ಡಿ. ರೂಪಾ ವಿರುದ್ಧ 20 ಕೋಟಿ ರೂ. ಮಾನನಷ್ಟ ಮೊಕದ್ದಮೆ
ಬೆಂಗಳೂರು, ನವೆಂಬರ್ 28: ಬಂಧೀಖಾನೆ ವಿಭಾಗದ ಮಾಜಿ ಡಿಐಜಿ ಹಾಗೂ ಹಾಲಿ ರಸ್ತೆ ಸುರಕ್ಷತೆ ಮತ್ತು ಸಾರಿಗೆ ವಿಭಾಗದ ಆಯುಕ್ತೆ ಡಿ. ರೂಪಾ ವಿರುದ್ಧ 20 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ.
ಕಳೆದ ಆಗಸ್ಟ್ ನಲ್ಲಿ ಬಂಧೀಖಾನೆ ವಿಭಾಗದ ಡಿಜಿಪಿ ಸ್ಥಾನದಿಂದ ನಿವೃತ್ತರಾಗಿದ್ದ ಎಚ್.ಎನ್ ಸತ್ಯನಾರಾಯಣ ರಾವ್ ಈ ಪ್ರಕರಣ ದಾಖಲಿಸಿದ್ದಾರೆ.
Recommended Video

ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಡಿ ರೂಪಾ, "ನನಗೆ ಸತ್ಯನಾರಾಯಣ ರಾವ್ ಆಗಲಿ ಅವರ ವಕೀಲರಿಂದಾಗಲೀ ಯಾವುದೇ ನೋಟಿಸ್ ಬಂದಿಲ್ಲ. ಪ್ರಕರಣ ದಾಖಲಾಗಿದ್ದಲ್ಲಿ ಅದರ ವಿರುದ್ಧ ಕಾನೂನು ರೀತಿಯ ಹೋರಾಟ ನಡೆಸುತ್ತೇನೆ," ಎಂದು ಹೇಳಿದ್ದಾರೆ.
ಈ ಹಿಂದೆ ಎಐಎಡಿಎಂಕೆ ನಾಯಕಿ ವಿ.ಕೆ ಶಶಿಕಲಾಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಸೌಲಭ್ಯ ಕಲ್ಪಿಸಲು ಉನ್ನತ ಅಧಿಕಾರಿಗಳು 2 ಕೋಟಿ ಲಂಚ ಪಡೆದಿದ್ದಾಗಿ ಬಂಧೀಖಾನೆ ವಿಭಾಗದ ಮಾಜಿ ಡಿಐಜಿ ಡಿ ರೂಪಾ ಆರೋಪಿಸಿದ್ದರು.

ಈ ಸಂಬಂಧ ತಿಂಗಳ ಹಿಂದೆ ರೂಪಾಗೆ ಸತ್ಯನಾರಾಯಣ ರಾವ್ 7 ಪುಟಗಳ ಲೀಗಲ್ ನೋಟಿಸ್ ನೀಡಿದ್ದರು.
ನೋಟಿಸ್ ನಲ್ಲಿ 'ನನ್ನ ಗೌರವಕ್ಕೆ ಧಕ್ಕೆ ತರುವಂತ ಹೇಳಿಕೆ ನೀಡಿದ್ದೀರಿ', ಎಂದು ಸತ್ಯನಾರಾಯಣ ರಾವ್ ಹೇಳಿದ್ದರು. ಮಾತ್ರವಲ್ಲ ಈ ನೋಟಿಸ್ ಸಿಕ್ಕಿದ ಮೂರು ದಿನಗಳೊಳಗೆ ಬೇಷರತ್ ಕ್ಷಮೆ ಕೇಳಬೇಕು. ಇಲ್ಲದಿದ್ದಲ್ಲಿ ರೂ. 50 ಕೋಟಿಯ ಕ್ರಿಮಿನಲ್ ಮತ್ತು ಸಿವಿಲ್ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ರೂಪಾ "ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಮಾನನಷ್ಟ ಮೊಕದ್ಧಮೆ ವಿಚಾರದಲ್ಲಿ ನ್ಯಾಯಾಲಯದ ವಿಚಾರಣೆ ಎದುರಿಸಲು ಸಿದ್ಧ," ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು.
ಇದೀಗ ರೂಪಾ ವಿರುದ್ಧ ಸತ್ಯನಾರಾಯಣ್ ರಾವ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು 20 ಕೋಟಿ ರೂಪಾಯಿ ಪರಿಹಾರ ಕೇಳಿದ್ದಾರೆ.












Click it and Unblock the Notifications