ಸಂಪುಟ ವಿಸ್ತರಣೆ ವಿಳಂಬ: ಅತೃಪ್ತ ಶಾಸಕರು ಚಳಿಗಾಲದ ಅಧಿವೇಶನದಿಂದ ಹೊರಗೆ?
ಬೆಂಗಳೂರು, ನವೆಂಬರ್ 24: ಸಂಪುಟ ವಿಸ್ತರಣೆಗೆ ಕಾದು ಸುಸ್ತಾಗಿರುವ ಸಚಿವ ಸ್ಥಾನ ಆಕಾಂಕ್ಷಿ ಶಾಸಕರು ಚಳಿಗಾಲದ ಅಧಿವೇಶನಕ್ಕೆ ಗೈರಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ತಂತ್ರ ಅನುಸರಿಸಲಿದ್ದಾರೆ.
ಅತಿ ಹೆಚ್ಚು ಸಚಿವ ಸ್ಥಾನ ಆಕಾಂಕ್ಷಿಗಳಿರುವ ಕಾಂಗ್ರೆಸ್ ಪಕ್ಷದ 15 ಶಾಸಕರು ಡಿಸೆಂಬರ್ 10 ರಿಂದ ಬೆಳಗಾವಿಯಲ್ಲಿ ನಡೆಯುವ ಅಧಿವೇಶನಕ್ಕೆ ಗೈರಾಗುವ ಸಾಧ್ಯತೆ ದಟ್ಟವಾಗಿದೆ. ಜೆಡಿಎಸ್ನ ಕೆಲವೂ ಶಾಸಕರೂ ಸಹ ಗೈರಾಗಲಿದ್ದಾರೆ ಎನ್ನಲಾಗಿದೆ.
ಇದಕ್ಕೆ ಸೂಚನೆ ಎಂಬಂತೆ ನಿನ್ನೆಯಷ್ಟೆ ಸತೀಶ್ ಜಾರಕಿಹೊಳಿ ಅವರು, ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಸರ್ಕಾರ ಇನ್ನೂ ಟೆಕ್ಆಫ್ ಆಗಿಲ್ಲವೆಂದು ಅವರು ಹೇಳಿಕೆ ನೀಡಿದ್ದಾರೆ.
ಸಚಿವ ರಮೇಶ್ ಜಾರಕಿಹೊಳಿ ಸಹ ಸದನಕ್ಕೆ ಗೈರಾಗುವ ಮೂಲಕ ಕಾಂಗ್ರೆಸ್ಗೆ ಹಾಗೂ ಸರ್ಕಾರಕ್ಕೆ ಮುಜುಗರ ಉಂಟುಮಾಡಲಿದ್ದಾರೆ ಎಂಬ ಊಹಾಪೋಹ ಹರಿದಾಡುತ್ತಿದೆ. ಡಿ.ಕೆ.ಶಿವಕುಮಾರ್ ಅವರ ಬೆಳಗಾವಿ ರಾಜಕೀಯ ಹಸ್ತಕ್ಷೇಪದಿಂದ ಅವರು ಮುನಿಸಿಕೊಂಡಿದ್ದಾರೆ.

ಅಸಮಾಧಾನ ಹೊರ ಹಾಕಿದ ಸತೀಶ್ ಜಾರಕಿಹೊಳಿ
ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸತೀಶ್ ಜಾರಕಿಹೊಳಿ, ಸಂಪುಟ ವಿಸ್ತರಣೆ ಆದಷ್ಟು ಬೇಗ ನಡೆದರೆ ಒಳ್ಳೆಯದು ಎಂದು ಹೇಳಿದ್ದರು. ಅಷ್ಟೆ ಅಲ್ಲದೆ, ಸಿದ್ದರಾಮಯ್ಯ ಅವಧಿಯಲ್ಲಿ ಬರುತ್ತಿದ್ದಷ್ಟು ಅನುದಾನ ಈಗ ಬರುತ್ತಿಲ್ಲ, ಸರ್ಕಾರ ಇನ್ನೂ ಟೇಕ್ಆಫ್ ಹಂತದಲ್ಲಿ ಇದೆ ಎಂದು ಟೀಕೆ ಮಾಡಿದ್ದರು.

ಕಾಂಗ್ರೆಸ್ ಏನು ಹೇಳುತ್ತಿದೆ?
ಕರ್ನಾಟಕ ಕಾಂಗ್ರೆಸ್ಗೆ ಬೇಗ ಸಂಪುಟ ವಿಸ್ತರಣೆ ಮಾಡುವ ಮನಸ್ಸಿದ್ದಂತಿಲ್ಲ. ಇತ್ತೀಚೆಗಷ್ಟೆ ಪರಮೇಶ್ವರ್ ಅವರು ಮಾತನಾಡಿ, ಪಂಚರಾಜ್ಯಗಳ ಚುನಾವಣೆ ಮುಗಿಯುವವರೆಗೆ ಸಂಪುಟ ವಿಸ್ತರಣೆ ಅಸಾಧ್ಯ, ಚುನಾವಣೆ ಮುಗಿದು ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್ ಕೊಟ್ಟ ನಂತರವೇ ಸಂಪುಟ ವಿಸ್ತರಣೆ ಆಗಲಿದೆ ಎಂದಿದ್ದರು.

ಹೆಚ್ಚುತ್ತಿರುವ ಅಸಮಾಧಾನ
ಸಂಪುಟ ವಿಸ್ತರಣೆ ತಡವಾದಷ್ಟು ಆಕಾಂಕ್ಷಿ ಶಾಸಕರಲ್ಲಿ ಅಸಮಾಧಾನ ಹೆಚ್ಚುತ್ತಿದೆ. ಜಾರಕಿಹೊಳಿ, ಎಂಟಿಬಿ ನಾಗರಾಜು, ಮುಂತಾದ ಶಾಸಕರು ಸರ್ಕಾರದ ವಿರುದ್ಧ ಬಹಿರಂಗವಾಗಿ ಟೀಕೆ ಟಿಪ್ಪಣಿಗೆ ಮುಂದಾಗಿದ್ದಾರೆ. ಇಷ್ಟು ಸಮಯ ಕಾದ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ಸಿಗದೇ ಹೋದರೆ ಪಕ್ಷಕ್ಕೆ ವಿರುದ್ಧ ಚಟುವಟಿಕೆಗಳಲ್ಲಿ ಭಾಗಿಯಾಗುವ ಅಪಾಯವೂ ಅಲ್ಲಗಳೆಯುವಂತಿಲ್ಲ.

ಯಾರ್ಯಾರು ಆಕಾಂಕ್ಷಿಗಳು?
ಕಾಂಗ್ರೆಸ್ ಬಳಿ 6 ಸಚಿವ ಸ್ಥಾನಗಳು ಇದ್ದರೆ, ಜೆಡಿಎಸ್ ಬಳಿ ಎರಡು ಸಚಿವ ಸ್ಥಾನಗಳು ಇವೆ. ಕಾಂಗ್ರೆಸ್ನಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಎಂಬಿ ಪಾಟೀಲ್, ಎಚ್ಕೆ ಪಾಟೀಲ್, ಎಂಟಿಬಿ ನಾಗರಾಜು, ಸತೀಶ ಜಾರಕಿಹೊಳಿ, ಆನಂದ್ ಸಿಂಗ್, ಬಿ.ಸಿ.ಪಾಟೀಲ್, ತುಕಾರಾಂ, ತನ್ವೀರ್ ಸೇಠ್, ಮುನಿಯಪ್ಪ, ಡಾ.ಸುಧಾಕರ್ ಇನ್ನೂ ಹಲವು ಮಂದಿ ಆಕಾಂಕ್ಷಿಗಳು ಇದ್ದಾರೆ. ಜೆಡಿಎಸ್ನಲ್ಲಿ ಸಂಖ್ಯೆ ದೊಡ್ಡದಿಲ್ಲದಿದ್ದರೂ ಸಹ ಆಕಾಂಕ್ಷಿಗಳು ಅಲ್ಲಿಯೂ ಇದ್ದಾರೆ.












Click it and Unblock the Notifications