ಕರ್ನಾಟಕ ಹಜ್ ಯಾತ್ರಿಕರಿಗೆ ಪುನರ್ಮನನ ಶಿಬಿರ
ಗುಲ್ಬರ್ಗ, ಆ.11 : ಹೈದರಾಬಾದ್-ಕರ್ನಾಟಕ ಭಾಗದ ಬೀದರ್, ಗುಲ್ಬರ್ಗ ಮತ್ತು ಯಾದಗಿರಿ ಜಿಲ್ಲೆಗಳ ಹಜ್ ಯಾತ್ರಾರ್ಥಿಗಳಿಗೆ ಅನುಕೂಲವಾಗಲು ಮುಂಬರುವ ವರ್ಷಗಳಲ್ಲಿ ಗುಲ್ಬರ್ಗದಿಂದಲೇ ನೇರವಾಗಿ ಹಜ್ ಯಾತ್ರೆ ಕೈಗೊಳ್ಳಲು ವಿಮಾನ ಸೇವೆಯ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಖಮರುಲ್ ಇಸ್ಲಾಂ ಹೇಳಿದ್ದಾರೆ.
ಗುಲ್ಬರ್ಗದ ಕೆಎನ್ ಝಡ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಹಜ್ ಸಮಿತಿಯಿಂದ ಹಜ್ ಯಾತ್ರಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪೌರಾಡಳಿತ, ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಖಾತೆ ಸಚಿವ ಖಮರುಲ್ ಇಸ್ಲಾಂ, ಹೈ-ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗಲು ಗುಲ್ಬರ್ಗ ವಿಮಾನ ನಿಲ್ದಾಣದಿಂದ ಹಜ್ ಯಾತ್ರೆ ಕೈಗೊಳ್ಳಲು ವಿಮಾನ ಸೇವೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಮುಂದಿನ 2-3 ವರ್ಷದಲ್ಲಿ ಗುಲ್ಬರ್ಗದಿಂದ ಹಜ್ ಯಾತ್ರೆಗೆ ವಿಮಾನ ಸೇವೆ ಒದಗಿಸಲಾಗುವುದು. ಗುಲ್ಬರ್ಗ ವಿಮಾನ ನಿಲ್ದಾಣದ ಈಗಿನ ರನ್ ವೇ 2.5 ಕಿ.ಮೀ. ಇದ್ದು, ಕೇವಲ 50 ಪ್ರಯಾಣಿಕರ ವಿಮಾನ ಸಂಚಾರಕ್ಕೆ ಮಾತ್ರ ಅನುಕೂಲವಾಗುವುದು. ಈ ರನ್ ವೇ 3.5 ಕಿ.ಮೀ.ಗೆ ವಿಸ್ತರಿಸಲು ಆದೇಶಿಸಿದ್ದು, ಇದರಿಂದ ಅಂತರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಸಚಿವರು ಹೇಳಿದರು.
ಇದೊಂದು ಪವಿತ್ರ ಯಾತ್ರೆ : ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರ ಮೂಲಸೌಲಭ್ಯ ಅಭಿವೃದ್ಧಿ ಮತ್ತು ವಾರ್ತಾ ಸಚಿವ ರೋಷನ್ ಬೇಗ್, ಪ್ರಪಂಚದ ವಿವಿಧ ದೇಶಗಳಲ್ಲಿರುವ ಮುಸ್ಲಿಂ ಬಾಂಧವರು ಪ್ರತಿ ವರ್ಷ ಕೈಗೊಳ್ಳುವ ಹಜ್ ಯಾತ್ರೆಯು ಭ್ರಾತೃತ್ವ ಭಾವನೆಯ ಮತ್ತು ಪರಸ್ಪರ ಸಾಮರಸ್ಯದ ಸಂಕೇತವಾಗಿದ್ದು, ಇದೊಂದು ಪವಿತ್ರ ಯಾತ್ರೆಯಾಗಿದೆ ಎಂದು ಹೇಳಿದರು.
ಹಜ್ ಯಾತ್ರಿಕರಿಗೆ ಯಾತ್ರೆಯ ಸಂದರ್ಭದಲ್ಲಿ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಮತ್ತು ಸುರಕ್ಷತಾ ಕ್ರಮ ವಹಿಸುವ ಬಗ್ಗೆ ಸೂಕ್ತ ತರಬೇತಿ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ಇಂತಹ ತರಬೇತಿಯನ್ನು ರಾಜ್ಯದ ಗುಲ್ಬರ್ಗ, ಬಳ್ಳಾರಿ, ಹುಬ್ಬಳ್ಳಿ ಮತ್ತು ಬೆಂಗಳೂರು ನಗರಗಳಲ್ಲಿ ಆಯೋಜಿಸಲಾಗುತ್ತಿದೆ ಎಂದು ಸಚಿವ ರೋಷನ್ ಬೇಗ್ ತಿಳಿಸಿದರು.

ಈ ಬಾರಿ ಹಜ್ ಯಾತ್ರೆ ಕೈಗೊಳ್ಳಲಿರುವ ಎಲ್ಲ ಯಾತ್ರಾರ್ಥಿಗಳಿಗೆ ಮದಿನಾದಲ್ಲಿ ರಾಜ್ಯ ಸರ್ಕಾರದಿಂದ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಮಾಡಲಾಗುವುದು. ಮುಂಬರುವ ದಿನಗಳಲ್ಲಿ ಮೆಕ್ಕಾದಲ್ಲಿಯೂ ಈ ವ್ಯವಸ್ಥೆ ಮಾಡಲಾಗುವುದು. ವಿವಿಧ ರೋಗ ರುಜಿನಗಳ ಬಗ್ಗೆ ವಿಶೇಷವಾಗಿ ಎಲೋಬಾ ಎಂಬ ಭೀಕರ ರೋಗದ ಬಗ್ಗೆ ಯಾತ್ರಾರ್ಥಿಗಳು ಎಚ್ಚರಿಕೆ ವಹಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಕಾರ್ಯಕ್ರಮದಲ್ಲಿ ಗುಲ್ಬರ್ಗ ಸಂಸದ ಮಲ್ಲಿಕಾರ್ಜುನ ಖರ್ಗೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ನಿತೀನ್ ವಿ. ಗುತ್ತೇದಾರ್, ವಿಧಾನ ಪರಿಷತ್ ಶಾಸಕರಾದ ಅಲ್ಲಂಪ್ರಭು ಪಾಟೀಲ್, ಇಕ್ಬಾಲ್ ಅಹ್ಮದ್ ಸರಡಗಿ, ಹಾಜಿ ಅಬ್ದುಲ್ ಜಾಫರ್ ಸಾಬ್, ಹಜ್ ತರಬೇತಿ ಸಮಿತಿ ಸದಸ್ಯರಾದ ಜಾಫರ್ ಹುಸೇನ್, ಝಾಕೀರ್ ಹುಸೇನ್ ಮುಂತಾದವರು ಪಾಲ್ಗೊಂಡಿದ್ದರು. [ಚಿತ್ರ, ಸುದ್ದಿ : ಗುಲ್ಬರ್ಗ ವಾರ್ತಾ ಸೌಧ]












Click it and Unblock the Notifications