ಖಾಸಗಿ ನ್ಯಾಯಬೆಲೆ ಅಂಗಡಿ ಬಂದ್, ಇತರ ಜಿಲ್ಲಾ ಸುದ್ದಿ
ಬೆಂಗಳೂರು, ನ.11: ಪಡಿತರ ವಿತರಣೆಯಲ್ಲಿ ಆಗುತ್ತಿರುವ ಲೋಪಗಳನ್ನು ಸರಿಪಡಿಸಿಲು ಖಾಸಗಿ ನ್ಯಾಯಬೆಲೆ ಅಂಗಡಿಗಳನ್ನು ರದ್ದುಗೊಳಿಸಿ, ಸ್ಥಳೀಯ ಅಂಗಡಿಗಳ ಮೂಲಕವೇ ಪಡಿತರ ವಿತರಣೆ ವ್ಯವಸ್ಥೆ ಒದಗಿಸಲು ಸರ್ಕಾರ ಚಿಂತನೆ ನಡೆಸಿದ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಖಾಸಗಿ ವ್ಯಕ್ತಿಗಳ ಕೈಯಲ್ಲಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ಸಮರ್ಪಕವಾಗಿ ಪಡಿತರ ಪೂರೈಕೆ ಆಗುತ್ತಿಲ್ಲ. ಕಮಿಷನ್ ಹೆಚ್ಚಳ ಮುಂತಾದ ಬೇಡಿಕೆ ಮುಂದಿಟ್ಟುಕೊಂಡು ಪದೇ-ಪದೇ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಜನರಿಗೆ ತೊಂದರೆ ಆಗುತ್ತಿದೆ ಎಂದರು.
ಛತ್ತಿಸ್ ಗಢ ರಾಜ್ಯದಲ್ಲಿ ಖಾಸಗಿ ನ್ಯಾಯಬೆಲೆ ಅಂಗಡಿಗಳನ್ನು ರದ್ದುಗೊಳಿಸಿ, ಸ್ಥಳೀಯ ಸಂಸ್ಥೆಗಳ ಮೂಲಕ ಪಡಿತರ ವಿತರಣೆ ಮಾಡಲಾಗುತ್ತಿದೆ. ರಾಜ್ಯದಲ್ಲೂ ಇದೇ ಮಾದರಿ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದ್ದು, ಜನಪ್ರತಿನಿಧಿಗಳು ಮತ್ತು ತಜ್ಞರ ಸಲಹೆ ಪಡೆದು ಇದನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಮತ್ತು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಆಯಾ ಆಹಾರ ವಿಭಾಗದ ಮೂಲಕವೇ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಆಲೋಚಿಸಲಾಗುತ್ತಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು. (ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು)

ಖಾಸಗಿ ನ್ಯಾಯಬೆಲೆ ಅಂಗಡಿಗಳು ಬಂದ್
ಪಡಿತರ ವಿತರಣೆಯಲ್ಲಿ ಆಗುತ್ತಿರುವ ಲೋಪಗಳನ್ನು ಸರಿಪಡಿಸಿಲು ಖಾಸಗಿ ನ್ಯಾಯಬೆಲೆ ಅಂಗಡಿಗಳನ್ನು ರದ್ದುಗೊಳಿಸಿ, ಸ್ಥಳೀಯ ಅಂಗಡಿಗಳ ಮೂಲಕವೇ ಪಡಿತರ ವಿತರಣೆ ವ್ಯವಸ್ಥೆ ಒದಗಿಸಲು ಸರ್ಕಾರ ಚಿಂತನೆ ನಡೆಸಿದ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಖಾಸಗಿ ವ್ಯಕ್ತಿಗಳ ಕೈಯಲ್ಲಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ಸಮರ್ಪಕವಾಗಿ ಪಡಿತರ ಪೂರೈಕೆ ಆಗುತ್ತಿಲ್ಲ. ಕಮಿಷನ್ ಹೆಚ್ಚಳ ಮುಂತಾದ ಬೇಡಿಕೆ ಮುಂದಿಟ್ಟುಕೊಂಡು ಪದೇ-ಪದೇ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಜನರಿಗೆ ತೊಂದರೆ ಆಗುತ್ತಿದೆ ಎಂದರು.

ಜೀವರಾಜ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
ಅತ್ಯಾಚಾರ ಆರೋಪ ಎದುರಿಸುತ್ತಿರುವ ಶೃಂಗೇರಿ ಕ್ಷೇತ್ರದ ಬಿಜೆಪಿ ಶಾಸಕ ಜೀವರಾಜ್ ಅವರನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿ ಸೋಮವಾರ ಚಿಕ್ಕಮಗಳೂರಿನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಹನುಮಂತಪ್ಪ ವೃತ್ತದಲ್ಲಿ ನೂರಾರು ಕಾರ್ಯರ್ತರು ಜೀವರಾಜ್ ಅವರಿಗೆ ಧಿಕ್ಕಾರ ಕೂಗುತ್ತಾ, ಅತ್ಯಾಚಾರ ಆರೋಪ ಎದುರಿಸುತ್ತಿರುವ ಅವರನ್ನು ತಕ್ಷಣ ಬಂಧಿಸಿ ವಿಚಾರಣೆ ನಡೆಸಬೇಕೆಂದು ಆಗ್ರಹಿಸಿದರು.

ತಮಿಳುನಾಡಿನ ಜಾತ್ರೆಗೆ ಕನ್ನಡ ಆಮಂತ್ರಣ
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಗಡಿಯಂಚಿನ ತಮಿಳುನಾಡಿನಲ್ಲಿರುವ ಗೇರುಮಾಳಂ ಗ್ರಾಮದಲ್ಲಿ ನ.14ರಿಂದ 6 ದಿನಗಳ ಕಾಲ ಜಡೇರುದ್ರ, ಕುಂಭೇಶ್ವರ, ನಡುಕೇರಿ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ನಡೆಯಲಿದೆ. ತಮಿಳುನಾಡಿನಲ್ಲಿ ಜರುಗುವ ಈ ಜಾತ್ರೆಗೆ ಕನ್ನಡದಲ್ಲೂ ಆಹ್ವಾನ ಪತ್ರಿಕೆ ಮುದ್ರಿಸಲಾಗಿದೆ. ಗೇರುಮಾಳಂ ಗ್ರಾಮ ತಮಿಳುನಾಡಿನ ವ್ಯಾಪ್ತಿಗೆ ಒಳಪಟ್ಟಿದ್ದರೂ ಕನ್ನಡಿಗರೇ ಹೆಚ್ಚಾಗಿ ಇಲ್ಲಿ ವಾಸಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡಿಗರು ಮತ್ತು ತಮಿಳರು ಪ್ರತಿವರ್ಷ ಒಗ್ಗೂಡಿ ಜಾತ್ರೆ ಆಚರಿಸುತ್ತಾರೆ. ಆದ್ದರಿಂದ ಕನ್ನಡ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಲಾಗುತ್ತದೆ. ಗ್ರಾಮದ ಶ್ರೀ ನಡುಕೇರಿ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ನ.14ರಂದು ಎಣ್ಣೆ ಮಜ್ಜನ ಸೇವೆಯೊಂದಿಗೆ ಜಾತ್ರೆ ಆರಂಭವಾಗಲಿದೆ.

ಮತ್ತೆ ಮರಾಠಿಗಳ ಖ್ಯಾತೆ
ಗಡಿ ವಿಷಯದಲ್ಲಿ ಸದಾ ತಗಾದೆ ತೆಗೆಯುವ ಎಂಇಎಸ್ ಬೆಳಗಾವಿ ಹೃದಯ ಭಾಗವಾದ ಖಡೇ ಬಜಾರ್ ನಲ್ಲಿ ಸಂಯುಕ್ತ ಮಹಾರಾಷ್ಟ್ರ ಚೌಕ್ ಎಂದು ಕಟ್ಟೆ ನಿರ್ಮಿಸಿ ಉದ್ಧಟತನ ಪ್ರದರ್ಶಿಸಿದೆ. ಅಷ್ಟೇ ಅಲ್ಲ, ಈ ಕಟ್ಟೆ ಮೇಲೆ ಭಗವಾಧ್ವಜವನ್ನು ಹಾರಿಸುವ ಮೂಲಕ ಕನ್ನಡಿಗರನ್ನು ಕೆರಳಿಸಿದೆ. ಬೆಳಗಾವಿ ಮಹಾನಗರ ಪಾಲಿಕೆಯಿಂದ ಯಾವುದೇ ಅನುಮತಿ ಪಡೆಯದೆ ಎಂಇಎಸ್ ಅನಧಿಕೃತ ಕಟ್ಟೆ ನಿರ್ಮಾಣ ಮಾಡಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಎಂಇಎಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ. ಆದರೆ, ಬೆಳಗಾವಿ ಪಾಲಿಕೆ ಹಾಗೂ ಜಿಲ್ಲಾಡಳಿತ ಮಾತ್ರ ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ.

ರೈತನ ಮೇಲೆ ಕರಡಿ ದಾಳಿ
ಶೇಂಗಾ ಬೆಳೆ ಕಾವಲು ಕಾಯುತ್ತಿದ್ದ ರೈತನ ಮೇಳೆ ಕರಡಿ ದಾಳಿ ಮಾಡಿ, ಆತನನ್ನು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹಾಗಲವಾಡಿ ಗ್ರಾಮದಲ್ಲಿ ನಡೆದಿದೆ. ಚಿತ್ರಲಿಂಗಪ್ಪ ಕರಡಿ ದಾಳಿಯಿಂದ ಗಾಯಗೊಂಡ ರೈತ, ಸೋಮವಾರ ಮುಂಜಾನೆ ಮೂರು ಗಂಟೆಯ ಸಮಯದಲ್ಲಿ ಕರಡಿ ದಾಳಿ ನಡೆಸಿದ್ದು, ಬೆಳಗ್ಗೆ ಕುಟುಂಬದವರು ಹೋಲಕ್ಕೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಚಿತ್ರಲಿಂಗಪ್ಪ ಅವರನ್ನು ಗುಬ್ಬಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಾಸ್ಟೆಲ್ ಸಮಸ್ಯೆ ಡಿಸಿ ಸಭೆ
ಕೋಲಾರ ಜಿಲ್ಲೆಯಲ್ಲಿ ಸರ್ಕಾರಿ ಹಾಸ್ಟೆಲ್ ಗಳ ಕುರಿತು ಜಿಲ್ಲಾಧಿಕಾರಿ ಸೋಮವಾರ ಸಭೆ ನಡೆಸಿದೆರು. ಸಭೆಯಲ್ಲಿ ಹಾಸ್ಟೆಲ್ ಗಳಿಗೆ ಆಹಾರ ಸರಬರಾಜು ಮಾಡುವ ಗುತ್ತಿಗೆ ಪಡೆದವರು ಉಪ ಗುತ್ತಿಗೆ ನೀಡುವಂತಿಲ್ಲ ಎಂದು ಡಿಸಿ ಸೂಚನೆ ನೀಡಿದರು. ಆಹಾರ ಧಾನ್ಯಗಳನ್ನು ಸಂಗ್ರಹಿಸುವ ಗೋಡೌನ್ ಗಳಿಗೆ ಕಡ್ಡಾಯವಾಗಿ ಸಿಸಿಟಿವಿ ಆಳವಡಿಸಬೇಕು ಎಂದು ಆದೇಶಿಸಿದರು. ಸರ್ಕಾರಿ ಹಾಸ್ಟೆಲ್ ವಿದ್ಯಾರ್ಥಿಗಳ ದೂರುಗಳನ್ನು ಆಲಿಸಿದ್ದ ಜಿಲ್ಲಾಧಿಕಾರಿ ಈ ಸಭೆ ನಡೆಸಿದ್ದಾರೆ. ಜಿಲ್ಲೆಯ ಎಲ್ಲಾ ಹಾಸ್ಟೆಲ್ ಗಳ ವಾರ್ಡನ್ ಮತ್ತು ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.












Click it and Unblock the Notifications