ಸ್ಟಾರ್ ನಟರು ನಮ್ಮೊಂದಿಗೆ ಇರುವ ಕಾರಣ ಎದುರಾಳಿಗಳಿಗೆ ಸೋಲಿನ ಭಯ ಕಾಡುತ್ತಿದೆ : ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ, ಏಪ್ರಿಲ್7: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಪಣತೊಟ್ಟಿರುವ ರಾಜ್ಯ ಬಿಜೆಪಿ ಮಿಷನ್ 150 ಟಾರ್ಗೆಟ್ ಹಾಕಿಕೊಂಡಿದ್ದು, ಬಿಜೆಪಿ ಪರವಾಗಿ ಪ್ರಚಾರ ಮಾಡಲು ನಟ ಸುದೀಪ್ ಸೇರಿದಂತೆ ಹಲವು ಸಿನಿಮಾ ಸ್ಟಾರ್ ಗಳ ಕರೆಸಲು ರಾಜ್ಯ ಬಿಜೆಪಿ ಸಜ್ಜಾಗಿದ್ದು,ಇತ್ತ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ದ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ.
ಈ ಕುರಿತು ಶುಕ್ರವಾರ ಹುಬ್ಬಳ್ಳಿಯಲ್ಲಿ ಬಸವರಾಜ ಬೊಮ್ಮಾಯಿ ಮಾತನಾಡಿ, ನಮ್ಮ ಜೊತೆಗೆ ಓರ್ವ ಸೂಪರ್ ಸ್ಟಾರ್ ಬಂದಿದ್ದಾರೆಂಬ, ಆತಂಕ, ಕಳವಳ ವಿರೋಧಿಗಳಿಗೆ ಕಾಡುತ್ತಿದೆ. ಹೀಗಾಗಿ ಅವರ ಸೋಲು ಗೋಡೆಯ ಮೇಲೆ ಕಾಣುತ್ತಿದೆ ಎಂದು ಹೇಳಿದರು.

ಸುದೀಪ್ ಅವರನ್ನು ಸ್ಟಾರ್ ಪ್ರಚಾರಕರಾಗಿ ತೆಗೆದುಕೊಂಡ ಹಿನ್ನೆಲೆ ಎದುರಾದ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿ, ಸ್ಟಾರ್ ನಟರನ್ನು ಚುನಾವಣೆಯಲ್ಲಿ ಪ್ರಚಾರಕ್ಕೆ ಬಳಕೆ ಮಾಡುವುದು ಹೊಸದಲ್ಲ, ದೇಶದಾದ್ಯಂತ ನಡೆದಿದೆ. ಇದೀಗ ರಾಜ್ಯದಲ್ಲಿ ಆಗತ್ತಿದೆ. ಈ ಹಿಂದೆ ಕುಮಾರಸ್ವಾಮಿ ಮತ್ತು ನಾನು 1996 ರಲ್ಲಿ ರಾಮನಗರ ಉಪಚುನಾವಣೆಯಲ್ಲಿ ಅಂಬರೀಶ್ ಅವರನ್ನು ಕರೆತಂದು ನಿಲ್ಲಿಸಿ, ಪ್ರಚಾರ ಮಾಡಿದ್ದೇವೆ. ಅದು ಕುಮಾರಸ್ವಾಮಿ ಅವರಿಗೆ ನೆನಪು ಇರಬಹುದು ಅಂತಾ ಅಂದುಕೊಳ್ಳುತ್ತೇನೆ. ಇದೀಗ ಒಬ್ಬ ಸೂಪರ್ ಸ್ಟಾರ್ ನಮ್ಮ ಜೊತೆಗೆ ಇದ್ದಾರೆಂಬ ಕಳವಳ ಕಾಡುತ್ತಿದೆ. ಹೀಗಾಗಿ ಸೋಲು ಗೋಡೆಯ ಮೇಲೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷದಲ್ಲಿಯೂ ಹಲವರು ಸ್ಟಾರ್ ಗಳಿದ್ದಾರೆ. ಹಲವರನ್ನು ತೆಗೆದುಕೊಂಡಿದ್ದಾರೆ. ಅವರ ಬಗ್ಗೆ ನಾವು ಮಾತಾಡಿಲ್ಲ. ನಮಗೆ ಗೆಲುವಿನ ವಿಶ್ವಾಸ ಇದೆ. ಅವರಿಗೆ ಸೋಲಿನ ವಿಶ್ವಾಸ ಇದೆ. ಹೀಗಾಗಿ ನಟ ಸುದೀಪ್ ಕುರಿತು ಟೀಕೆ ಮಾಡತ್ತಾರೆಂದು ತಿಳಿಸಿದರು.
ದೆಹಲಿ ಪ್ರವಾಸದ ಕುರಿತು ಮಾತನಾಡಿ, ದೆಹಲಿಯಲ್ಲಿ ನಾಳೆ (ಶನಿವಾರ) ಪಾರ್ಲಿಮೆಂಟ್ ಬೋರ್ಡ್ ನ ಸಭೆ ನಡೆಯಲಿದೆ. ಈಗಾಗಲೇ ಕ್ಷೇತ್ರ, ಜಿಲ್ಲಾಮಟ್ಟದಲ್ಲಿ ಅಭಿಪ್ರಾಯ ಸಂಗ್ರಹ ಸಭೆ ನಡೆದಿದೆ. ರಾಜ್ಯ ಸಮಿತಿ ಕೂಡಾ ಪರಿಶೀಲನೆ ಸಭೆ ಮಾಡಿ ಆಕಾಂಕ್ಷಿಗಳ ಪಟ್ಟಿಯನ್ನು ಶಾರ್ಟ್ ಲಿಸ್ಟ್ ಮಾಡಿದೆ. ನಾಳೆ ಪಾರ್ಲಿಮೆಂಟ್ ಬೋರ್ಡ್ ನಲ್ಲಿ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆಯಾಗತ್ತಾರೆಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಕಲಘಟಗಿ ಕ್ಷೇತ್ರದಿಂದ ನಾಗರಾಜ್ ಛಬ್ಬಿ ಅವರು ನಮಗೆ ಏನೂ ಸಂಪರ್ಕ ಮಾಡಿಲ್ಲ. ಅದರ ಬಗ್ಗೆ ನಂಗೆ ಗೊತ್ತಿಲ್ಲ ಎಂದ ಅವರು, ಟಿಕೆಟ್ ಆಕಾಂಕ್ಷಿಗಳ ನಡುವೆ ಆಣೆಪ್ರಮಾಣದ ಕುರಿತು ಮಾತನಾಡಿ, ಇದು ಹೊಸದೆನ್ನಲ್ಲ, ಚುನಾವಣೆ ಬಂದಾಗ ಆ ಕ್ಷೇತ್ರದ ಹಿರಿಯರು ಬೇರೆ ಬೇರೆ ಕ್ರಮ ಮಾಡತ್ತಾ ಇರುತ್ತಾರೆ. ಅದರ ಬಗ್ಗೆ ವಿಶ್ಲೇಷಣೆ ಮಾಡುವುದಕ್ಕೆ ಬರುವುದಿಲ್ಲ ಎಂದರು.
ವರುಣಾ ಕ್ಷೇತ್ರದಿಂದ ಯಾರನ್ನ ಕಣಕ್ಕಿಳಿಸುತ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸ್ಪರ್ಧೆ ದೆಹಲಿಯಲ್ಲಿ ನಿರ್ಧಾರ ಆಗುತ್ತದೆ, ಅಲ್ಲಿಯೇ ಅಂತಿಮವಾಗಲಿದೆ. ಉಳಿದ ಕ್ಷೇತ್ರದಂತೆ ಅಂತಿಮವಾಗಲಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಇನ್ನೂ ಬಿಜೆಪಿ ಅಭ್ಯರ್ಥಿ ಆಯ್ಕೆಗೆ ವಿಚಾರವಾಗಿ ಈಗಾಗಲೇ ಕ್ಷೇತ್ರ ಹಾಗೂ ಜಿಲ್ಲಾ ಮಟ್ಟದಲ್ಲಿ ಅಭಿಪ್ರಾಯ ಸಂಗ್ರಹವಾಗಿದೆ. ರಾಜ್ಯ ಮಟ್ಟದಲ್ಲಿ ಚರ್ಚೆ ನಡೆದಿದೆ. ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ. ಪ್ರತಿ ಕ್ಷೇತ್ರಕ್ಕೆ ಎರಡು-ಮೂರು ಜನರ ಹೆಸರು ಶಾರ್ಟ್ ಲಿಸ್ಟ್ ಮಾಡಲಾಗಿದ್ದು, ಅಂತಿಮವಾಗಿ ಸಂಸದೀಯ ಮಂಡಳಿ ಸಭೆಯಲ್ಲಿ ತೀರ್ಮಾನವಾಗಲಿದೆ ಎಂದರು












Click it and Unblock the Notifications