ಭೂ ಅಕ್ರಮ ಆರೋಪ ತಳ್ಳಿ ಹಾಕಿದ ಡಾ. ಹೆಗ್ಗಡೆ
ಬೆಂಗಳೂರು, ಅ.28: ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಕುಟುಂಬದ ಮೇಲೆ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಆರೋಪ ಕೇಳಿ ಬಂದ ಬೆನ್ನಲ್ಲೆ ಧರ್ಮಸ್ಥಳ ಟ್ರಸ್ಟ್ ಮೇಲೆ ಭೂ ಹಗರಣ ಆರೋಪಗಳು ಕೇಳಿ ಬಂದಿದೆ. ಶಾಸಕ ವಸಂತ ಬಂಗೇರ ಹಾಗೂ ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಸೋಮನಾಥ್ ನಾಯಕ್ ಮತ್ತು ಕಾನೂನು ತಜ್ಞ ರಂಜನ್ ರಾವ್ ಈ ಆರೋಪ ಮಾಡಿದ್ದಾರೆ.
ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು 'ತಾವು ಯಾವುದೇ ರೀತಿಯ ಕಾನೂನು ಉಲ್ಲಂಘನೆ ಮಾಡಿ ಕೃಷಿ ಜಮೀನು ಖರೀದಿ ಮಾಡಿಲ್ಲ. ಸರ್ಕಾರಕ್ಕೆ ನಮ್ಮ ಟ್ರಸ್ಟ್ ಬಗ್ಗೆ ಸಂಶಯವಿದ್ದರೆ ತನಿಖೆ ನಡೆಸಲು ಅಭ್ಯಂತರವಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ ಆರೋಪಿಸಿರುವಂತೆ ತಮ್ಮ ಸಂಸ್ಥೆ ಕೃಷಿಯೇತರ ಜಮೀನನ್ನು ಖರೀದಿ ಮಾಡಿರುವುದು ನಿಜ. ಈ ಜಮೀನಿನಲ್ಲಿ ಹಾಸ್ಟೆಲ್ ಗಳು, ವಸತಿ ನಿಲಯಗಳು ಹಾಗೂ ಟ್ರಸ್ಟ್ ಗಳನ್ನು ನಿರ್ಮಿಸಲಾಗಿದೆ. ವಾಣಿಜ್ಯ ಉದ್ದೇಶಕ್ಕೆ ಬಳಸಿದ್ದರೆ ಸರ್ಕಾರ ಇಂದೇ ತನಿಖೆಗೆ ಆದೇಶ ಮಾಡಲಿ ಎಂದು ಮನವಿ ಮಾಡಿದ್ದಾರೆ.
ನಮ್ಮ ಸಂಸ್ಥೆಯು ಪ್ರಾರಂಭದ ದಿನದಿಂದಲೂ ಕೃಷಿ ಬಂಜರು ಭೂಮಿಯನ್ನು ಖರೀದಿಸಿ ನಿಯಮಾವಳಿಯಂತೆ ಕೃಷಿಯೇತರ ಜಮೀನಿಗೆ ಪರಿವರ್ತಿಸಿ ನಂತರವೇ ಖರೀದಿ ಮಾಡಿದೆ. ನಾಗರಿಕ ಸೇವಾ ಟ್ರಸ್ಟ್ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಸರ್ಕಾರದ ನಿಯಮದಂತೆ ಜಮೀನು ಖರೀದಿ ಮಾಡಿರುವಾಗ ಕಾನೂನು ಬಾಹಿರ ಎಂಬ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದು ಹೆಗ್ಗಡೆ ಅವರು ಹೇಳಿದ್ದಾರೆ.

ಒಂದು ವೇಳೆ ನಮ್ಮ ಟ್ರಸ್ಟ್ ಬಗ್ಗೆ ಸರ್ಕಾರಕ್ಕೆ ಸಂಶಯವಿದ್ದರೆ ಕಂದಾಯ ಇಲಾಖೆ ಅಧಿಕಾರಿ ಇಲ್ಲವೇ ಬೇರೆ ಯಾವುದೇ ಅಧಿಕಾರಿಯಿಂದ ತನಿಖೆ ನಡೆಸಬಹುದು. ನಾವು ತನಿಖೆಗೆ ಪೂರ್ಣ ರೀತಿಯ ಸಹಕಾರ ನೀಡುತ್ತೇವೆ. ನಮ್ಮ ಟಸ್ಟ್ ಬಗ್ಗೆ ಬಂದಿರುವ ಸಂಶಯಗಳ ಬಗ್ಗೆಯೂ ನಿವಾರಣೆ ಮಾಡುತ್ತೇವೆ ಎಂದು ವೀರೇಂದ್ರ ಹೆಗ್ಗಡೆ ತಿಳಿಸಿದರು.
ಏನಿದು ಪ್ರಕರಣ: ಭೂಸುಧಾರಣಾ ಕಾಯ್ದೆ ಉಲ್ಲಂಘಿಸಿ ಧರ್ಮಸ್ಥಳದ ಕೃಷಿ ಭೂಮಿಯನ್ನು ಅಕ್ರಮವಾಗಿ ಕೃಷಿಯೇತರ ಚಟುವಟಿಕೆಗೆ ಬಳಸಿಕೊಂಡಿದೆ ಎಂದು ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಸೋಮನಾಥ್ ನಾಯಕ್ ಮತ್ತು ಕಾನೂನು ತಜ್ಞ ರಂಜನ್ ರಾವ್ ಆರೋಪಿಸಿದ್ದಾರೆ. ಆರ್ ಟಿಐನಿಂದ ಈ ಕುರಿತ ಎಲ್ಲ ದಾಖಲೆಗಳನ್ನು ಪಡೆದು ದಾಖಲೆಗಳನ್ನು ಮಾಧ್ಯಮಗಳ ಮುಂದಿಟ್ಟಿರುವ ಟ್ರಸ್ಟ್, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಸರ್ಕಾರವನ್ನು ಆಗ್ರಹಿಸಿದೆ.
ವೀರೇಂದ್ರ ಹೆಗ್ಗಡೆ, ಸ್ಥಳೀಯ ಎಸಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ವೀರೇಂದ್ರ ಹೆಗ್ಗಡೆ ಕುಟುಂಬ ಬಳಸಿಕೊಂಡಿರುವ ಭೂಮಿಯನ್ನ ದಲಿತರಿಗೆ ಹಂಚಬೇಕು ಎಂದು ಒತ್ತಾಯಿಸಿದೆ. ಹಗರಣದ ಬಗ್ಗೆ ನನಗೆ ಪತ್ರ ಬಂದಿದೆ, ಈ ಹಿಂದೆಯೂ ಪತ್ರ ಬಂದಿತ್ತು. ಈ ಬಗ್ಗೆ ಪರಿಶೀಲಿಸಿ, ತನಿಖೆ ನಡೆಸಲು ಸೂಚನೆ ನೀಡುವುದಾಗಿ ಸ್ಥಳೀಯ ಶಾಸಕ ವಸಂತ ಬಂಗೇರ ಭರವಸೆ ನೀಡಿದ್ದಾರೆ.












Click it and Unblock the Notifications