'ಪಂಚರತ್ನ' ಜಾರಿಗೆ ಅವಕಾಶ ಸಿಗದಿದ್ದಕ್ಕೆ ಕುಮಾರಸ್ವಾಮಿಗೆ ಹತಾಶೆ: ಡಿಕೆಶಿ
ಬೆಂಗಳೂರು, ನವೆಂಬರ್ 13: ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆ ಜಾರಿ ಕುರಿತು ಟೀಕಿಸಿದ್ದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ಡಿ ಕುಮಾರಸ್ವಾಮಿ ಅವರಿಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳಿಗೆ ಎಚ್ಡಿ ಕುಮಾರಸ್ವಾಮಿ ಅವರಿಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ.
ಕುಮಾರಸ್ವಾಮಿ ಅವರು ಕರ್ನಾಟಕದಲ್ಲಿ ಗ್ಯಾರೆಂಟಿ ಯೋಜನೆಗಳು ವಿಫಲವಾಗಿವೆ ಎಂದೆಲ್ಲ ಹೇಳಿದ್ದರು. ಈ ಪ್ರಶ್ನೆಗೆ ಭಾನುವಾರ ಉತ್ತರಿಸಿದ ಡಿಕೆ ಶಿವಕುಮಾರ್ ಅವರು, ಗ್ಯಾರೆಂಟಿ ಯೋಜನೆಗಳ ಕುರಿತು ಚನ್ನಪಟ್ಟಣ ಜನತೆ ಕೇಳಿ. ಕುಮಾರಸ್ವಾಮಿಯವರು ಯೋಜನೆ ಫಲಾನುಭವಿಯಲ್ಲ. ಅವರಿಗೆ ತಮ್ಮ ಪಂಚರತ್ನ ಯೋಜನೆ ಜಾರಿಗೆ ಅವಕಾಶ ಸಿಗಲಿಲ್ಲ ಎಂಬ ಹತಾಶೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಕುಮಾರಸ್ವಾಮಿ ಅವರಿಗೂ ಗ್ಯಾರಂಟಿ ಯೋಜನೆಗಳಿಗೆ ಸಂಬಂಧವಿಲ್ಲ. ಅವರಿಗೆ ಆ ಯೋಜನೆಗಳ ಬಗ್ಗೆ ಮಾಹಿತಿಯೇ ಇಲ್ಲ. ಅವರು ಯೋಜನೆಗಳ ಫಲಾನುಭವಿಯಲ್ಲ. ಯೋಜನೆಗಳ ಜಾರಿ ಬಗ್ಗೆ ಮಾಹಿತಿ ಬೇಕಿದ್ದರೆ ಕುಮಾರ ಸ್ವಾಮಿ ಅವರು ತಮ್ಮ ಕ್ಷೇತ್ರ ಚನ್ನಪಟ್ಟಣದಲ್ಲಿ ಕೇಳಿ ತಿಳಿದುಕೊಳ್ಳಲಿ. ಬಡವರ ನೋವು ಕುಮಾರಸ್ವಾಮಿ ಅವರಿಗೆ ಗೊತ್ತಿದ್ದರೆ ಹೀಗೆ ಮಾತನಾಡುತ್ತಿರಲಿಲ್ಲ ಎಂದು ತಿವಿದರು.
ಕುಮಾರಸ್ವಾಮಿಗೆ ಡಿಕೆಶಿ ಸವಾಲು
ರಾಜ್ಯದ ಬಡವರ ಕಾರ್ಯಕ್ರಮಗಳ ಬಗ್ಗೆ ಕುಮಾರಸ್ವಾಮಿ ಅವರಿಗೆ ಚಿಂತನೆ ಇಲ್ಲ. ಅವರಿಗೆ ಹತಾಶೆ ಕಾಡುತ್ತಿದೆ. ನಾನೆ ಖುದ್ದಾಗಿ ಚನ್ನಪಟ್ಟಣ ಜನರಲ್ಲಿ ಮಾತನಾಡಿದ್ದಾರೆ. ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನ ಭಾಗ್ಯ ಸೇರಿದಂತೆ ನಮ್ಮ ಸರ್ಕಾರದ ಉಚಿತ ಯೋಜನೆಗಳು ಜನರಿಗೆ ತಲುಪಿವೆ. ಈ ಬಗ್ಗೆ ಅವರೇ ಸ್ವತಃ ಪರೀಕ್ಷೆ ಮಾಡಿಕೊಳ್ಳಲಿ ಎಂದು ಡಿಕೆ ಶಿವಕುಮಾರ್ ಸವಾಲು ಹಾಕಿದರು.
ಯೋಜನೆಗಳ ಜಾರಿ ಬಳಿಕ ಕೆಲವು ತಾಂತ್ರಿಕ ದೋಷಗಳು ಎದುರಾದವು. ಅವೆಲ್ಲವನ್ನು ಹಂತ ಹಂತವಾಗಿ ಪರಿಹರಿಸಿ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ಕೆಲಸವಾಗುತ್ತಿದೆ. ವಿರೋಧ ಪಕ್ಷದವರು ಆರೋಪ ಮಾಡಲಿ ತೊಂದರೆ ಇಲ್ಲ ಎಂದರು.

ಕುಮಾರಸ್ವಾಮಿ ಟಾರ್ಗೆಟ್ ಕೊಟ್ಟಿರಬೇಕು
ನಮ್ಮ ಸಚಿವರು ತೆಲಂಗಾಣಕ್ಕೆ ಹೋಗಿ ಪ್ರಚಾರ ಮಾಡುತ್ತಿದ್ದಾರೆ. ಅಲ್ಲಿ ಐದು ಕ್ಷೇತ್ರಗಳ ಚುನಾವಣೆ ಕೆಲಸದಲ್ಲಿ ನಾವು ತೊಡಗಿದ್ದೇವೆ. ಅಲ್ಲಿ ಎಲ್ಲ ಕ್ಷೇತ್ರವನ್ನು ನಾವು ಗೆಲ್ಲಲಿದ್ದೇವೆ. ಕರ್ನಾಟಕ ಸಚಿವರಿಗೆ ಪಂಚ ರಾಜ್ಯ ಚುನಾವಣೆಯ ಕಮಿಷನ್ ಟಾರ್ಗೆಟ್ ಅನ್ನು ಕುಮಾರಸ್ವಾಮಿಯವರೇ ಟಾರ್ಗೆಟ್ ಕೊಟ್ಟಿರಬೇಕು ಎಂದು ವಾಗ್ದಾಳಿ ನಡೆಸಿದ ಡಿಕೆ ಶಿವಕುಮಾರ್ ಅವರಿಗೂ ಮತ್ತು ವಿಜಯೇಂದ್ರ ಅವರಿಗೂ ಒಳ್ಳೆಯದಾಗಲಿದೆ ಎಂದು ವ್ಯಂಗ್ಯಾಡಿದರು.
ಸರ್ಕಾರದ ವಿರುದ್ಧ ಕುಮಾರಸ್ವಾಮಿ ಆರೋಪಳೇನು
ಪಂಚರಾಜ್ಯ ಚುನಾವಣೆ ಪ್ರಚಾರದಲ್ಲಿರುವ ಕಾಂಗ್ರೆಸ್ ಕರ್ನಾಟಕದಲ್ಲಿನ ಉಚಿತ ಗ್ಯಾರೆಂಟಿ ಯೋಜನೆಗಳನ್ನು ಉಲ್ಲೇಖಿಸಿ ಮತಯಾಚನೆಗೆ ಮುಂದಾಗಿದ್ದಾರೆ. ಅಸಲಿಗೆ ಕರ್ನಾಟಕದಲ್ಲಿ ಗ್ಯಾರೆಂಟಿ ಯೋಜನೆಗಳು ಜಾರಿ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಎಚ್ಡಿ ಕುಮಾರಸ್ವಾಮಿ ಆರೋಪಿಸಿದ್ದರು.
ಉಚಿತ ಯೋಜನೆಗಳನ್ನು ದೇಶಾದ್ಯಂತ ವಿಸ್ತರಿಸಿ ಅಧಿಕಾರ ಪಡೆಯಲು ಕಾಂಗ್ರೆಸ್ ಮುಂದಾಗಿದೆ. ಅವರ ಭರವಸೆಗಳು ವಿಫಲವಾಗಿದೆ ಎಂದಿದ್ದರು. ಅಲ್ಲದೇ ಪಂಚ ರಾಜ್ಯಗಳ ಯೋಜನೆ ಪ್ರಚಾರಕ್ಕೆ ತೆರಳಿದ್ದ ರಾಜ್ಯ ಸಚಿವರ ವಿರುದ್ಧ ಮಾತನಾಡಿದ್ದರು. ಅವರಿಗೆ ಸರ್ಕಾರ ಕಮಿಷನ್ ಟಾರ್ಗೆಟ್ ನೀಡಿದೆ ಎಂದು ಆರೋಪಿಸಿದ್ದರು.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ವಿಚಾರ ತಣ್ಣಗಾಗಿಲ್ಲ. ಆಗಲೇ ದೆಹಲಿ ಕಾಂಗ್ರೆಸ್ನಿಂದ ಸಿಎಂ ಸಿದ್ದರಾಮಯ್ಯಗೆ ನೋಟಿಸ್ ನೀಡಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರು ನೋಟಿಸ್ ಪಿರಿಯಡ್ ನಲ್ಲಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು.











Click it and Unblock the Notifications