36 ಕೋಟಿ ನಷ್ಟ ಮಾಡಿದ ಬಳ್ಳಾರಿ ಅಗ್ನಿ ದುರಂತ
ಬಳ್ಳಾರಿ, ಜ.15: ಬಳ್ಳಾರಿ ನಗರದ ಹೊರವಲಯದ ಮುಂಡರಗಿ ಕೈಗಾರಿಕಾ ಪ್ರದೇಶದಲ್ಲಿರುವ ಕೋಲ್ಡ್ ಸ್ಟೋರೇಜ್ಗೆ ಘಟಕಕ್ಕೆ ಬಿದ್ದಿದ್ದ ಬೆಂಕಿಯನ್ನು ನಂದಿಸುವಲ್ಲಿ ಅಗ್ನಿಶಾಮಕದಳದ ಸಿಬ್ಬಂದಿ ಯಶಸ್ವಿಯಾಗಿದ್ದು, ಒಟ್ಟು 36 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ವಿದ್ಯುತ್ ಅವಘಡವೇ ಬೆಂಕಿ ಅನಾಹುತಕ್ಕೆ ಕಾರಣ ಎಂದು ಶಂಕಿಸಲಾಗಿದೆ.
ಮೆಣಸಿನಕಾಯಿ ಸಂಗ್ರಹಿಸಿಟ್ಟಿದ್ದ ಶ್ರೀದೇವಿ ಕೋಲ್ಡ್ ಸ್ಟೋರೇಜ್ಗೆ ಸೋಮವಾರ ರಾತ್ರಿ 12 ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಮೆಣಸಿನಕಾಯಿ ಘಾಟಿನ ನಡುವೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಘಟಕಕ್ಕೆ ಹೊತ್ತಿದ್ದ ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿ ನಂದಿಸುವಲ್ಲಿ, 50 ಜನ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ವಿದ್ಯುತ್ ಅವಘಡವೇ ಬೆಂಕಿ ಅನಾಹುತಕ್ಕೆ ಕಾರಣ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. 22 ಮೀಟರ್ ಎತ್ತರದ ಕಟ್ಟಡವನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿತ್ತು. ಆದ್ದರಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ವಿಳಂಬವಾಯಿತು ಎಂದು ಅಗ್ನಿಶಾಮಕದಳದ ಅಧಿಕಾರಿಗಳು ಹೇಳಿದ್ದಾರೆ. [ಹೊತ್ತಿ ಉರಿದ ಶ್ರೀ ಸಾಯಿ ಬಾಲಾಜಿ ಕಟ್ಟಡ]
ಜೂನ್ 4ರಂದು ಮೆಣಸಿನಕಾಯಿ ಮತ್ತು ದವಸಧಾನ್ಯ ಸಂಗ್ರಹಿಸಿದ್ದ ಬಳ್ಳಾರಿ ಹೊರವಲಯದ ಶ್ರೀ ಸಾಯಿ ಬಾಲಾಜಿ ಕೋಲ್ಟ್ ಇಂಡಸ್ಟ್ರೀಸ್ ಗೆ ಬೆಂಕಿ ಬಿದ್ದಿತ್ತು. ಕಟ್ಟಡದಲ್ಲಿ ಸಂಗ್ರಹಿಸಲಾಗಿದ್ದ ಮೆಣಸಿನಕಾಯಿ ಸೇರಿದಂತೆ ವಿವಿಧ ದವಸ ಧಾನ್ಯಗಳು ಬೆಂಕಿಗೆ ಆಹುತಿಯಾಗಿತ್ತು. ಇದರಿಂದ ಸುಮಾರು 10 ಕೋಟಿ ನಷ್ಟ ಉಂಟಾಗಿತ್ತು. ಆ ಪ್ರಕರಣ ನೆನಪಿರುವಾಗಲೇ ಈ ಅಗ್ನಿ ದುರಂತ ಸಂಭವಿಸಿದೆ. [ಕರ್ನಾಟಕದ ಇತರ ಜಿಲ್ಲಾಸುದ್ದಿಗಳು]

ಬೆಂಕಿ ದುರಂತದಿಂದ 36 ಕೋಟಿ ನಷ್ಟ
ಬಳ್ಳಾರಿ ಹೊರವಲಯದ ಮೆಣಸಿನಕಾಯಿ ಸಂಗ್ರಹಿಸಿಟ್ಟಿದ್ದ ಶ್ರೀದೇವಿ ಕೋಲ್ಡ್ ಸ್ಟೋರೇಜ್ಗೆ ಬೆಂಕಿ ಬಿದ್ದಿದ್ದರಿಂದ ಸುಮಾರು 36 ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಸೋಮವಾರ ರಾತ್ರಿ 12 ಗಂಟೆ ಸುಮಾರಿಗೆ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿತ್ತು. ವಿದ್ಯುತ್ ಅವಘಡವೇ ಬೆಂಕಿ ಅನಾಹುತಕ್ಕೆ ಕಾರಣ ಎಂದು ಶಂಕಿಸಲಾಗಿದೆ.

ಸಹಜ ಸ್ಥಿತಿಯತ್ತ ಕಮಲಾಪುರ
ಕ್ಷುಲ್ಲಕ ಕಾರಣಕ್ಕೆ ಧಾರವಾಡ ಜಿಲ್ಲೆಯ ಕಮಲಾಪುರ ಹೊಸೂರ ಓಣಿಯಲ್ಲಿ ಮಂಗಳವಾರ ನಡೆದ ಎರಡು ಕೋಮುಗಳ ಗಲಾಟೆ ಶಾಂತವಾಗಿದ್ದು, ಕಮಾಲಾಪುರ ಸಹಜ ಸ್ಥಿತಿಗೆ ಮರಳಿದೆ. ಗಲಾಟೆಯಲ್ಲಿ ಐವರು ಪೊಲೀಸರು ಸೇರಿದಂತೆ ಏಳು ಮಂದಿ ಗಾಯಗೊಂಡಿದ್ದಾರೆ. ಹೊಸೂರ ಓಣಿಯಲ್ಲಿನ ಅನೇಕ ಮನೆಗಳ ಹೆಂಚು ಹಾಗೂ ಕಿಟಕಿ, ಬಾಗಿಲುಗಳಿಗೆ ಹಾನಿ ಉಂಟಾಗಿದೆ. ಡಿಸಿಪಿ ಸುಭಾಷ ಗುಡಿಮನಿ, ಎಸಿಪಿಗಳಾದ ಎಸ್.ಎಚ್. ಕೇರಿ, ಶಂಕರ ಹೊಳೆಹೊಸುರ, ಸಿಪಿಐ ರಾಮನಗೌಡ ಹಟ್ಟಿ ಭೇಟಿ ನೀಡಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.

ಜ.18ರಿಂದ ಗಾಳಿಪಟ ಉತ್ಸವ
ಬೆಳಗಾವಿಯಲ್ಲಿ ಪರಿವರ್ತನ ಪರಿವಾರದ ಆಶ್ರಯದಲ್ಲಿ ನಾನಾವಾಡಿಯ ಮೈದಾನದಲ್ಲಿ ನಾಲ್ಕು ದಿನಗಳ ಕಾಲದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಮತ್ತು ಯುವ ಜನೋತ್ಸವ ಜ.18ರಿಂದ ಆರಂಭವಾಗಲಿದೆ. ರಷ್ಯ, ದಕ್ಷಿಣ ಆಫ್ರಿಕಾ ಸೇರಿದಂತೆ ಏಳು ದೇಶಗಳ ಗಾಳಿಪಟ ಹಾರಿಬಿಡುವ ಪ್ರವೀಣರು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕ ಅಭಯ್ ಪಾಟೀಲ ಹೇಳಿದ್ದಾರೆ.

ಕಲ್ಲುಗಣಿಗಾರಿಕೆ ನಿಷೇಧಿಸಿ
ಶಿವಮೊಗ್ಗ ಸುತ್ತಮುತ್ತಲಿನ ಕೋಟೆಗಂಗೂರು, ಗೆಜ್ಜೇನಹಳ್ಳಿ, ಕಲ್ಲುಗಂಗೂರು ಬಳಿ ನಡೆಯುತ್ತಿರುವ ಅಕ್ರಮ ಕಲ್ಲುಕ್ವಾರಿ ಗಣಿಗಾರಿಕೆ ಕುರಿತು ಸಮಗ್ರ ತನಿಖೆ ನಡೆಸಬೇಕು ಮತ್ತು ಅದನ್ನು ಸ್ಥಗಿತಗೊಳಿಸಬೇಕು ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಆಗ್ರಹಿಸಿದ್ದಾರೆ. ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಮಾತ್ರವಲ್ಲ ಅಲ್ಲಿ ಕಾರ್ಮಿಕರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಜಿಲ್ಲಾಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ರಕ್ಷಣಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವ ತನಕ ಹೋರಾಟ ಮುಂದುವರೆಸಲಾಗುವುದು ಎಂದರು.

ಮಲಾಲಾಗೆ ಬಸವಶ್ರೀ ಪ್ರಶಸ್ತಿ ವಿತರಣೆ
ಚಿತ್ರದುರ್ಗದ ಶ್ರೀಮುರುಘಾಮಠದ ವತಿಯಿಂದ 2014ನೆ ಸಾಲಿನ ಪ್ರತಿಷ್ಠಿತ ‘ಬಸವ ಶ್ರೀ' ಪ್ರಶಸ್ತಿಯನ್ನು ಪಾಕಿಸ್ತಾನದ ಮಹಿಳಾ ಹಾಗೂ ಮಕ್ಕಳ ಶಿಕ್ಷಣ ಹಕ್ಕು ಹೋರಾಟಗಾರ್ತಿ ಮಲಾಲಾ ಯೂಸುಫ್ಝಾಗೆ ಜ.9ರಂದು ಲಂಡನ್ನಲ್ಲಿ ಪ್ರದಾನ ಮಾಡಲಾಗಿದೆ. ಮಂಗಳವಾರ ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಡಾ.ಶಿವಮೂರ್ತಿ ಮುರುಘಾ ಶರಣರು, ಭದ್ರತೆಯ ಕಾರಣಕ್ಕಾಗಿ ಮಲಾಲಾ ಭಾರತಕ್ಕೆ ಬರಲು ಸಾಧ್ಯವಾಗಿಲ್ಲ. ಆದ್ದರಿಂದ ಲಂಡನ್ ನಲ್ಲಿ ಪ್ರಶಸ್ತಿ ವಿತರಿಸಲಾಗಿದೆ ಎಂದು ಹೇಳಿದರು.

ಜನರನ್ನು ಬೆಚ್ಚಿ ಬೀಳಿಸಿದ ಆನೆ
ಸಕಲೇಶಪುರದ ಹೊಳೆಯಲ್ಲಿ ಹೇಮಾವತಿ ಸೇತುವೆಯಿಂದ ತುಸು ದೂರದಲ್ಲಿ ಆನೆಯೊಂದನ್ನು ಕಂಡು ಜನರು ಬೆಚ್ಚಿಬಿದ್ದ ಪ್ರಸಂಗ ಮಂಗಳವಾರ ನಡೆದಿದೆ. ಮಧ್ಯಾಹ್ನ 1 ಸುಮಾರಿಗೆ ಆನೆಯೊಂದನ್ನು ಕಂಡು ಜನರು ಅದನ್ನು ನೋಡಲು ಓಡಿ ಬಂದಿದ್ದಾರೆ. ಆದರೆ, ಅದು ಸಾಕಾನೆ ಎಂದು ನಂತರ ತಿಳಿದಿದೆ. ಆನೆಯನ್ನು ನೀರಿನಲ್ಲಿ ಬಿಟ್ಟು ಮಾವುತರು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಆದ್ದರಿಂದ ಜನರು ಅದನ್ನು ಕಾಡಾನೆ ಎಂದು ಭಾವಿಸಿದ್ದರು. ಮಾವುತರ ಆಗಮನದ ನಂತರ ಪರಿಸ್ಥಿತಿ ತಿಳಿಯಾಯಿತು.












Click it and Unblock the Notifications