ಚಾಮರಾಜನಗರ ಬಹಿಷ್ಕಾರ ಪ್ರಕರಣಕ್ಕೆ ಮರುಜೀವ
ಚಾಮರಾಜನಗರ, ಜ.24 : ಚಾಮರಾಜನಗರದಲ್ಲಿ ನಡೆದ ಸಾಮಾಜಿಕ ಬಹಿಷ್ಕಾರ ಪ್ರಕರಣಕ್ಕೆ ಮರುಜೀವ ಬಂದಿದ್ದು, ಘಟನೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯ ಮಾನವ ಹಕ್ಕು ಆಯೋಗ ಮತ್ತು ಮುಖ್ಯಮಂತ್ರಿಗಳ ಅಧೀನ ಕಾರ್ಯದರ್ಶಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಆದೇಶ ನೀಡಿದ್ದಾರೆ. ಇದರಿಂದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಹೊಸ ಸಂಕಷ್ಟ ಆರಂಭವಾಗಿದೆ.
ಗ್ರಾಮ ಪಂಚಾಯಿತಿ ಭ್ರಷ್ಟ ಗ್ರಾಮ ಲೆಕ್ಕಿಗನ ಬಗ್ಗೆ ಲೋಕಾಯುಕ್ತರಿಗೆ ಮಾಹಿತಿ ನೀಡಿದ ಅವರನ್ನು ಹಿಡಿದುಕೊಟ್ಟಿದ್ದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯ ಮಾನವ ಹಕ್ಕುಗಳ ಆಯೋಗ ಮತ್ತು ಮುಖ್ಯಮಂತ್ರಿಗಳ ಅಧೀನ ಕಾರ್ಯದರ್ಶಿ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಗುರುವಾರ ಸೂಚನೆ ನೀಡಿದ್ದಾರೆ.
ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ವೈ.ಕೆ.ಮೋಳೆಯ ಶಿವಣ್ಣ ಎಂಬಾತ ಕಳೆದ 2013ರಲ್ಲಿ ಸಾಮಾಜಿಕ ಬಹಿಷ್ಕಾರ ಹಾಕಿರುವ ಬಗ್ಗೆ ರಾಜ್ಯ ಮಾನವ ಹಕ್ಕುಗಳ ಆಯೋಗ ಮತ್ತು ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದರು. ಈ ಆಧಾರದ ಮೇಲೆ ತನಿಖೆ ನಡೆಸಿ ನಾಲ್ಕು ವಾರದೊಳಗೆ ವರದಿ ನೀಡುವಂತೆ ಆದೇಶ ನೀಡಲಾಗಿದೆ.
ಪ್ರಕರಣದ ವಿವರ : ಯಳಂದೂರು ತಾಲೂಕಿನ ವೈ.ಕೆ. ಮೋಳೆ ಗ್ರಾಮದ ಶಿವಣ್ಣ ಎಂಬವರ ಕುಟುಂಬ ಸಾಮಾಜಿಕ ಬಹಿಷ್ಕಾರಕ್ಕೊಳಗಾಗಿದ್ದು, 2010ರಲ್ಲಿ ಶಿವಣ್ಣ ತನ್ನ ನಿವೇಶನದ ಅಳತೆ ಮಾಡಿಸಲು ಮಾಡಿಸಲು ಗ್ರಾಮ ಪಂಚಾಯಿತಿಗೆ ತೆರಳಿದ್ದರು. ಆಗ ಗ್ರಾಮ ಲೆಕ್ಕಿ ನಾಗರಾಜ್ ಶಿವಣ್ಣನಿಂದ ಅವರಿಂದ ರೂ. 2 ಸಾವಿರ ಲಂಚ ಕೇಳಿದ್ದರು.
ಶಿವಣ್ಣ ಈ ಕುರಿತು ಲೋಕಾಯುಕ್ತರಿಗೆ ದೂರು ನೀಡಿದ್ದರು. 2010ರ ಜು.17ರಂದು ನಾಗರಾಜ್ ಅವರನ್ನು ಲಂಚದ ಹಣ ಪಡೆಯುವಾಗ ಪೊಲೀಸರು ಬಂಧಿಸಿದ್ದರು. ಆದರೆ, ತನ್ನದೇ ಸಮುದಾಯದವನೊಬ್ಬನನ್ನು ಲೋಕಾಯುಕ್ತರಿಗೆ ಹಿಡಿಸಿ ನ್ಯಾಯಾಲಯದ ಮೆಟ್ಟಿಲು ಹತ್ತುವಂತೆ ಮಾಡಿದ್ದಕ್ಕೆ ಶಿವಣ್ಣ ಅವರ ಕುಟುಂಬಕ್ಕೆ ಉಪ್ಪಾರ ಸಮುದಾಯ ಸಾಮಾಜಿಕ ಬಹಿಷ್ಕಾರ ಹಾಕಿತ್ತು. ಬಹಿಷ್ಕಾರ ಹಾಕಲು ಶಾಸಕ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಕಾರಣ ಎಂದು ಶಿವಣ್ಣ ದೂರಿನಲ್ಲಿ ಆರೋಪಿಸಿದ್ದಾರೆ. [ಕರ್ನಾಟಕದ ಇತರ ಜಿಲ್ಲಾಸುದ್ದಿಗಳು]

ಶಾಸಕರಿಗೆ ತನಿಖೆಯ ಸಂಕಷ್ಟ
ಚಾಮರಾಜನಗರದ ಯಳಂದೂರು ತಾಲೂಕಿನ ವೈ.ಕೆ. ಮೋಳೆ ಗ್ರಾಮದ ನಡೆದ ಸಾಮಾಜಿಕ ಬಹಿಷ್ಕಾರ ಪ್ರಕರಣಕ್ಕೆ ಮರುಜೀವ ಬಂದಿದ್ದು, ಘಟನೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯ ಮಾನವ ಹಕ್ಕು ಆಯೋಗ ಮತ್ತು ಮುಖ್ಯಮಂತ್ರಿಗಳ ಅಧೀನ ಕಾರ್ಯದರ್ಶಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಆದೇಶ ನೀಡಿದ್ದಾರೆ. ಇದರಿಂದ ಬಹಿಷ್ಕಾರಕ್ಕೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಹೊಸ ಸಂಕಷ್ಟ ಎದುರಾಗಿದೆ

ಚಿತ್ರದುರ್ಗದಲ್ಲಿ ತೀವ್ರಗೊಂಡ ರೈತರ ಹೋರಾಟ
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕು ಬಿ.ದುರ್ಗ ಹೋಬಳಿ ಮಲ್ಲೇನಹಳ್ಳಿ ಗ್ರಾಮದಲ್ಲಿ ಗೋಮಾಳ ತೆರವು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ಸುಮಾರು 34 ವರ್ಷಗಳಿಂದಲೂ ಗೋಮಾಳದಲ್ಲಿ ಬಗರ್ಹುಕುಂ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರೈತರು, ಜಮೀನು ತೆರವುಗೊಳಿಸುವಂತೆ ತಹಸೀಲ್ದಾರ್ ನೀಡಿದ ತುರ್ತು ನೋಟಿಸ್ ವಿರೋಧಿಸಿ ಪ್ರತಿಭಟನೆ ಆರಂಭಿಸಿದ್ದಾರೆ. ಮಲ್ಲೇನಹಳ್ಳಿ ಗ್ರಾಮದ ಹರಿಜನರು, ದಲಿತರು, ಕಡುಬಡವರು ಮತ್ತು ರೈತಾಪಿ ಜನರು ಈ ಜಮೀನನಲ್ಲಿ ಸಾಗುವಳಿ ಮಾಡುತ್ತಿದ್ದು, ಏಕಾಏಕಿ ತೆರವು ಮಾಡುವುದು ಸಾಧ್ಯವಿಲ್ಲ ಎಂದು ರೈತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಮಂದೆ ಅಹೋರಾತ್ರಿ ಧರಣಿ
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಭುಜಂಗನಗರದ ರೈತರಿಗೆ ರು. 1.24 ಕೋಟಿ ನಷ್ಟ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜನಸಂಗ್ರಾಮ ಪರಿಷತ್, ಸಂಡೂರು ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿ, ಪ್ರಗತಿಪರ ಸಂಘಟನೆಗಳು ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ. ಸಂಡೂರು ತಾಲೂಕಿನ ಭುಜಂಗನಗರ, ತಾಳೂರು, ವಡ್ಡು, ಜೋಗು, ಬಳ್ಳಾರಿ ತಾಲೂಕಿನ ಚಾಗನೂರು, ಸಿರಿವಾರ, ಲಿಂಗದೇವನಹಳ್ಳಿ, ತೆಗ್ಗಿನ ಬೂದಿಹಾಳ್ ಗ್ರಾಮದ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಜ.26ರಿಂದ ರಾಜ್ಯವ್ಯಾಪಿ ಸ್ವಚ್ಛತಾ ಅಭಿಯಾನ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಾಡಿನ ಭವಿಷ್ಯದ ದೃಷ್ಟಿಯಿಂದ ಮತ್ತು ನಾಡಿನ ಸಾಂಸ್ಕೃತಿಕ ವೈಭವವನ್ನು ಪ್ರವಾಸಿಗರಿಗೆ ತೋರಿಸಲು ಸೂಕ್ತ ವಾತಾವರಣ ನಿರ್ಮಿಸುವ ಉದ್ದೇಶದಿಂದ ರಾಜ್ಯವ್ಯಾಪಿ ನಿರ್ಮಲ ಸಮಾಜ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿದೆ ಜ.26 ರಂದು ಅಭಿಯಾನಕ್ಕೆ ಚಾಲನೆ ದೊರೆಯಲಿದೆ. ಜ.26ರಂದು ಮಧ್ಯಾಹ್ನ 12 ಗಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಅಭಿಯಾನವನ್ನು ಉದ್ಘಾಟಿಸಲಿದ್ದಾರೆ. ಡಾ. ವಿರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ.

ರಂಗವಲ್ಲಿ ತಂಡದಿಂದ ಎರಡು ನಾಟಕ
ರಂಗವಲ್ಲಿ ತಂಡದಿಂದ ಜ.25 ಮತ್ತು 26ರಂದು ಸಂಜೆ 7 ಗಂಟೆಗೆ ಮೈಸೂರು ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ `ನಮ್ಮ ರಂಗವಲ್ಲಿ` ತಂಡದಿಂದ ಎ.ಕೆ. ರಾಮಾನುಜನ್ ಅವರ "ಅಣ್ಣಯ್ಯನ ಮಾನವಶಾಸ್ತ್ರ" ಮತ್ತು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ "ಮಾಯಾಮೃಗ" ಎಂಬ ಎರಡು ನಾಟಕಗಳ ಪ್ರದರ್ಶನವಿದೆ. ಮೊದಲು "ಅಣ್ಣಯ್ಯನ ಮಾನವಶಾಸ್ತ್ರ" ನಂತರ "ಮಾಯಾಮೃಗ" ನಾಟಕಗಳು ಪ್ರದರ್ಶನಗೊಳ್ಳಲಿದೆ. ಈ ಎರಡು ನಾಟಕಗಳು 45 ನಿಮಿಷಗಳ ನಾಟಕಗಳಾಗಿರುತ್ತವೆ.

ಸಕಲೇಶಪುರದಲ್ಲಿ ಗೂಡಂಗಡಿ ತೆರವು
ಸಕಲೇಶಪುರದ ಹಳೆ ಬಸ್ ನಿಲ್ದಾಣದಲ್ಲಿದ್ದ 12 ಪೆಟ್ಟಿಗೆ ಅಂಗಡಿಗಳನ್ನು ಜಿಲ್ಲಾಧಿಕಾರಿ ಆದೇಶದಂತೆ ತೆರವುಗೊಳಿಸಲಾಗಿದೆ. ಹಲವು ವರ್ಷಗಳಿಂದ ತರಕಾರಿ, ತಿಂಡಿ ತಿನಿಸು ಹಣ್ಣು ಹಾಗೂ ಇತರೆ ವ್ಯಾಪಾರ ವಹಿವಾಟು ನಡೆಸಿಕೊಂಡಿದ್ದ ಈ ಅಂಗಡಿಗಳನ್ನು ತೆರವುಗೊಳಿಸಿ, ಈ ಜಾಗದಲ್ಲಿ ಪುರಸಭೆ ಯಿಂದ ವಾಣಿಜ್ಯ ಮಳಿಗೆ ನಿರ್ಮಿಸಲು ಅವಕಾಶ ಮಾಡಿ ಕೊಡುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದರು. ಅದರಂತೆ ಪೆಟ್ಟಿಗೆ ಅಂಗಡಿ ವ್ಯಾಪಾರಿಗಳು ಅಂಗಡಿಗಳನ್ನು ಖಾಲಿ ಮಾಡಿದ್ದರು.

ರೈತರಿಗೆ ಕೆಎಂಎಫ್ ಕೊಡುಗೆ
ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ(ಕೆಎಂಎಫ್) ಉತ್ತರ ಕರ್ನಾಟಕ ಭಾಗದ ರೈತರಿಗೆ ಬಂಪರ್ ಕೊಡುಗೆ ನೀಡಿದೆ. ರೈತರಿಗೆ ನೀಡುತ್ತಿರುವ ದರದಲ್ಲಿ 3ರೂ ಹೆಚ್ಚಳ ಮಾಡಲಾಗಿದೆ. ಆದರೆ, ಇದರಿಂದ ಗ್ರಾಹಕರಿಗೆ ಯಾವುದೇ ತೊಂದರೆ ಇಲ್ಲ. ಫೆಬ್ರವರಿ 1ರಿಂದ ನೂತನ ದರ ಜಾರಿಗೆ ಬರಲಿದೆ. ಈ ದರ ಫೆಬ್ರವರಿ 1ರಿಂದ ಮಾರ್ಚ್ 31ರವರೆಗೆ ಮಾತ್ರ ಅನ್ವಯವಾಗಲಿದ್ದು, ಹಾಲು ಒಕ್ಕೂಟಗಳು ಲಾಭದಲ್ಲಿದ್ದರೆ ಮಾತ್ರ ನೂತನ ದರ ಮುಂದುವರೆಯಲಿದೆ ಎಂದು ಕೆಎಂಎಫ್ ಅಧ್ಯಕ್ಷ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.
ಸದ್ಯ ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ ದರ ಏರಿಕೆ ಮಾಡಲಾಗಿದೆ. ಮುಂದೆ ರಾಜ್ಯದ 13 ಹಾಲು ಒಕ್ಕೂಟಗಳಲ್ಲಿ ದರ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ರೆಡ್ಡಿ ಹೇಳಿದ್ದಾರೆ.












Click it and Unblock the Notifications