ವಿಮಾನ ನಿಲ್ದಾಣದಿಂದ ಕೆಪಿಸಿಸಿ ಕಚೇರಿಗೆ ಡಿಕೆಶಿ 'ಹೊತ್ತು ಮೆರೆಸಲು' ಏನಿದು ಅಪಸ್ವರ?
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಐವತ್ತು ದಿನಗಳ ತಿಹಾರ್ ಜೈಲುಶಿಕ್ಷೆ ಅನುಭವಿಸಿ, ಈಗ ಜಾಮೀನು ಮೇಲೆ ಬಿಡುಗಡೆಗೊಂಡಿರುವ, ಹಿರಿಯ ಮತ್ತು ಪ್ರಭಾವೀ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್, ಶನಿವಾರ (ಅ 26) ಬೆಂಗಳೂರಿಗೆ ಆಗಮಿಸಲಿದ್ದಾರೆ.
ಈಗ ದೆಹಲಿಯಲ್ಲಿರುವ ಡಿಕೆಶಿ, ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಈಗಾಗಲೇ ಭೇಟಿಯಾಗಿದ್ದಾರೆ. ಬಿಡುಗಡೆಗೊಂಡ ನಂತರ, ಡಿಕೆಶಿ ಮುಂದಿನ ನಡೆ ಏನಿರಬಹುದು ಎನ್ನುವುದರ ಬಗ್ಗೆ ಕುತೂಹಲವಿತ್ತು.
ವಕೀಲರ ಬಳಿ ಏನು ಮಾತಾಡಬೇಕು, ಮಾತಾಡಬಾರದು ಎನ್ನುವುದರ ಬಗ್ಗೆ ಚರ್ಚಿಸಿ, ನಂತರ ಮಾತನಾಡುವುದಾಗಿ ಹೇಳಿರುವ ಡಿಕೆಶಿಯವರಿಂದ, ಇದುವರೆಗೆ ಯಾವುದೇ ಆಕ್ರಮಣಕಾರಿ ಧೋರಣೆ ಕಂಡು ಬಂದಿಲ್ಲ.
ಈ ನಡುವೆ, ಬಿಡುಗಡೆಗೊಂಡ ಮೂರು ದಿನಗಳ ನಂತರ ಡಿಕೆಶಿ, ಬೆಂಗಳೂರಿಗೆ ಶನಿವಾರ ಮಧ್ಯಾಹ್ನದೊತ್ತಿಗೆ ತಲುಪಲಿದ್ದಾರೆ. ಡಿಕೆಶಿಗೆ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ಕೋರಲು ನಿರ್ಧರಿಸಲಾಗಿದೆ. ಆದರೆ, ಮೆರವಣಿಗೆಯಲ್ಲಿ ಕರೆದುಕೊಂಡು ಬರಲು ವಿರೋಧವೂ ಇದೆ ಎನ್ನುವ ಮಾತಿದೆ.

ಡಿ.ಕೆ.ಶಿವಕುಮಾರ್ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ
ಮಧ್ಯಾಹ್ನ 2.30ಸುಮಾರಿಗೆ ಡಿ.ಕೆ.ಶಿವಕುಮಾರ್ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಸದ್ಯಕ್ಕಿರುವ ಮಾಹಿತಿಯ ಪ್ರಕಾರ, ಸುಮಾರು 30-40ಸಾವಿರ ಡಿಕೆಶಿ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಿದ್ದಾರೆ. ಇದಕ್ಕೆ ಬೇಕಾಗಿರುವ ಪೂರ್ವತಯಾರಿ ಈಗಾಗಲೇ ನಡೆದಿದೆ.

ಕೆಪಿಸಿಸಿಯ ಒಂದು ಬಣ
ವಿಮಾನ ನಿಲ್ದಾಣದಿಂದ, ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿವರೆಗೂ ಅವರನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಬರಲು ಕೆಪಿಸಿಸಿಯ ಒಂದು ಬಣ ಸಜ್ಜಾಗಿದೆ. ವಿಮಾನ ನಿಲ್ದಾಣದಿಂದ, ಕೆಪಿಸಿಸಿ ಕಚೇರಿಗೆ ಬಂದು, ಡಿಕೆಶಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮವಿದೆ. ಇದಾದ ನಂತರ, ಡಿಕೆಶಿ, ತಮ್ಮ ಮನೆಯಲ್ಲಿ ಹಲವು ಪೂಜೆಗಳನ್ನು ಇಟ್ಟುಕೊಂಡಿದ್ದಾರೆ.

ರೋಡ್ ಶೋ ಮೂಲಕ ಡಿಕೆಶಿಯನ್ನು ಕರೆತರಲು ಪಕ್ಷದಲ್ಲೇ ಅಪಸ್ವರ
ರೋಡ್ ಶೋ ಮೂಲಕ ಡಿಕೆಶಿಯನ್ನು ಕರೆತರಲು ಪಕ್ಷದಲ್ಲೇ ಅಪಸ್ವರವಿದೆ ಎನ್ನುವ ಮಾತಿದೆ. ವಿಮಾನ ನಿಲ್ದಾಣದಿಂದ, ಕೆಪಿಸಿಸಿ ಕಚೇರಿಯವರೆಗೆ ರೋಡ್ ಶೋ ಮಾಡಿಕೊಂಡು ಬಂದರೆ, ಜನರಿಗೆ ತಪ್ಪು ಸಂದೇಶ ಹೋಗುವ ಸಾಧ್ಯತೆಯಿದೆ. ಜೊತೆಗೆ, ಸಾರ್ವಜನಿಕರಿಗೆ ಇದರಿಂದ ತೊಂದರೆಯಾಗುತ್ತದೆ. ಟ್ರಾಫಿಕ್ ಸಮಸ್ಯೆಯಾಗುತ್ತದೆ ಎನ್ನುವುದು ಇವರ ಅಭಿಪ್ರಾಯ.

ಜಾರಿ ನಿರ್ದೇಶನಾಯಲ ಸುಪ್ರೀಂಕೋರ್ಟ್ ಕದ ತಟ್ಟಿದೆ
ಜೊತೆಗೆ, ಡಿಕೆಶಿ ಅಕ್ರಮ ಹಣ ವರ್ಗಾವಣೆ ಪ್ರಕರಣದಿಂದ ಹೊರಬಂದಿಲ್ಲ. ಇವರಿಗೆ ಬೇಲ್ ಸಿಕ್ಕಿರುವುದಷ್ಟೇ..ಅಲ್ಲದೇ, ಜಾರಿ ನಿರ್ದೇಶನಾಯಲ ಸುಪ್ರೀಂಕೋರ್ಟ್ ಕದ ತಟ್ಟಿದೆ. ಇಂತಹ ಸಮಯದಲ್ಲಿ ಅದ್ದೂರಿ ರೋಡ್ ಶೋ ನಡೆಸಿದರೆ, ಪಕ್ಷದ ವರ್ಚಸ್ಸಿಗೆ ಧಕ್ಕೆ ಬರಬಹುದು. ಹಾಗಾಗಿ ರೋಡ್ ಶೋ ಬೇಡ ಎನ್ನುವುದು ಪಕ್ಷದೊಳಗೆ ಕೆಲವರ ವಾದ.

ಡಿಕೆಶಿ 'ಹೊತ್ತು ಮೆರೆಸಲು' ಏನಿದು ವಿರೋಧ?
11.50ಕ್ಕೆ ದೆಹಲಿಯಿಂದ ಹೊರಟು ಡಿ.ಕೆ.ಶಿವಕುಮಾರ್ ಬೆಂಗಳೂರಿಗೆ ಆಗಮಿಸಲಿದ್ದಾರೆ. ವಿಮಾನ ನಿಲ್ದಾಣದಲ್ಲಿ ಅವರನ್ನು ಸ್ವಾಗತ ಮಾಡೋಣ, ಆದರೆ ರೋಡ್ ಶೋ ಬೇಕಿದ್ದಲ್ಲಿ, ಅವರ ಅಭಿಮಾನಿಗಳು ವೈಯಕ್ತಿಕವಾಗಿ ನಡೆಸುವ ಹಾಗಿದ್ದರೆ ನಡೆಸಲಿ, ಪಕ್ಷದ ವತಿಯಿಂದ ಬೇಡ ಎನ್ನುವುದು ಕೆಲವರ ನಿಲುವು. ಕೆಪಿಸಿಸಿ, ಕೊನೆ ಹಂತದಲ್ಲಿ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications