ನಮ್ಮ ಮೆಟ್ರೋ ಅಕ್ರಮ : ಕ್ರಿಮಿನಲ್ ಕೇಸ್ ದಾಖಲಿಸಿ
ಬೆಳಗಾವಿ, ನ.29 : ಬೆಂಗಳೂರು ಮೆಟ್ರೋ ನಿಗಮದ ಆಸ್ತಿಯನ್ನು ಖಾಸಗಿ ಆಸ್ತಿಯಂತೆ ಬಳಸಿಕೊಂಡ ಕಾರ್ಯಕಾರಿ ನಿರ್ದೇಶಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಸಾರ್ವಜನಿಕ ಉದ್ಯಮ ಸಮಿತಿ ಅಧ್ಯಕ್ಷ ರಮೇಶ್ ಕುಮಾರ್ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ. ಕಾರ್ಯಕಾರಿ ನಿರ್ದೇಶಕರು ನಿಯಮ ಉಲ್ಲಂಘನೆ ಮಾಡಿ 1.58 ಕೋಟಿ ರೂ.ಗಳನ್ನು ಕಮಿಷನ್ ರೂಪದಲ್ಲಿ ದಲ್ಲಾಳಿಗೆ ಸಂದಾಯ ಮಾಡಿದ್ದಾರೆ ಎಂದು ಅವರು ಸದನಕ್ಕೆ ಮಾಹಿತಿ ನೀಡಿದ್ದಾರೆ.
ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಶುಕ್ರವಾರ ಸಾರ್ವಜನಿಕ ಉದ್ಯಮ ಸಮಿತಿಯ 128 ವರದಿಯನ್ನು ಮಂಡಿಸಲಾಯಿತು. ವರದಿ ಮಂಡಿಸಿ ಮಾತನಾಡಿದ ರಮೇಶ್ ಕುಮಾರ್ ಬೆಂಗಳೂರು ಮೆಟ್ರೋ ನಿಗಮದ ಆಸ್ತಿಯನ್ನು ಖಾಸಗಿ ಆಸ್ತಿಯಂತೆ ಕಾರ್ಯಕಾರಿ ನಿರ್ದೇಶಕರು ಬಳಸಿಕೊಂಡಿದ್ದಾರೆ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಸಂಸ್ಥೆಗೆ ಮಾಡಿರುವ ನಷ್ಟವನ್ನು ವಾಪಸ್ ಪಡೆಯಬೇಕೆಂದು ಸರ್ಕಾರಕ್ಕೆ ಸಲಹೆ ಮಾಡಿದರು.
ಮೆಟ್ರೋ ರೈಲು ನಿಗಮ ವಶಪಡಿಸಿಕೊಂಡ ಆಸ್ತಿಯನ್ನು ಖಾಸಗಿ ಆಸ್ತಿಯಂತೆ ಉಪನಿರ್ದೇಶಕರು ಬಳಕೆ ಮಾಡಿದ್ದಾರೆ. ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಸಂಸ್ಥೆಯ ನಿಮಯದಂತೆ ದಲ್ಲಾಳಿಗಳಿಗೆ ಕಮಿಷನ್ ಕೊಡಲು ಅವಕಾಶವಿಲ್ಲ. ಆದರೆ, ಉಪ ನಿರ್ದೇಶಕರು 1.58 ಕೋಟಿ ರೂ.ಗಳನ್ನು ದಲ್ಲಾಳಿಗಳಿಗೆ ಕಮಿಷನ್ ರೂಪದಲ್ಲಿ ಸಂದಾಯ ಮಾಡಿದ್ದಾರೆ. ಆದ್ದರಿಂದ ಅವರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಬೇಕೆಂದು ಅವರು ಸಲಹೆ ನೀಡಿದ್ದಾರೆ. (ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು)

ಕ್ರಿಮಿನಲ್ ಪ್ರಕರಣ ದಾಖಲಿಸಿ
ಬೆಂಗಳೂರು ಮೆಟ್ರೋ ನಿಗಮದ ಆಸ್ತಿಯನ್ನು ಖಾಸಗಿ ಆಸ್ತಿಯಂತೆ ಬಳಸಿಕೊಂಡ ಕಾರ್ಯಕಾರಿ ನಿರ್ದೇಶಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಸಾರ್ವಜನಿಕ ಉದ್ಯಮ ಸಮಿತಿ ಅಧ್ಯಕ್ಷ ರಮೇಶ್ ಕುಮಾರ್ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ. ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಶುಕ್ರವಾರ ಸಾರ್ವಜನಿಕ ಉದ್ಯಮ ಸಮಿತಿಯ 128 ವರದಿಯನ್ನು ಮಂಡಿಸಲಾಯಿತು. ನಂತರ ಮಾತನಾಡಿದ ರಮೇಶ್ ಕುಮಾರ್ ಬೆಂಗಳೂರು ಮೆಟ್ರೋ ನಿಗಮದ ಆಸ್ತಿಯನ್ನು ಖಾಸಗಿ ಆಸ್ತಿಯಂತೆ ಕಾರ್ಯಕಾರಿ ನಿರ್ದೇಶಕರು ಬಳಸಿಕೊಂಡಿದ್ದಾರೆ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಸಂಸ್ಥೆಗೆ ಮಾಡಿರುವ ನಷ್ಟವನ್ನು ವಾಪಸ್ ಪಡೆಯಬೇಕೆಂದು ಸಲಹೆ ಮಾಡಿದರು.

ಸಿಎಂ ತವರು ಜಿಲ್ಲೆಯಲ್ಲಿ ಹೋಮ-ಹವನ
ಮೈಸೂರಿನವರಾದ ಸಿಎಂ ಸಿದ್ದರಾಮಯ್ಯ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಜಾರಿಗೆ ತರಲು ಹೊರಟಿದ್ದಾರೆ. ಆದರೆ, ಅವರ ತವರು ಜಿಲ್ಲೆಯ ಕರ್ನಾಟಕ ಮುಕ್ತ ವಿವಿಯ ನೂತನ ಕಟ್ಟಡದಲ್ಲಿ ರಾತ್ರೋರಾತ್ರಿ ಹೋಮ-ಹವನ ನಡೆಸಲಾಗಿದೆ. ಮಾನಸ ಗಂಗೋತ್ರಿಯ ವಿವಿ ಆವರಣದಲ್ಲಿ ಸುಮಾರು 15 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಪರೀಕ್ಷಾ ಭವನದ ಉದ್ಘಾಟನೆಗೆ ಈ ಹೋಮ - ಹವನ ನಡೆಸಲಾಗಿದೆ. ಕಟ್ಟಡದ ಮುಖ್ಯದ್ವಾರದಲ್ಲಿ ವಾಸ್ತು ಹಾಗೂ ರಕ್ಷೋಘ್ನ ಹೋಮ ನಡೆಸಲಾಗಿದೆ. ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಪ್ರೊ. ರಾಧಾಕೃಷ್ಣನ್ ಮತ್ತು ಕುಲಪತಿ ಎಂ.ಜಿ.ಕೃಷ್ಣನ್ ಅವರು ಸಹ ಹೋಮದಲ್ಲಿ ಪಾಲ್ಗೊಂಡಿದ್ದರು.

ವೀರ ಯೋಧನಿಗೆ ಅಂತಿಮ ನಮನ
ನಾಗಪುರದಲ್ಲಿನ ಮೃತಪಟ್ಟ ಬಾದಾಮಿ ತಾಲೂಕಿನ ಖಾಜಿ ಬೂದಿಹಾಳ ಗ್ರಾಮದ ಯೋಧ ಸಲೀಂ ಫಕ್ರುದ್ದೀನ ವಾಲೀಕಾರ (29) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಗುರುವಾರ ಸಂಜೆ ನೆರವೇರಿತು. ಮಂಗಳವಾರ ಯೋಧರಿಗೆ ತರಬೇತಿ ನೀಡುತ್ತಿದ್ದಾಗ ಸಂಭವಿಸಿದ ದುರಂತದಲ್ಲಿ ಸಲೀಂ ಮೃತಪಟ್ಟಿದ್ದರು. ಬಾದಾಮಿ ತಹಸೀಲ್ದಾರ್ ಅಜೀಜ್ ದೇಸಾಯಿ ಹಾಗೂ ಕಂದಾಯ ನಿರೀಕ್ಷಕ ಈಶ್ವರ ಗಡ್ಡಿ ಅವರು ಯೋಧನ ಪಾರ್ಥಿವ ಶರೀರವಕ್ಕೆ ಅಂತಿಮ ಗೌರವ ಸಲ್ಲಿಸಿದರು.

ಅನ್ನಭಾಗ್ಯ ಬೇಡ ಅನ್ನಬೆಳವ ಭೂಮಿ ಕೊಡಿ
20 ವರ್ಷಗಳಿಂದ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು ಬಗರ್ಹುಕುಂ ಸಾಗುವಳಿ ಮಾಡಿ, ಜೀವನ ನಡೆಸುತ್ತಿರುವ ಎಸ್ಸಿ, ಎಸ್ಟಿ, ಹಿಂದುಳಿದ ಹಾಗೂ ಬಡ ರೈತರ ಭೂಮಿಯನ್ನು ಸಕ್ರಮ ಮಾಡುವಂತೆ ಆಗ್ರಹಿಸಿ ಚಾಮರಾಜನಗರ ಬಿಎಸ್ಪಿ ಪ್ರತಿಭಟನಾ ಮೆರವಣಿಗೆ ನಡೆಸಿತು. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಬಗರ್ಹುಕುಂ ಸಾಗುವಳಿ ಸಕ್ರಮಗೊಳಿಸಿ, ಅನ್ನಭಾಗ್ಯ ಯೋಜನೆ ಇರಲಿ- ಅನ್ನ ಬೆಳೆವ ಭೂಮಿ ನಮಗೆ ಸಿಗಲಿ ಎಂದು ರೈತರು ಸರ್ಕಾರವನ್ನು ಒತ್ತಾಯಿದರು.

ಕಾರ್ಖನೆ ಮುಚ್ಚಿ ಎಂದು ಆತ್ಮಹತ್ಯೆ ಬೆದರಿಕೆ
ಹಾಸನ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ಓಮ್ಮಿಕಾನ್ ಚೆಂಡು ಹೂ ಸಂಸ್ಕರಣ ಘಟಕ ಮುಚ್ಚಬೇಕೆಂದು ಕಾರ್ಖನೆ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕಾರ್ಖನೆ ಹೊರಬಿಡುವ ಕಲ್ಮಶದಿಂದ ಪರಿಸರ ಮಾಲಿನ್ಯ ಉಂಟಾಗಿದ್ದು, ರೋಗ ರುಜಿನಗಳು ಹರಡುತ್ತಿವೆ. ಕೂಡಲೇ ಈ ಕಾರ್ಖಾನೆಯನ್ನು ಮುಚ್ಚಬೇಕು ಇಲ್ಲದಿದ್ದರೆ, ಗ್ರಾಮಸ್ಥರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಮಂಜುನಾಥ್, ಈಗ ಇರುವ ಹೂವಿನ ಸಂಸ್ಕರಣೆ ಕಾರ್ಯ ಮುಗಿದ ನಂತರ ಕಾರ್ಖಾನೆ ಮುಚ್ಚುವ ಬಗ್ಗೆ ಚಿಂತಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಪಿಡಿಓ ಮನೆ ಮೇಲೆ ಲೋಕಾಯುಕ್ತ ದಾಳಿ
ದೊಡ್ಡಬಳ್ಳಾಪುರದ ಸೋಮಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುರುಡಯ್ಯ ಮನೆ ಮೇಲೆ ದೊಡ್ಡಬಳ್ಳಾಪುರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಸೋಮಾಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿಯೂ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಆರೋಪಗಳ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದೆ.

ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ
ಬೆಂಗಳೂರು ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಮಂಡ್ಯ ಸಂಸದೆ ರಮ್ಯಾ ಹೇಳಿದ್ದಾರೆ. ಶುಕ್ರವಾರ 7ದಿಕ್ಕು 7 ಸಮಸ್ಯೆ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಂಡ್ಯದ ಅಭಿವೃದ್ಧಿಯ ದೃಷ್ಠಿಯಿಂದ ಜನರು ಬೈಪಾಸ್ ರಸ್ತೆಯ ಬೇಡಿಕೆ ಮುಂದಿಟ್ಟಿದ್ದಾರೆ. ಆದರೆ, ರಾಜ್ಯ ಸರ್ಕಾರ ನಗರ ವ್ಯಾಪ್ತಿಯಲ್ಲಿ ಫ್ಲೈ ಓವರ್ ನಿರ್ಮಾಣ ಮಾಡಲು ಚಿಂತನೆ ನಡೆಸಿದೆ. ನಗರದ ಹೊರವಲಯದ ಬೈಪಾಸ್ ಅಭಿವೃದ್ಧಿ ಪಡಿಸಿ ಅದನ್ನು ಮೇಲ್ದರ್ಜೆಗೆ ಏರಿಸಿದರೆ, ನಗರಕ್ಕೆ ಅನುಕೂಲವಾಗಲಿದೆ. ಆದ್ದರಿಂದ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ ಮಾಡಲು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದು, ಒಪ್ಪಿಗೆ ದೊರೆತಿದೆ ಎಂದು ಹೇಳಿದರು.












Click it and Unblock the Notifications