ಸದನದೊಳಗೆ ಘಮ ಘಮಿಸಿದ 'ಮನ್ಸೂರ್ ಬಿರಿಯಾನಿ'!
Recommended Video
ಬೆಂಗಳೂರು, ಜುಲೈ 22 : ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಾಸಮತದ ನಿರ್ಣಯದ ಚರ್ಚೆಯ ವೇಳೆ ಬಿರಿಯಾನಿ ಬಗ್ಗೆ ವಿಷಯ ಪ್ರಸ್ತಾಪವಾಯಿತು. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮಾಂಸಾಹಾರ ಸೇವನೆ ಬಗ್ಗೆ ಮಾತನಾಡಿದರು.
ಸೋಮವಾರದ ಕಲಾಪ ಆರಂಭವಾಗುತ್ತಿದ್ದಂತೆ ಸಚಿವ ಕೃಷ್ಣ ಬೈರೇಗೌಡ ಐಎಂಎ ಹಗರಣದ ಕುರಿತು ವಿಷಯ ಪ್ರಸ್ತಾಪ ಮಾಡಿದರು. ಆಗ ಬಿಜೆಪ ಸದಸ್ಯ ಸಿ. ಟಿ. ರವಿ ಮಧ್ಯ ಪ್ರವೇಶ ಮಾಡಿ, "ಇದಕ್ಕೆ ಬಿರಿಯಾನಿ ತಿಂದವರು ಉತ್ತರ ಕೊಡಬೇಕು" ಎಂದು ಕಾಲೆಳೆದರು.
ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಸ್ವಯಂ ಪ್ರೇರಿತವಾಗಿ ಮಾತನಾಡಲು ಎದ್ದು ನಿಂತರು. " ಸಿ. ಟಿ. ರವಿ ಬಿರಿಯಾನಿ ತಿಂದವರು ಎಂದು ಪರೋಕ್ಷವಾಗಿ ನನ್ನನ್ನೇ ಉಲ್ಲೇಖಿಸಿದ್ದು" ಎಂದು ಮಾತು ಆರಂಭಿಸಿದರು.

"ಅಧ್ಯಕ್ಷರೇ ನಾನು ಬಿರಿಯಾನಿ ತಿಂದಿಲ್ಲ. 2ನೇ ಬಾರಿ ಹೃದಯ ಶಸ್ತ್ರ ಚಿಕಿತ್ಸೆ ಆದ ಬಳಿಕ ಮಾಂಸಾಹಾರ ಸೇವೆನೆ ಬಿಟ್ಟಿದ್ದೇನೆ. ಅಂದು ಅಲ್ಲಿ ಖರ್ಜೂರವೊಂದನ್ನು ಬಾಯಿಗೆ ಹಾಕಿಕೊಂಡಿದ್ದೆ ಅಷ್ಟೇ" ಎಂದು ಸ್ಪಷ್ಟನೆ ನೀಡಿದರು.
ಕುಮಾರಸ್ವಾಮಿ ಮಾತಿಗೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ರಮೇಶ್ ಕುಮಾರ್, "ಆಪರೇಷನ್ ಆಯ್ತು ಅಂತ ಬಿರಿಯಾನಿ ತಿನ್ನೋದು ಬಿಡಬೇಡಿ. ನಾಟಿಕೋಳಿ-ಫಿಶ್ ತಗೋಳಿ, ನಾನು ನಿಮ್ಮ ಅಮ್ಮನ ಜೊತೆಗೆ ಮಾತಾಡ್ತಿನಿ" ಎಂದು ಹಾಸ್ಯ ಚಟಾಕಿ ಹಾರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯ ಕೆ. ಎಸ್. ಈಶ್ವರಪ್ಪ ಅವರು ಜೋರಾಗಿ ನಗುತ್ತಿದ್ದರು. "ಏನ್ರೀ ಈಶ್ವರಪ್ಪ ಇಷ್ಟೊಂದು ನಗ್ತಾ ಇದ್ಧೀರಿ" ಎಂದು ಸ್ಫೀಕರ್ ಪ್ರಶ್ನೆ ಮಾಡಿದರು.
"ಸತ್ಯ ಹೇಳಿದ್ರಿ ಅದಕ್ಕೆ ನಗ್ತಿದ್ದೀನಿ" ಎಂದು ಈಶ್ವರಪ್ಪ ಹೇಳಿದ್ದಕ್ಕೆ ಸದನದಲ್ಲಿ ಮತ್ತೆ ನಗುವಿನ ಅಲೆ ಎದ್ದಿತ್ತು. ವಿಶ್ವಾಸಮತಯಾಚನೆ ಗಂಭೀರ ಚರ್ಚೆಯ ನಡುವೆ ಬಿರಿಯಾನಿ ವಿಚಾರ ಸದನದಲ್ಲಿ ನಗುವಿನ ಅಲೆ ಏಳುವಂತೆ ಮಾಡಿತು.











Click it and Unblock the Notifications