆಕ್ಕರ್ ಬಸ್ಗಳನ್ನು ಬಿಎಂಟಿಸಿ ಪ್ರಾರಂಭಿಸಬೇಕೆಂದು ನಾವು ಬಯಸುತ್ತೇವೆ. ಈ ಬಸ್ಗಳು ಬೆಂಗಳೂರಿಗೆ ಬಂದ ನಂತರ ನಾವು ಟೆಂಡರ್ಗಳನ್ನು ಆಹ್ವಾನಿಸುತ್ತೇವೆ. ಅಲ್ಲದೆ ಕೆಲವೇ ತಿಂಗಳುಗಳಲ್ಲಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ ಎಂದು ಅನ್ಬುಕುಮಾರ್ ಹೇಳಿದರು.
ಮೆಟ್ರೋ ರೈಲಿಗೆ ಫೀಡರ್ ಸೇವೆ
ಮೈಸೂರು ಮತ್ತು ತುಮಕೂರಿನಲ್ಲಿ ಪ್ರಾಯೋಗಿಕ ಕಾರ್ಯಕ್ರಮ ಯಶಸ್ವಿಯಾದರೆ, ಕೆಎಸ್ಆರ್ಟಿಸಿ ದಾವಣಗೆರೆ ಮತ್ತು ಶಿವಮೊಗ್ಗದಂತಹ ನಗರಗಳಲ್ಲಿ ಡಬಲ್ ಡೆಕ್ಕರ್ಗಳನ್ನು ಪರಿಚಯಿಸುವ ಸಾಧ್ಯತೆಯಿದೆ ಎಂದು ಅನ್ಬುಕುಮಾರ್ ಹೇಳಿದರು. ಬೆಂಗಳೂರಿನ ನಮ್ಮ ಮೆಟ್ರೋ ರೈಲಿಗೆ ಫೀಡರ್ ಸೇವೆಯಾಗಿ ಡಬಲ್ ಡೆಕ್ಕರ್ ಬಸ್, ಕೇಬಲ್ ಕಾರ್ ಹಾಗೂ ಟ್ಯಾಕ್ಸಿ ಬರಲಿದೆ ಎಂದು ಹೇಳಲಾಗಿದ್ದು, ಟ್ರಾಫಿಕ್ ಕಡಿಮೆ ಮಾಡುವ ಉದ್ದೇಶ ಮಾಡಲಾಗಿದೆ.
ಕೇಬಲ್ ಕಾರ್ ಹಾಗೂ ಟ್ಯಾಕ್ಸಿ ನಿಯೋಜಿಸಲು ಚಿಂತನೆ
ಇತ್ತೀಚೆಗೆ ರಾಜ್ಯಕ್ಕೆ ಬಂದಿದ್ದ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಸಿಎಂ ಬೊಮ್ಮಾಯಿ ಅವರು ಸಮಾಲೋಚನೆ ನಡೆಸಿ ಡಬಲ್ ಡೆಕ್ಕರ್ ಬಸ್, ಕೇಬಲ್ ಕಾರ್ ಹಾಗೂ ಟ್ಯಾಕ್ಸಿಗಳನ್ನು ನಿಯೋಜಿಸಲು ಚಿಂತನೆ ನಡೆಸಲಾಗಿದೆ. ಈ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ತಜ್ಞರ ತಂಡಗಳನ್ನು ನೇಮಿಸಲಾಗುವುದು. ಈ ಬಗ್ಗೆ ಸಮಾಲೋಚನೆ ಮಾಡಿದ್ದೇನೆ. ಬೆಂಗಳೂರು ಮಹಾನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಬೇಕಿದೆ. ಆ ನಿಟ್ಟಿನಲ್ಲಿ ಸಾಧ್ಯವಾದಷ್ಟು ಫ್ಲೈಓವರ್ಗಳನ್ನು ನಿರ್ಮಿಸಬೇಕೆಂದು ತೀರ್ಮಾನಿಸಲಾಗಿದೆ ಎಂದು ಹೇಳಿದ್ದರು.