ಟೀಕೆಗಳು ಸಾಯುತ್ತದೆ, ಕೆಲಸಗಳು ಉಳಿಯುತ್ತದೆ. ನಾವು ಕೆಲಸ ಮಾಡಿ ತೋರಿಸುತ್ತೇವೆ: ಬಿಜೆಪಿ ವಿರುದ್ದ ಡಿ ಕೆ ಶಿವಕುಮಾರ್ ಕಿಡಿ
ಬೆಂಗಳೂರು, ಜೂನ್ 11: ಬಿಜೆಪಿ, ಜೆಡಿಎಸ್ ಟೀಕೆಗಳ ಸುರಿಮಳೆ ಮಾಡಿದರು. ಟೀಕೆಗಳು ಸಾಯುತ್ತದೆ, ಕೆಲಸಗಳು ಉಳಿಯುತ್ತದೆ. ನಾವು ಕೆಲಸ ಮಾಡಿ ತೋರಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಿಡಿಕಾರಿದರು.
ಈ ಕುರಿತು ವಿಧಾನಸೌಧದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ರಾಜ್ಯದ ಜನತೆ ನಮ್ಮ ಮೇಲೆ ನಂಬಿಕೆ ಇಟ್ಟು ನಮಗೆ ಮತ ಹಾಕಿದ್ದಾರೆ. ನಮ್ಮ ಮೇಲೆ ಜನರ ಸೇವೆ ಮಾಡಲು ಅವಕಾಶ ಕೊಟ್ಟಿದ್ದಾರೆ. ಪಂಚ ಗ್ಯಾರಂಟಿ ಘೋಷಣೆ ಮಾಡಿದ್ದೆವು. ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ ಎಂದು ಹೇಳಿದರು.

ಸಮುದಾಯದ ಅಭಿವೃದ್ಧಿ ಅಳೆಯಬೇಕಾದರೆ ಮೊದಲು ಮಹಿಳೆಯರ ಸ್ಥಿತಿಗತಿ ಅರಿಯಬೇಕು ಎಂದು ಡಾ. ಬಿ.ಆರ್ ಅಂಬೇಡ್ಕರ್ ಮಾತನ್ನು ಉಲ್ಲೇಖ ಮಾಡಿದ ಅವರು, ಪ್ರಯಾಣದ ಲೆಕ್ಕ ಇಡುವ ನಿಟ್ಟಿನಲ್ಲಿ ಸ್ಮಾರ್ಟ್ ಕಾರ್ಡ್ ಅಗತ್ಯ. ಎಲ್ಲಿಂದ ಹತ್ತಿ ಎಲ್ಲಿ ಇಳಿಯುತ್ತಾರೆ ಎಂಬ ಲೆಕ್ಕ ಬೇಕು. ಈ ನಿಟ್ಟಿನಲ್ಲಿ ಸ್ಮಾರ್ಟ್ ಕಾರ್ಡ್ ಅಗತ್ಯವಾಗಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಸಮರ್ಥಿಸಿಕೊಂಡರು.
ಇನ್ನೂ ಆರ್ಥಿಕ ದಿವಾಳಿ ಆಗುತ್ತದೆ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ ಮಧ್ಯಪ್ರದೇಶದಲ್ಲಿ ಒಂದು ಸಾವಿರ ರೂಪಾಯಿ ಮಹಿಳೆಯರಿಗೆ ಕೊಡಲಾಗುವುದು ಎಂದು ಸರ್ಕಾರ ಘೋಷಣೆ ಮಾಡಿದೆ ಎಂದು ಬಿಜೆಪಿ ಆರೋಪಕ್ಕೆ ಡಿ ಕೆ ಶಿವಕುಮಾರ್ ತಿರುಗೇಟು ನೀಡಿದರು.
ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ನಾವೇ ಬಲಿಷ್ಠರು, ಡಬಲ್ ಎಂಜಿನ್ ಸರ್ಕಾರ ಎಂದವರನ್ನು ಕಿತ್ತೆಸೆದು ಮತ್ತೆ ಆಶೀರ್ವಾದ ಮಾಡಿದ್ದೀರಿ, ಯಾವುದೇ ಕಾರಣಕ್ಕೂ ಮಾತು ತಪ್ಪದೇ ಎಲ್ಲಾ 5 ಗ್ಯಾರಂಟಿಗಳನ್ನು ಈಡೇರಿಸುತ್ತೇವೆ. ಬಸವಣ್ಣನವರು ಒಂದು ಮಾತು ಹೇಳುತ್ತಾರೆ ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು, ನುಡಿದರೆ ಲಿಂಗಮೆಚ್ಚಿ ಅಹುದೆನಬೇಕು.
ಬಸವಣ್ಣನವರ ನಾಡಿನಲ್ಲಿ ಬದುಕುತ್ತಿದ್ದೇವೆ. ಕಳೆದ 2013 ರಲ್ಲಿ ಬಸವಣ್ಣನವರ ಜಯಂತಿಯಂದೆ ಹಸಿದವರಿಗೆ ಅನ್ನ ಘೋಷಣೆ ಮಾಡಿ ನುಡಿದಂತೆ ನಡೆದಿದ್ದೆವು. ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶೇ 98 ರಷ್ಟು ಪ್ರಣಾಳಿಕೆಯನ್ನು ಈಡೇರಿಸಿದ್ದೆವು. ಹೆಣ್ಣು ಕುಟುಂಬದ ಕಣ್ಣು, ಯಾವುದಾದರೂ ಊರಿಗೆ ಹೋದರೆ ಅಲ್ಲಿ ಊರ ದೇವತೆ ಹೆಣ್ಣು. ದೇವರನ್ನು ವೆಂಕಟೇಶ್ವರ ಅಂತ ಕರೆಯೋದಿಲ್ಲ, ಲಕ್ಷ್ಮೀ ವೆಂಕಟೇಶ್ವರ ಎನ್ನುತ್ತೇವೆ, ಪಾರ್ವತಿ ಪರಮೇಶ್ವರ ಎಂದು ಕರೆಯುತ್ತೇವೆ, ಹೆಣ್ಣೇ ಈ ದೇಶದ ಶಕ್ತಿ.

ಯಾರಾದರೂ ಆಹ್ವಾನ ಪತ್ರಿಕೆ ನೀಡಿದರೆ ಕೇವಲ ಡಿ.ಕೆ.ಶಿವಕುಮಾರ್ ಅವರಿಗೆ ಎಂದು ನೀಡುವುದಿಲ್ಲ, ಶ್ರೀಮತಿ, ಶ್ರೀ. ಡಿ.ಕೆ.ಶಿವಕುಮಾರ್ ಎಂದು ಹೇಳುತ್ತಾರೆ. ಅಂದರೆ ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೆ ಮೊದಲ ಪ್ರಾಶಸ್ತ್ಯ. ಹೆಣ್ಣು ಶಕ್ತಿಯ ಪ್ರತಿರೂಪ ಎಂದು ಈ ಶಕ್ತಿ ಯೋಜನೆ ಜಾರಿಗೆ ತಂದಿದ್ದೇವೆ.
ದೀಪಂಜ್ಯೋತಿ ಕರಂಜ್ಯೋತಿ ಆರೋಗ್ಯ ಧನ ಸಂಪದಂ ಎಂದು ಹೇಳಿ ದೀಪವನ್ನು ಬೆಳಗಿಸುವುದರ ಮೂಲಕ ಈ ರಾಜ್ಯದ ಅಂಧಕಾರ ವನ್ನು ತೊಲಿಗುಸುವ ಕೆಲಸಕ್ಕೆ ಮುನ್ನುಡಿ ಬರೆದಿದ್ದೇವೆ.
ಪರಿಶುದ್ಧವಾದ ಆಡಳಿತ ನೀಡಲು ನಾವು ಸನ್ನದ್ದರಾಗಿದ್ದೇವೆ. ವಿರೋಧ ಪಕ್ಷಗಳು ನಾನಾ ರೀತಿಯಲ್ಲಿ ಟೀಕೆ ಮಾಡುತ್ತಿವೆ. ನಮಗೆ ಆ ಟೀಕೆಗಳಿಗೆಲ್ಲ ಉತ್ತರ ಕೊಡುವುದಕ್ಕೆ ಸಮಯವಿಲ್ಲ, ನಮ್ಮ ಕೈಲಿ ಆಗೋದು ಇಲ್ಲ. ಏಕೆಂದರೆ ಉತ್ತಮ ಆಡಳಿತದ ಭವಿಷ್ಯ ನಮ್ಮ ಮುಂದಿದೆ, ಉತ್ತರ ಕೊಡುತ್ತಾ ಹೋದರೆ ಕೆಲಸ ಮಾಡೋಕೆ ಸಮಯವೇ ಇರುವುದಿಲ್ಲ. ಅದಕ್ಕೆ ಒಂದು ಮಾತಿದೆ ವಿರೋಧ ಪಕ್ಷಗಳು ಇದನ್ನ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ.
ಒಂದು ದೇಶ ಅರ್ಥ ಆಗಬೇಕು ಅಂದರೆ ಆ ದೇಶದ ಮಹಿಳೆಯರ ಸ್ಥಿತಿಗತಿ ಹೇಗಿದೆ ಎಂದು ತಿಳಿದುಕೊಂಡರೆ ಸಾಕು. ನಮ್ಮ ರಾಜ್ಯದ ಮಹಿಳೆಯರ ಸ್ಥಿತಿ ಉತ್ತಮಗೊಳಿಸಲು ರಾಜ್ಯ ಸರ್ಕಾರ ಟೊಂಕಕಟ್ಟಿ ನಿಂತಿದೆ.
ಅತ್ಯಂತ ಅನುಭವಿಗಳಾದ ರಾಮಲಿಂಗಾರೆಡ್ಡಿ ಅವರ ಕೈಯಲ್ಲಿ ಸಾರಿಗೆ ಇಲಾಖೆ ಇದೆ. ಇವರು ಸ್ಮಾರ್ಟ್ ಕಾರ್ಡ್ ಪರಿಚಯಿಸುತ್ತಿದ್ದಾರೆ. ಇದು ಏಕೆಂದರೆ ಎಷ್ಟು ಜನ ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡಿದರು ಎನ್ನುವ ಲೆಕ್ಕ ಸಿಕ್ಕರೆ, ಅಷ್ಟು ಪ್ರಮಾಣದ ಹಣವನ್ನ ಸರ್ಕಾರದಿಂದ ಸಾರಿಗೆ ಸಂಸ್ಥೆಗೆ ನೀಡಬಹುದು. ಏಕೆಂದರೆ ಸಂಸ್ಥೆಯೂ ನಮ್ಮದೆ ಅಲ್ಲವೇ?
ಈಗ ವಿರೋಧ ಪಕ್ಷದಲ್ಲಿ ಇರುವ ಈ ಬಿಜೆಪಿಯವರಿಗೆ ಸರ್ಕಾರಿ ಸಂಸ್ಥೆಗಳ ಮೇಲೆ ಪ್ರೀತಿಯೇ ಇಲ್ಲ. ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನೆಗೆ ಸರ್ಕಾರಿ ಬಸ್ಗಳನ್ನು ಬಳಸಿಕೊಂಡು ಇನ್ನೂ ಬಿಲ್ ಕೊಟ್ಟೆ ಇಲ್ಲ.
ಕಾಂಗ್ರೆಸ್ ಚುನಾವಣೆ ಹೊತ್ತಿನಲ್ಲಿ ಘೊಷಣೆ ಮಾಡಿದ ಗ್ಯಾರಂಟಿಗಳಲ್ಲಿ ಇದು ಕೊನೆಯ ಗ್ಯಾರಂಟಿ. ಇದನ್ನು ರಾಹುಲ್ ಗಾಂಧಿ ಅವರು ಮಂಗಳೂರಿನಲ್ಲಿ ಆದರೆ ಇದೇ ಗ್ಯಾರಂಟಿಯನ್ನ ಮೊಟ್ಟ ಮೊದಲನೆಯದಾಗಿ ನಮ್ಮ ರಾಜ್ಯದ ಮಹಿಳೆಯರ ಅನುಕೂಲಕ್ಕೆ ಜಾರಿಗೆ ತರುತ್ತಿದ್ದೇವೆ.
ಬಿಜೆಪಿಯವರು ಕಾಂಗ್ರೆಸ್ ನಾಯಕರಿಗೆ ಕಣ್ಣಿಲ್ಲ, ಕಿವಿಯಿಲ್ಲ ಎಂದುಕೊಂಡಿದ್ದಾರೆ. ನಮ್ಮ ರಾಷ್ಟ್ರೀಯ ನಾಯಕಿಯಾದ ಶ್ರೀಮತಿ ಪ್ರಿಯಾಂಕ ಗಾಂಧಿ ಅವರು ಜನವರಿ 15 ನೇ ತಾರೀಕಿನಂದು ನಾ ನಾಯಕಿ ಕಾರ್ಯಕ್ರಮದಲ್ಲಿ ಗೃಹಲಕ್ಷ್ಮೀ ಯೋಜನೆ ಘೋಷಣೆ ಮಾಡಿದ್ದರು.
ಇದೇ ಯೋಜನೆಯನ್ನ ಮಧ್ಯಪ್ರದೇಶದಲ್ಲಿ ಬಿಜೆಪಿಯವರು ಕಾಪಿ ಮಾಡಿ ಮಹಿಳೆಯರಿಗೆ 1 ಸಾವಿರ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಆದರೆ ಇಲ್ಲಿ 2 ಸಾವಿರ ಕೊಟ್ಟರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಕೂಗಾಡುತ್ತಿದ್ದಾರೆ. ಡಬಲ್ ಎಂಜಿನ್ ಅಲ್ಲ ಡಬಲ್ ನಿಲುವಿನ ಪಕ್ಷ ಎಂದರೆ ಬಿಜೆಪಿ. ನಾವು ಅವರನ್ನ ಟೀಕೆ ಮಾಡಲ್ಲ, ಅವಹೇಳನ ಮಾಡಲ್ಲ. ಏಕೆಂದರೆ ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ.












Click it and Unblock the Notifications