ಕಾಲೇಜುಗಳ ಸಮಯ ಬದಲಾವಣೆ, ಇಲಾಖೆ ತೀರ್ಮಾನಕ್ಕೆ ಭಾರೀ ವಿರೋಧ
ಬೆಂಗಳೂರು, ಜುಲೈ 7: ಮಹಿಳಾ ಉಪನ್ಯಾಸಕರಿಗೆ ಸೀರೆ ಕಡ್ಡಾಯ ಮಾಡಿ ಆದೇಶ ಹೊರಡಿಸಿ ನಂತರ ಭಾರೀ ಟೀಕೆಗೆ ಗುರಿಯಾಗಿ ಆದೇಶ ಹಿಂಪಡೆದಿದ್ದ 'ಕಾಲೇಜು ಶಿಕ್ಷಣ ಇಲಾಖೆ' ಬುದ್ದಿ ಕಲಿತಂತೆ ಕಾಣಿಸುತ್ತಿಲ್ಲ. ಇದೀಗ ಪದವಿ ಕಾಲೇಜುಗಳ ಸಮಯ ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದು ಭಾರೀ ವಿರೋಧಕ್ಕೆ ಕಾರಣವಾಗಿದೆ.
ಪ್ರಥಮ ದರ್ಜೆ ಸರಕಾರಿ ಪದವಿ ಕಾಲೇಜುಗಳ ಸಮಯ ಬದಲಾವಣೆ ಮಾಡಿರುವ ಸರಕಾರ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಸಮಯ ನಿಗದಿ ಮಾಡಿದೆ. ಈ ಹಿಂದೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಈ ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದವು..

ಈ ಸಮಯ ಬದಲಾವಣೆಯ ಹೊರತಾಗಿಯೂ ವಿದ್ಯಾರ್ಥಿಗಳು ಬೆಳಿಗ್ಗೆ 10.30ರಿಂದ ಸಂಜೆ 5 ಗಂಟೆವರೆಗೆ ಗ್ರಂಥಾಲಯವನ್ನು ಉಪಯೋಗಪಡಿಸಿಕೊಳ್ಳಬಹುದು ಎಂದಿದೆ. ಕರ್ನಾಟಕದ 411 ಕಾಲೇಜುಗಳಿಗೆ ಈ ಹೊಸ ನಿಯಮ ಅನ್ವಯಿಸಲಿದೆ.
ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಗ್ರಂಥಾಲಯದಲ್ಲಿ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಕಳೆಯುವುದಕ್ಕೆ ಸಹಾಯಕವಾಗಲು ಈ ಬದಲಾವಣೆ ತಂದಿರುವುದಾಗಿ ಇಲಾಖೆ ಆಯುಕ್ತ ಅಜಯ್ ನಾಗಭೂಷಣ್ ಬುರುಡೆ ಬಿಟ್ಟಿದ್ದಾರೆ. ಗ್ರಾಮೀಣ ಭಾಗದ ಸಣ್ಣ ಅರಿವೂ ಅವರಿಗೆ ಇದ್ದಂತೆ ಕಾಣಿಸುತ್ತಿಲ್ಲ.
ಗ್ರಾಮೀಣ ಪ್ರದೇಶಗಳಿಂದ ವಿರೋಧ
ನಗರ ಪ್ರದೇಶಗಳಲ್ಲಿ ಈ ಹೊಸ ವೇಳಾಪಟ್ಟಿಯಿಂದ ವಿದ್ಯಾರ್ಥಿಗಳು ಬೇಗ ಹೊರಟು ತರಗತಿಗೆ ಬಂದರಷ್ಟೇ ಸಾಕು. ಮಾತ್ರವಲ್ಲ ವಿದ್ಯಾರ್ಥಿಗಳಿಗೆ ಟ್ರಾಫಿಕ್ ನ್ನು ಕೂಡಾ ತಪ್ಪಿಸಬಹುದು. ಇದು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಆದರೆ, "ಹೆಚ್ಚಿನ ಕಾಲೇಜುಗಳು ತಾಲೂಕು ಕೇಂದ್ರಗಳಲ್ಲಿ ಇರುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅಷ್ಟು ಬೇಗ ಕಾಲೇಜಿಗೆ ಬರುವುದು ಕಷ್ಟವಾಗುಗುತ್ತದೆ," ಎಂದು 'ದಿ ಹಿಂದೂ'ಗೆ ಕರ್ನಾಟಕ ಸರಕಾರಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷರಾದ ಎಚ್ ಪ್ರಕಾಶ ಪ್ರತಿಕ್ರಿಯೆ ನೀಡಿದ್ದು ಬಹಿರಂಗ ಅಪಸ್ವರ ಎತ್ತಿದ್ದಾರೆ.
ಇದಕ್ಕೆ ಹಲವು ವಿದ್ಯಾರ್ಥಿ ಸಂಘಟನೆಗಳೂ ಧ್ವನಿ ಗೂಡಿಸಿವೆ. ಏಕಾಏಕಿ ವಿದ್ಯಾರ್ಥಿಗಳು, ಅಧ್ಯಾಪಕರ ಜತೆ ಸಮಾಲೋಚನೆ ನಡೆಸದೆ ಈ ತೀರ್ಮಾನ ತೆಗೆದುಕೊಂಡಿರುವುದು ಸರಿಯಲ್ಲ ಎಂದಿರುವ ಕಾಲೇಜು ವಿದ್ಯಾರ್ಥಿ ಸಂಘಗಳು ಮತ್ತು ಅಧ್ಯಾಪಕರು ಸರಕಾರದ ಈ ಸುತ್ತೋಲೆ ಬಹಿಷ್ಕರಿಸಲು ನಿರ್ಧರಿಸವೆ. ಜತೆಗೆ ಪ್ರತಿಭಟನೆಗೂ ಮುಂದಾಗಿವೆ.
ಒಟ್ಟಾರೆ ಯಾಕೋ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರ ಸಮಯ ಸರಿ ಇದ್ದಂತೆ ಕಾಣಿಸುತ್ತಿಲ್ಲ.












Click it and Unblock the Notifications