ಒಂದಂಕಿ ಲಾಟರಿ ತಡೆಯಲು ಸರ್ಕಾರ ವಿಫಲ : ಎಚ್ಡಿಕೆ
ಬೆಂಗಳೂರು, ಸೆ.20 : ಗೃಹ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಒಂದಂಕಿ ಲಾಟರಿಗಳಿಂದ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಆದರೆ, ಗೃಹ ಸಚಿವರು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಪ್ರತಿನಿತ್ಯ 11.30ಕ್ಕೆ ಒಂದಂಕಿ ಲಾಟರಿ ಡ್ರಾ ನಡೆಯುತ್ತಿದೆ ಮತ್ತು ಎಸ್ಎಂಎಸ್ ಮೂಲಕ ಫಲಿತಾಂಶ ಜನರ ಮೊಬೈಲ್ ಗೆ ತಲುಪುತ್ತಿದೆ. ಸರ್ಕಾರ ಇದನ್ನು ತಡೆಯಲು ವಿಫಲವಾಗಿದೆ. ಗೃಹ ಸಚಿವರು ಲಾಟರಿ ನಡೆಸುವವರ ಹತ್ತಿರ ಪಾಲು ಪಡೆಯುತ್ತಿದ್ದಾರೆಯೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಲಾಟರಿ ಫಲಿತಾಂಶ ಪ್ರತಿಕೆಗಳಲ್ಲಿ ಪ್ರಕಟವಾಗುತ್ತಿದೆ ಇದು ಸರ್ಕಾರದ ಗಮನಕ್ಕೆ ಬಂದಿಲ್ಲವೆ?, ಅಥವ ಸರ್ಕಾರವೇ ಇದಕ್ಕೆ ಪರೋಕ್ಷ ಬೆಂಬಲ ನೀಡುತ್ತಿದೆಯೇ?, ಜನರು ಲಾಟರಿ ಹಾವಳಿಗೆ ಸಿಲುಕಿ ಮನೆ ಮಠ ಕಳೆದುಕೊಳ್ಳುತ್ತಿದ್ದಾರೆ. ಆದರೂ, ಗೃಹ ಸಚಿವರಾದ ಜಾರ್ಜ್ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಕುಮಾರಸ್ವಾಮಿ ದೂರಿದರು.
ಬೇರೆ ರಾಜ್ಯಗಳ ಲಾಟರರಿಗಳು ಅಸಲಿಯೋ? ನಕಲಿಯೋ? ತಿಳಿದಿಲ್ಲ. ನಮ್ಮ ರಾಜ್ಯದ ಜನರು ಇದಕ್ಕೆ ದಿನನಿತ್ಯ ಲಕ್ಷಾಂತರ ರೂ.ವೆಚ್ಚಮಾಡುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು. (ಕರ್ನಾಟಕ ಇತರ ಜಿಲ್ಲಾಸುದ್ದಿಗಳು)

ಮಹಿಳೆಯರ ಶವ ಪತ್ತೆ
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕಸುವಿನ ಹಳ್ಳಿ ಕೆರೆಯಲ್ಲಿ ಇಬ್ಬರು ಮಹಿಳೆಯರ ಶವ ಶುಕ್ರವಾರ ಪತ್ತೆಯಾಗಿದೆ. ಪರಸ್ಪರ ಸಂಬಂಧಿಕರಾದ ಕಾಳಮ್ಮ (65) ಮತ್ತು ಕವಿತಾ( 25) ಮೃತ ಮಹಿಳೆಯರಾಗಿದ್ದಾರೆ. ಇಬ್ಬರು ನಿನ್ನೆ ಸಂಜೆಯಿಂದ ಕಾಣೆಯಾಗಿದ್ದರು. ಎಷ್ಟು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಶುಕ್ರವಾರ ಬೆಳಗ್ಗೆ ಶವ ಕೆರೆಯಲ್ಲಿ ಪತ್ತೆಯಾಗಿದೆ. ಈ ಕುರಿತು ನಾಗಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

ಭಾರೀ ಮಳೆಗೆ ಸೇತುವೆ ಮುಳುಗಡೆ
ಗುರುವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಸೇಡಂ ತಾಲೂಕಿನಲ್ಲಿರುವ ಗುಲ್ಬರ್ಗಾ-ಸೇಡಂಗೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣವಾಗಿ ಜಲವೃತಗೊಂಡಿದ್ದು ಸಂಚಾರ ಸ್ಥಗಿತಗೊಂಡಿದೆ. ಕಾಗಿನಾ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದರಿಂದ ಸುಮಾರು 3 ಕಿ.ಮೀವರೆಗೆ ವಾಹನಗಳು ಸಾಲುಗಟ್ಟಿ ನಿಂತಿವೆ.

ಕೆಪಿಎಸ್ಎಸಿ ಅಕ್ರಮ ತನಿಖೆಗೆ ಆದೇಶ
ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ)ದ ನೇಮಕಾತಿ ಹಗರಣ ಸಂಬಂಧ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಹೈಕೋರ್ಟ್, ಹಗರಣದ ತನಿಖೆಗಾಗಿ ಸತ್ಯಶೋಧನಾ ಸಮಿತಿ ರಚಿಸಿದೆ. ಕೆಪಿಎಸ್ಸಿಯಿಂದ 1998, 1999 ಹಾಗೂ 2004ರಲ್ಲಿ ಗೆಜೆಟೆಡ್ ಪ್ರೊಬೆಷನರ್ಸ್ ಹುದ್ದೆಗಳ ಭರ್ತಿಯಲ್ಲಿ ಆಗಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಹೈಕೋರ್ಟ್ ಶುಕ್ರವಾರ ಸತ್ಯಶೋಧನಾ ಸಮಿತಿ ರಚಿಸಿದ್ದು, ಈ ಬಗ್ಗೆ ಕೆಪಿಎಸ್ಸಿಯ ದಾಖಲೆಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಸಮಿತಿಗೆ ಸೂಚಿಸಿದೆ.

ಪ್ರಣಬ್ ರಿಂದ ಆಸ್ಪತ್ರೆ ಉದ್ಘಾಟನೆ
ಮೈಸೂರಿನ ಎಂ.ಜಿ.ರಸ್ತೆಯಲ್ಲಿ ನಿರ್ಮಿಸಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೆ.23ರಂದು ಉದ್ಘಾಟಿಸಲಿದ್ದಾರೆ. ಮೈಸೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಜೆಎಸ್ಎಸ್ ವಿದ್ಯಾಸಂಸ್ಥೆಯ ಗಂಗಾಧರನ್ ಈ ವಿಷಯ ತಿಳಿಸಿದರು. ಇಂಡೋ-ಪಾರ್ಸೆನಿಕ್ ಶೈಲಿಯಲ್ಲಿ ಈ ಆಸ್ಪತ್ರೆಯ ಕಟ್ಟಡವನ್ನು ನಿರ್ಮಿಸಲಾಗಿದ್ದು, 17.5 ಎಕರೆ ಪ್ರದೇಶದಲ್ಲಿ ಆಸ್ಪತ್ರೆ ತಲೆ ಎತ್ತಿದೆ. 1800 ಹಾಸಿಗೆ ಮತ್ತು 24 ಆಪರೇಷನ್ ಥಿಯೇಟರ್ ಹೊಂದಿರುವ ಆಸ್ಪತ್ರೆ ಸೆ.23ರಂದು ಉದ್ಘಾಟನೆಯಾಗಲಿದೆ.

ಗಣಿ ಅಕ್ರಮ ಬಯಲು ಮಾಡಿದ್ದು ನಾನು
ನಾನು ಮುಖ್ಯಮಂತ್ರಿಯಾಗಿದ್ದಾಗ, ಗಣಿಗಾರಿಕೆ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದೆ. ಆದ್ದರಿಂದ ಕೋಟ್ಯಾಂತರ ರೂ.ಗಳ ಅಕ್ರಮ ಗಣಿಗಾರಿಕೆ ವಿಚಾರ ಬೆಳಕಿಗೆ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಕಂಪ್ಲಿ ಶಾಸಕ ಸುರೇಶ್ ಬಾಬು ಬಂಧನದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅಂದು ನಾನು ತೆಗೆದುಕೊಂಡ ನಿರ್ಧಾರದಿಂದಾಗಿ ಇಂದು ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಹಲವರು ಜೈಲು ಸೇರುವಂತಾಗಿದೆ ಎಂದು ತಿಳಿಸಿದರು.

ಶ್ರೀ ಗಳಿಂದ ಅತಿರ್ಥಿ ಗೃಹ ಉದ್ಘಾಟನೆ
ಮಂಗಳೂರಿನ ಉಳ್ಳಾಲ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಸುಧೀಂದ್ರ ಅತಿಥಿ ಗೃಹವನ್ನು ಶ್ರೀ ಕಾಶಿಮಠ ಸಂಸ್ಥಾನದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಶುಕ್ರವಾರ ಉದ್ಘಾಟಿಸಿದರು. ಶ್ರೀಗಳವರ ಚಾತುರ್ಮಾಸ ವೃತದ ಸಿಮೊಲಂಘನ ಕಾರ್ಯಕ್ರಮ ಪ್ರಯುಕ್ತ ಶ್ರೀಗಳವರು ಕೊಂಚಾಡಿ ಮೊಕ್ಕಾಂನಿಂದ ಉಳ್ಳಾಲ ಶ್ರೀ ಲಕ್ಷ್ಮಿನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ನೂರಾರು ಭಕ್ತಾದಿಗಳು ಹಾಜರಿದ್ದರು.

ದೂರು ಸ್ವೀಕರಿಸಿಲ್ಲ ಎಂದು ಮರವೇರಿದ ಭೂಪ
ಪೊಲೀಸರು ತಾನು ಕೊಟ್ಟ ದೂರನ್ನು ದಾಖಲಿಸಿಕೊಳ್ಳುತ್ತಿಲ್ಲ ಎಂದು ಮನನೊಂದ ವ್ಯಕ್ತಿ ವಿದ್ಯುತ್ ಟವರ್ ಏರಿದ ಘಟನೆ ದಾವಣಗೆರೆಯ ವಿದ್ಯಾನಗರದಲ್ಲಿ ನಡೆದಿದೆ. ವಿನಾಯಕ ನಗರದ ನಿವಾಸಿಯಾದ ಸೈಯದ್ ಟವರ್ ಏರಿದ ವ್ಯಕ್ತಿ. ಸೈಯದ್ ದಿನವೂ ಹೆಂಡತಿ ಜೊತೆ ಜಗಳ ಮಾಡಿಕೊಂಡು ಹೆಂಡತಿ ಮೇಲೆ ಹಲ್ಲೆ ನಡೆಸುತ್ತಿದ್ದನಂತೆ. ಸೈಯದ್ ನ ಈ ಅವಾಂತರ ನೋಡಿ ಪಕ್ಕದ ಮನೆಯ ನಯಾಜ್ ರಿಯಾಜ್ ಎಂಬಾತ ಸೈಯದ್ ಥಳಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಸಯ್ಯದ್,ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದಾರೆ. ಆದರೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ. ಇದರಿಂದ ಮನನೊಂದ ಆತ, ಟವರ್ ಏರಿ ಕುಳಿತಿದ್ದ. ಸತತ ಒಂದು ಗಂಟೆಯ ಪ್ರಯತ್ನದ ಬಳಿಕ ಪೊಲೀಸರು ಆತನ ಮನವೊಲಿಸಿ ಕೆಳಗೆ ಇಳಿಸಿದ್ದಾರೆ.

ಶನಿವಾರ ಲೋಕಸತ್ತಾ ರಾಜ್ಯ ಸಮಾವೇಶ
ಲೋಕಸತ್ತಾ ಪಕ್ಷದ ಕಾರ್ಯಕರ್ತರ ರಾಜ್ಯ ಸಮಾವೇಶ ಸೆ. 21 ಮಧ್ಯಾಹ್ನ 2 ಗಂಟೆಯಿಂದ 6 ಗಂಟೆವರೆಗೆ ಬೆಂಗಳೂರಿನ ರೋಟರಿ ಹಾಲ್ನಲ್ಲಿ ನಡೆಯಲಿದೆ. ಸಮಾವೇಶದಲ್ಲಿ ರಾಜ್ಯದ ವಿವಿಧ ಭಾಗಗಳ ಪಕ್ಷದ ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ. ಪಕ್ಷದ ಇಲ್ಲಿಯವರೆಗಿನ ಮತ್ತು ಮುಂದಿನ ಚಟುವಟಿಕೆಗಳ ಬಗ್ಗೆ ಸಮಾವೇಶದಲ್ಲಿ ಚರ್ಚೆ ನಡೆಯಲಿದೆ. ಪಕ್ಷವು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಮತ್ತು ಕಾರ್ಯತಂತ್ರಗಳು, ಹೋರಾಟಗಳನ್ನು ಪಕ್ಷದ ಸದಸ್ಯರ ಜೊತೆ ಚರ್ಚಿಸಲಾಗುತ್ತದೆ. ಸಮಾವೇಶದಲ್ಲಿ ನಿವೃತ್ತ ಪೋಲಿಸ್ ಅಧಿಕಾರಿ ಜೀಜ ಹರಿಸಿಂಗ್ ಭಾಗವಹಿಸಲಿದ್ದಾರೆ.












Click it and Unblock the Notifications