ಸಚಿವರ ಭೂ ಹಗರಣ, ವರದಿ ಕೇಳಿದ ದಿಗ್ಗಿ
ಬೆಂಗಳೂರು, ಆ.12 : ಸಚಿವ ದಿನೇಶ್ ಗುಂಡೂರಾವ್ ಅವರ ವಿರುದ್ಧದ ಭೂ ಹಗರಣಗಳ ಕುರಿತು ವರದಿ ನೀಡುವಂತೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿದ್ದಾರೆ. ಸಚಿವರ ಭೂ ಹಗರಣದ ಕುರಿತು ಎಸ್.ಆರ್.ಹಿರೇಮಠ್ ದಾಖಲೆ ಬಿಡುಗಡೆ ಮಾಡಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವರಾಗಿರುವ ದಿನೇಶ್ ಗುಂಡೂರಾವ್ ಮತ್ತು ಅವರ ಕುಟುಂಬದವರು ಸೇರಿ ಸುಮಾರು 1300 ಕೋಟಿ ರೂ. ಮೌಲ್ಯದ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿದ್ದಾರೆ ಎಂದು ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ್ ಆರೋಪಿಸಿದ್ದರು.

ಕರ್ನಾಟಕ ರಾಜ್ಯ ಹಣಕಾಸು ನಿಗಮಕ್ಕೆ 9.61 ಕೋಟಿ ರೂ. ತಪ್ಪು ಮಾಹಿತಿ ನೀಡಿ ನಷ್ಟ ಉಂಟು ಮಾಡಿದ್ದಾರೆ ಎಂದು ಹಿರೇಮಠ್ ಹೇಳಿದ್ದರು. ಇವೆಲ್ಲವನ್ನೂ ಸಾಬೀತುಪಡಿಸುವ ದಾಖಲೆಗಳು ತಮ್ಮ ಬಳಿ ಇದ್ದು, ದಿನೇಶ್ ಗುಂಡೂರಾವ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. [ದಿನೇಶ್ ಗುಂಡೂರಾವ್ ವಿರುದ್ಧ ಭೂ ಅಕ್ರಮ ಆರೋಪ]
ಸಚಿವರು ಅಕ್ರಮ ಭೂಕಬಳಿಕೆ ಮಾಡಿರುವ ಕುರಿತು ರಾಜ್ಯಪಾಲರಿಗೆ 118 ಪುಟಗಳ ಮನವಿ ಸಲ್ಲಿಸಲಾಗಿದೆ. ಅಲ್ಲದೇ, ಎ.ಟಿ.ರಾಮಸ್ವಾಮಿ ತಮ್ಮ ವರದಿಯಲ್ಲಿ ಸರ್ಕಾರಿ ಭೂ ಕಬಳಿಕೆಯಲ್ಲಿ ದಿನೇಶ್ ಗುಂಡೂರಾವ್ ಪ್ರಥಮ ಸ್ಥಾನದಲ್ಲಿರುವುದನ್ನು ಸ್ಪಷ್ಟಪಡಿಸಿದ್ದಾರೆ ಎಂದು ಹಿರೇಮಠ್ ಹೇಳಿದ್ದರು.
ಹಲವಾರು ಆರೋಪಗಳನ್ನು ಎದುರಿಸುತ್ತಿರುವ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ ಎಂದು ಹಿರೇಮಠ್ ತಿಳಿಸಿದ್ದರು.
ಎಸ್.ಆರ್.ಹಿರೇಮಠ್ ಸಚಿವರ ಕುರಿತು ಕಳುಹಿಸಿದ ದಾಖಲೆಗಳು ದೆಹಲಿ ತಲುಪಿದ್ದು, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಈ ಕುರಿತು ವರದಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿರ್ದೇಶನ ನೀಡಿದ್ದಾರೆ.











Click it and Unblock the Notifications