KPSC: ಆಗಸ್ಟ್ 27ರಂದು ಪೂರ್ವಭಾವಿ ಪರೀಕ್ಷೆ, ಅಭ್ಯರ್ಥಿಗಳು ತಪ್ಪದೇ ಓದಿ
ಬೆಂಗಳೂರು, ಆಗಸ್ಟ್ 25: ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ಪೂರ್ವಭಾವಿ ಪರೀಕ್ಷೆ ಆಗಸ್ಟ್ 27ರ ಮಂಗಳವಾರ ನಡೆಯಲಿದೆ. ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಪರೀಕ್ಷೆಗೆ ತಯಾರಿ ನಡೆಸಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಪರೀಕ್ಷೆಗಳನ್ನು ಮುಂದೂಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಮಂಗಳವಾರ ಸುಮಾರು 2,10,910 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಆಗಸ್ಟ್ 27ರಂದು ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಸೂಚನೆಗಳನ್ನು ನೀಡಲಾಗಿದೆ. ಈ ಕುರಿತು ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಈಗಾಗಲೇ ಅಭ್ಯರ್ಥಿಗಳು ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳುತ್ತಿದ್ದಾರೆ.

ಆಯೋಗವು 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಗ್ರೂಪ್ 'ಎ' ಮತ್ತು 'ಬಿ' ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯನ್ನು ದಿನಾಂಕ 27-08-2024ರಂದು ನಡೆಸುತ್ತಿದ್ದು, ಸದರಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಆಯೋಗದ ವೆಬ್ ಸೈಟ್ http://kpsc.kar.nic.inನಿಂದ ಡೌನ್ಲೋಡ್ ಮಾಡಿಕೊಂಡು ತಮಗೆ ಹಂಚಿಕೆಯಾಗಿರುವ ಪರೀಕ್ಷಾ ಉಪಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗುವಂತೆ ಹಾಗೂ ಕಡ್ಡಾಯವಾಗಿ ಈ ಸೂಚನೆಗಳನ್ನು ಪಾಲಿಸುವಂತೆ ಈ ಮೂಲಕ ಅಭ್ಯರ್ಥಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.
ಸೂಚನೆಗಳು
* ಅಭ್ಯರ್ಥಿಗಳು ಪರೀಕ್ಷೆ ಆರಂಭವಾಗುವುದಕ್ಕಿಂತ ಎರಡು ಗಂಟೆ ಮುಂಚಿತವಾಗಿ ಅಂದರೆ ಬೆಳಗ್ಗೆ 8 ಗಂಟೆಯೊಳಗೆ ಪರೀಕ್ಷಾ ಉಪಕೇಂದ್ರದ ಬಳಿ ಹಾಜರಿರತಕ್ಕದು.
* ಬೆಳಗಿನ ಅಧಿವೇಶನ, 9:50ರ ನಂತರ ಮತ್ತು ಮಧ್ಯಾಹ್ನದ ಅಧಿವೇಶನ 1:50ರ ನಂತರ ಬರುವ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ, ಪ್ರವೇಶ ನೀಡಲಾಗುವುದಿಲ್ಲ.
* ಅಭ್ಯರ್ಥಿಗಳು ಕಡ್ಡಾಯವಾಗಿ ತರಬೇಕಾದ ದಾಖಲೆಗಳು. ಪರೀಕ್ಷೆಯ ಪ್ರವೇಶ ಪತ್ರ (Exam Admit Card).
* ಮೂಲ ಗುರುತಿನ ಚೀಟಿ Passport, PAN CARD, Voter ID, Aadhar U.I.D., Govt.Employer Id (or) Driving Licence ಇವುಗಳಲ್ಲಿ ಯಾವುದಾದರೊಂದು ತರತಕ್ಕದ್ದು.
* ಪಾಸ್ಪೋರ್ಟ್/ ಸ್ಟಾಂಪ್ ಅಳತೆಯ 2 ಭಾವ ಚಿತ್ರಗಳು
* ಅಂಗವಿಕಲ ಅಭ್ಯರ್ಥಿಗಳು (Person With Disabilities Candidates) ನಿಗದಿತ ಅಂಗವಿಕಲ ಪ್ರಮಾಣ ಪತ್ರಗಳು
* ತಮ್ಮದೇ ಆದ ಲಿಪಿಕಾರರನ್ನು ಕರೆತರಲು ಆಯ್ಕೆ ಮಾಡಿಕೊಂಡಿರುವ 259 ಅಂಗವಿಕಲ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರದೊಂದಿಗೆ ಲಿಪಿಕಾರರ ಪ್ರವೇಶ ಪತ್ರವನ್ನು ಸಹ ಡೌನ್ ಲೋಡ್ ಮಾಡಿಕೊಳ್ಳತಕ್ಕದ್ದು. ಸದರಿ 259 ಅಂಗವಿಕಲ ಅಭ್ಯರ್ಥಿಗಳು ತಮ್ಮದೇ ಆದ ಲಿಪಿಕಾರರನ್ನು ಕರೆತರದೇ ಇದ್ದರೆ, ಅಂತಹ ಅಭ್ಯರ್ಥಿಗಳು ಪರೀಕ್ಷಾ ದಿನದಂದು ಪರೀಕ್ಷಾ ಉಪಕೇಂದ್ರದ ಮುಖ್ಯಸ್ಥರನ್ನು, ಲಿಪಿಕಾರದ ಸಹಾಯವನ್ನು ಒದಗಿಸುವಂತೆ ಕೋರಿದ್ದಲ್ಲಿ ಸದರಿ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗುವುದು.
ಆಗಸ್ಟ್ 27ರ ಮಂಗಳವಾರ ಪರೀಕ್ಷೆ ಹಿನ್ನಲೆಯಲ್ಲಿ ಪರೀಕ್ಷಾ ಕೇಂದ್ರ ಸುತ್ತಲೂ 200 ಮೀಟರ್ ಒಳಗಿನ ಆವರಣವನ್ನು ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144 ರ ಮೇರೆಗೆ ನಿರ್ಬಂಧಿತ ಪ್ರದೇಶ ಎಂದು ಘೋಷಣೆ ಮಾಡಲಾಗುತ್ತದೆ. ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಾಗೂ ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಪರೀಕ್ಷೆಗಳು ನಡೆಯಲಿವೆ.
ಅಲ್ಲದೇ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ಜೆರಾಕ್ಸ್, ಇಂಟರ್ನೆಟ್ ಸೆಂಟರ್ಗಳು ಕಾರ್ಯನಿರ್ವಹಿಸದಂತೆ ಆದೇಶಿಸಲಾಗಿದೆ. ಅನಧಿಕೃತ ವ್ಯಕ್ತಿ ಮತ್ತು ವ್ಯಕ್ತಿಗಳ ಗುಂಪುಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಈ ಆದೇಶ ಪರೀಕ್ಷಾ ಮೇಲ್ವಿಚಾರಣೆ ಕಾರ್ಯ ನಿರ್ವಹಿಸುವ ಸಿಬ್ಬಂದಿಯವರಿಗೆ ಅನ್ವಯಿಸುವುದಿಲ್ಲ.












Click it and Unblock the Notifications