ಮಾರ್ಚ್ 3ರಿಂದ ಕೊಟ್ಟೂರು-ಹರಿಹರ ರೈಲು ಸಂಚಾರ
ಬಳ್ಳಾರಿ. ಫೆ.24 : ಅಂತೂ ಇಂತು ಕೊಟ್ಟೂರು-ಹರಿಹರ ರೈಲು ಮಾರ್ಗದ ಓಡಾಟಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಎರಡು ದಶಕಗಳಿಂದ ಕೊಟ್ಟೂರು ರೈಲು ಮಾರ್ಗಕ್ಕೆ ಹಿಡಿದ ಗ್ರಹಣ ಬಿಟ್ಟಿದ್ದು, ಮಾರ್ಚ್ 3ರಿಂದ ಮಾರ್ಗದಲ್ಲಿ ಸಂಚಾರ ಆರಂಭವಾಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕಳೆದವಾರ ಕೊಟ್ಟೂರು-ಹರಿಹರ ರೇಲ್ವೆ ಮಾರ್ಗದ ಪ್ರಾಯೋಗಿಕ ಪರೀಕ್ಷೆ ನಡೆಸಿದ್ದ ರೈಲ್ವೆ ಸಚಿವಾಲಯದ ತಂಡ, ಸಾರ್ವಜನಿಕ ಸಂಚಾರಕ್ಕೆ ಹಸಿರು ನಿಶಾನೆ ತೋರಿತ್ತು. ಆದ್ದರಿಂದ ಮಾರ್ಗದಲ್ಲಿ ರೈಲು ಸಂಚಾರ ಆರಂಭಕ್ಕೆ ಸಿದ್ಧತೆ ಆರಂಭಿಸಲಾಗಿದ್ದು, ಮಾರ್ಚ್ 3ರಂದು ಸಾರ್ವಜನಿಕರಿಗೆ ಮುಕ್ತವಾಲಿದೆ.
ರೈಲ್ವೆ ಸಚಿವಾಲಯದ ತಂಡ ಕೊಟ್ಟೂರು- ಹರಿಹರ ರೈಲು ಮಾರ್ಗ 60 ಕಿ.ಮೀ. ವೇಗದಲ್ಲಿ ಸಂಚಾರಕ್ಕೆ ಪೂರ್ಣ ಪ್ರಮಾಣದಲ್ಲಿ ಯೋಗ್ಯವಾಗಿದೆ ಎಂದು ಹೇಳಿತ್ತು. ಫಿಟ್ ಫಾರ್ ಟು ರನ್ ಎ ಟ್ರೇನ್ ಎಂಬ ಉದ್ಘೋಷವನ್ನು ಹೊರಡಿಸಿ ಕೊಟ್ಟೂರು- ಹರಿಹರ ರೈಲು ಮಾರ್ಗವನ್ನು ಸಾರ್ವಜಕ ಸಂಚಾರಕ್ಕೆ ಮುಕ್ತವಾಗಿಲು ಒಪ್ಪಿಗೆ ನೀಡಿತ್ತು.
ಕೊಟ್ಟೂರು- ಹರಿಹರ ರೈಲು ಮಾರ್ಗವನ್ನು ಮಾರ್ಚ್ 3ರಂದು ಉದ್ಘಾಟಿಸಲಾಗುವುದು ಎಂದು ಬಳ್ಳಾರಿ ಮಾಜಿ ಸಂಸದ ಕೆ.ಸಿ. ಕೊಂಡಯ್ಯ ಹೇಳಿದ್ದಾರೆ. ಈ ಕುರಿತು ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಸಹ ಫೆ.24ರಂದು ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದು, ಮಾರ್ಚ್ 3ರಂದು ಉದ್ಘಾಟನೆ ಖಚಿತ ಎಂದು ತಿಳಿಸಿದ್ದಾರೆ. [ಕರ್ನಾಟಕದ ಇತರ ಜಿಲ್ಲಾಸುದ್ದಿಗಳು]

ಕೊಟ್ಟುರು-ಹರಿಹರ ರೈಲು ಸಂಚಾರ ಮಾರ್ಚ್ 3ಕ್ಕೆ
ಎರಡು ದಶಕಗಳಿಂದ ಕೊಟ್ಟೂರು-ಹರಿಹರ ರೈಲು ಮಾರ್ಗಕ್ಕೆ ಹಿಡಿದ ಗ್ರಹಣ ಬಿಟ್ಟಿದ್ದು, ಮಾರ್ಚ್ 3ರಿಂದ ಮಾರ್ಗದಲ್ಲಿ ಸಂಚಾರ ಆರಂಭವಾಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಕಳೆದ ವಾರ ಕೊಟ್ಟೂರು-ಹರಿಹರ ರೇಲ್ವೆ ಮಾರ್ಗದ ಪ್ರಾಯೋಗಿಕ ಪರೀಕ್ಷೆ ನಡೆಸಿದ್ದ ರೈಲ್ವೆ ಸಚಿವಾಲಯದ ತಂಡ 60 ಕಿ.ಮೀ ವೇಗದಲ್ಲಿ ರೈಲು ಸಂಚಾರ ಆರಂಭಿಸಬಹುದು ಎಂದು ಹೇಳಿತ್ತು. ಆದ್ದರಿಂದ ಮಾರ್ಚ್ 3ರಂದು ಸಾರ್ವಜನಿಕ ಸೇವೆಗೆ ಮಾರ್ಗವನ್ನು ಉದ್ಘಾಟಿಸಲಾಗುವುದು ಎಂದು ಖರ್ಗೆ ತಿಳಿಸಿದ್ದಾರೆ.

ಉಪವಾಸ ಸತ್ಯಾಗ್ರಹ ಆರಂಭ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಉತ್ತರ ಕರ್ನಾಟಕ ಕಲ್ಲು ಗಣಿ ಮಾಲೀಕರ ಸಂಘ ಹಾಗೂ ಗ್ರಾನೈಟ್ ಕಾರ್ಖಾನೆ ಮಾಲೀಕರ ಸಂಘದ ಪದಾಧಿಕಾರಿಗಳು, ಕೂಲಿಕಾರರು ಗಣಿಗಾರಿಕೆ ಮತ್ತು ಕಟಿಂಗ್ ಮಷಿನ್ಗಳನ್ನು ಬಂದ್ ಮಾಡಿ ಸೋಮವಾರದಿಂದ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಬಸವೇಶ್ವರ ವೃತ್ತದಲ್ಲಿ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಕಲ್ಲು ಗಣಿಗಾರಿಕೆ ವಿಷಯದಲ್ಲಿ ರಾಜ್ಯ ಸರ್ಕಾರ ಇಬ್ಬಗೆ ನೀತಿ ಅನುಸರಿಸುತ್ತಿದೆ. ಇದನ್ನು ಏಕರೂಪವಾಗಿ ಜಾರಿಗೊಳಿಸಬೇಕು ಮುಂತಾದ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಉಪವಾಸ ನಡೆಸಲಾಗುತ್ತಿದೆ.

ರಾಯಲ್ ಟ್ರೋಫಿ ಹುಬ್ಬಳ್ಳಿ ಪಾಲು
ಕೆಎಎಸ್ ಸಿಎ ಸಹಯೋಗದಲ್ಲಿ ಬೀದರ್ ಜಿಲ್ಲೆಯ ರಾಯಲ್ ಕ್ರಿಕೆಟ್ ಕ್ಲಬ್ ಆಯೋಜಿಸಿದ್ದ ಅಖಿಲ ಭಾರತ ಮಟ್ಟದ ರಾಯಲ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎರಡನೇ ಬಾರಿಗೆ ಹುಬ್ಬಳ್ಳಿ ದಕ್ಷಿಣ ಪಶ್ಚಿಮ ರೈಲ್ವೆ ವಲಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಭರ್ಜರಿ ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ದಕ್ಷಿಣ ಪಶ್ಚಿಮ ರೇಲ್ವೆ ತಂಡ ಸೊಲ್ಲಾಪುರ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಭಾನುವಾರ ಬೆಳಗ್ಗೆ ನಗರದ ನೆಹರು ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯಾವಳಿಯಲ್ಲಿ ಮಹಾರಾಷ್ಟ್ರದ ಸೊಲ್ಲಾಪುರ ತಂಡವನ್ನು 48.2 ಓವರ್ಗಳಲ್ಲಿ 246 ರನ್ಗಳಿಗೆ ಮಾತ್ರ ಕಟ್ಟಿ ಹಾಕಿದ ರೈಲ್ವೆ ವಲಯ ಗೆಲುವು ಸಾಧಿಸಿತು. ಸೊಲ್ಲಾಪುರ ತಂಡದ ನಿಖಿಲ್ ಮಹಾದಾಸ್ 73 ಎಸೆತಗಳಲ್ಲಿ 14 ಬೌಂಡರಿ, 2 ಸಿಕ್ಸರ್ಗಳೊಂದಿಗೆ ಶತಕ ಬಾರಿಸಿದರೆ, ಚೇತನ್ ನರಾಲ್ 52 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 50 ರನ್ ಗಳಿಸಿದರು. ಹುಬ್ಬಳ್ಳಿ ರೇಲ್ವೆ ತಂಡದ ಪರವಾಗಿ ಶರದ್ ಬಾಬು 9.2 ಓವರ್ಗಳಲ್ಲಿ 31 ರನ್ ನೀಡಿ 5 ವಿಕೆಟ್ ಹಾಗೂ ಧನಂಜಯ್, ವಿನಾಯಕ ಗುಡಿ, ರಾಜದೇವ್ ಶುಕ್ಲಾ ಹಾಗೂ ಶಶಿಧರ್ ಸಿಂಧೆ ತಲಾ ಒಂದು ವಿಕೆಟ್ ಪಡೆದರು.

ಕೊಪ್ಪಳಕ್ಕೆ 28ರಂದು ಸಿಎಂ ಸಿದ್ದರಾಮಯ್ಯ ಭೇಟಿ
ಸಿಎಂ ಸಿದ್ದರಾಮಯ್ಯ ಫೆ.28ರಂದು ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಯಲಬುರ್ಗಾ ಮತ್ತು ಕೊಪ್ಪಳ ತಾಲೂಕುಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಸಿಎಂ ಸಿದ್ದರಾಮಯ್ಯ ಫೆ. 28ರಂದು ಆಗಮಿಸಲಿದ್ದು, ಅಂದು ಮಧ್ಯಾಹ್ನ ಯಲಬುರ್ಗಾದಲ್ಲಿ ಗದಗ-ವಾಡಿ ಹೊಸ ರೈಲು ಮಾರ್ಗದ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸುವರು. ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವರಾದ ಆಸ್ಕರ್ ಫರ್ನಾಂಡೀಸ್, ವೀರಪ್ಪ ಮೊಯ್ಲಿ, ಉನ್ನತ ಶಿಕ್ಷಣ -ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಮುಂತಾದವರು ಸಿಎಂ ಜೊತೆ ಆಗಮಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ದಾವಣಗೆರೆಯಲ್ಲಿ ಮತ್ತೆ ಈಗ ಕಾಟ
ಗ್ರಾಮದಲ್ಲಿರುವ ಕೋಳಿ ಫಾರಂ ಸ್ಥಳಾಂತರ ಮಾಡದಿದ್ದರೆ ಲೋಕಸಭೆ ಚುನಾವಣೆ ಬಹಿಷ್ಕರಿಸುವುದಾಗಿ ನೊಣಗಳ ಕಾಟದಿಂದ ಹೈರಾಣಾಗಿರುವ ದಾವಣಗೆರೆಯ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ. ಬೆಳವನೂರು ಮತ್ತು ಹನುಮಂತಪುರ ಗ್ರಾಮಸ್ಥರು ಕೋಳಿ ಫಾರಂಗಳಿಂದ ನೊಣಗಳ ಕಾಟ ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ. ಗ್ರಾಮದಲ್ಲಿ ಸಿಹಿ ಅಡುಗೆ ಮಾಡಿದರೆ, ನೊಣದ ಸೈನ್ಯವೇ ಮುತ್ತಿಕೊಳ್ಳುತ್ತದೆ. ನೊಣಗಳ ಕಾಟದಿಂದ ಹಬ್ಬಹರಿದಿನ ಮಾಡುವಂತೆಯೇ ಇಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.












Click it and Unblock the Notifications