ಧರ್ಮೋ ರಕ್ಷತಿ ರಕ್ಷಿತಃ, ನಮೋ ಮಂಜುನಾಥ: ಭಕ್ತರಿಗೆ ಧರ್ಮಸ್ಥಳದಿಂದ ವಿಶೇಷ ಸಂದೇಶ, ಫೋಟೋ ವೈರಲ್
ಇಡೀ ರಾಜ್ಯದಲ್ಲೇ ಸಂಚಲನ ಸೃಷ್ಟಿಸಿದ್ದ ಧರ್ಮಸ್ಥಳ ಪ್ರಕರಣವು ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ನೂರಾರು ಶವಗಳನ್ನು ಹೂತಿದ್ದೇನೆ ಎಂದು ಮುಸುಕುಧಾರಿ (ಮಾಸ್ಕ್ಮ್ಯಾನ್) ವ್ಯಕ್ತಿ ಹೇಳಿದ್ದು ಸುಳ್ಳು ಎಂದು ತಿಳಿದುಬಂದ ಹಿನ್ನೆಲೆ ಎಸ್ಐಟಿ ಅಧಿಕಾರಿಗಳು ಆತನನ್ನ ಬಂಧಿಸಿದ್ದಾರೆ. ಧರ್ಮಸ್ಥಳ ದೇವಸ್ಥಾನಕ್ಕೆ ಕಳಂಕ ತರಲು ಈ ಷಡ್ಯಂತ್ರ ರೂಪಿಸಲಾಗಿದೆ ಎಂಬ ಆರೋಪವೂ ಇತ್ತು. ಈಗ ಆ ಮಾಸ್ಕ್ಮ್ಯಾನ್ ಬಂಧನವಾದ ಬೆನ್ನಲ್ಲೇ ಧರ್ಮಸ್ಥಳ ದೇವಸ್ಥಾನವು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ಭಕ್ತರಿಗೆ ವಿಶೇಷ ಸಂದೇಶವೊಂದನ್ನು ನೀಡಿದೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂಬ ಪ್ರಕರಣವು ಇಡೀ ದೇಶದೆಲ್ಲೆಡೆ ಸದ್ದು ಮಾಡಿತ್ತು. ಅನಾಮಿಕ ವ್ಯಕ್ತಿಯೊಬ್ಬ ಸಾಕ್ಷಿ ದೂರುದಾರನಾಗಿ ಪ್ರತ್ಯಕ್ಷವಾಗಿ ಈ ಕೋರ್ಟ್ ಮುಂದೆ ಈ ಹೇಳಿಕೆ ದಾಖಲಿಸಿದ್ದ. ಈ ಹಿನ್ನೆಲೆ ರಾಜ್ಯ ಸರ್ಕಾರ ಕೂಡ ತನಿಖೆಗಾಗಿ ಎಸ್ಐಟಿ ತಂಡವನ್ನು ರಚಿಸಿತ್ತು. ಇದೀಗ ಆ ವ್ಯಕ್ತಿ ದಿಢೀರ್ ಯೂಟರ್ನ್ ಹೊಡೆದು ತಪ್ಪೊಪ್ಪಿಕೊಂಡಿದ್ದು, ಪ್ರಕರಣವೇ ತಲೆಕೆಳಗಾಗಿದೆ. ಈ ಹಿನ್ನೆಲೆ ಆತನನ್ನ ಎಸ್ಐಟಿ ಅಧಿಕಾರಿಗಳು ಬಂಧಿಸಿ, ಕಸ್ಟಡಿಗೆ ಪಡೆದಿದ್ದಾರೆ. ಆತ ಮಂಡ್ಯ ಮೂಲದ ವ್ಯಕ್ತಿ ಎಂದು ಫೋಟೋ ಕೂಡ ರಿವೀಲ್ ಮಾಡಿದೆ.

ಧರ್ಮಸ್ಥಳದಲ್ಲಿ ನಡೆದಿರುವ ಈ ಪ್ರಕರಣಗಳ ತನಿಖೆಯಾಗಿ ಸತ್ಯ ಹೊರಬರಬೇಕು ಎಂದು ರಾಜ್ಯದ ಜನರು, ಸೆಲೆಬ್ರಿಟಿಗಳು ಕೂಡ ಧ್ವನಿ ಎತ್ತಿದ್ದರು. ಆದರೆ ಧರ್ಮಸ್ಥಳ ದೇವಸ್ಥಾನಕ್ಕೆ ಕಳಂಕ ತರಲು ಈ ಷಡ್ಯಂತ್ರ ರೂಪಿಸಲಾಗಿದೆ ಎಂದು ಬಿಜೆಪಿ ನಾಯಕರು ಸೇರಿದಂತೆ ಹಲವರು ಮತ್ತೊಂದೆಡೆ ಗಂಭೀರ ಆರೋಪ ಮಾಡಿದ್ದರು. ಈ ಪರ ವಿರೋಧದ ನಡುವೆಯೇ ಮುಸುಕುಧಾರಿ ವ್ಯಕ್ತಿ ಉಲ್ಟಾ ಹೊಡೆದಿದ್ದು, ಪ್ರಕರಣ ರೋಚಕ ತಿರುವು ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಧರ್ಮಸ್ಥಳದ ಮಂಜುನಾಥ ದೇವಸ್ಥಾನದ ಅಧಿಕೃತ ಖಾತೆಯಿಂದ ಭಕ್ತರಿಗೆ ಸಂದೇಶ ನೀಡಲಾಗಿದೆ.
"ಶ್ರೀಧರ್ಮಸ್ಥಳ" ಎನ್ನುವ ಇನ್ಸ್ಟಾಗ್ರಾಂ ಖಾತೆಯಿಂದ ದೇವಸ್ಥಾನದ ಫೋಟೋ ಹಂಚಿಕೊಳ್ಳಲಾಗಿದ್ದು, ಇದರಲ್ಲಿ ಶಿವನ ಫೋಟೋ ಕೂಡ ಇದೆ. ಇದರೊಂದಿಗೆ "ನಮೋ ಮಂಜುನಾಥ" ಎಂದು ಬರೆದುಕೊಂಡಿದೆ. ಮತ್ತೊಂದು ವಿಡಿಯೋ ಕೂಡ ಹಂಚಿಕೊಂಡಿದ್ದು, ಇದರಲ್ಲಿ ಧರ್ಮೋ ರಕ್ಷತಿ ರಕ್ಷಿತಃ ಎಂದು ಟೈಟಲ್ ಇದೆ. ಧರ್ಮಸ್ಥಳದಲ್ಲಿ ನಡೆಯುವ ಪೂಜಾ ಕಾರ್ಯಕ್ರಮಗಳು ಹಾಗೂ ದೇವರ ಆರಾಧನೆ, ಮಹೋತ್ಸವದ ದೃಶ್ಯಗಳು ಇದರಲ್ಲಿವೆ.

ವೀರೇಂದ್ರ ಹೆಗ್ಗಡೆ ಹೇಳಿದ್ದೇನು?
ಮುಸುಕುಧಾರಿ ವ್ಯಕ್ತಿ ಬಂಧನದ ಬೆನ್ನಲ್ಲೇ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಕೂಡ ಪ್ರತಿಕ್ರಿಯಿಸಿದ್ದಾರೆ. "ಒಂದೊಂದೇ ಸತ್ಯಗಳು ಹೊರಗೆ ಬರುತ್ತಾ ಇದೆ" ಎಂದಿದ್ದಾರೆ. ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳು, ಎಸ್ಐಟಿ ತನಿಖೆಯ ಹಂತದಲ್ಲಿ ಈ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಧರ್ಮಸ್ಥಳಕ್ಕೆ ಬಂದು ಬೆಂಬಲ ನೀಡುವ ಎಲ್ಲರಿಗೂ ಧನ್ಯವಾದ. ಸತ್ಯಗಳನ್ನು ತೊಳೆದು ಇಟ್ಟಂತಾಗಿದೆ, ಕ್ಷೇತ್ರದ ಮೇಲಿನ ಅಭಿಮಾನ ಹೀಗೆಯೇ ಇರಲಿ. ಎಲ್ಲರ ಪ್ರೀತಿ ವಿಶ್ವಾಸ ಹೀಗೆಯೇ ಇರಲಿ ಎಂದು ಆಶಿಸುತ್ತೇನೆ ಎಂದು ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ.












Click it and Unblock the Notifications